ನಿಧಿ ದುರುಪಯೋಗದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ಗೆ ನಿರೀಕ್ಷಣಾ ಜಾಮೀನು ನೀಡಿದ 2019ರ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಹಕರಿಸುವಂತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ಗೆ ನ್ಯಾಯಾಲಯವು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಸಲ್ಲಿಸಿದ ಅರ್ಜಿ ಮತ್ತು ಗುಜರಾತ್ ಪೊಲೀಸರು ಮತ್ತು ಸಿಬಿಐ ದಾಖಲಿಸಿದ ಅಕ್ರಮ ಆಸ್ತಿಗಳಿಕೆ ಸಂಬಂಧಿಸಿದ ಎಫ್ಐಆರ್ಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಗುಜರಾತ್ ಪೊಲೀಸ್ ಮತ್ತು ಸಿಬಿಐಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರಲ್ಲಿ ವಿಚಾರಣೆಯ ವೇಳೆ ಈ ವಿಷಯದಲ್ಲಿ ಇನ್ನು ಉಳಿದುಕೊಂಡಿರುವುದು ಏನು ಎಂದು ಪೀಠವು ಕೇಳಿದೆ.
ಗುಜರಾತ್ ಸರ್ಕಾರದ ಪರ ವಕೀಲ ಸ್ವಾತಿ ಗಿಲ್ಡಿಯಾಲ್ ವಾದ ಮಂಡಿಸಿದ್ದಾರೆ. ದಂಪತಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ನಲ್ಲಿ ಹೇಳಿದ್ದಾರೆ.
ಈಗ ಏನಾಯಿತು? ಇದು ಈಗ ನಮ್ಮ ಮುಂದೆ ಬಂದ ಉದ್ದೇಶವೇನು? ಈ ಪ್ರಕರಣದಲ್ಲಿ ಏನಾಯಿತು ಎಂದು ಪೀಠವು ಪ್ರಶ್ನಿಸಿದೆ. 2017ರಲ್ಲಿ ಜಾಮೀನು ನೀಡಲಾಗಿದೆ ಮತ್ತು ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ಪ್ರಕರಣದಲ್ಲಿ ಕೆಲವು ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ವಿಶೇಷ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಸಾಕಷ್ಟು ಸಮಯವು ಈಗಾಗಲೇ ಕಳೆದಿದೆ ಎಂದು ಪೀಠವು ಹೇಳಿದೆ.
ಚಾರ್ಜ್ಶೀಟ್ ಸಲ್ಲಿಸಲಾಗಿಲ್ಲ ಎಂದು ನಮಗೆ ತಿಳಿದಿದೆ. ಪ್ರತಿವಾದಿಯ ಕಡೆಯಿಂದ ಸಹಕಾರದ ಕೊರತೆಯಿಂದ ಆರೋಪಪಟ್ಟಿ ಸಲ್ಲಿಸಲಾಗಿಲ್ಲ ಎಂದು ಹೇಳಲಾಗಿದೆ. ಈ ಹಂತದಲ್ಲಿ ನಾವು ಹೇಳ ಬಯಸುವುದೇನೆಂದರೆ, ಪ್ರತಿವಾದಿಗಳಾದ ಸೆಟಲ್ವಾಡ್ ಮತ್ತು ಅವರ ಪತಿ ಅಗತ್ಯವಿರುವಾಗ ತನಿಖೆಗೆ ಸಹಕರಿಸಬೇಕು ಎಂದು ಪೀಠ ಹೇಳಿದೆ.
ಇದನ್ನು ಓದಿ: ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿಯ ಕುಟುಂಬದ 19 ಮಂದಿ ಬಲಿ