ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಂಗಾಪುರ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಬಾರದೆಂಬ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಆಜ್ಞೆಯನ್ನು ಉಲ್ಲಂಘಿಸಿದ ಬೆನ್ನಲ್ಲೆ ಅವರ ವಿರುದ್ದ ಲಿಕ್ಕರ್ ವಿಷಯಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ.
“ವಿಶ್ವ ನಗರಗಳ ಶೃಂಗಸಭೆ”ಗಾಗಿ ಕೇಜ್ರಿವಾಲ್ ಅವರನ್ನು ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಆಹ್ವಾನಿಸಿದ್ದರು. ಅವರು ಆಗಸ್ಟ್ 1 ರಂದು ನಡೆಯುವ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಆದರೆ ಆ ಕಾರ್ಯಕ್ರಮ ಮೇಯರ್ಗಳದ್ದಾಗಿದ್ದು, ಮುಖ್ಯಮಂತ್ರಿಗಳು ಅದಕ್ಕೆ ಹೋಗಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಈ ವಾದವೆ ಸರಿಯೆಂದಾದರೆ, ಪ್ರಧಾನಿ ಮೋದಿ ಅವರು ಕೂಡ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿ ಸಭೆಗೆ ಹೋಗುವುದಾಗಿ ಘೋಷಿಸಿದ್ದಾರೆ.
ದೆಹಲಿ ಮಾದರಿ ಕುರಿತು ಸಿಂಗಾಪುರ್ನಲ್ಲಿ ನಾನು ಮಾತನಾಡಲಿದ್ದೇನೆ. ಇದನ್ನು ತಡೆಯುವ ಸಲುವಾಗಿ ವಿನಾಕಾರಣ ತಡೆ ನೀಡಲಾಗುತ್ತಿದೆ ಎಂದು ಕೇಜ್ರಿವಾಲ್ ದೂರಿದ್ದರು.
ಇದರ ಬೆನ್ನಲ್ಲೆ ಅವರ ವಿರುದ್ಧ ಜುಲೈ 8 ರಂದು ಲಿಕ್ಕರ್ ಪರವಾನಗಿ ನೀಡುವಾಗ ಟೆಂಡರ್ ನಂತರ ಹಲವು ನಿಯಮಗಳನ್ನು ಮೀರಲಾಗಿದೆ ಎಂದು ಆರೋಪಿಸಿ ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ್ದಾರೆ.
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೇರವಾಗಿ ಹೆಸರಿಸಿರುವ ಲೆಫ್ಟಿನೆಂಟ್ ಗವರ್ನರ್, ವರದಿಯು ಉನ್ನತ ರಾಜಕೀಯ ಮಟ್ಟದಲ್ಲಿ “ಗಣನೀಯ” ಹಣಕಾಸಿನ ಅನುಕೂಲಗಳನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ರವರ ಈ ನಡೆಯನ್ನು ರಾಜಕೀಯ ಪ್ರೇರಿತ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಅಲ್ಲದೆ ಸಿಎಂ ಸಿಂಗಾಪುರ ಭೇಟಿ ನಡೆಯುತ್ತದೆ ಎಂದಿದ್ದಾರೆ.
“ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಿಂಗಾಪುರ್ ಭೇಟಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ಬಂಧಿಸಿದ ನಂತರ, ಸಿಎಂ ಈಗ ‘ರಾಜಕೀಯ ಕ್ಲಿಯರೆನ್ಸ್’ಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಭೇಟಿಯು ವಿಶ್ವ ನಗರಗಳ ಶೃಂಗಸಭೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತದೆಯಾದ್ದರಿಂದ ಕೇಂದ್ರವು ಈ ಅನುಮತಿಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಮೇಯರ್ಗಳ ಸಮ್ಮೇಳನವಾಗಿರುವುದರಿಂದ ಈ ಸಮಾವೇಶಕ್ಕೆ ಹಾಜರಾಗದಂತೆ ಎಲ್ಜಿ ಕೇಜ್ರಿವಾಲ್ಗೆ ಸೂಚಿಸಿದ್ದಾರೆ. ಈ ಹಿಂದೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಕೂಡ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೋಗುತ್ತಾರೆ. ಇದು ರಾಜಕೀಯ ಪ್ರೇರಿತ ಕೃತ್ಯವಾಗಿದೆ” ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
2019 ರಲ್ಲಿ, ಮೇಯರ್ಗಳಿಗೆ ಮೀಸಲಾದ ಸಭೆಯಲ್ಲಿ ಮುಖ್ಯಮಂತ್ರಿ ಭಾಗವಹಿಸುವುದು ಯೋಗ್ಯವಲ್ಲ ಎಂದು ಹೇಳುವ ಮೂಲಕ ಒಕ್ಕೂಟ ಸರ್ಕಾರವೂ ಕೇಜ್ರಿವಾಲ್ಗೆ ಇದೇ ರೀತಿಯ ಭೇಟಿಗೆ ಅನುಮತಿಯನ್ನು ತಡೆಹಿಡಿದಿತ್ತು. ಅಂತಿಮವಾಗಿ ಕೇಜ್ರಿವಾಲ್ ಅವರು ಆನ್ಲೈನ್ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಾಯಿತು.
ಇದನ್ನೂ ಓದಿ: ಶೃಂಗಸಭೆಗೆ ತೆರಳದಂತೆ ತಡೆ: ಲೆಫ್ಟಿನೆಂಟ್ ಗವರ್ನರ್ರನ್ನು ಧಿಕ್ಕರಿಸಿದ ಅರವಿಂದ್ ಕೇಜ್ರಿವಾಲ್!