Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ; ಬೆಸಗರಹಳ್ಳಿ ರಾಮಣ್ಣ ವೃತ್ತಾಂತ ಸರಣಿ ಪ್ರಾರಂಭ: ಭಾಗ-1

ಹಿಂಗಿದ್ದ ನಮ್ಮ ರಾಮಣ್ಣ; ಬೆಸಗರಹಳ್ಳಿ ರಾಮಣ್ಣ ವೃತ್ತಾಂತ ಸರಣಿ ಪ್ರಾರಂಭ: ಭಾಗ-1

- Advertisement -
- Advertisement -

ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಗೆಳೆಯರು ಆ ವರ್ಷದ ಅತ್ಯುತ್ತಮ ಕಥಾ ಸಂಕಲನಕ್ಕೆ ರಾಮಣ್ಣನ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತ ಬರುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಸಮಾರಂಭ. ರಾಮಣ್ಣ ಕಥೆಗಾರರಾಗಿದ್ದಾಗ, ತನ್ನ ಸುತ್ತಮುತ್ತಲಿನವರಲ್ಲಿ ಕತೆ ಹೆಣಿಯುವ ಶಕ್ತಿ ಗುರುತಿಸಿ ಬರೆಸಿದ್ದರು ಮತ್ತು ಒಳ್ಳೆಯ ಕಥೆಗಳಿಗಾಗಿ ಆಶಿಸಿದ್ದರು. ಅಂತಹ ಕಥೆಗಾರನ ಸ್ಮರಣೆಯಲ್ಲಿ ಕನ್ನಡದಲ್ಲಿ ಬರುತ್ತಿರುವ ಉತ್ತಮ ಕಥಾ ಸಂಕಲನವನ್ನು ಹುಡುಕಿ ಬಹುಮಾನ ಕೊಡುವುದು, ಕನ್ನಡ ಕಥಾಲೋಕವನ್ನ ಶ್ರೀಮಂತಗೊಳಿಸುವ ಕ್ರಮಗಳಲ್ಲಿ ಒಂದು ಮತ್ತು ರಾಮಣ್ಣನಿಗೆ ಸಲ್ಲಿಸುವ ನಿಜವಾದ ಗೌರವ ಕೂಡ. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಾದ್ಯ ಸಂಗೀತ ಮತ್ತು ಹಾಡುಗಾರಿಕೆಯೂ ವಿಶೇಷವಾದದ್ದೇ.

ಆ ಸಮಾರಂಭದಲ್ಲಿ ಭಾಗವಹಿಸುವುದು ನಮಗೊಂದು ಸಂಭ್ರಮದ ಸಂಗತಿ. ಏಕೆಂದರೆ ಅಲ್ಲಿ ನಮ್ಮ ಹಳೆಯ ಗೆಳೆಯರೆಲ್ಲಾ ನೆರೆಯುತ್ತಾರೆ ಹೊಸ ಗೆಳೆಯರ ಪರಿಚಯವಾಗುತ್ತದೆ. ಮಂಡ್ಯದ ಹಿರಿಯರು ಮತ್ತು ಕಿರಿಯರು ಬಂದು ಅಸೀನರಾಗುತ್ತಾರೆ. ರಾಮಣ್ಣನ ಗೆಳೆಯರು, ಬಂಧುಬಾಂಧವರು, ಬೆಂಗಳೂರು-ಮಂಡ್ಯ-ಮೈಸೂರಿನ ಕಡೆಯವರೆಲ್ಲಾ ನೋಡಲು ಸಿಗುತ್ತಾರೆ. ರಾಮಣ್ಣನ ನೆನಪಿನ ಸಮಾರಂಭವೇ ಸರ್ವಜನಾಂಗದ ಶಾಂತಿಯ ತೋಟದಂತಿರುತ್ತದೆ. ಅಲ್ಲಿ ಎಲ್ಲ ವಯೋಮಾನದ ಗಿಡಮರ ಸಸಿಗಳು ಕಾಣುತ್ತವೆ. ಕೆಲವು ಗಿಡಗಳಿಗೆ ಹಳದಿ ರೋಗ ಬಂದಿದ್ದರೆ, ಕೆಲವುದರಲ್ಲಿ ಹಸಿರು ಮುಕ್ಕಳಿಸುತ್ತವೆ. ಮೋಟು ಮರ, ಗಾಳಿಗೆ ಮಿಂಡ ಎನ್ನುವ ಮರ, ಎತ್ತರದ ಹೂವಿನ, ಹಣ್ಣಿನ, ಹಣ್ಣು ಬಿಡದ, ಎಲೆ ಉದುರಿಸಿಕೊಂಡ, ಎಲೆಯಿಂದ ಕಂಗೊಳಿಸುವ ಮರಗಳು, ನೆಟ್ಟಾಗಿನಿಂದ ಹಾಗೇ ಇರುವ ಗಿಡಗಳು – ಹೀಗೆ ಎಲ್ಲವಕ್ಕೂ ಒಂದು ರೀತಿ ಜೀವಕಳೆ ಬರುತ್ತಿದ್ದುದು ರಾಮಣ್ಣನ ನೆನಪಿನಿಂದ. ರಾಮಣ್ಣ ಎಲ್ಲರಿಗೂ ಸಲ್ಲುವ ವ್ಯಕ್ತಿಯಾಗಿದ್ದರು. ಏಕೆಂದರೆ ಅವರು ವೈದ್ಯರಾಗಿದ್ದರು ಮತ್ತು ಈ ಸಮಾಜದ ಮನಸ್ಸನ್ನು ಬದಲಿಸುವ ಕತೆಗಾರರಾಗಿದ್ದರು.

ಸಮಾರಂಭ ಮುಗಿದನಂತರವೂ ರಾತ್ರಿ ಮಂಡ್ಯದಲ್ಲಿ ರಾಮಣ್ಣನ ಕಥೆಗಳು ಮುಂದುವರಿಯುತ್ತಿದ್ದವು. ಹಾಗೆ ನೋಡಿದರೆ ರಾಮಣ್ಣ ನಮ್ಮ ಮೈಮೇಲೆ ಬರುತ್ತಿದ್ದದ್ದು ರಾತ್ರಿ ವೇಳೆಯಲ್ಲಿಯೇ. ಹಾಗಾಗಿ ನಾವೆಲ್ಲೇ ಇರಲಿ, ರಾಮಣ್ಣನ ಸಭೆ ಎಂದರೆ ಮಂಡ್ಯದ ದಾರಿ ಹಿಡಿಯುತ್ತಿದ್ದೆವು. ರಾಮಣ್ಣನ ನೆನಪೇ ನಮಗೆ ಮಾತಿನ ಸ್ಫೂರ್ತಿ ನೀಡುತ್ತಿತ್ತು.

ರಾಮಣ್ಣ ನಾನು ಬಾಲ್ಯದಲ್ಲಿ ನೋಡಿದ ಮೊದಲ ಕತೆಗಾರ. ಅವರು ಹರದನಹಳ್ಳಿಗೆ ವರ್ಗವಾಗಿ ಬಂದಾಗ ಕಾಣಲು ಹೋಗಿದ್ದೆ. ಆ ದಿನ ಅವರಿರಲಿಲ್ಲ. ಕುಗ್ರಾಮದಂತಹ ಊರಿಗೆ ವೈದ್ಯರಾಗಿ ಬಂದಿದ್ದ ರಾಮಣ್ಣನ ಬಗ್ಗೆ ಅಂದು ನಮಗನಿಸಿದ್ದೇನೆಂದರೆ, ರಾಮಣ್ಣ ತುಂಬ ಪ್ರಭಾವವಿದ್ದ ವ್ಯಕ್ತಿಯೆಂದು. ನಮ್ಮ ಜಿಲ್ಲೆಯ ಬಹುದೊಡ್ಡ ರಾಜಕಾರಣಿಗಳೆಂದು ಗೌರವ ಸಂಪಾದಿಸಿದ್ದ ಶಂಕರೇಗೌಡರ ಕಡೆಯವರಾಗಿದ್ದರಿಂದ, ಅವರ ಪ್ರಭಾವದಿಂದ ಯಾವುದಾದರೂ ಒಳ್ಳೆಯ ಊರಿಗೆ ವರ್ಗಾ ಮಾಡಿಸಿಕೊಳ್ಳಬಹುದಿತ್ತು. ಹಾಗೆ ಮಾಡದೆ ನಾಗಮಂಗಲ, ಹರದನಹಳ್ಳಿ, ಬೆಳ್ಳೂರು ಈ ಭಾಗದಲ್ಲೇ ಅವರು ಸೇವೆ ಸಲ್ಲಿಸಿದ್ದು ನಮಗೆ ಹೆಮ್ಮೆಯ ಸಂಗತಿ. ಬಹುತೇಕ ಗ್ರಾಮಾಂತರ ಪ್ರದೇಶದಲ್ಲೇ ತಮ್ಮ ವೃತ್ತಿ ಮಾಡಿ ಮಕ್ಕಳು ದೊಡ್ಡವರಾದ ನಂತರ ಮಂಡ್ಯಕ್ಕೆ ಹೋದರು.

1969ರಂದು ನಮ್ಮ ಹೈಸ್ಕೂಲಿನಲ್ಲಿ ಕಾಣಿಸಿಕೊಂಡು ಮರೆಯಾದ ರಾಮಣ್ಣನ ಕಥೆ ಓದಬೇಕಾದರೆ, ಎರಡು ವರ್ಷವಾಯ್ತು. ನಾನು ಮೈಸೂರು ಬನುಮಯ್ಯನವರ ಕಾಲೇಜಿನಲ್ಲಿ ಓದುವಾಗ ಅಕಸ್ಮಾತ್ ಒಂದು ಪತ್ರಿಕೆ ಸಿಕ್ಕಿತು. ಅದರಲ್ಲಿ ರಾಮಣ್ಣ ಬರೆದ ಕಥೆ ಪ್ರಕಟವಾಗಿತ್ತು. ’ಜ್ವಾಲೆಯ ನಡುವೆ’ ಎಂಬ ಆ ಕಥೆಯನ್ನು ಎರಡು ಮೂರು ಬಾರಿ ಓದಿದ ಫಲವಾಗಿ ಅದರ ಕೆಲವು ಸಾಲುಗಳು ನನ್ನ ಮನಸ್ಸಿನಲ್ಲಿ ಉಳಿದದ್ದಲ್ಲದೇ, ಕಥೆಯ ರಚನೆಯ ಬಗ್ಗೆ ನನ್ನಲ್ಲಿ ಒಂದು ಬೀಜಾಂಕುರವೂ ಆಗಿತ್ತು. ರೈಲು ಬೋಗಿಯಲ್ಲಿ ವಯೋವೃದ್ಧ ವ್ಯಕ್ತಿ, ಆತನ ವಿಧವೆ ಮಗಳು, ಆಕೆಯ ಮಗು ಕುಳಿತಿದ್ದಾರೆ. ಜೊತೆಗೆ ಅಜ್ಜಿಯೊಂದು ಮುದುಡಿ ಕುಳಿತಿದೆ. ಅಜ್ಜಿಯ ಮಗನೂ ಇದ್ದಾನೆ. ಆತ ನೋಡಲು ಅನಾಗರಿಕನಂತಿದ್ದಾನೆ. ಸೂಟುಬೂಟುದಾರಿಯೊಬ್ಬ ನಿರೂಪಕನ ಜೊತೆಯಿದ್ದಾನೆ. ಎಲ್ಲ ಪ್ರಯಾಣಿಕರ ಬದುಕಿನ ಗೋಳುಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತವೆ. ಕೆಲವೇ ಕ್ಷಣಗಳ ಹಿಂದೆ ಗುರುತು ಪರಿಚಯವಿಲ್ಲದಂತಿದ್ದವರು ಈಗ ತಮ್ಮ ಬದುಕಿನ ಬವಣೆ ಹರಡಿಕೊಂಡು ಅಳೆದು ಸುರಿದು ಒಂದಾಗುತ್ತಾರೆ. ಅಲ್ಯಾರ ಕತೆಯೂ ಸುಖಕರವಾಗಿಲ್ಲ. ಇದನ್ನ ಗಾಢವಾಗಿ ಚಿಂತಿಸಿದ ನಿರೂಪಕ ರೈಲ್ವೆ ಕಿಟಕಿಯ ಮೂಲಕ ಕಾಣುತ್ತಿದ್ದ ಬಯಲ ಕಡೆ ನೋಡತೊಡಗುತ್ತಾನೆ. ಈ ಕಥೆ ಓದಿ ಅರ್ಧಶತಮಾನವಾಗುತ್ತ ಬಂದರೂ ಕತೆಯೊಳಗಿನ ಅಜ್ಜಿ ಮಾತನಾಡುತ್ತಿದ್ದವರನ್ನು ಗದರಿಸುವುದು; ಅಜ್ಜಿ ಕೈಲಿ ಬೈಸಿಕೊಂಡ ಅವಳ ಮಗ ಮತ್ತು ವಿಧವೆ ಮತ್ತಾಕೆಯ ಮಗು ಇವರಿನ್ನೂ ನನ್ನ ನೆನಪಲ್ಲಿದ್ದಾರೆ. ಇದು ರಾಮಣ್ಣನ ಕಥಾ ನಿರೂಪಣೆಯ ಶೈಲಿ. ಎಂದೋ ಓದಿದ ಅವರ ಕಥೆಗಳ ಪಾತ್ರವೆಲ್ಲಾ ನೆನಪಲ್ಲಿ ಉಳಿದಿವೆ. ನಂತರ ರಾಮಣ್ಣನ ಕಥೆಗಳನ್ನು ಹುಡುಕಿ ಓದಬೇಕೆನಿಸಿತು. ಮುಗ್ಧ ಬರಹಗಾರರಿಗೆ ಅಂದು ನವ್ಯದವರು ಉಂಟು ಮಾಡಿದ್ದ ಕೀಳರಿಮೆ ಬದಲಿಗೆ ರಾಮಣ್ಣ ನಮ್ಮೆಲ್ಲರಲ್ಲಿ ಆತ್ಮವಿಶ್ವಾಸ ತುಂಬಿದ್ದರು. ನವ್ಯಕ್ಕೆ ಪ್ರತಿಯಾಗಿ ಬಂಡಾಯ ರೂಪುಗೊಂಡಾಗ ಅದರ ರೂವಾರಿಯೇ ರಾಮಣ್ಣನಾಗಿದ್ದರು. ಹಾಗಿದ್ದರೂ ರಾಮಣ್ಣ ಯಾವ ಪಂಥವನ್ನೂ ಟೀಕಿಸದೆ ಭೂಮಿನಿಷ್ಠನಾದ ರೈತ ಉತ್ತು ಬೆಳೆತೆಗೆದಂತೆ ನಮಗೆಲ್ಲಾ ಕಥಾರೊಟ್ಟಿಗಳನ್ನ ಒದಗಿಸಿದರು. ಕಥೆ ಬರೆವ ಹೊಸ ಪೀಳಿಗೆಯವರನ್ನು ಪ್ರೇರೇಪಿಸಿದ್ದರು. ನಮ್ಮ ನೆಲದ ಆಡುಮಾತನ್ನು ನಮ್ಮ ಬರಹಗಳಲ್ಲಿ ಮುಲಾಜಿಲ್ಲದೆ ಬಳಸುವುದನ್ನು ತೋರಿಸಿಕೊಟ್ಟರು.

ರಾಮಣ್ಣ ಒಮ್ಮೆ ನಾಗಮಂಗಲದ ಮುಸಾಫಿರ್‌ಖಾನ್ ಹಿಂಭಾಗದಲ್ಲಿದ್ದ ಆರೋಗ್ಯ ಇಲಾಖೆಯ ಕೊಠಡಿಯೊಳಗೆ ಕೂತಿದ್ದರು. ಅಲ್ಲಿಗೆ ನುಗ್ಗಿದ ನಾನು “ರಾಮಯ್ಯನೋರಿದ್ದಾರ” ಅಂದೆ. “ನಾನು ಡಾ.ಬೆಸಗರಹಳ್ಳಿ ರಾಮಣ್ಣ” ಅಂದರು. “ಕಬ್ಬಾಳು ರಾಮಯ್ಯ ಸಾರ್” ಅಂದೆ. “ಹೊರಗಡೆ ಎಲ್ಲೊ ಇರಬೇಕು ನೋಡಪ್ಪ” ಅಂದವರು ಕೂಡಲೇ, “ಕೆಲಸ ಗಿಲಸ ಕೊಡುಸ್ತಿನಿ ಅಂದಿದ್ನಾ” ಅಂದ್ರು. ರಾಮಣ್ಣ ಹಾಗೆ ಕೇಳಲು ಕಾರಣ ಕಬ್ಬಾಳು ರಾಮಯ್ಯ ಅಂದು ಪ್ರಭಾವಿ ವ್ಯಕ್ತಿಯಾಗಿದ್ದರು. ಸರಕಾರಿ ಜನಗಳ ವರ್ಗಾವಣೆಯಲ್ಲದೆ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡಿಸುತ್ತಿದ್ದರು. ಇದನ್ನ ಗ್ರಹಿಸಿದ್ದ ರಾಮಣ್ಣ ನನಗೆ ಆ ಪ್ರಶ್ನೆ ಕೇಳಿದ್ದರು. ನಾನದನ್ನು ನಿರಾಕರಿಸಿ “ನೀವು ಕದಬಳ್ಳಿ ಹೈಸ್ಕೂಲಿಗೆ ಬಂದಿದ್ರಿ ಸಾ. ನಿಮ್ಮದೊಂದು ಕಥೆ ಓದಿದ್ದಿನಿ” ಅಂದೆ. ರಾಮಣ್ಣನಿಗೆ ಈ ಬೆಂಗಾಡಲ್ಲಿ ತನ್ನ ಕಥೆ ಓದಿರೊ ಹುಡುಗ ಸಿಕ್ಕಿದ್ದರಿಂದ ಕುತೂಹಲ ಆಯ್ತು. ಆನಂತರ ತನ್ನ ಇಲಾಖೇಲಿ ಸಮಸ್ಯೆಯಾಗಿರೊ ರಾಮಯ್ಯನ ಬಗ್ಗೆ ವಸಿಹು॒ಷಾರಾಗಿರುವಂತೆ ಹೇಳಿಕಳುಹಿಸಿದರು. ರಾಮಣ್ಣನ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಿದ್ದರೆ ಕೂಲಿನಾಲಿ ಮಾಡುತ್ತ ಶಿವರಾಮೇಗೌಡನ ಹಿಂಬಾಲಕನಾಗಿ ಊರಿಗೆ ಸಮಸ್ಯೆಯಾಗಿ ಬದುಕಬಹುದಿತ್ತು. ಆ ವಾರವೇ ರಾಮಯ್ಯ ಕಬ್ಬನ್ ಪಾರ್ಕ್‌ನಲ್ಲಿರುವ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿ ರಾಮಣ್ಣನಂತಹ ಹಲವಾರು ಜನ ಕಥೆಗಾರರನ್ನ ಓದುವಂತೆ ಮಾಡಿದರು.

ರಾಮಣ್ಣ ಕಥೆ ಬಿಟ್ಟು ಏನನ್ನು ಬರೆಯಲು ಹೋಗಲಿಲ್ಲ. ಏನನ್ನಾದರು ಹೇಳಲು ಅವರು ಕಥಾ ಮಾರ್ಗವನ್ನೇ ಆರಿಸಿಕೊಳ್ಳುತ್ತಿದ್ದರು. ಅವರ ’ಸುಗ್ಗಿ’ ಕತೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಲಂಕೇಶರ ಕತೆ ಎರಡನೇ ಸ್ಥಾನಕ್ಕೆ ಸರಿದಾಗ ರಾಮಣ್ಣ ದಿಗ್ವಿಜಯ ಸಾಧಿಸಿದಂತೆ ಠೇಂಕಾರ ಮಾಡಿದ್ದರು. ಅಲ್ಲಿಂದ ಮುಂದೆ ಅವರ ಕಥೆಗಳು ನಿರಂತರವಾಗಿ ಬಡವರ ಹೊಟ್ಟೆಯಲ್ಲಿ ಮಕ್ಕಳುಟ್ಟಿದಂತೆ ಹುಟ್ಟುತ್ತ ಬೆಳೆಯುತ್ತ ಹೆಸರುವಾಸಿಯಾದವು. ಅವೆಲ್ಲ ನಮಗೆ ಇಷ್ಟವಾದವು.

ಲಂಕೇಶ್‌ಗೆ ಅರವತ್ತು ವರ್ಷ ತುಂಬಿದ್ದಕ್ಕೆ ಮೈಸೂರಿನಲ್ಲಿ ಕೆ. ರಾಮದಾಸರು ಲಂಕೇಶರ ಸಾಹಿತ್ಯ ಗೋಷ್ಠಿ ಏರ್ಪಡಿಸಿದ್ದರು. ಲಂಕೇಶ ಸಾಹಿತ್ಯ ಚರ್ಚೆಯೊಳಕ್ಕೆ ಸಮಕಾಲೀನರಾದ ತೇಜಸ್ವಿ ಅನಂತಮೂರ್ತಿ ಸೇರಿದಂತೆ ಈ ಮೂರು ಜನ ಮಹತ್ವದ ಲೇಖಕರ ಸಾಹಿತ್ಯ ಕುರಿತ ಚರ್ಚೆ ಒಂದು ಐತಿಹಾಸಿಕ ಘಟನೆಯಾಗಿತ್ತು. ಆ ಸಮಯದಲ್ಲಿ. ಕೆಲವರ ಭಾಗಕ್ಕೆ ದುಷ್ಟ ಚತುಷ್ಟರಂತಿದ್ದ ಚಂಪಾರನ್ನು ಕೂಡ ಲಂಕೇಶ್ ತೇಜಸ್ವಿಗೆ ಅನಂತಮೂರ್ತಿ ಜೊತೆಗೆ ಸೇರಿಸಬೇಕಾಗಿತ್ತು ಎಂಬುದು ಹಲವರ ತರ್ಕವಾಗಿತ್ತು. ಆದರೆ ಎಲ್ಲೂ ನಿಲ್ಲದ ಅಶಾಂತ ಮನಸ್ಸಿನ ಚಂಪಾ ಎಲ್ಲರಿಂದ ದೂರವಾಗಿ ಲಂಕೇಶರ ಕಡುವೈರಿಯಾಗಿದ್ದರು. ಆದ್ದರಿಂದ ಅವರನ್ನು ಈ ಮೂವರೊಟ್ಟಿಗೆ ಸೇರಿಸಲಾಗದೆ, ಲಂಕೇಶರ ಅರವತ್ತನೇ ವರ್ಷದ ಸಾಹಿತ್ಯಗೋಷ್ಠಿ ಮೈಸೂರಿನಲ್ಲಿ ಜರುಗಿತ್ತು. ಅಲ್ಲಿಗೆ ಬಂದ ರಾಮಣ್ಣ ಸಾಹಿತ್ಯದ ವಿದ್ಯಾರ್ಥಿಯಂತೆ ಭಾಗವಹಿಸಿದರು. ಎಲ್ಲಾ ಗೋಷ್ಠಿಗಳಲ್ಲಿ ಕುಳಿತುಕೊಂಡು ಕೂತುಹಲದಿಂದ ಕೇಳಿಸಿಕೊಂಡಿದ್ದನ್ನು ನೋಡಿದೆ. ಅಷ್ಟು ಹೊತ್ತಿಗಾಗಲೇ ನನ್ನ ಕಟ್ಟೆ ಪುರಾಣ ಕಾಲಂ ಶುರುವಾಗಿತ್ತು. ನನ್ನನ್ನ ನೋಡಿದ ಕೂಡಲೇ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿ, ದೂರ ನಿಂತವನನ್ನು ’ಇದ್ಯಾಕ್ ಬಾ’ ಅಂತ ಹತ್ತಿರ ಕೂರಿಸಿಕೊಂಡು ಭುಜದ ಮೇಲೆ ಕೈಹಾಕಿ, ಅಕ್ಕಪಕ್ಕದವರಿಗೆ ಪರಿಚಯ ಮಾಡಿಕೊಟ್ಟರು. ಆನಂತರ ದುರುಗುಟ್ಟಿ ನೋಡಿ “ಸುಮ್ಮನೆ ಯಳಿ ನೀನು. ಏನು ಸಿಕ್ಕಿದ್ರ ಬುಡಬ್ಯಾಡ. ತಗದು ಮುಟ್ಟುಸ್ತಾಯಿರು.. ವಳ್ಳೆ ಅವುಕಾಸ ಇದು” ಅಂದ್ರು. ರಾಮಣ್ಣನ ಈ ಮಾತನ್ನ ನೆನೆಸಿಕೊಂಡಾಗಲೆಲ್ಲ ನನ್ನ ಮನಸ್ಸು ಆರ್ದ್ರ-ಗೊಳುತ್ತದೆ. ರಾಮಣ್ಣನ ಇಂತಹ ಮೆಚ್ಚುಗೆಯ ಮಾತು ಆ ಕಾಲಂಅನ್ನು ಇಪ್ಪತ್ತು ವರ್ಷ ಎಳೆಯುವಂತೆ ಮಾಡಿತು.

ಕುವೆಂಪುರವರಿಗೆ ತೊಂಬತ್ತು ವರ್ಷ ತುಂಬಿದಾಗ ಕವಿಶೈಲದಲ್ಲಿ ಕುವೆಂಪು ಸಾಹಿತ್ಯ ಸಮಾರಂಭಗಳು ನಡೆದವು. ನಾಡಿನ ಕುವೆಂಪು ಅಭಿಮಾನಿಗಳೆಲ್ಲಾ ಬಂದಿದ್ದರು. ಅಲ್ಲಿಗೆ ರಾಮಣ್ಣ ಬರದೇ ಇರಲು ಸಾಧ್ಯವೇ! ಅದೊಂದು ಐತಿಹಾಸಿಕ ಸಮಾರಂಭ. ಜಿ.ಎಸ್. ಶಿವರುದ್ರಪ್ಪನವರಿಂದ ಹಿಡಿದು ಮೂರನೇ ತಲೆಮಾರಿನ ಕಾಳೆಗೌಡ ನಾಗವಾರರ ಮಗ ನಿಶಾಂತ್‌ವರೆಗೆ ಎಲ್ಲಾ ಸೇರಿದ್ದರು. ಹಿಂದಿನ ದಿನ ವರಾಹ ಮಾಂಸ ನೊರೆಗಳ್ಳನ್ನು ಕಂಠಪೂರ್ತಿ ಸೇವಿಸಿದ್ದ ನಮಗೆ ಮರುದಿನವೂ ತೆಳುವಾದ ಮಂಪರಿತ್ತು.

ಕವಿಶೈಲದ ಮನೆ ಎದುರಿಗೆ ತೋಟದಲ್ಲಿ ಕಾಳೇಗೌಡ ನಾಗವಾರರ ಅಧ್ಯಕ್ಷತೆಯಲ್ಲಿ ಸೇರಿದ ನಾವೆಲ್ಲಾ ನಮಗೆ ಗೊತ್ತಿರುವ ಹಾಸ್ಯ ಪ್ರಸಂಗಗಳನ್ನ ಹೇಳತೊಡಗಿದೆವು. ಆದರೆ ರಾಮಣ್ಣನ ಮುಂದೆ ನಾವು ಏನೇನು ಅಲ್ಲ ಅನ್ನಿಸಿತು. ನನಗ ಆಗ ಅನ್ನಿಸಿದ್ದೆಂದರೆ, ರಾಮಣ್ಣನ ಇಷ್ಟೊಂದು ಪ್ರಖರವಾದ ಹಾಸ್ಯ ಭಾಷೆ ಅವರ ಬರವಣಿಗೆಯಲ್ಲೇಕೆ ನುಗ್ಗಿಬರಲಿಲ್ಲವೆಂದು. ರಾಮಣ್ಣ ಮೈಮರೆತಂತೆ ಮಾತನಾಡುತ್ತಿದ್ದರು. ಆಗ ಅವರು ಹೇಳಿದ್ದು, “ಅವನು ಸಣ್ಣ ಹುಡುಗನಂತೆ ಮಾವಿನಕಾಯಿಗೆ ಕಲ್ಲು ಬೀರಿ ಕೆಡವಿದ್ದಾನೆ. ಸಾಬಿಯೊಬ್ಬ ಓಡಿಬಂದು ಇನ್ನೇನು ಹೊಡೆಯಬೇಕು, ಅಷ್ಟರಲ್ಲಿ ಇನ್ನೊಬ್ಬ ಸಾಬಿ ’ಛೋಡ್ರೆ ಹರೆ ಛೋಡ್ರೆ. ವೂ ಯಲ್ಲೇಗೌಡರ ಬೇಟ ಎಂದು ಅಬ್ಬರಿಸಿದನಂತೆ. ಹೊಡೆಯಲು ಬಂದ ಸಾಬಿ ಗರಹೊಡೆದಂತೆ ನಿಂತನಂತೆ. ಹತ್ತಿರ ಬಂದ ಸಾಬಿ ಯಲ್ಲೇಗೌಡನ ಹುಡುಗನಿಗೆ ಹೊಡೆದ್ರೆ ನಮ್ದು ಮಾವಿನಕಾಯಿ ಮರದಲ್ಲಿ ಒಂದು ಉಳಿಯದಿಲ್ಲ ಗೊತ್ತೆ’ ಎಂದು ಹೇಳಿ ರಾಮಣ್ಣನಿಗೆ, ’ಕೇಳಿದ್ರೆ ಕೊಡದಿಲ್ಲಾ, ಹಾಂ ಇಲ್ಲ ಅಂತಿವ, ಹಾಂ ಕಲ್ಲಲ್ಲಿ ವಡದ್ರೆ ಎಷ್ಟು ಬೀಳ್ತವೆ ಗೊತ್ತ. ಅಂಗೆ ಮಾಡಬಾರ್ದು, ಈಸ್ಕಬೇಕು, ಈಗ ಕಿತ್ತಿರದು ತಿನ್ಕಂಡಿ ಹೋಗು’ ಅಂದನಂತೆ”. ಇಂತಹ ಹಲವು ಪ್ರಸಂಗ ಹೇಳಿದ ರಾಮಣ್ಣನನ್ನ ಕಡೆ ಬಾರಿ ನೋಡಿದ್ದು ಕವಿಶೈಲದಲ್ಲಿ. ಕವಿ ಸಮಾಧಿ ಸನ್ನಿದಿಯಲ್ಲಿ. ಅದರೇನು ರಾಮಣ್ಣ ಹೊಡೆದ ಪಟ್ಟಾಂಗ ಮೊನ್ನೆಮೊನ್ನೆ ನಡೆದಂತಿದೆ.

ರಾಮಣ್ಣನ ಪ್ರತಿಷ್ಠಾನ ಮಾಡುವ ಕಾರ್ಯಕ್ರಮದಿಂದ ನಮಗಿವೆಲ್ಲಾ ನೆನಪಾಗುತ್ತವೆ. ಈ ಪೈಕಿ 2018ರ ಜೂನ್‌ನಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿತ್ತು. ಆ ದಿನ ಲಂಕೇಶ್ ಪತ್ರಿಕೆಯಲ್ಲಿದ್ದ ಗೆಳೆಯರೆಲ್ಲಾ ಸೇರಿ ಖುಷಿಯಿಂದ ಹೊರಟೆವು. ನಾನು ಮರುದಿನ ಹೊರಡಬೇಕಾದರೆ, ಸಿಟಿ ಕ್ಲಬ್ಬಿನಲ್ಲಿ ಉಳಿದಿದ್ದ ಕಮಲಾಕ್ಷಣ್ಣ ಊರಿಗೊಯ್ತಿನಿ ಬತ್ತಿಯಾ ಅಂದರು. ಶಿವಮೊಗ್ಗದ ಕತೆ ಹೊರಟಿದ್ದ ನಾನು, ಊರಿಗೆ ಹೋಗಿ ಅಲ್ಲಿಂದ ಶಿವಮೊಗ್ಗ ತಲುಪುವ ಆಲೋಚನೆ ಮಾಡಿ, ಕಮಲಾಕ್ಷಣ್ಣನ ಕಾರು ಹತ್ತಿದೆ. ಡಾ. ಎಚ್ ಟಿ ಕಮಲಾಕ್ಷ ರಾಮಣ್ಣ ಮೈಸೂರಿನಲ್ಲಿ ಎಂಬಿಬಿಎಸ್ ಓದುವಾಗ ರೂಂಮೇಟು ಮತ್ತು ಆತ್ಮೀಯ ಗೆಳೆಯ. ಕಡೆವರೆಗೂ ರಾಮಣ್ಣನ ಜೊತೆಯಿದ್ದವರು. ರಾಮಣ್ಣ ವೈದ್ಯರಾಗಿ ಗ್ರಾಮಾಂತರ ಪ್ರದೇಶಕ್ಕೆ ಬಂದರೆ, ಕಮಲಾಕ್ಷ ಬೆಂಗಳೂರಿನ ಕಾರ್ಪೋರೇಷನ್‌ನಲ್ಲಿ ಅರೋಗ್ಯಾಧಿಕಾರಿಯಾಗಿದ್ದರು.

ಮಾಜಿ ಮಂತ್ರಿ ಎಚ್ ಟಿ ಕೃಷ್ಣಪ್ಪನವರ ಸಹೋದರ ಕಮಲಾಕ್ಷಣ್ಣ ಐದು ದಶಕಗಳ ರಾಜಕಾರಣವನ್ನು ಹತ್ತಿರದಿಂದ ಬಲ್ಲವರು. ಆ ಕಾಲದ ರಾಮಣ್ಣನ ಒಡನಾಟ ಹೇಳುತ್ತಾ ಹೋದಂತೆ ನಮ್ಮ ಊರು ತಲುಪಿದ್ದೇ ತಿಳಿಯಲಿಲ್ಲ. ಕಮಲಾಕ್ಷಣ್ಣ ಹೇಳಿದ್ದನ್ನು ದಾಖಲಿಸಿಕೊಳ್ಳಬೇಕೆನಿಸಿತು. ಆದ್ದರಿಂದ ಅವನು ಹೇಳಿದ್ದನ್ನು ಬರೆದುಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದೆ. ಈಗಾಗಲೇ ಪ್ರಕಟವಾಗಿರುವ ’ಕಾಡುಗಿಣಿ’ ಎಂಬ ರಾಮಣ್ಣನ ನೆನಪಿನ ಸಂಪುಟದಲ್ಲಿ ರಾಮಣ್ಣನ ಮಾತು ಅಷ್ಟಾಗಿ ದಾಖಲಾಗಿಲ್ಲ. ನಮ್ಮ ನಡುವಿನ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆಯವರು ಹೇಳಿದಂತೆ, ನಮ್ಮ ಹಿರಿಯರು ನಡೆದಾಡಿದ ನೆಲ ಇದೆ; ಅವರು ಉಸಿರಾಡಿದ ಗಾಳಿಯು ಇದೆ; ಹಾಗೆಯೇ ಅವರಾಡಿದ ಮಾತುಗಳೂ ಇವೆ. ಇನ್ನ ಅವರ ಮನಸ್ಸಂತೂ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಇಲ್ಲಿ ರಾಮಣ್ಣನ ಮಾತನ್ನ ಕೇಳಿಸಿಕೊಂಡವರಿಂದ ಕೇಳಿಸಿಕೊಂಡು ದಾಖಲು ಮಾಡುವ ಸಾಹಸ ಮಾಡಿದ್ದೇನೆ.

ಬಿ. ಚಂದ್ರೇಗೌಡ

ನಿರೂಪಣೆ: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಯಾರೇ ಆಗಿರಲಿ, ಯಾವ ತಂದೆ ತಾಯಿಗೂ ನಮಗೆ ಬಂದ ಕಷ್ಟ ಬಾರದಿರಲಿ – ಫಾಝಿಲ್ ತಂದೆಯ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....