ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ, ಮಾಜಿ ಸಂಸದೆ ಕವಿತಾ ಕಲ್ವಕುಂಟ್ಲಾ ಅವರು ಕರ್ನಾಟಕ ರಾಜ್ಯದಲ್ಲಿನ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತು ಕವಿತೆ ರಚಿಸಿದ್ದಾರೆ. ಹಿಜಾಬ್ ಬೆಂಬಲಿಸಿ ಪ್ರತಿಭಟನೆಯ ಸಂಕೇತವಾಗಿ ತಮ್ಮ ಕೈಬರಹದಲ್ಲಿ ಬರೆದಿರುವ “ಹಮ್ ಸಬ್ ಹಿಂದೂಸ್ತಾನಿ” ಕವಿತೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಟಿಆರ್ಎಸ್ ಪಕ್ಷದ ಎಂಎಲ್ಸಿ ಕವಿತಾ ಕಲ್ವಕುಂಟ್ಲಾ ಅವರು, “ಸಿಂಧೂರವನ್ನು ಧರಿಸುವುದು ನನ್ನ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಹಾಗೇಯೇ ಹಿಜಾಬ್ ಧರಿಸುವುದು ಮುಸ್ಕಾನ್ ಅವರ ಆಯ್ಕೆಯಾಗಿದೆ. ತಾನು ಯಾವುದನ್ನು ಅಪ್ಪಿಕೊಳ್ಳಬೇಕು ಮತ್ತು ಯಾವುದನ್ನು ಧರಿಸಬೇಕು ಎಂಬುದನ್ನು ಮಹಿಳೆಯೇ ನಿರ್ಧರಿಸಲಿ” ಎಂದು ತಮ್ಮ ಕವಿತೆಯನ್ನು ಹಂಚಿಕೊಂಡಿದ್ದಾರೆ.
ಹಿಂದಿ ಭಾಷೆಯಲ್ಲಿ ಬರೆದಿರುವ ಕವಿತೆಯನ್ನು ಹಂಚಿಕೊಂಡಿರುವ ಅವರು #DontTeachUs ಎಂಬ ಹ್ಯಾಟ್ಟ್ಯಾಗ್ ಬಳಸಿದ್ದಾರೆ.
ಇದನ್ನೂ ಓದಿ: BREAKING News| ಹಿಜಾಬ್: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ
Wearing and applying Sindoor is my conscious choice
Wearing Hijab is Muskan’s choice.Let women decide what they are comfortable in embracing and wearing.#DontTeachUs pic.twitter.com/wDuYVW6X5O
— Kavitha Kalvakuntla (@RaoKavitha) February 10, 2022
ನಿಜಾಮಾಬಾದ್ನ ಮಾಜಿ ಸಂಸದೆಯಾಗಿರುವ ಕವಿತಾ ಅವರು ತಮ್ಮ ಕವಿತೆಯಲ್ಲಿ ವಿಭಜಕ ಶಕ್ತಿಗಳ ಕೃತ್ಯಗಳ ನಡುವೆಯೂ “ನಾವೆಲ್ಲರೂ ಒಂದೇ – ನಾವೆಲ್ಲರೂ ಭಾರತೀಯರು” ಎಂದು ತಮ್ಮ ಕವಿತೆಯಲ್ಲಿ ತಿಳಿಸಿದ್ದಾರೆ.
“ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಯಾವುದೇ ಧರ್ಮದವರಾಗಿರಲಿ ನಾವು ಭಾರತೀಯರು. ಸಿಂಧೂರ, ಪಗಡಿ, ಹಿಜಾಬ್, ಕ್ರಾಸ್ ಯಾವುದನ್ನೇ ಧರಿಸಲಿ ನಾವು ಭಾರತೀಯರು….’ ಹೀಗೆ ಹಲವು ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದ್ದರೂ ನಾವು ಭಾರತೀಯರೇ ಎಂಬುದನ್ನು ಈ ಕವಿತೆ ತಿಳಿಸುತ್ತದೆ.
ಹಿಜಾಬ್ ವಿರೋಧವನ್ನು ವಿರೋಧಿಸಿರುವ ಅವರು, “ಇಂತಹ ಧಾರ್ಮಿಕ ಮಾತುಕತೆಗಳು ವಿದ್ಯಾರ್ಥಿನಿಯರ ಅವಕಾಶಗಳಿಗೆ ಅಡ್ಡಿಯಾಗುತ್ತವೆ. ಶಾಲೆ ಮತ್ತು ಕಾಲೇಜುಗಳಿಂದ ರಾಜಕೀಯವನ್ನು ದೂರವಿಡೋಣ. ನಾನು ವಿವಾಹಿತ ಮಹಿಳೆ, ನಾನು ಬಯಸಿದಾಗ ಸಿಂಧೂರವನ್ನು ಹಚ್ಚಿಕೊಳ್ಳುತ್ತೇನೆ, ಅದು ನನ್ನ ಆಯ್ಕೆಯಾಗಿದೆ. ಒಂದು ಸಮಾಜವಾಗಿ ಅವರ ವೈಯಕ್ತಿಕ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ನಮಗಿಲ್ಲ” ಎಂದು ಕವಿತಾ ಹೇಳಿದ್ದಾರೆ.
ಇತ್ತ, ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಹಿಜಾಬ್ ಧರಿಸುವ ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯಬಹುದು. ಆದರೆ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ವಿಚಾರಣೆ ಮುಗಿಯುವವರೆಗೂ ಧರಿಸುವಂತಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಸೂಚನೆಯು ಭಾರತೀಯ ಸಂವಿಧಾನದ 14, 15, 19, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ವಿಶೇಷ ರಜೆ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕರೆ