”ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಮಾಡುತ್ತಿರುವುದು ನೀಚ ರಾಜಕಾರಣ, ಅವರು ಅಧಿಕಾರದಲ್ಲಿದ್ದಾಗ ದಂಧೆ ಮಾಡುತ್ತಿದ್ದರು ಅನಿಸುತ್ತದೆ, ಹೀಗಾಗಿ ಅವರು ಮಾತೆತ್ತಿದರೆ ದಂಧೆ, ಲಂಚ, ಹಗರಣ ಬಗ್ಗೆ ಮಾತಮಾಡುತ್ತಾರೆ” ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾವು ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊವನ್ನಿಟ್ಟುಕೊಂಡು ಸರ್ಕಾರವನ್ನು, ಸಿಎಂ ಸಿದ್ದರಾಮಯ್ಯನವರನ್ನು ಕಟುವಾಗಿ ಟೀಕಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.
”ನಾನಾಗಲಿ, ನಮ್ಮ ತಂದೆಯಾಗಲೀ ವರ್ಗಾವಣೆ ದಂದೆಯಲ್ಲಿ ತೊಡಗಿಲ್ಲ. ಒಬ್ಬ ಮುಖ್ಯಮಂತ್ರಿ ಮೇಲೆ ಆರೋಪ ಮಾಡಬೇಕಾದರೆ ಸಾಕ್ಷ್ಯ ಇಟ್ಟುಕೊಂಡು ಮಾತನಾಡಿ” ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
”ಇನ್ ಸ್ಪೆಕ್ಟರ್ ವಿವೇಕಾನಂದ ಯಾರೆಂಬುದೇ ನನಗೆ ಗೊತ್ತಿಲ್ಲ. ಅವರ ವರ್ಗಾವಣೆಗೂ ನನಗೂ ಸಂಬಂಧ ಇಲ್ಲ. ವಿಪಕ್ಷಗಳು ಹತಾಶರಾಗಿ ಟೀಕೆ ಮಾಡುತ್ತಿವೆ” ಎಂದರು.
”ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂದೆಯನ್ನೇ ಮಾಡುತ್ತಿದ್ದರಾ?” ಎಂದು ಪ್ರಶ್ನಿಸಿದರು.
ವಿಡಿಯೋ ಕುರಿತು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
ತಾವು ಮೊಬೈಲ್ ನಲ್ಲಿ ಮಾತನಾಡುವ ವೇಳೆ ಪ್ರಸ್ತಾಪಿಸಿದ್ದ ಲಿಸ್ಟ್ ಬಗ್ಗೆ ವಿರೋಧ ಪಕ್ಷಗಳ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಡಾ ಯತೀಂದ್ರ, ”ಸಿಎಸ್ಆರ್ ಫಂಡ್ ಬಗ್ಗೆ ನಾನು ಅವತ್ತು ಮಾತನಾಡಿದ್ದು. ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದ್ರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನಮ್ಮ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ. ವಿವೇಕಾನಂದ ಯಾರು ಎಂದು ನನಗೆ ಗೊತ್ತಿಲ್ಲ. ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದಲ್ಲಿ ವಿವೇಕಾನಂದ ಅಂತಾ ಬಿಇಒ ಕೂಡ ಇದ್ದಾರೆ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ. ಇವರು ಅಧಿಕಾರದಲ್ಲಿದ್ದರು, ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ದರಾ, ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡಬಾರದು” ಎಂದರು.
”ನಾನು ವರುಣಾ ಕ್ಷೇತ್ರದ ಮಾಜಿ ಶಾಸಕ. ಈ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುವ ಕೆಲಸವನ್ನು ತಂದೆ ಸಿದ್ದರಾಮಯ್ಯನವರು ನನಗೆ ವಹಿಸಿದ್ದಾರೆ. ಕ್ಷೇತ್ರದ ಕೆಲಸಗಳು ಸಾಕಷ್ಟು ಇರುತ್ತವೆ. ನಾನು ಒಬ್ಬ ಖಾಸಗಿ ವ್ಯಕ್ತಿಯಲ್ಲ, ಸಾರ್ವಜನಿಕ ವ್ಯಕ್ತಿ, ನಮ್ಮ ಬಳಿ ಹತ್ತಾರು ಜನರು ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಬರುತ್ತಾರೆ, ವರ್ಗಾವಣೆ ಪ್ರತಿ ಸರ್ಕಾರದಲ್ಲಿಯೂ ಆಗುತ್ತಿರುತ್ತದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೂಡ ಆಗುತ್ತಿತ್ತು, ಹಾಗಾದರೆ ಅವರು ದಂಧೆಯಲ್ಲಿ ತೊಡಗಿದ್ದರೇ?” ಎಂದು ಪ್ರಶ್ನಿಸಿದರು.
”ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ. ಹಲವು ಕೆಲಸ ಮಾಡಿಕೊಡುವಂತೆ ಪಟ್ಟಿ ಕೊಡುತ್ತೇನೆ. ನಮ್ಮಲ್ಲಿ ನೂರಾರು ಅರ್ಜಿಗಳು, ಬೇಡಿಕೆಗಳು ಬರುತ್ತವೆ, ಅವುಗಳನ್ನು ನೋಡಿಕೊಂಡು ಸಿಎಂ ಅವರಿಗೆ ಫಾರ್ವರ್ಡ್ ಮಾಡುತ್ತೇನೆ, ಅದನ್ನು ಮಾಡುವುದು ಬಿಡುವುದು ಸಿಎಂ ಅವರಿಗೆ ಬಿಟ್ಟ ವಿಚಾರ” ಎಂದರು.
”ನಾನು ದುಡ್ಡಿನ ಬಗ್ಗೆ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ನಾನು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ ಮಾತನಾಡಿರುವುದು. ಲಿಸ್ಟ್ ಎಂದ ಕೂಡಲೇ ವರ್ಗಾವಣೆಗೆ ಅಂತಾ ಯಾಕೆ ಹೇಳುತ್ತೀರಿ? ಇವರ ಅವಧಿಯಲ್ಲಿ ಲಿಸ್ಟ್, ವರ್ಗಾವಣೆ ಅಂದರೆ ದಂಧೆಯಾಗಿತ್ತಾ? ಇವರ ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ? ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ?” ಎಂದು ಯತೀಂದ್ರ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿಯ ಕಾಮಾಲೆ ಕಣ್ಣಿಗೆ ಎಲ್ಲವೂ ಲಂಚದ ವ್ಯವಹಾರಗಳಂತೆ ಕಾಣಿಸುತ್ತಿದೆ: ಸಿದ್ದರಾಮಯ್ಯ ತಿರುಗೇಟು