ಕೊವಿಡ್-19 ಸಾಂಕ್ರಮಿಕ ರೋಗದ ಹಿನ್ನಲೆಯಲ್ಲಿ ಕಾರ್ಮಿಕರ ವಸತಿಗಾಗಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಯಲ್ಲಿ ಕಾರ್ಮಿಕರಿಗೆ ವಸತಿ ಮತ್ತು ಊಟೋಪಚಾರ ಒದಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೊವಿಡ್ -19 ಸಾಂಕ್ರಾಮಿಕ ರೋಗವು ತೀವ್ರತರವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಹಲವು ರೀತಿಯ ಪ್ರಯತ್ನಗಳಲ್ಲಿ ನಿರತವಾಗಿದೆ ಎಂದಿರುವ ರಾಜ್ಯ ಸರ್ಕಾರ ಕಾರ್ಮಿಕರ ವಲಸೆಯನ್ನು ಕಟ್ಟುನಿಟ್ಟಾಗಿ ನಿಷೇದಿಸಲು ಹಾಗೂ ಕಾರ್ಮಿಕರಿಗೆ ಈ ಸಮಯದಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಅಗತ್ಯತೆಗಾಗಿ, ಕಟ್ಟಡ ಕಾರ್ಮಿಕರ ವಸತಿಗಾಗಿ ಮಹಾನಗರ ಪಾಲಿಕೆಗಳಲ್ಲಿ ವಾರ್ಡಿಗೆ ಒಂದರಂತೆ ಸಮುದಾಯ ಭವನ, ಕಲ್ಯಾಣ ಮಂಟಪ, ಖಾಸಗಿ ಕಲ್ಯಾಣ ಮಂಟಪಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ವಶಕ್ಕೆ ಪಡೆದು, ಕಟ್ಟಡ ಕಾರ್ಮಿಕರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಒದಗಿಸುವಂತೆ ಆದೇಶಿಸಿದೆ.
ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಕಲ್ಯಾಣ ಮಂಟಪಗಳನ್ನು ಜಿಲ್ಲಾಧಿಕಾರಿಗಳು ಪಡೆದು ವಶದಲ್ಲಿರಿಸಿಕೊಳ್ಳಲು ಹೇಳಿದೆ. ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗೆ ಈಗಾಗಲೇ ಒದಗಿಸಿರುವ ಅನುದಾನದಿಂದ ಭರಿಸುವಂತೆ ಆದೇಶಿಸಿದೆ.
ದೇಶದಾದ್ಯಂತ ಇಪ್ಪತ್ತೊಂದು ದಿನದ ಲಾಕ್ಡೌನ್ ಘೋಷಣೆಯಾದ ನಂತರ ದೇಶದೆಲ್ಲೆಡೆ ನಿರುದ್ಯೋಗಿಗಳಾಗಿರುವ ಜನರು ತಮ್ಮ ಮನೆಗಳಿಗೆ ಸಾವಿರಾರು ಕಿಲೋಮೀಟರ್ ದೂರಕ್ಕೆ ಕಾಲ್ನಡಿಗೆಯಿಂದ ಹೊರಟಿರುವುದು ವರದಿಯಾಗಿತ್ತು.