ಮೂರು ಇನ್ಸ್ಟಂಟ್ ಲೋನ್ ಆ್ಯಪ್ಗಳ ಮೂಲಕ ಸಾಲ ಪಡೆದು, ಮರುಪಾವತಿಸಲು ಸಾಧ್ಯವಾಗದ ಕಾರಣ ರಿಕವರಿ ಏಜೆಂಟ್ಗಳ ಕಿರುಕುಳದಿಂದ ಬೇಸೆತ್ತ 22 ವರ್ಷದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ.
ಜಾಲಹಳ್ಳಿಯ ಎಚ್ಎಂಟಿ ಸ್ಟಾಫ್ ಕ್ವಾರ್ಟರ್ಸ್ ನಿವಾಸಿ ತೇಜಸ್ ನಾಯರ್ ಎಂಬುವವರೆ ಆ ದುರ್ಧೈವಿಯಾಗಿದ್ದು, ಅವರು ಯಲಹಂಕ ಸಮೀಪದ ಖಾಸಗಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಸುಮಾರು 46,000 ರೂ. ಸಾಲ ಬಾಕಿ ಉಳಿಸಿಕೊಂಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ನನ್ನ ಹೆಸರಿನಲ್ಲಿ ಇರುವ ಸಾಲಗಳನ್ನು ಪಾವತಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದು ನನ್ನ ಅಂತಿಮ ನಿರ್ಧಾರವಾಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಡೆತ್ ನೋಟ್ ಬರೆದಿದ್ದು ತೇಜಸ್ ಸಾವಿಗೆ ಶರಣಾಗಿದ್ದಾರೆ.
ಈ ಕುರಿತು ಅವರ ತಂದೆ ಗೋಪಿನಾಥ್ರವರು ನೀಡಿದ ದೂರಿನ ಅನ್ವಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ತೇಜಸ್ ಮೊಬೈಲ್ ಫೋನ್ ಅನ್ನು ಸೈಬರ್ ಕ್ರೈಮ್ ವಿಭಾಗಕ್ಕೆ ಕಳಿಸಿದ್ದಾರೆ.
ಮೃತರ ತಂದೆ ಮಾತನಾಡಿ, “ತೇಜಸ್ ಸ್ನೇಹಿತನೊಬ್ಬನಿಗೆ ತುರ್ತು ಎಂದು ಆ್ಯಪ್ ಮೂಲಕ ಸಾಲ ತೆಗೆದುಕೊಟ್ಟಿದ್ದಾನೆ. ಆದರೆ ಆತನ ಸ್ನೇಹಿತ ಎಇಎಂ ಮರುಪಾವತಿ ಮಾಡಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ತೇಜಸ್ ಆ ಸಾಲ ತೀರಿಸಲು ಬೇರೆ ಆ್ಯಪ್ಗಳ ಮೂಲಕ ಮತ್ತೆ ಸಾಲ ಮಾಡಿದ್ದಾನೆ. ಅವುಗಳನ್ನು ತೀರಿಸಲು ಸಂಬಂಧಿಕರೊಬ್ಬರಿಂದ ಹಣಕ್ಕೆ ಬೇಡಿಕೆಯಿಟ್ಟಾಗಲಷ್ಟೇ ನಮಗೆ ವಿಷಯ ಗೊತ್ತಾಯಿತು” ಎಂದಿದ್ದಾರೆ.
ಸಾಲ ವಾಪಸ್ ಮಾಡದ ಕಾರಣ ಆತನ ಫೋಟೊಗಳನ್ನು ತಿರುಚಿ ವಾಟ್ಸಾಪ್ ಮೂಲಕ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳಿಸಲಾಗಿದೆ. ಇದರಿಂದ ಬೇಸೆತ್ತ ಆತ ಆತ್ಮಹತ್ಯೆ ಮೊರೆ ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ತುರ್ತು ಸಾಲಕ್ಕೆ ಮರುಳಾಗಿ ವಂಚಕರ ಬಲೆಗೆ ಬೀಳಬೇಡಿ
ತೇಜಸ್ ಒಬ್ಬರೆ ಈ ರೀತಿಯ ದೌರ್ಜನ್ಯಕ್ಕೆ ಒಳಗಾಗಿಲ್ಲ. ಬದಲಿಗೆ ಸಾವಿರಾರು ಜನರು ಈ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ತುರ್ತಿಗೆ ಎಂದು ಮೊಬೈಲ್ ಆ್ಯಪ್ಗಳ ಮೂಲಕ ಕಿರು ಸಾಲ ಪಡೆದು, ದುಬಾರಿ ಬಡ್ಡಿ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ. ಹಲವಾರು ಜನ ತಮ್ಮ ಜೀವನ, ನೆಮ್ಮದಿ ಹಾಳು ಮಾಡಿಕೊಂಡಿದ್ದಾರೆ.
ಕ್ಯಾಶ್ ಗುರು, ಮನಿ ಗುರು, ದಾನಿ ಆಪ್, ಮನಿಟ್ಯಾಪ್, ಎಎಲ್ಪಿ ಕ್ಯಾಶ್ ಆಪ್ ನಂತರ 300ಕ್ಕೂ ಹೆಚ್ಚು ಆನ್ಲೈನ್ ಮೂಲಕ ಸಾಲ ನೀಡುವ ಆಪ್ಗಳಿವೆ. 5,000 ರೂಗಳಿಂದ ಆರಂಭವಾಗಿ 15,000,00 ರೂ ಗಳವರೆಗೂ ಯಾವುದೇ ದಾಖಲೆಗಳನ್ನು ಕೇಳದೇ ಕ್ಷಣಾರ್ಧದಲ್ಲಿ ಸಾಲ ಕೊಡುವುದಾಗಿ ಹೇಳಿ ದುಪ್ಪಟ್ಟು ವಸೂಲಿ ಮಾಡುವುದು ಇವುಗಳ ಉದ್ದೇಶ. ಆದರೆ ತಕ್ಷಣಕ್ಕೆ ಹಣ ಬೇಕಾದವರು ಮುಂದಕ್ಕೆ ನೋಡಿಕೊಳ್ಳೋಣ, ಹೇಗಾದರೂ ಮಾಡಿ ತೀರಿಸಿದರೆ ಆಯ್ತು ಎಂದುಕೊಂಡು ಸಾಲ ಪಡೆದವರು ಈ ಆ್ಯಪ್ಗಳ ರಿಕವರಿ ಏಜೆಂಟ್ಗಳಿಂದ ನಿತ್ಯನರಕ ಅನುಭಿಸುತ್ತಿರುವ ಹಲವಾರು ಪ್ರಕರಣಗಳು ವರದಿಯಾಗಿವೆ.
ತಕ್ಷಣಕ್ಕೆ ಹಣ ಬೇಕಾದವರು ಆ್ಯಪ್ ಇನ್ಸ್ಟಾಲ್ ಮಾಡುವಾಗಲೇ ಕಂಪನಿಯ ಎಲ್ಲಾ ಷರತ್ತುಗಳಿಗೆ ಒಳಪಟ್ಟಿರುತ್ತಾರೆ. ಅಂದರೆ ಆ್ಯಪ್ ಕಂಪನಿಯವರು ಆ ಮೊಬೈಲ್ನಲ್ಲಿ ಎಲ್ಲಾ ಸಂಪರ್ಕ ಸಂಖ್ಯೆ ಮತ್ತು ಫೋಟೊ ವಿಡಿಯೋಗಳನ್ನು ಅಕ್ಸಸ್ ಮಾಡುವ ಒಪ್ಪಿಗೆ ಪಡೆದುಕೊಂಡಿರುತ್ತದೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನಂಬರ್ ಜೊತೆಗೆ ಅಕೌಂಟ್ ನಂಬರ್ ಕೊಟ್ಟರೆ 5 ನಿಮಿಷದಲ್ಲಿ ಸಾಲ ಮಂಜೂರು ಮಾಡುತ್ತಾರೆ. ಆದರೆ ಆನಂತರವೇ ನಿಮಗೆ ತಿಳಿಯುವುದು ಅದರ ಜಿಗಣೆ ರೀತಿಯ ಬಡ್ಡಿದರ.
ಹಲವಾರು ಆ್ಯಪ್ಗಳ ವಾರದ ಲೆಕ್ಕದಲ್ಲಿ ಬಡ್ಡಿ ಮತ್ತು ಇಎಂಐ ಕಟ್ಟಿಸಿಕೊಳ್ಳುತ್ತವೆ. ಶೇ.12% ನಿಂದ ಶೇ.34% ವರೆಗೂ ಬಡ್ಡಿದರ ಇರುತ್ತದೆ ಎಂದರೆ ಎಷ್ಟರ ಮಟ್ಟಿಗೆ ಸುಲಿಗೆ ಮಾಡಬಹುದು ನೀವೇ ಯೋಚಿಸಿ.
ಕೇವಲ 5,000 ಸಾಲ ಪಡೆದವರು ವಾಪಸ್ 20,000-25,000 ರೂ ವರೆಗೂ ಮರುಪಾವತಿ ಮಾಡಬೇಕಾದ ಸಂದರ್ಭಗಳು ಬಂದಿವೆ. ಇನ್ನು ಲಕ್ಷಾಂತರ ರೂ ಹಣ ಪಡೆದವರು 34% ನಷ್ಟು ದುಬಾರಿ ಬಡ್ಡಿ, ಜಿಎಸ್ಟಿ, ಸಂಸ್ಕರಣ ವೆಚ್ಚವನ್ನು ಕಟ್ಟಲಾಗದೆ ಹೈರಾಣಾಗಿದ್ದಾರೆ. ಆಗ ರಿಕವರಿ ಏಜೆಂಟ್ಗಳು ಪದೇ ಪದೇ ಫೋನ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸುತ್ತಾರೆ. ಅದಕ್ಕೂ ತಲೆಕೆಡಿಸಿಕೊಳ್ಳದಿದ್ದರೆ ಅವರ ಕಾಂಟಾಕ್ಟ್ ಲಿಸ್ಟ್ ಪ್ರವೇಶಿಸಿ ಸಿಕ್ಕ ಸಿಕ್ಕವರ ನಂಬರ್ಗೆಲ್ಲಾ ಫೋನ್ ಮಾಡಿ ನಿಮ್ಮ ಸ್ನೇಹಿತರು ಲೋನ್ ಇಎಂಐ ಕಟ್ಟಿಲ್ಲ ಎಂದು ಬೈಯ್ದು ಮರ್ಯಾದೆ ಕಳೆಯುತ್ತಾರೆ. ಕೆಲವರು ಲೋನ್ ಕಟ್ಟಲಾಗದೇ ಸಿಮ್ ಬದಲಿಸಿದರೂ ಬಿಡದ ಅವರ ತಿರುಚಿದ ಚಿತ್ರಗಳನ್ನು ಅವರ ಸಂಪರ್ಕ ಸ್ನೇಹಿತರಿಗೆಲ್ಲ ಕಳಿಸಿ ಇವರ ಫ್ರಾಡ್ ಎಂಬ ಹಣೆಪಟ್ಟೆ ಕಟ್ಟುವ ಮಟ್ಟಕ್ಕೆ ಬೆಳೆದು ನಿಂತಿವೆ ಈ ಲೋನ್ ಆ್ಯಪ್ಗಳು.
ಈ ರೀತಿಯಾಗಿ ಒಬ್ಬ ವ್ಯಕ್ತಿಯ ಸಂಪೂರ್ಣ ನೆಮ್ಮದಿ ಹಾಳು ಮಾಡಲು ಈ ಆ್ಯಪ್ಗಳು ಹಿಂದೆ ಮುಂದೆ ನೋಡುವುದಿಲ್ಲ. ಹೇಗಾದರೂ ಮಾಡಿ ಸಾಲ ವಸೂಲಿ ಮಾಡುವುದು ಅವರ ಉದ್ದೇಶವಾಗಿರುತ್ತದೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಯಾವುದೇ ಕಾರಣಕ್ಕೂ ಈ ಇನ್ಸ್ಟಂಟ್ ಲೋನ್ ಆಪ್ಗಳ ಮೊರೆ ಹೋಗಬೇಡಿ ಎಂದು ಪೊಲೀಸರು ಮನಿವಿ ಮಾಡಿದ್ದಾರೆ.
ಐಟಿ ಕಾಯ್ದೆಯ ಪ್ರಕಾರ ಲೋನ್ ಆ್ಯಪ್ಗಳು ಹೀಗೆ ಖಾಸಗಿ ಮಾಹಿತಿ ಕದ್ದು ಬ್ಲಾಕ್ಮೇಲ್ ಮಾಡುವುದು ಅಪರಾಧ. ಆದರೆ ಅದೀಗ ಎಗ್ಗಿಲ್ಲದೆ ನಡೆಯುತ್ತಿದೆ. ಲೋನ್ ತೆಗೆದುಕೊಳ್ಳುವವರು ಇರುವವರೆಗೂ ಈ ಕಿರುಕುಳ ಇದ್ದೆ ಇರುತ್ತದೆ. ಇದಕ್ಕಿರುವ ಪರಿಹಾರವೆಂದರೆ ಯಾರೂ ಕೂಡ ಸಾಲ ತೆಗೆದುಕೊಳ್ಳದಂತೆ ಜೀವನ ನಿರ್ವಹಣೆ ಮಾಡಬೇಕು. ಅದರಲ್ಲಿಯೂ ಈ ಲೋನ್ ಆ್ಯಪ್ಗಳ ಸಹವಾಸದಿಂದ ದೂರವಿದ್ದರೆ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಅಕ್ರಮ ದನ-ಕರುಗಳ ಸಾಗಾಟ ಮಾಡುತ್ತಿದ್ದ ನಾಲ್ವರು ಬಿಜೆಪಿ ಕಾರ್ಯಕರ್ತರ ಬಂಧನ