Homeಕರ್ನಾಟಕ‘ಸುದ್ದಿಯೇನೆ, ಮನೋಲ್ಲಾಸಿನಿ’ : ಏನಿದು ಅನರ್ಹತೆ?

‘ಸುದ್ದಿಯೇನೆ, ಮನೋಲ್ಲಾಸಿನಿ’ : ಏನಿದು ಅನರ್ಹತೆ?

- Advertisement -
- Advertisement -

ನಾವು ಬೀಮಾರು ಹಿಂದೀ ರಾಜ್ಯಗಳಲ್ಲಿಲ್ಲ ಸದ್ಯ ಬಚಾವು. ಇಲ್ಲವಾದಲ್ಲಿ ನಮ್ಮ `ಅನರ್ಹ’ ಶಾಸಕರನ್ನು `ಅಯೋಗ್ಯ’ ಶಾಸಕರು ಎನ್ನಬೇಕಾಗಿತ್ತು. ಆ ಇಂದೀ ಠೀವಿ ಛಾನಲ್ಲುಗಳು ಅದೇ ಪದ ಬಳಸುತ್ತಿವೆ. ಅಲ್ಲವೇ?
ಇರಲಿ.

ಏನಿದು ಕೇಸು? ಏನಿದರ ಹೂರಣ?

ಸ್ವಾತಂತ್ರನಂತರ ಈ ದೇಶ ಕಟ್ಟಿದ ತಜ್ಞರು ಹಲವಾರು ದೇಶ ಸುತ್ತಿದರು. ಅವರ ಖಂಡಾಂತರ ಅಧ್ಯಯನ ಪ್ರವಾಸದನಂತರ ಅವರಿಗೆ ಅನ್ನಿಸಿದ್ದು ನಮಗೆ ಹೊಂದುವ ಸರಕಾರಿ ವ್ಯವಸ್ಥೆ ಸಂಸದೀಯ ಪ್ರಜಾಸತ್ತೆ ಅಂತ.
ಅದರ ಪ್ರಕಾರ ನಾವು ಆರಿಸಿ ಕಳಿಸುವವರಿಗೆ ಎರಡು ಕೆಲಸ ?

1. ಕಾನೂನು ಸೃಷ್ಟಿ ಹಾಗೂ ತಿದ್ದುಪಡಿ
2. ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿ ನಮ್ಮ ಸುಂಕದ ಹಣದ ಸದುಪಯೋಗದ ನಿಗರಾಣಿ.

ಸಾರ್ವತ್ರಿಕ ಚುನಾವಣೆ ಆಧಾರಿತ ಪ್ರಜಾತಂತ್ರದಲ್ಲಿ ಪಕ್ಷ ರಾಜಕಾರಣಕ್ಕೆ ವಿಶೇಷ ಮಹತ್ವ ಮೊದಲಿಗೆ ಇರಲಿಲ್ಲ, ಕೆಲವು ಪುಣ್ಯಾತ್ಮರು ಬೆಳಿಗ್ಗೆ ತಿಂಡಿಗೆ ಒಂದು ಪಕ್ಷ, ಲಂಚಿಗೆ ಒಂದು ಪಕ್ಷ ಹಾಗೂ ಡಿನ್ನರಿಗೆ ಮಗದೊಂದು ಪಕ್ಷ ಅಂತ ಆರಿಸಿಕೊಂಡು ಅಲೆದಾಡಿದ್ದರಿಂದ 80ರ ದಶಕದಲ್ಲಿ ಸಂವಿಧಾನವನ್ನು ತಿದ್ದಿ 10 ನೇ ಅನುಬಂಧ ವನ್ನು ಸೇರಿಸಿ ಪಕ್ಷಾಂತರವನ್ನು ನಿಷೇಧಿಸಲಾಯಿತು.

ಆದರೆ ನಿಷೇಧದ ನಂತರ ಪಕ್ಷಾಂತರ ಹೆಚ್ಚಾಯಿತು. ಕಾಯಿದೆಯ ಮೊದಲು ಆದ ಪಕ್ಷಾಂತರ ಗಳಿಗೆ ಹೋಲಿಸಿದರೆ ಆ ನಂತರ ಆದ `ದಿಲ್ ಬದಲ್’ ಹಾಗೂ `ದಲ್ ಬದಲ್’ ಗಳು ನೂರುಪಟ್ಟು ಹೆಚ್ಚು ಎಂದು ಅಧ್ಯಯನಕಾರರ ಅಂಬೋಣ.

ಇದಕ್ಕೆ ಆ ಕಾನೂನು ಬಲಹೀನವಾದದ್ದೇ ಕಾರಣವೆಂದು ಕೆಲವರು ವಾದಿಸಿದರೆ, ಹಾಗೇನಿಲ್ಲ, ಅದರಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಶಕ್ತಿ ಹೊಂದಿರುವ ಪ್ರಭಾರಿಗಳು ? ಶಾಸನಸಭೆಯ ಅಧ್ಯಕ್ಷರು ಹಾಗೂ ಸಭಾಪತಿಗಳು- ಅದನ್ನು ಸರಿಯಾಗಿ ಜಾರಿ ಮಾಡಲಿಲ್ಲ, ಆದ್ದರಿಂದ ಹೀಗಾಗಿದೆ ಎಂಬುದು ಯಥಾಸ್ಥಿತಿ ವಾದಿಗಳ ಎಂದಿನ ರಗಳೆ.

ಈ ಕಾನೂನಿನ ಅಡಿಯಲ್ಲಿ ಒಂದು ಪಕ್ಷದಿಂದ ಗೆದ್ದುಬಂದವನು ಇನ್ನೊಂದು ಪಕ್ಷ ಸೇರಿದರೆ ಅವನು ಅನರ್ಹಗೊಳ್ಳಲು ಅರ್ಹನಾಗುತ್ತಾನೆ. ಮುಖ್ಯಮಂತ್ರಿಯಾದವನ ಪಕ್ಷವೇ ಆಡಳಿತ ಪಕ್ಷ. ಆಡಳಿತದಲ್ಲಿ ಭಾಗವಹಿಸಲು ಬಯಸದ ಪಕ್ಷವೇ ವಿರೋಧ ಪಕ್ಷ. ಮಜಾ ಎಂದರೆ `ವಿರೋಧ ಪಕ್ಷ’ ಎನ್ನುವ ಶಬ್ದ ಸಂವಿಧಾನದಲ್ಲಿ ಇದೆ. ಆದರೆ `ಆಡಳಿತ ಪಕ್ಷ’ ಎನ್ನುವ ಶಬ್ದ ಇಲ್ಲ.

ವಿವಿಧ ಸುಪ್ರೀಂಕೊರ್ಟ್ ತೀರ್ಪುಗಳ ಪ್ರಕಾರ ಪಕ್ಷ ಬಿಟ್ಟುಬಿಡುವುದು ಎನ್ನುವುದು ಅವನ ನಡವಳಿಕೆಯಿಂದ ಕಂಡು ಬರಬಹುದು. ಇದರಲ್ಲಿ ಅನೇಕ ವಿಧಗಳು ? 1. ತಮ್ಮ ಪಕ್ಷದ ವಿಪ್‍ನ ಚಾಟಿ ಏಟನ್ನು ತಪ್ಪಿಸಿಕೊಳ್ಳುವುದು, 2. ಇತರ ಪಕ್ಷದ ಸಭೆ- ಸಮಾರಂಭಗಳಲ್ಲಿ ಚುರುಕಾಗಿ ಓಡಾಡುವುದು, 3. ತಮ್ಮ ಸದಸ್ಯತ್ವಕ್ಕೆ ತಾವಾಗಿಯೇ (“ಆತ್ಮಸಾಕ್ಷಿಗೆ ಅಂಜಿ”) ರಾಜೀನಾಮೆ ಬಿಸಾಡುವುದು 4. ಇನ್ನೊಂದು ಪಕ್ಷ ಸೇರುವುದಕ್ಕಾಗಿಯೇ ತಮ್ಮ ಪಕ್ಷಕ್ಕೆ ಅಥವಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದು ಇತ್ಯಾದಿ. ಆದರೆ ಇದರ ದುರುಪಯೋಗ ಬೇಕಾದಷ್ಟು ಆಗಿದೆ. ತಮ್ಮ ಪಕ್ಷದ ನಾಯಕರನ್ನು, ನೀತಿಗಳನ್ನು ಸಕಾರಣವಾಗಿ ಟೀಕಿಸಿದವರ ಮೇಲೆಯೂ ಸಹ ಈ ಕಾಯಿದೆ ಲಾಗೂ ಆಗಿದೆ. ರಷಿಯಾದ ಝಾರ್ ದೊರೆಯೊಬ್ಬನನ್ನು ಹುಚ್ಚ ಎಂದು ಕರೆದ ಕವಿಯೊಬ್ಬನ ಮೇಲೆ ಅರಮನೆಯ ಅಧಿಕೃತ ಗುಟ್ಟು ರಟ್ಟು ಮಾಡಿದ ಮೊಕದ್ದಮೆ ಹಾಕಿದ್ದರೆನ್ನಲಾದ ಪ್ರಸಂಗ ನಿಮಗೆ ನೆನಪಾದರೆ ತಪ್ಪಿಲ್ಲ!

ಈ ರೀತಿಯಾಗಿ ಮಾಡಿ ಅವರು ಚುನಾಯಿತ ಸರಕಾರವನ್ನು ಆಟ ಗೂಟ ಜೈ ಎಂದು ಕೆಡವುತ್ತಾ ಲಗೋರಿ ಆಡಬಹುದು. ಆದರೆ ಇಂತಹವರನ್ನು ವಿಧಾನಸೌಧದ ಕಲ್ಲು ಕಟ್ಟಡದಿಂದ ವಾಪಸು ಕರೆಸಿಕೊಳ್ಳುವ ಅಧಿಕಾರ ಅವರನ್ನು ಅಲ್ಲಿಗೆ ಆರಿಸಿ ಕಳಿಸಿದ ಮತದಾರರಿಗೆ ಇಲ್ಲ. ಕೆಲವು ಯುರೋಪಿನ ದೇಶಗಳ ಪ್ರಜೆಗಳಿಗೆ ಮಾತ್ರ ಈ ಭಾಗ್ಯ ಉಂಟು.

ನಮ್ಮ ಕಾಂಗ್ರೆಸ್/ ಜನತಾದಳಗಳ ಶಾಸಕಾಂಗ ಸಭೆಗಳಿಗೆ ಹಾಗೂ ಸರಕಾರದ ವಿಶ್ವಾಸಮತ ಯಾಚನೆಗೆ ಗೈರುಹಾಜರಾದ ಸುಮಾರು 25 ಶಾಸಕರಲ್ಲಿ 17 ಜನರನ್ನು ಅಂದಿನ ಸಭಾಧ್ಯಕ್ಷ ರಮೇಶಕುಮಾರ್ ಅನರ್ಹಗೊಳಿಸಿದರು. ಇದಕ್ಕೆ ಕಾರಣ- ಅವರು ತಮ್ಮ ಪಕ್ಷದ ವಿಪ್ ಉಲ್ಲಂಘಿಸಿದ್ದು ಹಾಗೂ ಇತರ ಪಕ್ಷ ಸೇರುವುದಕ್ಕಾಗಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು.

ಆದರೆ ಅವರು ಮಾತ್ರ- ನಮ್ಮ ಸಾಹುಕಾರ್ ರಮೇಶ್ ಜಾರಕಿಹೊಳಿ ಆದಿಯಾಗಿ ? ಹೇಳುತ್ತಿರುವುದು ಏನೆಂದರೆ ನಾವು ಸಮ್ಮಿಶ್ರ ಸರಕಾರವನ್ನು ಕೆಡವಬೇಕೆಂದು ಅಥವಾ ಬಿಜೆಪಿ ಸರಕಾರವನ್ನು ಗದ್ದಿಯ ಮೇಲೆ ಕೂರಿಸಬೇಕೆಂದು ರಾಜೀನಾಮೆ ಕೊಡಲಿಲ್ಲ. ನಮಗೆ ಅನ್ಯಾಯವಾಯಿತು, ನಮ್ಮ ಆತ್ಮಗೌರವಕ್ಕೆ ಧಕ್ಕೆಯಾಯಿತು ಎಂದು ಕೊಟ್ಟೆವು, ಅಂತ. ನಮ್ಮ ಮತದಾರರಿಗೆ ಅನ್ಯಾಯವಾಗಿತ್ತು ಎಂದು ಅವರು ಅಂದದ್ದು ನಮಗಂತೂ ಕೇಳಲಿಲ್ಲ.

ಇಲ್ಲಿ ತಿಂಡಿ ಮಾಡಿ, ಬಂಬಾಯಿಯಲ್ಲಿ ಲಂಚು ಮಾಡಿ, ನಂತರ ಸರಕಾರಿ ಬಂಗಲೆಯಲ್ಲಿ ಡಿನ್ನರು ಮಾಡೋಣ ಅಂತಂದುಕೊಂಡಿದ್ದ ನಮ್ಮ ಕೆಲವರು ನಾಯಕರು ತರಾತುರಿಯಲ್ಲಿ ಓಡಾಡಿದರು. ವಿಧಾನಸೌಧದ ಮೊಗಸಾಲೆಯಲ್ಲಿಯೂ ಓಡಿದರು, ಸಂವಿಧಾನ ವೈಶೇಷಿಕ ವಕೀಲರ ಹಿಂದೆಯೂ ಓಡಿದರು. ಆದರೆ ಕೋರ್ಟು ಗಡಿಬಿಡಿಯಲ್ಲಿ ಸಮ್ಮತಿಸಲಿಲ್ಲ. ಸುಮ್ಮನಿರಿ, ಇತರ ಗಂಭೀರ ವಿಷಯಗಳಿವೆ ದೇಶದಲ್ಲಿ ಎಂದು ಥೇಟು ಎಲ್.ಕೆ.ಜಿ ಟೀಚರ್ ಮಾದರಿಯಲ್ಲಿ ನ್ಯಾಯಮೂರ್ತಿಗಳು `ಫಿಂಗರ್ ಆನ್ ದಿ ಲಿಪ್ಸ್’ ಮಾಡಿಸಿದರು.

ಅಲ್ಲಿಯವರೆಗೂ ಸುಮ್ಮನಿದ್ದ ಚುನಾವಣಾ ಆಯೋಗ ತನ್ನನ್ನು ತಾನು ಕಕ್ಷಿದಾರನೆಂದು ಅರ್ಜಿ ಹಾಕಿಕೊಂಡಿತು. ಅಷ್ಟೇ ಅಲ್ಲದೇ ಉಪಚುನಾವಣೆ ದಿನಾಂಕ ಘೋಷಿಸಿದರು. ನ್ಯಾಯಮೂರ್ತಿಗಳ ಎದುರು ಸಂಬಂಧಪಟ್ಟ ವ್ಯಾಜ್ಯ ವಿದ್ದಾಗ ಚುನಾವಣೆ ಘೋಷಣೆ ಆಗಿದ್ದಕ್ಕೆ ಅದು ನ್ಯಾಯನಿರ್ಣಯ ಪ್ರಕ್ರಿಯೆಯ ಕಾಲಾವಧಿಯ ವಿಷಯವೆಂದು ತಡೆಹಿಡಿಯಲ್ಪಟ್ಟಿತು. ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾಯರಿಗೆ ಅನರ್ಹತೆ ಕೋರಿ ಅಧ್ಯಕ್ಷರಿಗೆ ದೂರು ನೀಡಿದ್ದಕ್ಕಾಗಿ, ನೋಟಿಸು ಕೊಡಲಾಯಿತು.

ಆಗ ಬರುವ ತೀರ್ನಪಿಲ್ಲಿ ಚರ್ಚೆಗೆ ಬರಬಹುದಾದ ಪ್ರಶ್ನೆಗಳು ಇವು

* ಅನರ್ಹತೆ ಕುರಿತು ಅಧ್ಯಕ್ಷರ ತೀರ್ಮಾನದ ಸರಿಯೇ ಎನ್ನುವುದು. ಹೌದಾದರೆ ಉಪಚುನಾವಣೆ. ಇಲ್ಲವೆಂದಲ್ಲಿ ಮಾಜಿ ಅನರ್ಹರಿಂದ ರಾಜಭವನದ ಹುಲ್ಲುಗಾವಲಿನ ಮೇಲೆ ಗೌಪ್ಯತೆಯ ಪ್ರಮಾಣವಚನ!

* ಅವರು ಅನರ್ಹರು ಎಂದಾದರೆ ಎಷ್ಟು ಕಾಲದವರೆಗೆ ಎನ್ನುವುದು ಮುಂದಿನ ಪ್ರಶ್ನೆ- ಸಭೆಯ ಅವಧಿಯವರೆಗೆ ಎಂದ ಸಭಾಪತಿಗಳ ಮಾತು ಸರಿಯಲ್ಲವೆಂದರೆ ಮುಂಬೈಗೆ ಓಡಿದವರಿಂದ ತಮ್ಮ ಕ್ಷೇತ್ರಗಳಿಗೆ ದೌಡು. ಉಪಚುನಾವಣೆಗಳಲ್ಲಿ ಒಂದು ಪಕ್ಷದಿಂದ ಆತ್ಮಗೌರವಕ್ಕಾಗಿ ಹೊರಬಂದವರಿಂದ ಹೊಸ ಪಕ್ಷದ ಹೊಸ ಬ್ಯಾನರ್ ಗಳ ಅಡಿಯಲ್ಲಿ ಹಳೇ ನಾಯಕರ ಜೊತೆಯಲ್ಲಿ ಭಾಷಣ, ದೇಶಾವರಿ ನಗು, ಸೆಲ್ಫೀ.

* ರಮೇಶಕುಮಾರ್ ನಿರ್ಧಾರ ಸರಿಯೆಂದಾದಲ್ಲಿ ನಮ್ಮೆಲ್ಲರ ಊಹೆ ನಿಜ ಮಾಡುವಲ್ಲಿ ನಮ್ಮ ಪ್ರತಿನಿಧಿಗಳ ಪ್ರಯತ್ನ. ತಮ್ಮ ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರನ್ನು ಅಭ್ಯರ್ಥಿ ಮಾಡಿ ಊರು ತುಂಬಾ ಓಡಾಟ. “ನಾನೇ ಅಭ್ಯರ್ಥಿ ಎಂದು ತಿಳಿದುಕೊಳ್ಳಿ” ಎಂಬ ಅಂಗಲಾಚುವಿಕೆ. `ಆ’ ಪಕ್ಷದಲ್ಲಿ ಅನ್ಯಾಯವಾಯಿತು. `ಈ’ ಪಕ್ಷದಲ್ಲಿ ಆಗಲಾರದು ಎಂಬ ಅ, ಆ, ಇ, ಈ ಅಕ್ಷರಮಾಲೆಯ ಕಂಠಪಾಟ.

ಇಂತಿಪ್ಪ ಪಕ್ಷಾಂತರ ನಿಷೇಧ ಕಾನೂನಿನಿಂದ ತಪ್ಪಿಸಿಕೊಳ್ಳುವ ಕೆಲವು ಉಪಾಯಗಳು?

ಸ್ವತಂತ್ರ ಅಭ್ಯರ್ಥಿಗಳು ಗೆದ್ದುಬಂದ ಆರು ತಿಂಗಳ ಒಳಗೆ ಯಾವುದಾದರೂ ಪಕ್ಷ ಸೇರಬೇಕು. ಇಲ್ಲದಿದ್ದರೆ ಅವಧಿ ಮುಗಿಯುವವರೆಗೆ ಸೇರುವಂತಿಲ್ಲ.

ಒಂದು ಪಕ್ಷದ ಎರಡು ಮೂರಾಂಶಶಾಸಕರು ಇನ್ನೊಂದು ಪಕ್ಷ ಸೇರಿದರೆ ಅವರು ಬಚಾವು. ಆಂಧ್ರದಲ್ಲಿ, ಗೋವಾದಲ್ಲಿ, ಪೂರ್ವಾಂಚಲದಲ್ಲಿ ಇತ್ತೀಚೆಗೆ ಹೀಗೇ ಆಯಿತು.

ಇದನ್ನೇ ಅತಿ ಬುದ್ಧಿವಂತರು ಬೇರೆ ರೀತಿ ವಾದ ಮಾಡುತ್ತಾರೆ. “ಪಕ್ಷ ಬಿಡಲು ಒಂದು ಮೂರಾಂಶದವರು ಸೇರಿದರೂ ಸಾಕು. ಯಾಕೆಂದರೆ ಆಗ ಮೊದಲಿನ ಉಳಿದುಕೊಂಡವರು ಎರಡು ಮೂರಾಂಶವಾಗುತ್ತಾರೆ. ಆವಾಗ ಬಿಟ್ಟು ಬಂದವರೇ ಮೂಲ ಪಕ್ಷ, ಉಳಿದುಕೊಂಡವರೇ ಪಕ್ಷಾಂತರಿಗಳು” ಎಂದು ವಾದಿಸಬಹುದು ಎನ್ನುತ್ತಾರೆ. ವಿತಂಡವಾದಿಗಳು ಯಾವ ತಂಡದಲ್ಲಿ ಇದ್ದರೇನು? ಆದರೆ ಸಂವಿಧಾನದಲ್ಲಿ ಎರಡು ಮೂರಾಂಶದ ವ್ಯಾಖ್ಯೆ ಇದೆಯೇ ಹೊರತು ಒಂದು ಮೂರಾಂಶದ್ದು ಇಲ್ಲ.

ತಾವಾಗಿಯೇ ರಾಜೀನಾಮೆ ಕೊಟ್ಟರೆ ಅನರ್ಹತೆ ಆಗಬಹುದು. ಆದರೆ ಪಕ್ಷದಿಂದ ಹೊರಹಾಕಲ್ಪಟ್ಟರೆ ಇಲ್ಲ. ಹೀಗಾಗಿ ತಮ್ಮಿಂದ ಪಕ್ಷದ ಅಧ್ಯಕ್ಷರು ರೋಸಿಹೋಗಿ ಅವರಾಗಿಯೇ ತಮ್ಮನ್ನು ಕೊಕ್ ಕೊಡುವಷ್ಟು ಅವರ ತಲೆ ಕೆಡಿಸುವುದೂ ಸಹ ಒಂದು ತಂತ್ರ.

ಎಲ್ಲದಕ್ಕೂ ಕಾರಣರು ಸಭೆಯ ಅಧ್ಯಕ್ಷರು ಎಂಬ ಪುಣ್ಯಾತ್ಮರು. ಅವರು ಹತ್ತರಲ್ಲಿ ಒಂಬತ್ತು ಅಂಶ ಸಚಿವಸಂಪುಟದಲ್ಲಿ ಸ್ಥಾನ ಸಿಗದ ಹಿರಿಯ ನಾಯಕರೇ ಆಗಿರುತ್ತಾರೆ. ಆದ್ದರಿಂದ, ಅವರು ಸಂಪುಟದಲ್ಲಿ ಇದ್ದವರಿಗಿಂತ ಹೆಚ್ಚು ರಾಜಕಾರಣ ಮಾಡುವ ಸಾಧ್ಯತೆ ಇರುತ್ತದೆ. ಅವರು ದೂರು ತೆಗೆದುಕೊಳ್ಳುವವರು, ಪರಿಶೀಲಿಸುವವರು ಹಾಗೂ ಶಿಕ್ಷೆ ಪ್ರಕಟಿಸುವವರು. ಯಾವುದಾದರೂ ಒಂದು ಕೊಂಡಿ ತುಂಡಾದರೂ ಶಾಸನಸಭೆಯ ಸದಾಚಾರವೆಂಬ ಆ ಇಡೀ ಸರಪಳಿ ಬಲಹೀನವಾಗುತ್ತದೆ.

ಅಧ್ಯಕ್ಷರಿಗೆ ಎಷ್ಟು ದೂರು ಬಂದರೂ ಅವರು ಆ ಫೈಲನ್ನು ತೆಗೆದು ನೋಡದೇ ಸುಮ್ಮನಿರಬಹುದು. ಇದಕ್ಕೆ ಪಾಕೆಟ್ ವಿಟೋ ಎನ್ನುವ ಅಡ್ಡ ಹೆಸರಿದೆ. ಆಂಧ್ರ, ತೇಲಂಗಾಣದಲ್ಲಿ ಅಧ್ಯಕ್ಷ ಮಹೋದಯರು ನಾಲ್ಕು ವರ್ಷ ಪಾಕೆಟ್‍ನಲ್ಲಿ ವಿಟೋ ಇಟ್ಟುಕೊಂಡು ಅಡ್ಡಾಡಿದರು. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗರ ಕಾಲದಲ್ಲಿ ಈ ರೀತಿಯ ದೂರುಗಳಿಗೆ ಎರಡು ವರ್ಷ ಪಾಕೆಟ್ ವಾಸದ ಭಾಗ್ಯ ದೊರೆತಿತ್ತು.

ಅಧ್ಯಕ್ಷರ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂಬ ನಿಯಮ ಇದೆ. ಆದರೂ ಕಾನೂನು ಮುರಿಯುವ ನಮ್ಮೆಲ್ಲರ ಸತ್ ಸಂಪ್ರದಾಯದಂತೆ ಇದನ್ನು ಪದೇಪದೇ ಮುರಿಯಲಾಗುತ್ತದೆ. ಯಾಕೆ? ಹಿಂದೆ ಮಾಡಿದ್ದಾರೆ, ಅದಕ್ಕೇ, ಅಷ್ಟೇ!

ಇವು ಯಾವನ್ನೂ ಇಲ್ಲಿನ ಪ್ರಸಂಗಕ್ಕೆ ಅನ್ವಯಿಸುವುದು ಸುಲಭವಲ್ಲ. ಪ್ರತಿ ಘಟನೆಯೂ ಪ್ರತ್ಯೇಕ ಎನ್ನುವ ಲಾಜಿಕ್ ಇದ್ದೇ ಇದೆಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...