Homeಅಂಕಣಗಳುಗೌರಿ ಕಣ್ಣೋಟ: ’ಸೀತಾ ಸಿಂಗ್ಸ್ ದ ಬ್ಲೂಸ್’ - ನೀನಾ ಮತ್ತು ಸೀತೆಯರ ದುಃಖ

ಗೌರಿ ಕಣ್ಣೋಟ: ’ಸೀತಾ ಸಿಂಗ್ಸ್ ದ ಬ್ಲೂಸ್’ – ನೀನಾ ಮತ್ತು ಸೀತೆಯರ ದುಃಖ

ಮೇ 27, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರು ಪ್ರಕಟಣೆ

- Advertisement -
- Advertisement -

ಒಬ್ಬಳ ಹೆಸರು ಸೀತಾ, ಇನ್ನೊಬ್ಬಳ ಹೆಸರು ನೀನಾ, ಮೊದಲನೆಯವಳು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸೃಷ್ಟಿಸಲ್ಪಟ್ಟ ಪುರಾಣದಲ್ಲಿ ಕಾಣಿಸಿಕೊಳ್ಳುವ ಮಹಿಳೆ. ಎರಡನೆಯವಳು ಆಧುನಿಕ ದೇಶವಾದ ಅಮೆರಿಕದಲ್ಲಿ ವ್ಯಂಗ್ಯಚಿತ್ರಕಾರಳಾಗಿ ದುಡಿಯುತ್ತಿರುವ ಹೆಂಗಸು. ಆದರೆ ಕಾಲ, ದೇಶ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೀರಿ ಇವರಿಬ್ಬರನ್ನು ಒಂದು ಸಂಗತಿ ಜೊತೆಗೂಡಿಸುತ್ತದೆ. ಅದು ಗಂಡನಿಂದ ತಿರಸ್ಕೃತಗೊಂಡಿರುವ ಮಡದಿಯೊಬ್ಬಳ ಯಾತನೆ, ಅಸಹಾಯಕತೆ ಮತ್ತು ಏಕಾಂಗಿತನ.

ಸೀತೆ ಬೇರೆ ಯಾರೂ ಅಲ್ಲ. ವಾಲ್ಮೀಕಿ ಬರೆದ ರಾಮಾಯಣದ ನಾಯಕಿ. ಆ ಸೀತೆಗಾದ ವ್ಯಥೆ ತನಗಾದ ದುಃಖಕ್ಕಿಂತ ವಿಭಿನ್ನವಾಗಿರಲಿಲ್ಲ ಎಂದು ’ಸೀತಾ ಸಿಂಗ್ಸ್ ದ ಬ್ಲೂಸ್’ ಎಂಬ ಆನಿಮೇಷನ್ ಸಿನಿಮಾದ ಮೂಲಕ ನೀನಾ ಪ್ಯಾಲಿ ತೋರಿಸಿದ್ದರಿಂದ ಇವತ್ತು ಆಕೆ ಕೆಲ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಪುರುಷನೊಬ್ಬ ತನ್ನ ಮಡದಿಯ ಬಗ್ಗೆ ವಿನಾಕಾರಣ ಆಸಕ್ತಿ ಕಳೆದುಕೊಳ್ಳಬಹುದೇ? ಆಕೆ ಯಾವ ತಪ್ಪು ಮಾಡಿರದಿದ್ದರೂ ಅವಳನ್ನು ತಿರಸ್ಕರಿಸಬಹುದೇ? ಗಂಡನನ್ನು ಪ್ರೀತಿಸಿ ಆತನಿಗಾಗಿ ಎಂತಹ ತ್ಯಾಗವನ್ನೂ ಮಾಡಲು ಸಿದ್ಧವಿರುವ ಹೆಂಡತಿಯನ್ನು ಆತ ತನ್ನ ಬದುಕಿನಿಂದಲೇ ಹೊರದೂಡಿದರೆ ಆಕೆ ಏನು ಮಾಡಬೇಕು?

ಈ ಎಲ್ಲ ಪ್ರಶ್ನೆಗಳು ನೀನಾಳನ್ನು ಕಾಡಿದ್ದು ಆಕೆಯ ಗಂಡ ಅವಳಿಗೆ ಇಮೇಲ್ ಮೂಲಕ ’ನೀನಾ, ವಾಪಸ್ಸು ಬರಬೇಡ’ ಎಂಬ ಒಂದೇ ಒಂದು ಸಾಲನ್ನು ಕಳುಹಿಸಿ ಅವಳೊಂದಿಗಿನ ತನ್ನ ದಾಂಪತ್ಯ ಜೀವನವನ್ನು ನಿರ್ದಾಕ್ಷಿಣ್ಯವಾಗಿ ಅಂತ್ಯಗೊಳಿಸಿದಾಗ.

ಅದು ಆದದ್ದು ಹೀಗೆ: ನೀನಾಳ ಅಮೆರಿಕನ್ ಗಂಡನಿಗೆ ಭಾರತದಲ್ಲಿ ಆರು ತಿಂಗಳ ಕಾಲ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಅಲ್ಲಿಯ ತನಕ ಅವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿ ಸಾಗಿದ್ದು, ಆತ ನೀನಾಳನ್ನು ಅಮೆರಿಕದಲ್ಲಿ ಬಿಟ್ಟು ಭಾರತಕ್ಕೆ ಬರುತ್ತಾನೆ. ಆದರೆ ಇಲ್ಲಿಗೆ ಬಂದನಂತರ ನೀನಾಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ. ಹೀಗೆ ಕೆಲ ತಿಂಗಳುಗಳು ಉರುಳಿದ ನಂತರ ಆತನ ಕಾಂಟ್ರಾಕ್ಟ್ ಅನ್ನು ಇನ್ನೊಂದು ವರ್ಷದ ಅವಧಿಗೆ ವಿಸ್ತರಿಸಲಾಗುತ್ತದೆ. ಆಗ ನೀನಾ ತಾನು ತನ್ನ ಗಂಡನೊಂದಿಗೆ ವಾಸಿಸಬೇಕೆಂದು ನಿರ್ಧರಿಸಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಬಾಡಿಗೆ ಮನೆಯನ್ನು ತೊರೆದು, ಗಂಟುಮೂಟೆ ಕಟ್ಟಿಕೊಂಡು ತಾನೂ ಭಾರತಕ್ಕೆ ಬರುತ್ತಾಳೆ.

ಅಪಾರ ಪ್ರೀತಿ ಹೊತ್ತು ಬಂದಿರುವ ನೀನಾಳಿಗೆ ಇಲ್ಲಿ ಆಘಾತ ಕಾದಿರುತ್ತದೆ. ಅವಳ ಗಂಡ ಆಕೆಯ ಬಗೆಗಿನ ಪ್ರೀತಿ ಮತ್ತು ಆಸಕ್ತಿಯನ್ನು ಕಳೆದುಕೊಂಡಿದ್ದಾನೆ. ಸಹಜವಾಗಿಯೇ ನೀನಾ ಇದನ್ನು ಕಂಡು ಘಾಸಿಗೊಳಗಾಗುತ್ತಾಳೆ. ಇದು ತಾತ್ಕಾಲಿಕ ಸಮಸ್ಯೆ ಎಂದು ಭಾವಿಸಿ ಗಂಡನ ತಾತ್ಸಾರವನ್ನು ಸಹಿಸಿಕೊಂಡಿರುತ್ತಾಳೆ. ಭಾರತದಲ್ಲಿ ಆಕೆಗೆ ಸ್ನೇಹಿತರಾಗಲಿ, ಸಹೋದ್ಯೋಗಿಗಳಾಗಲಿ ಇಲ್ಲದಿರುವುದು ಆಕೆಯ ಏಕಾಂಗಿತನವನ್ನು ಹೆಚ್ಚಿಸುತ್ತಿದೆ. ಜೊತೆಗೆ ಭಾರತೀಯ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದಿರುವುದು, ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದು, ಗಂಡನ ಹೊರತಾಗಿ ಪ್ರತ್ಯೇಕ ಅಸ್ತಿತ್ವ ಇಲ್ಲದಿರುವುದೆಲ್ಲ ನೀನಾಳಲ್ಲಿ ಬೇಸರ ಮೂಡಿಸುತ್ತದೆ.

PC : Animation World Network, (ನೀನಾ ಪ್ಯಾಲಿ)

ಅದೇ ಹೊತ್ತಿಗೆ ನೀನಾ ’ರಾಮಾಯಣ’ವನ್ನು ಓದಲು ಪ್ರಾರಂಭಿಸುತ್ತಾಳೆ. ರಾಮನನ್ನು ಮರ್ಯಾದ ಪುರುಷೋತ್ತಮನೆಂದೂ, ಆತ ಎಲ್ಲ ರೀತಿಯ ಸದ್ಗುಣಗಳನ್ನು ಹೊಂದಿರುವವನೆಂದೂ; ಆದರೆ ಸೀತೆಯನ್ನು ಯಾವ ಸ್ವಂತಿಕೆಯೂ ಇಲ್ಲದ, ಸ್ವಾತಂತ್ರ್ಯವಿಲ್ಲದ ಆಕೃತಿಯಂತೆ ಚಿತ್ರಿಸಿರುವುದನ್ನು ನೋಡಿ ನೀನಾಳಿಗೆ ’ರಾಮಾಯಣ’ ಸ್ತ್ರೀದ್ವೇಷಿಯಾದ ಕರಪತ್ರಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರದ ಕೃತಿ ಎಂಬಂತೆ ಕಾಣಿಸುತ್ತದೆ.

ಅದೇ ಹೊತ್ತಿಗೆ ನೀನಾ ಹೊಸದಾಗಿ ಸೃಷ್ಟಿಸುವ ಹಾಸ್ಯಚಿತ್ರ ಮಾಲೆಯನ್ನು (Comic strip) ಉದ್ಘಾಟಿಸಲು ಆಕೆಗೆ ಅಮೆರಿಕದಿಂದ ಆಹ್ವಾನ ಬರುತ್ತದೆ. ಕೆಲ ದಿನಗಳ ಮಟ್ಟಿಗೆಂದು ನೀನಾ ಅಮೆರಿಕಕ್ಕೆ ಹೋದಾಗ ಅವಳ ಗಂಡ ’ನೀನಾ, ವಾಪಸ್ಸು ಬರಬೇಡ’ ಎಂಬ ಇಮೇಲ್ ಕಳುಹಿಸಿ ಅವಳೊಂದಿನ ತನ್ನ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಾನೆ. ತನ್ನ ಈ ನಿರ್ಧಾರಕ್ಕೆ ಆತ ಯಾವ ಕಾರಣವನ್ನಾಗಲಿ, ವಿವರಣೆಯನ್ನಾಗಲಿ ನೀಡುವುದಿಲ್ಲ. ಬದಲಾಗಿ ತನ್ನ ಜೀವನದಿಂದ ಅದೆಂತಹದ್ದೋ ಬೇಡವಾದ ವಸ್ತುವನ್ನು ಬಿಸಾಡಿದಂತೆ ಆಕೆಯನ್ನು ತ್ಯಜಿಸುತ್ತಾನೆ.

ನೀನಾ ದುಃಖದಲ್ಲಿ ಮುಳುಗುತ್ತಾಳೆ. ತನ್ನ ಗಂಡ ತನ್ನನ್ನು ಹೀಗೆ ತಿರಸ್ಕರಿಸಲು ಕಾರಣವೇನೆಂದು ಆಕೆ ಚಿಂತಿಸುತ್ತಿರುವಾಗಲೇ ಆಕೆಗೆ ರಾಮಾಯಣದ ಸೀತೆ ನೆನಪಾಗುತ್ತಾಳೆ. ಮೂರು ಸಾವಿರ ವರ್ಷಗಳ ಹಿಂದೆ ವಾಲ್ಮೀಕಿಯ ಕಾಲ್ಪನಿಕ ಸೃಷ್ಟಿಯಾದ ಸೀತೆ ಅನುಭವಿಸಿದ ಒಬ್ಬಂಟಿತನಕ್ಕೂ, ಆಧುನಿಕ ಮಹಿಳೆಯಾದ ತಾನು 21ನೇ ಶತಮಾನದಲ್ಲಿ ಅನುಭವಿಸುತ್ತಿರುವ ನೋವಿಗೂ ಅಷ್ಟೇನೂ ವ್ಯತ್ಯಾಸವಿಲ್ಲ ಎನಿಸುತ್ತದೆ ನೀನಾಳಿಗೆ. “ನನ್ನನ್ನು ತಿರಸ್ಕರಿಸಿದ್ದ ನನ್ನ ಗಂಡನ ಬಗ್ಗೆ ನನಗಿನ್ನೂ ಇದ್ದ ಪ್ರೀತಿ, ಹಂಬಲ ಮತ್ತು ಆಶೆ ಸೀತೆಯ ಅನುಭವವೂ ಆಗಿತ್ತು. ಆಗ ರಾಮಾಯಣ ಕೇವಲ ಲಿಂಗಭೇದ ತೋರುವ ದೃಷ್ಟಾಂತ ಕತೆಯಾಗಲ್ಲದೆ, ಮನುಷ್ಯರ ನಡುವಿನ ಸಂಬಂಧಗಳ ಮತ್ತು ಅವರ ಹೃದಯಾಳದಲ್ಲಿರುವ ವೇದನೆಯ ಕತೆಯಂತೆ ಕಂಡಿತು. ಅದೇ ಹೊತ್ತಿಗೆ 1920ರಲ್ಲಿ ಬ್ಲೂಸ್ (ಹೆಚ್ಚಾಗಿ ದುಮ್ಮಾನಗಳ ಬಗೆಗಿನ ಹಾಡುಗಳ ಒಂದು ಸಂಗೀತ ಶೈಲಿ) ಕವನಗಳನ್ನು ಹಾಡಿದ್ದ ಆನೆಟ್ ಹಾನ್‌ಶಾ ಅವರ ಸಂಗೀತವನ್ನು ಕೇಳಿದೆ.

ನನ್ನ ವೈಯಕ್ತಿಕ ದುಃಖ, ಸೀತಾಳ ಕಥನ ಮತ್ತು ಹಾನ್‌ಶಾಳ ಸಂಗೀತ, ಈ ಮೂರು ಒಟ್ಟಾಗಿ ಸಾಗಿದ್ದರಿಂದ ’ಸೀತಾ ಸಿಂಗ್ಸ್ ದ ಬ್ಲೂಸ್’ ಸಿನಿಮಾವನ್ನು ಮಾಡಿದೆ” ಎನ್ನುತ್ತಾಳೆ ನೀನಾ.

82 ನಿಮಿಷಗಳ ಈ ಆನಿಮೇಟೆಡ್ ಸಿನಿಮಾದಲ್ಲಿ ಸೀತೆಯನ್ನು ತಾನು ವಿಧೇಯಳನ್ನಾಗಿ ತೋರಿಸದೆ ಉತ್ಸಾಹಿ, ದೃಢ ನಿರ್ಧಾರಗಳ ಮತ್ತು ಭಾವುಕ ಜೀವಿಯನ್ನಾಗಿ ತೋರಿಸಿದ್ದೇನೆ ಎಂದು ನೀನಾ ಹೇಳುತ್ತಾರಾದರೂ ನಮ್ಮ ದೇಶದಲ್ಲೇ ರಾಮಾಯಣದ ಅನೇಕ ವ್ಯಾಖ್ಯಾನಗಳಲ್ಲಿ ಸೀತೆ ಇದಕ್ಕಿಂತಲೂ ಹೆಚ್ಚು ಗಟ್ಟಿ ವ್ಯಕ್ತಿತ್ವದವಳಾಗಿ ಮೂಡಿಬಂದಿದ್ದಾಳೆ.

ತಾನು ದೇವಾನುದೇವತೆಗಳ ಕತೆ ಹೇಳುತ್ತಿಲ್ಲ, ಬದಲಾಗಿ ಸಾಮಾನ್ಯ ಮನುಷ್ಯರ ಕತೆ ಹೇಳುತ್ತಿರುವೆ ಎಂಬಂತೆ ನೀನಾ ಈ ಚಿತ್ರವನ್ನು ನಿರೂಪಿಸಿ ಅದರಲ್ಲಿ ವ್ಯಂಗ್ಯ ಚಿತ್ರ, ವರ್ಣಕಲಾಕೃತಿ, ಕೊಲಾಜ್ ಮತ್ತು ಸೂತ್ರದ ಬೊಂಬೆಗಳನ್ನು ಉಪಯೋಗಿಸಿದ್ದಾರೆ. ಜೊತೆಗೆ ಅಣಕ ತುಂಬಿರುವ ಆಧುನಿಕ ಶೈಲಿಯ ತಮಾಷೆಯ ಸಂಭಾಷಣೆಗಳನ್ನು ಬಳಸಿದ್ದಾರೆ.

ಸಹಜವಾಗಿಯೇ ಇದೆಲ್ಲ ಕೆಲ ‘ರಾಮಭಕ್ತ’ರಾದ ಹಿಂದೂತ್ವವಾದಿಗಳನ್ನು ಕೆರಳಿಸಿದೆ. ಅವರಲ್ಲಿ ಹಲವರು ಹಿಂದೂ ಜನ ಜಾಗೃತಿ ಸಮಿತಿ ಎಂಬ ತಂಡವನ್ನು ಇಂಟರ್‌ನೆಟ್ ಜಾಲದಲ್ಲಿ ಸೃಷ್ಟಿಸಿಕೊಂಡು ಒಂದು ಮನವಿಯನ್ನು ತೇಲಿಬಿಟ್ಟಿದ್ದಾರೆ. ನೀನಾ ತನ್ನ ಈ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾರೆ, ದೇವತೆಗಳನ್ನು ಆರೆನಗ್ನರನ್ನಾಗಿ ಚಿತ್ರಿಸಿದ್ದಾರೆ, ಸೀತೆಯ ಸೌಂದರ್ಯವನ್ನು ಅಶ್ಲೀಲವಾಗಿ ಬಣ್ಣಿಸಲಾಗಿದೆ ಎಂಬಂತಹ ಹತ್ತಾರು ತಕರಾರುಗಳನ್ನು ಈ ಹಿಂದೂವೀರರು ಎತ್ತಿದ್ದಾರೆ. ಆದರೆ ಈ ಸಿನಿಮಾದ ಮೂಲ ವಸ್ತುವಾದ ರಾಮನಿಂದಾಗಿ ಸೀತೆ ಅನುಭವಿಸಿದ ವೇದನೆ ಬಗ್ಗೆ ಅವರು ಚಕಾರವೆತ್ತಿಲ್ಲ. ಅದರರ್ಥ ಅವರ ಸೀಮಿತ ಬುದ್ಧಿಗೆ ಈ ಚಿತ್ರದ ಆಶಯ ಅರ್ಥವೇ ಆಗಿಲ್ಲ. ಆದರೂ ತಾವು ಹಿಂದೂಗಳ ಪ್ರತಿನಿಧಿಗಳೆಂಬಂತೆ ವರ್ತಿಸಿರುವ ಅವರೆಲ್ಲರೂ ಈ ಚಿತ್ರವನ್ನು ಕೂಡಲೇ ನಿಷೇಧಿಸಬೇಕೆಂದೂ, ಅದರ ಸೃಷ್ಟಿಕರ್ತರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.

ಇಂತಹ ಮನಸ್ಥಿತಿಯವರಿಗೆ ರಾಮ ಓರ್ವ ಕಾಲ್ಪನಿಕ ಪುರುಷನಾಗಿದ್ದ ಎಂಬುದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಕೇವಲ ಒಂದು ರಾಮಾಯಣವಿಲ್ಲ, ಬದಲಾಗಿ ನೂರಾರು ವಿಭಿನ್ನ ರಾಮಾಯಣಗಳಿವೆ ಎಂಬುದನ್ನು ಒಪ್ಪಿಕೊಳ್ಳಲು ಅವರು ಸಿದ್ಧವಿಲ್ಲ.

ಭಾರತದಲ್ಲಿ ರಾಮಾಯಣದ ಹಲವಾರು ವ್ಯಾಖ್ಯಾನಗಳಿವೆ. ಮಾತ್ರವಲ್ಲ, ಯಾವ ಸಮುದಾಯದ ಜನ ಅದನ್ನು ವ್ಯಾಖ್ಯಾನಿಸಿದ್ದಾರೆ ಎಂಬುದನ್ನು ಆಧರಿಸಿ, ಆ ಸಮುದಾಯಗಳ ಆಶೋತ್ತರಗಳನ್ನು ಮತ್ತು ಸೈದ್ಧಾಂತಿಕ ಕಾಳಜಿಗಳನ್ನು ಬಿಂಬಿಸುತ್ತಾ ರಾಮಾಯಣ ಹಲವಾರು ರೂಪಗಳನ್ನು ಪಡೆದಿದೆ. ಆದ್ದರಿಂದ ಒಂದು ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿದ್ದರೆ, ಬುಡಕಟ್ಟು ಸಮುದಾಯಗಳ ರಾಮಾಯಣಗಳಲ್ಲಿ ಸೀತೆ ಪತಿವ್ರತೆಯಲ್ಲ. ಹಾಗೆಯೇ ಮತ್ತೊಂದು ರಾಮಾಯಣದಲ್ಲಿ ರಾವಣ ಸುಸಂಸ್ಕೃತ ಮತ್ತು ಮಾನವೀಯ ವ್ಯಕ್ತಿಯಾಗಿದ್ದರೆ ರಾಮ ದುರ್ಬಲ ಮತ್ತು ಧೈರ್ಯವಿಲ್ಲದ ವ್ಯಕ್ತಿಯಾಗಿದ್ದಾನೆ. ಇನ್ನೂ ವಿಚಿತ್ರವೆಂದರೆ ಕೆಲ ರಾಮಾಯಣಗಳಲ್ಲಿ ಸೀತೆಗೆ ಆಗಾಗ್ಗೆ ತಪರಾಕಿ ಕೊಡುವ ವ್ಯಕ್ತಿಯಾಗಿಯೂ ರಾಮ ನಿರೂಪಿತನಾಗಿದ್ದಾನೆ.

PC : Feminism In India

ಆದರೆ ಹಿಂದುತ್ವವಾದಿಗಳಿಗೆ ಇದ್ಯಾವುದೂ ಅರ್ಥವಾಗುವುದಿಲ್ಲ. ಕೊನೆಗೆ ವಾಲ್ಮೀಕಿ ಬರೆದ ರಾಮಾಯಣವೂ ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಯುದ್ಧಕ್ಕೆ ಸನ್ನದ್ಧನಾಗಿರುವ ರಾಮ ಮಾತ್ರ. ಯಾಕೆಂದರೆ ಅಂತಹ ರಾಮನಲ್ಲಿ ಮಾತ್ರ ಅವರಿಗೆ ತಮ್ಮಲ್ಲಿರದ ಪೌರುಷತ್ವ ಕಾಣಿಸುತ್ತದೆ. ಮಾನವೀಯತೆ ಕಳೆದುಕೊಂಡಿರುವ ರಾಮನಲ್ಲಿ ಅವರಿಗೆ ತಮ್ಮ ಅಂತರಾಳದಲ್ಲಿರುವ ರಕ್ತದಾಹದ ದರ್ಶನವಾಗುತ್ತದೆ. ಅವರ ರಾಮ ಯಾವುದೇ ಕಾರಣವಿಲ್ಲದೆ ತನ್ನ ಹೆಂಡತಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾನೆ, ಗರ್ಭಿಣಿಯಾದ ಆಕೆಯನ್ನು ಕಾಡಿಗೂ ಅಟ್ಟುತ್ತಾನೆ. ಅದು ಈ ಹಿಂದೂ ವೀರರಿಗೆ ಅನ್ಯಾಯವೆಂದಾಗಲಿ, ಅಮಾನವೀಯ ಎಂದಾಗಲಿ ಅನ್ನಿಸುವುದೇ ಇಲ್ಲ.

ಇನ್ನು ವಾಲ್ಮೀಕಿಯ ಜಾನಕಿ ಮತ್ತು ತಮ್ಮ ಸುತ್ತಲೂ ಇರುವ ಸೀತೆಯರ ದುಃಖ ಅವರಿಗೆ ಅರ್ಥವಾಗುವುದಾದರೂ ಹೇಗೆ?

(ಮೇ 27, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರುಪ್ರಕಟಣೆ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮಾ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...