Homeಮುಖಪುಟಕಾಸ್‌ಗಂಜ್ ಲಾಕಪ್‌ ಡೆತ್: 2ನೇ ಮರಣೋತ್ತರ ಪರೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ

ಕಾಸ್‌ಗಂಜ್ ಲಾಕಪ್‌ ಡೆತ್: 2ನೇ ಮರಣೋತ್ತರ ಪರೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ

- Advertisement -
- Advertisement -

ಕಳೆದ ನವೆಂಬರ್ 9 ರಂದು ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ 22 ವರ್ಷದ ಅಲ್ತಾಫ್ ಅವರ ಮೃತದೇಹವನ್ನು ಹೊರತೆಗೆಯಲು ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (AIIMS) ಎರಡನೇ ಮರಣೋತ್ತರ ಪರೀಕ್ಷೆಗೆ ಕಳುಹಿಸುವಂತೆ ಅಲಹಾಬಾದ್ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.

ಗುರುವಾರ ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಮತ್ತು ದೀಪಕ್ ವರ್ಮಾ ಅವರ ಪೀಠ ನೀಡಿದ ಆದೇಶದಲ್ಲಿ ಎರಡನೇ ಮರಣೋತ್ತರ ಪರೀಕ್ಷೆಯನ್ನು ಎಐಐಎಂಎಸ್ ನಿರ್ದೇಶಕರು ರಚಿಸಿದ ವೈದ್ಯರ ತಂಡ ನಡೆಸುತ್ತದೆ ಎಂದು ತಿಳಿಸಿದೆ.

ಯುವಕ ಅಲ್ತಾಫ್‌ನ ವಿರುದ್ಧ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ತಾಫ್‌ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. 22 ವರ್ಷದ ಯುವಕ ಮಂಗಳವಾರ (ನ. 9) ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಯುವಕ ಶೌಚಾಲಯದ ಎರಡು ಅಡಿ ಎತ್ತರದ ಪೈಲಿನ ನಲ್ಲಿಗೆ ತನ್ನ ಜಾಕೆಟ್‌ನ ಹುಡ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಪೊಲೀಸರು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯೇ ಆತನನ್ನು ಕೊಂದಿದ್ದಾರೆ ಎಂದು ಮೃತನ ಕುಟುಂಬ ಆರೋಪಿಸಿತ್ತು.

ಇದನ್ನೂ ಓದಿ: ಬೀಬಿ ಮುಸ್ಕಾನ್‌ ಘೋಷಣೆ: ಒಂದೆಡೆ RSS ಮುಸ್ಲಿಂ ಘಟಕದ ಬೆಂಬಲ, ಇನ್ನೊಂದೆಡೆ RSS ಮುಖಂಡರ ಖಂಡನೆ

“ಮೃತ ಅಲ್ತಾಫ್ ಅವರ ಮೃತದೇಹವನ್ನು ಕಾಸ್‌ಗಂಜ್ ಹಿರಿಯ ಪೊಲೀಸ್ ಅಧೀಕ್ಷಕರು ಅಥವಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ತಕ್ಷಣವೇ ಹೊರತೆಗೆಯಬೇಕು ಎಂದು ನಾವು ಆದೇಶಿಸಿದ್ದೇವೆ. ಹೊರತೆಗೆದ ನಂತರ ಮೃತದೇಹವನ್ನು ಮೊಹರು ಮಾಡಲಾಗುವುದು. ಜೊತೆಗೆ ತಕ್ಷಣವೇ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಸಾಗಿಸಲಾಗುತ್ತದೆ, ಅಲ್ಲಿ ನಿರ್ದೇಶಕರು ರಚಿಸುವ ವೈದ್ಯರ ತಂಡದ ಸಮ್ಮುಖದಲ್ಲಿ ಹೊರತೆಗೆದ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕು” ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.

ಅರ್ಜಿದಾರರ ಪರ ವಕೀಲರಾದ ಅಲಿ ಕಂಬರ್ ಜೈದಿ ಮತ್ತು ಮೊಹಮ್ಮದ್ ಡ್ಯಾನಿಶ್, ಅಲ್ತಾಫ್ ಅವರ ಮೃತದೇಹವನ್ನು ಹೊರತೆಗೆಯಬೇಕು ಮತ್ತು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ನವದೆಹಲಿಯ ಏಮ್ಸ್‌ನಲ್ಲಿ ನಡೆಸಬೇಕು ಎಂದು ಕೋರಿದ್ದರು. ಉತ್ತರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯೆಲ್ ಅವರು ಈ ಮನವಿಗೆ ವಿರೋಧಿಸಲಿಲ್ಲ.

“ಪರೀಕ್ಷೆಯ ವಿವಿಧ ಹಂತಗಳನ್ನು ಹೆಚ್ಚಿನ ರೆಸಲ್ಯೂಶನ್‌ನ ಸ್ಟಿಲ್ ಛಾಯಾಚಿತ್ರಗಳನ್ನು ಸಹ ತೆಗೆದುಕೊಂಡು ಸಂರಕ್ಷಿಸಬೇಕು. ಮರಣೋತ್ತರ ಪರೀಕ್ಷೆಯ ವರದಿ, ವಿಡಿಯೊ ದೃಶ್ಯಾವಳಿ ಮತ್ತು ಛಾಯಾಚಿತ್ರವನ್ನು ಮೂರು ಪ್ರತಿಗಳಲ್ಲಿ ಸಿದ್ಧಪಡಿಸಬೇಕು. ಆದೇಶವನ್ನು ಅಂಗೀಕರಿಸಿದ 10 ದಿನಗಳ ಅವಧಿಯಲ್ಲಿ ಇದೆಲ್ಲಾ ಪೂರ್ಣಗೊಳಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ದೇಶದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಕಾಸ್‌ಗಂಜ್ ಲಾಕಪ್ ಡೆತ್ ಪ್ರಕರಣದ ಕುರಿತು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿತ್ತು. ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೃತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಹಲವು ಒತ್ತಡಗಳ ಬಳಿಕ ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಕಾಸ್‌ಗಂಜ್ ಲಾಕಪ್‌ ಡೆತ್: ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...