ಸಂವಿಧಾನದ ಮುನ್ನುಡಿಯಿಂದ “ಸಮಾಜವಾದ” ಎಂಬ ಪದವನ್ನು ತೆಗೆದುಹಾಕಬೇಕು ಎಂದು ಕೋರಿ ರಾಜ್ಯಸಭೆಯ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಶುಕ್ರವಾರ ಸದನದಲ್ಲಿ ವಿವಾದಾದ್ಮಕ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.
ಭಾರತ ಸಂವಿಧಾನದ ಮುನ್ನುಡಿ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸುತ್ತದೆ. ಆದರೆ, ಸಮಾಜವಾದಿ ಎಂಬ ಪದವನ್ನು 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂಗೀಕರಿಸಲ್ಪಟ್ಟಿತ್ತು. ಆನಂತರವೇ ಈ ಪದ ಭಾರತೀಯ ಸಂವಿಧಾನಕ್ಕೆ ಸೇರ್ಪಡೆಯಾದದ್ದು.
ಈ ಪದವನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂಬ ಒತ್ತಾಯ ಬಿಜೆಪಿ ನಾಯಕರಿಂದ ಈ ಹಿಂದಿನಿಂದಲೂ ಕೇಳಿ ಬಂದಿತ್ತು. 2015 ರ ಗಣರಾಜ್ಯೋತ್ಸವದಂದು ಸರ್ಕಾರ ನೀಡಿದ ಜಾಹೀರಾತಿನಲ್ಲಿ “ಜಾತ್ಯತೀತ” ಮತ್ತು “ಸಮಾಜವಾದಿ” ಎಂಬ ಪದಗಳು ಕಾಣೆಯಾಗಿದ್ದು ಸಹ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಈ ಪದಗಳನ್ನು ಸಂವಿಧಾನದಿಂದ ಅಧಿಕೃತವಾಗಿ ತೆಗೆದುಹಾಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. “ದೇಶವು ತುರ್ತು ಪರಿಸ್ಥಿತಿಯಲ್ಲಿದ್ದಾಗ ಮತ್ತು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿದ್ದ ಸಂದರ್ಭದಲ್ಲಿ 1976 ರ 42 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಿಂದ “ಸಮಾಜವಾದಿ” ಎಂಬ ಪದವನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂದು ಸೂಚಿಸಿರುವ ರಾಕೇಶ್ ಸಿನ್ಹಾ, ಸಂಸತ್ತಿನಲ್ಲಿ ಯಾವುದೇ ಚರ್ಚೆ ಅಥವಾ ಚರ್ಚೆಯಿಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಪಿಸಿದ್ದಾರೆ.
“ನರೇಂದ್ರ ಮೋದಿ ಸರ್ಕಾರವು ತನ್ನ ಹಲವಾರು ಉಪಕ್ರಮಗಳೊಂದಿಗೆ ಕಲ್ಯಾಣ ರಾಜಕಾರಣವನ್ನು ಪುನಃಸ್ಥಾಪಿಸಿದೆ. ಸಾಂಪ್ರದಾಯಿಕತೆಯು ಸ್ಪಂದನಾ ಸಮಾಜಕ್ಕೆ ಅನ್ವಯಿಸುವುದಿಲ್ಲ ಹೀಗಾಗಿ ಸಂವಿಧಾನದಿಂದ ಈ ಪದವನ್ನು ಕಡ್ಡಾಯವಾಗಿ ತೆಗೆದುಹಾಕಲೇಬೇಕು” ಎಂದು ರಾಕೇಶ್ ಸಿನ್ಹಾ ಒತ್ತಾಯಿಸಿದ್ದಾರೆ.