ಇಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಅನ್ನು ಅಧಿವೇಶನದಲ್ಲಿ ಮಂಡಿಸಲಿದ್ದಾರೆ. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ದೃಷ್ಟಿಕೋನದಿಂದ ಮತ್ತು ಕೊರೊನಾದಿಂದ ಈಗಾಗಲೇ ಪಾತಾಳಕ್ಕೆ ಕುಸಿದಿರುವ ರಾಜ್ಯದ ಆರ್ಥಿಕತೆ ಸುಧಾರಿಸುವ ನಿಟ್ಟಿನಿಂದಲೂ ಈ ವರ್ಷದ ಬಜೆಟ್ ಮೇಲೆ ಜನಸಾಮಾನ್ಯರಿಗೆ ಸಾಕಷ್ಟು ನಿರೀಕ್ಷೆಗಳಿವೆ.
ರೈತರ ಸಂಕಷ್ಟಗಳು
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅಕಾಲಿಕ ಮಳೆ ತೀರಾ ಸಾಮಾನ್ಯವಾದ ಸಂಗತಿ ಎಂಬಂತಾಗಿದೆ. 2021 ರಿಂದ ಈವರೆಗೆ ಅಕಾಲಿಕ ಮಳೆಗೆ ರಾಣಿಬೆನ್ನೂರಿನಲ್ಲಿ 892.3 ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ಹತ್ತಿ, ಭತ್ತ, ಶೇಂಗಾ, ಜೋಳ ಸೇರಿದಂತೆ ನಾನಾ ಬೆಳೆಗಳು ನಾಶವಾಗಿವೆ. ಧಾರವಾಡ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭಿತ್ತನೆ ಮಾಡಲಾಗಿದ್ದ ನಾನಾ ಬೆಳೆಗಳು ಕೈಗೆಟುಕದಂತಾಗಿದೆ. ಗದಗ, ಲಕ್ಷ್ಮೇಶ್ವರ ಭಾಗದಲ್ಲಿ ನೂರಾರು ಹೆಕ್ಟೇರ್ನಲ್ಲಿ ಬೆಳೆಯಲಾಗಿದ್ದ ಶೇಂಗಾ, ಈರುಳ್ಳಿ ಮತ್ತು ಜೋಳವೂ ಮಣ್ಣು ಪಾಲಾಗಿದೆ. ಇನ್ನೂ ಮಲೆನಾಡಿನ ಭಾಗದಲ್ಲಿ ಅಡಿಕೆ ಬೆಳೆಗಾರರು ಕೋಟ್ಯಾಂತರ ರೂ. ನಷ್ಟ ಅನುಭವಿಸಿದ್ದಾರೆ. ರಾಜ್ಯದ ಇತರೆ ಭಾಗದಲ್ಲಿರುವ ರೈತರ ಸಮಸ್ಯೆಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ.
ಈ ನಡುವೆ ರೈತರಿಗೆ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ. ಗೊಬ್ಬರ ಬಿತ್ತನೆ ಬೀಜದ ಬೆಲೆ ಇಳಿಕೆ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿನ ಸಾಲಮನ್ನಾ ಸೇರಿದಂತೆ ರಾಜ್ಯದ ಬಜೆಟ್ ಮೇಲೆ ರೈತರಿಗೆ ಸಾಕಷ್ಟು ನಿರೀಕ್ಷೆ ಮತ್ತು ಬೇಡಿಕೆಗಳಿವೆ. ಆದರೆ, ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲಿದೆ ಎಂಬುದು ಬಜೆಟ್ ನಂತರ ಸ್ಪಷ್ಟವಾಗಲಿದೆ.
ಕಾರ್ಮಿಕರ ಕೂಗು
ಕೊರೊನಾ ಕಾರಣದಿಂದಾಗಿ ಅಸಂಘಟಿತ ಕಾರ್ಮಿಕ ವಲಯ ಸಾಕಷ್ಟು ಸಮಸ್ಯೆಯನ್ನು ಸಾಕಷ್ಟು ಸಾವು-ನೋವುಗಳನ್ನು ಎದುರಿಸಿದೆ. ಈ ವಿಭಾಗದಲ್ಲಿನ ನಿರುದ್ಯೋಗ ಸಮಸ್ಯೆ ಈವರೆಗೆ ಬಗೆಹರಿದಂತೆ ಕಂಡುಬಂದಿಲ್ಲ. ಅಲ್ಲದೆ, ಕಾರ್ಮಿಕ ಇಲಾಖೆ ಕೊರೊನಾ ಸಂದರ್ಭದಲ್ಲಿ ಅಸಂಘಟಿತ ವಲಯಕ್ಕೆ ಉತ್ತಮ ನೆರವನ್ನೂ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಸೂಕ್ತ ಕೆಲಸ ಮತ್ತು ಕೂಲಿ ಇಲ್ಲದೆ ದಿನಗೂಲಿಗಳು ಮತ್ತು ಕಟ್ಟಡ ಕಾರ್ಮಿಕರು ಕಂಗಾಲಾಗಿದ್ದಾರೆ. ನರೇಗ ಕಾರ್ಮಿಕರಿಗೆ ಅನುದಾನ ಸಾಲುತ್ತಿಲ್ಲ. ವಸತಿ ರಹಿತ ಕಾರ್ಮಿಕರಿಗೆ ಸೂರು ನೀಡುವುದಕ್ಕೆಂದೆ ಕೇಂದ್ರ-ರಾಜ್ಯ ಸರ್ಕಾರಗಳ ನಾನಾ ಯೋಜನೆಗಳು ಇವೆ. ಆದರೆ, ಸೂರು ಮಾತ್ರ ಖಚಿತವಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಈ ವರ್ಷದ ಬಜೆಟ್ನಲ್ಲಿ ಅಸಂಘಟಿತ ವಲಯಕ್ಕೆ ಸರ್ಕಾರದ ಕೊಡುಗೆ ಏನು? ಎಂಬುದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
ಸಣ್ಣ-ಮಧ್ಯಮ ಉದ್ಯಮಗಳ ನಿರೀಕ್ಷೆ
ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಕ್ಷೇತ್ರಗಳ ಪೈಕಿ ಸಣ್ಣ-ಮದ್ಯಮ ಉದ್ಯಮಗಳ ಪಾತ್ರ ದೊಡ್ಡದು. ಆದರೆ, ಜಿಎಸ್ಟಿ ಜಾರಿಯಿಂದಾಗಿ ಅನೇಕ ಸಣ್ಣ ಉದ್ಯಮಗಳು ಅವನತಿಯೆಡೆಗೆ ದೂಡಿತ್ತು. ಇನ್ನೂ ಕೊರೊನಾದಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟದಿಂದ ಈವರೆಗೆ ಅನೇಕ ಉದ್ಯಮಗಳು ಚೇತರಿಸಿಕೊಂಡಿಲ್ಲ. ಹೀಗಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಚೇತರಿಕೆಗೆ ರಾಜ್ಯ ಸರ್ಕಾರ ಯಾವ ಪ್ಯಾಕೇಜ್ ಘೋಷಿಸಲಿದೆ? ಎಂಬುದೂ ಸಹ ಕುತೂಹಲಕ್ಕೆ ಕಾರಣಾಗಿದೆ.
ಜನ ಸಾಮಾನ್ಯರ ಬೇಡಿಕೆ ಏನು?
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶಿಕ್ಷಿತ ಯುವಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮತ್ತೊಂದೆಡೆ ದಿನೋಪಯೋಗಿ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿದ್ದು ಕೆಳ ಮತ್ತು ಮಧ್ಯಮ ವರ್ಗದ ಜನ ಬದುಕುವುದೇ ದುಸ್ಥರವಾಗಿದೆ. ಪೆಟ್ರೋಲ್ ಬೆಲೆಯಲ್ಲೂ ಸಹ ಪಂಚರಾಜ್ಯಗಳ ಚುನಾವಣೆ ಬಳಿಕ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ. ಇದು ನಿಜವಾದರೆ ಜನ ಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದು ಖಚಿತ. ಈ ಹಿಂದೆ ಪೆಟ್ರೋಲ್ ಬೆಲೆ ಲೀಟರ್ಗೆ 94 ರೂ ಆಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದರು. ಆದರೆ 100 ರೂಗಿಂತ ಕೆಳಗೆ ಇಳಿದಿಲ್ಲ. ಇದನ್ನು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕಿದೆ.
ಹೀಗಾಗಿ ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಯಾವ ಕ್ರಮ ತೆಗೆದುಕೊಳ್ಳಲಿದೆ? ಬೆಲೆ ನಿಯಂತ್ರಣಕ್ಕೆ ಮುಂದಾಗಲಿದೆಯೇ? ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಇಳಿಸಲಿದೆಯೇ? ಇದರ ಜೊತೆಗೆ ಯಾವೆಲ್ಲಾ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಲಿದೆ? ಎಂದು ಜನ ಕುತೂಹಲದಿಂದ ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ‘ಬಿಫೆಸ್’ನಲ್ಲಿ ಸಾವರ್ಕರ್ ಪ್ರತ್ಯಕ್ಷ; ಮಾದರಿ ವ್ಯಕ್ತಿಗಳ ಪೈಕಿ ‘ಅಂಬೇಡ್ಕರ್’ ನಾಪತ್ತೆ!
Nanna nireekshe government aasthi mathe vaapaas barutha antha..,. Aaspathre, vidyasamsthegala fees kadime aagbahuda illa devasthanagalu hechhagbahuda