ಸರ್ಕಾರದ ತಪ್ಪಿನಿಂದ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ. 23 ಸಾವಿರ ಮಂದಿ ಪೈಕಿ 4.500 ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರ್ಕಾರ ಹೇಳಿದೆ. ಅವರನ್ನು ಕೂಡಲೇ ಪತ್ತೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕೊರೊನಾ 3ನೇ ಹಂತಕ್ಕೆ ಇನ್ನೂ ತಲುಪಿಲ್ಲ ಎಂದು ಸಚಿವರು ಹೇಳಿದ್ದಾರೆ. ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ, ಆತನಿಗೆ ವಿದೇಶದಿಂದ ಬಂದವರ ಯಾರ ಸಂಪರ್ಕವೂ ಇರಲಿಲ್ಲ. ಆದರೂ ಆತನಿಗೆ ಕರೋನ ಬಂದಿದ್ದು ಹೇಗೆ ಎಂಬುದನ್ನು ಶೀಘ್ರ ಪತ್ತೆ ಮಾಡಬೇಕು. ಶಿರಾದಲ್ಲಿಯೂ ಒಬ್ಬರು ಕೊರೊನಾ ಇಂದ ಸಾವಿಗೀಡಾಗಿದ್ದಾರೆ. ಈ ಇಬ್ಬರಿಗೂ ಸೋಂಕು ಯಾವ ಹಂತದಲ್ಲಿತ್ತು ಎಂಬುದನ್ನು ಪತ್ತೆಹಚ್ಚಬೇಕಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಹಳ್ಳಿಗಳಿಗೆ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಬೇಕು ಎಂದಿದ್ದಾರೆ.
ಈಗ ದಾಸ್ತಾನಾಗಿರುವ ಮಾಸ್ಕ್, ಸ್ಯಾನಿಟೈಸರ್ ಯಾವುದಕ್ಕೂ ಸಾಲದು. ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ತಯಾರಿಕೆ ಕೆಲಸ ಭರದಿಂದ ಸಾಗಬೇಕಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಆ ಕೆಲಸ ವಹಿಸಿ. ಸೋಂಕು 3ನೇ ಹಂತಕ್ಕೆ ಹೋಗುವುದನ್ನು ತಡೆಯುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು. ಕರ್ನಾಟಕದಲ್ಲಿ 6020 ಪಂಚಾಯಿತಿಗಳಿವೆ. ಒಂದೊಂದು ಪಂಚಾಯಿತಿಗೆ ಒಬ್ಬ ಮೆಡಿಕಲ್ ಅಧಿಕಾರಿ ನೇಮಕ ಮಾಡಬೇಕು. ಆಹಾರ, ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಯನ್ನೂ ಪಂಚಾಯಿತಿಗೆ ಒಬ್ಬರಂತೆ ಈ ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಹೊರ ರಾಜ್ಯದ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು, ಜೊತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಕರೆ ತರಬೇಕು. ಈಗಾಗಲೇ ಸಾಕಷ್ಟು ಮಂದಿ ರಾಜ್ಯದ ಗಡಿ ತಲುಪಿದ್ದಾರೆ. ಅವರ ಆರೋಗ್ಯ ತಪಾಸಣೆ ಮಾಡಿ ಊರುಗಳಿಗೆ ಕಳುಹಿಸುವುದು ಸೂಕ್ತ. ಮುಂದಿನ ಎರಡು ವಾರ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ. ಹೀಗಾಗಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಈಗಾಗಲೇ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹಾಗಂತ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡುವುದು ಬೇಡ, ಜನರ ಮನವೊಲಿಸಲು ಹಲವು ಮಾರ್ಗಗಳಿವೆ ಎಂದರು.
ಸರ್ಕಾರವೇ ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿದರೆ ಒಳ್ಳೆಯದು. ಆಗ ಜನರು ಹೊರಬರುವುದು ತಪ್ಪುತ್ತದೆ. ಪೊಲೀಸರಿಗೂ ವಿಮೆ ಮಾಡಿಸುವುದು ಸೂಕ್ತ. ಈ ಕುರಿತು ಮುಖ್ಯಮಂತ್ರಿಗಳು ಪ್ರಧಾನಿಯವರ ಬಳಿ ಮಾತನಾಡಲಿ. ಪೊಲೀಸರ ಜೀವಕ್ಕೂ ಭದ್ರತೆ ಬೇಕು. ಇದರ ಜೊತೆಗೆ ಪೌರ ಕಾರ್ಮಿಕರಿಗೂ ವಿಮೆ ಸೌಲಭ್ಯ ಸಿಗಬೇಕು ಎಂದರು.