ತಮ್ಮ ಧಾರ್ಮಿಕ ಆಚರಣೆಯಾದ ಹಿಜಾಬ್ ಅನ್ನು ಧರಿಸಿ ಕಾಲೇಜು ಪ್ರವೇಶಕ್ಕೆ ಅನುಮತಿಸುವಂತೆ ಕೋರಿ ಹೋರಾಟ ನಡೆಸುತ್ತಿರುವ ಉಡುಪಿ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿರುವ ಸಂಬಂಧ, ಸಂತ್ರಸ್ತೆ ವಿದ್ಯಾರ್ಥಿನಿಯೊಬ್ಬರ ಪೋಷಕರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರಿಗೆ ದೂರು ಸಲ್ಲಿಸಿರುವ ಪೋಷಕರು, ಮೊಬೈಲ್ ಸಂಖ್ಯೆ ಸೇರಿದಂತೆ ಬಾಲಕಿಯರ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಈ ವಿವರಗಳನ್ನು ಬಳಸಿಕೊಂಡು ದುಷ್ಕರ್ಮಿಗಳು ಬಾಲಕಿಯರಿಗೆ ಬೆದರಿಕೆ ಹಾಕಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ
ಬಾಲಕಿಯರ ಪೋಷಕರು ತಮಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಹೇಳಿದ್ದಾರೆ. ಸೂಕ್ತ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕೇಳಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಉಡುಪಿಯ ಬಾಲಕಿಯ ಕಾಲೇಜಿನ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ಕಾಲೇಜಿನ ಮೂಲಗಳು ಬಹಿರಂಗಪಡಿಸಿವೆ. ಹೀಗಾಗಿ ವಿದ್ಯಾರ್ಥಿನಿಯರು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ದೇಶದ ಖ್ಯಾತ ಸುದ್ದಿ ಮಾಧ್ಯಮ ‘ದಿ ಕ್ವಿಂಟ್’ ವರದಿ ಮಾಡಿತ್ತು.
“ಹಿಜಾಬ್ಗಾಗಿ ಹೋರಾಡುತ್ತಿರುವ ಅಲಿಯಾ ಅಸ್ಸಾದಿ ಫೆಬ್ರವರಿ 9ರ ಬುಧವಾರದಂದು ದಿನವಿಡೀ ನಿಂದನೀಯ ಫೋನ್ ಕರೆಗಳನ್ನು ಸ್ವೀಕರಿಸಿದ್ದಾರೆ. ಉಡುಪಿಯ ವಾಟ್ಸಾಪ್ ಗ್ರೂಪ್ಗಳಲ್ಲಿ ವಿದ್ಯಾರ್ಥಿನಿಯರ ಫೋನ್ ನಂಬರ್ಗಳು, ಪೋಷಕರ ಹೆಸರುಗಳು ಮತ್ತು ಮನೆಯ ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲಾಗಿದೆ” ಎಂದು ಕ್ವಿಂಟ್ ವರದಿ ಹೇಳಿತ್ತು.
ಇದನ್ನೂ ಓದಿ: ಹಿಜಾಬ್ live Updates: ಅಧಿಕೃತ ಮಧ್ಯಂತರ ಆದೇಶ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಹಿಜಾಬ್ ಧರಿಸುವುದನ್ನು ಮುಂದುವರಿಸುವ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಹಜ್ರಾ ಶಿಫಾ, “ನನ್ನ ಹೆತ್ತವರಿಗೂ ಅಪರಿಚಿತ ನಂಬರ್ಗಳಿಂದ ಕರೆಗಳು ಬರುತ್ತಿವೆ. ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದ್ದೇನೆ. ಗೌಪ್ಯ ವಿವರಗಳು ಸಾರ್ವಜನಿಕರಿಗೆ ಹೇಗೆ ತಲುಪಿದವು ಎಂಬುದನ್ನು ವಿವರಿಸಬೇಕೆಂದು ಕಾಲೇಜು ಆಡಳಿತವನ್ನು ಒತ್ತಾಯಿಸಿದ್ದೇವೆ” ಎಂದಿದ್ದಾರೆ.
ಸೋರಿಕೆಯಾದ ಡೇಟಾದ ಬಗ್ಗೆ ಪ್ರತಿಕ್ರಿಯಿಸಲು ಕಾಲೇಜು ನಿರಾಕರಿಸಿದೆ. ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರನ್ನು ಸಂಪರ್ಕಿಸಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ವಾಟ್ಸ್ಆಪ್ ಮೂಲಕ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಪ್ರಾಂಶುಪಾಲರಾದ ರುದ್ರೇಗೌಡ ನೀಡಿಲ್ಲ. ಪ್ರತಿಕ್ರಿಯೆ ನೀಡಿದ್ದಲ್ಲಿ ಅಪ್ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಹಿಜಾಬ್: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ