| ಗೌರಿ ಲಂಕೇಶ್ |
27 ಮೇ 2009 (ಸಂಪಾದಕೀಯದಿಂದ)
ಒಬ್ಬಳ ಹೆಸರು ಸೀತಾ, ಇನ್ನೊಬ್ಬಳ ಹೆಸರು ನೀನಾ. ಮೊದ¯ನೆಯವಳು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಸೃಷ್ಠಿಸಲ್ಪಟ್ಟ ಪುರಾಣದಲ್ಲಿ ಕಾಣಿಸಿಕೊಳ್ಳುವ ಮಹಿಳೆ. ಎರಡನೆಯವಳು ಆಧುನಿಕ ದೇಶವಾದ ಅಮೆರಿಕಾದಲ್ಲಿ ವ್ಯಂಗ್ಯಚಿತ್ರಕಾರಳಾಗಿ ದುಡಿಯುತ್ತಿರುವ ಹೆಂಗಸು. ಆದರೆ ಕಾಲ, ದೇಶ, ಭಾಷೆ, ಸಂಸ್ಕøತಿ ಮತ್ತು ಪರಂಪರೆಯನ್ನು ಮೀರಿ ಇವರಿಬ್ಬರನ್ನು ಒಂದು ಸಂಗತಿ ಜೊತೆಗೂಡಿಸುತ್ತದೆ. ಅದು ಗಂಡನಿಂದ ತಿರಸ್ಕøತಗೊಂಡಿರುವ ಮಡದಿಯೊಬ್ಬಳ ಯಾತನೆ, ಅಸಹಾಯಕತೆ ಮತ್ತು ಏಕಾಂಗಿತನ.
ಸೀತಿ ಬೇರೆ ಯಾರೂ ಅಲ್ಲ. ವಾಲ್ಮೀಕಿ ಬರೆದ ರಾಮಾಯಣದ ನಾಯಕಿ. ಆ ಸೀತೆಗಾದ ವ್ಯಥೆ ತನಗಾದ ದುಃಖಕ್ಕಿಂತ ವಿಭಿನ್ನವಾಗಿರಲಿಲ್ಲ ಎಂದು ‘ಸೀತಾ ಸಿಂಗ್ಸ್ ದ ಬ್ಲೂಸ್’ ಎಂಬ ಅನಿಮೇಷನ್ ಸಿನಿಮಾದ ಮೂಲಕ ನೀನಾ ಪ್ಯಾಲಿ ತೋರಿಸಿದ್ದರಿಂದ ಇವತ್ತು ಆಕೆ ಕೆಲ ಹಿಂದೂತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಅದು ಆದದ್ದು ಹೀಗೆ: ನೀನಾಳ ಅಮೆರಿಕನ್ ಗಂಡನಿಗೆ ಭಾರತದಲ್ಲಿ ಆರು ತಿಂಗಳ ಕಾಲ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಅಲ್ಲಿಯತನಕ ಅವರಿಬ್ಬರ ದಾಂಪತ್ಯಜೀವನ ಚೆನ್ನಾಗಿ ಸಾಗಿದ್ದು, ಆತ ನೀನಾಳನ್ನು ಅಮೆರಿಕದಲ್ಲಿ ಬಿಟ್ಟು ಭಾರತಕ್ಕೆ ಬರುತ್ತಾನೆ. ಆದರೆ ಇಲ್ಲಿಗೆ ಬಂದನಂತರ ನೀನಾಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ. ಹೀಗೆ ಕೆಲ ತಿಂಗಳುಗಳು ಉರುಳಿದ ನಂತರ ಆತನ ಕಾಂಟ್ರಾಕ್ಟ್ ಅನ್ನು ಇನ್ನೊಂದು ವರ್ಷದ ಅವಧಿಗೆ ವಿಸ್ತರಿಸಲಾಗುತ್ತದೆ. ಆಗ ನೀನಾ ತಾನು ತನ್ನ ಗಂಡನೊಂದಿಗೆ ವಾಸಿಸಬೇಕೆಂದು ನಿರ್ಧರಿಸಿ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ, ಬಾಡಿಗೆ ಮನೆಯನ್ನು ತೊರೆದು, ಗಂಟುಮೂಟೆ ಕಟ್ಟಿಕೊಂಡು ಆಕೆಯೂ ಭಾರತಕ್ಕೆ ಬರುತ್ತಾಳೆ.
ಅಪಾರ ಪ್ರೀತಿ ಹೊತ್ತು ಬಂದಿರುವ ನೀನಾಳಿಗೆ ಇಲ್ಲಿ ಆಘಾತ ಕಾದಿರುತ್ತದೆ. ಅವಳ ಗಂಡ ಆಕೆಯ ಬಗೆಗಿನ ಪ್ರೀತಿ ಮತ್ತು ಆಸಕ್ತಿಯನ್ನು ಕಳೆದುಕೊಂಡಿರುತ್ತಾನೆ. ಸಹಜವಾಗಿಯೇ ನೀನಾ ಇದನ್ನು ಕಂಡು ಘಾಸಿಗೊಳಗಾಗುತ್ತಾಳೆ. ಇದು ತಾತ್ಕಾಲಿಕ ಸಮಸ್ಯೆ ಎಂದು ಭಾವಿಸಿ ಗಂಡನ ತಾತ್ಸಾರವನ್ನು ಸಹಿಸಿಕೊಂಡಿರುತ್ತಾಳೆ. ಭಾರತದಲ್ಲಿ ಆಕೆಗೆ ಸ್ನೇಹಿತರಾಗಲಿ, ಸಹೋದ್ಯೋಗಿಗಳಾಗಲಿ ಇಲ್ಲದಿರುವುದು ಆಕೆಯ ಏಕಾಂಗಿತನವನ್ನು ಹೆಚ್ಚಿಸುತ್ತದೆ. ಜೊತೆಗೆ ಭಾರತೀಯ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದಿರುವುದು, ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದು, ಗಂಡನ ಹೊರತಾಗಿ ಪ್ರತ್ಯೇಕ ಅಸ್ತಿತ್ವ ಇಲ್ಲದಿರುವುದೆಲ್ಲ ನೀನಾಳಲ್ಲಿ ಬೇಸರ ಮೂಡಿಸುತ್ತದೆ.
ಅದೇ ಹೊತ್ತಿಗೆ ನೀನಾ ‘ರಾಮಾಯಣ’ವನ್ನು ಓದಲು ಪ್ರಾರಂಭಿಸುತ್ತಾಳೆ. ರಾಮನನ್ನು ಮರ್ಯಾದ ಪುರುಷೋತ್ತಮನೆಂದೂ, ಆತ ಎಲ್ಲ ರೀತಿಯ ಸದ್ಗುಣಗಳನ್ನು ಹೊಂದಿರುವವನೆಂದೂ; ಆದರೆ ಸೀತೆಯನ್ನು ಯಾವ ಸ್ವಂತಿಕೆಯೂ ಇಲ್ಲದ, ಸ್ವಾತಂತ್ರ್ಯವಿಲ್ಲದ ಆಕೃತಿಯಂತೆ ಚಿತ್ರಿಸಿರುವುದನ್ನು ನೋಡಿ ನೀನಾಳಿಗೆ ‘ರಾಮಾಯಣ’ ಸ್ತ್ರೀದ್ವೇಷಿಯಾದ ಕರಪತ್ರಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರದ ಕೃತಿ ಎಂಬಂತೆ ಕಾಣಿಸುತ್ತದೆ.ಮೂರು ಸಾವಿರ ವರ್ಷಗಳ ಹಿಂದೆ ವಾಲ್ಮೀಕಿಯ ಕಾಲ್ಪನಿಕ ಸೃಷ್ಟಿಯಾದ ಸೀತೆ ಅನುಭವಿಸಿದ ಒಬ್ಬಂಟಿತನಕ್ಕೂ, ಆಧುನಿಕ ಮಹಿಳೆಯಾದ ತಾನು 21ನೇ ಶತಮಾನದಲ್ಲಿ ಅನುಭವಿಸುತ್ತಿರುವ ನೋವಿಗೂ ಅಷ್ಟೇನೂ ವ್ಯತ್ಯಾಸವಿಲ್ಲ ಎನಿಸುತ್ತದೆ ನೀನಾಳಿಗೆ. “ನನ್ನನ್ನು ತಿರಸ್ಕರಿಸಿದ ತನ್ನ ಗಂಡನ ಬಗ್ಗೆ ನನಗಿನ್ನೂ ಇದ್ದ ಪ್ರೀತಿ, ಹಂಬಲ ಮತ್ತು ಆಶೆ ಸೀತೆಯ ಅನುಭವವೂ ಆಗಿತ್ತು. ಆಗ ರಾಮಾಯಣ ಕೇವಲ ಲಿಂಗಭೇದ ತೋರುವ ದೃಷ್ಟಾಂತ ಕತೆಯಾಗಲ್ಲದೆ, ಮನುಷ್ಯರ ನಡುವಿನ ಸಂಬಂಧಗಳು ಮತ್ತು ಹೃದಯಾಳದಲ್ಲಿರುವ ವೇದನೆಯ ಕತೆಯಂತೆ ಕಂಡಿತು. ಅದೇ ಹೊತ್ತಿಗೆ 1920ರಲ್ಲಿ ಬ್ಲೂಸ್ (ಹೆಚ್ಚಾಗಿ ದುಮ್ಮಾನಗಳ ಬಗೆಗಿನ ಹಾಡುಗಳ ಒಂದು ಸಂಗೀತ ಶೈಲಿ) ಕವನಗಳನ್ನು ಹಾಡಿದ್ದ ಆನೆಟ್ ಹಾನ್ಶಾ ಅವರ ಸಂಗೀತವನ್ನು ಕೇಳಿದೆ. ನನ್ನ ವೈಯಕ್ತಿಕ ದುಃಖ, ಸೀತಾಳ ಕಥನ ಮತ್ತು ಹಾನ್ಶಾಳ ಸಂಗೀತ, ಈ ಮೂರು ಒಟ್ಟಾಗಿ ಸಾಗಿದ್ದರಿಂದ ‘ಸೀತಾ ಸಿಂಗ್ಸ್ ದ ಬ್ಲೂ’ ಸಿನಿಮಾವನ್ನು ಮಾಡಿದೆ” ಎನ್ನುತ್ತಾಳೆ ನೀನಾ.
82 ನಿಮಿಷಗಳ ಈ ಅನಿಮೇಟೆಡ್ ಸಿನಿಮಾದಲ್ಲಿ ಸೀತೆಯನ್ನು ತಾನು ವಿಧೇಯಳನ್ನಾಗಿ ತೋರಿಸದೆ. ಉತ್ಸಾಹಿ, ದೃಢ ನಿರ್ಧಾರಗಳ ಮತ್ತು ಭಾವುಕಜೀವಿಯನ್ನಾಗಿ ತೋರಿಸಿದ್ದೇನೆ ಎಂದು ನೀನಾ ಹೇಳುತ್ತಾರಾದರೂ ನಮ್ಮ ದೇಶದಲ್ಲೇ ರಾಮಾಯಣದ ಅನೇಕ ವ್ಯಾಖ್ಯಾನಗಳಲ್ಲಿ ಸೀತೆ ಇದಕ್ಕಿಂತಲೂ ಹೆಚ್ಚು ಗಟ್ಟಿ ವ್ಯಕ್ತಿತ್ವದವಳಾಗಿ ಮೂಡಿಬಂದಿದ್ದಾಳೆ.
ಸಹಜವಾಗಿಯೇ ಇದೆಲ್ಲ ಕೆಲ ‘ರಾಮಭಕ್ತ’ರಾದ ಹಿಂದೂತ್ವವಾದಿಗಳನ್ನು ಕೆರಳಿಸಿದೆ. ವಾಲ್ಮೀಕಿಯ ಜಾನಕಿ ಮತ್ತು ತಮ್ಮ ಸುತ್ತಲೂ ಇರುವ ಸೀತೆಯ ದುಃಖ ಅವರಿಗೆ ಅರ್ಥವಾಗುವುದಾದರೂ ಹೇಗೆ?