Homeಮುಖಪುಟತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸುರೇಶ್ ಗೌಡ : ಸಂಸದ ಜಿ.ಎಸ್.ಬಸವರಾಜುಗೆ ತೀವ್ರ ಹಿನ್ನಡೆ

ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸುರೇಶ್ ಗೌಡ : ಸಂಸದ ಜಿ.ಎಸ್.ಬಸವರಾಜುಗೆ ತೀವ್ರ ಹಿನ್ನಡೆ

- Advertisement -
- Advertisement -

ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹುದ್ದೆ ಮಾಜಿ ಶಾಸಕ ಬಿ. ಸುರೇಶ್ ಗೌಡ ಅವರಿಗೆ ದಕ್ಕಿದೆ. ರಾಜ್ಯಾಧ್ಯಕ್ಷರರಾದ ನಳೀನ್ ಕುಮಾರ್ ಕಟೀಲ್‌ರವರು ಎರಡು ಬಾರಿ ಶಾಸಕರಾಗಿದ್ದ ಸುರೇಶ್ ಗೌಡರಿಗೆ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಹೆಬ್ಬಾಕ ರವಿಗೆ ಜಿಲ್ಲಾ ಬಿಜೆಪಿ ಹುದ್ದೆ ಕೈತಪ್ಪಿದ್ದು ಸಂಸದ ಜಿ.ಎಸ್. ಬಸವರಾಜು ಮತ್ತು ಬೆಂಬಲಿಗರಿಗೆ ತೀವ್ರ ಹಿನ್ನಡೆಯಾಡಿದೆ.

ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೆನೆಟ್ ಮತ್ತು ಸಿಂಡಿಕೇಟ್ ಕೆಲಸ ನಿರ್ವಹಿಸಿದ್ದ ಬಿ.ಸುರೇಶ್ ಜೀವರಾಜ್ ಆಳ್ವ ಮೂಲಕ ಬಿಜೆಪಿಗೆ ಬಂದವರು. ಸೆನೆಟ್  ಹಾಗೂ ಸಿಂಡಿಕೇಟ್‌ ಸದಸ್ಯರಾಗಿದ್ದ ವೇಳೆ ಸುರೇಶ್ ಮೇಲೆ ಅಂಕಪಟ್ಟಿ ಹಗರಣದ ಆಪಾದನೆ ಇತ್ತು. ರಾಜಕೀಯ ಪ್ರವೇಶದ ನಂತರ ಆ ಆರೋಪಗಳು ಹಿನ್ನೆಲೆಗೆ ಸರಿದವು.

ಬಿಜೆಪಿ ಸೇರ್ಪಡೆಯಾದ ಮೇಲೆ ಬಿ.ಸುರೇಶ್ ಜೊತೆ ಗೌಡ ಹೆಸರು ಸೇರಿಕೊಂಡಿತು. ಬೆಂಗಳೂರಿನಿಂದ ನೇರ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದರು. ದೇವಾಲಯಗಳ ನಿರ್ಮಾಣಕ್ಕೆ ಹಣ ಸುರಿದರು. ಎಲ್ಲಾ ಹಳ್ಳಿ- ಗ್ರಾಮಗಳಿಗೆ ತೆರಳಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದರು. ಜನರು ಕೂಡ ಸುರೇಶ್ ಗೌಡ ಹಣ ಸುರಿಯುತ್ತಿರುವುದನ್ನು ನೋಡಿ ತಮ್ಮತಮ್ಮ ಊರುಗಳಿಗೆ ಕರೆಸಿಕೊಂಡರು.

ಹಣ ಎಲ್ಲಿಂದ ಬಂತು?  ಹೇಗೆ ಸಂಪಾದನೆ ಮಾಡಿದರು? ಎಂದು ಯಾರೂ ಪ್ರಶ್ನಿಸಲಿಲ್ಲ. ಕುಣಿಗಲ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬರುವ ಬಹುತೇಕ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದರು. ಮುಂದಿನ ಚುನಾವಣೆಗೆ ವೇದಿಕೆ ಸಿದ್ದಮಾಡಿಕೊಂಡರು. ಹಣ ಇರುವಲ್ಲಿ ಜನ ಎಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸುರೇಶ್ ಗೌಡ ಅಂದರೆ ಕೊಡುಗೈ ದಾನಿ ಎಂಬಷ್ಟರ ಮಟ್ಟಿಗೆ ಹೆಸರಾದರು.

2003ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸೋಲು ಕಂಡ ಸುರೇಶ್ ಗೌಡ ಮತ್ತೆ ದೇವಾಲಯಗಳಿಗೆ ಹಣ ನೀಡುವುದನ್ನು ಮುಂದುವರಿಸಿದರು. ಕ್ಷೇತ್ರಾದ್ಯಂತ ಸುತ್ತಿದರು. ಪ್ರಚಾರವನ್ನು ಮುಂದುವರಿಸಿದರು; ಅಷ್ಟುಹೊತ್ತಿಗೆ ಕ್ಷೇತ್ರ ಪುನರ್ ವಿಂಗಡಣೆಯಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಹೊಸದಾಗಿ ಅಸ್ತಿತ್ವಕ್ಕೆ ಬಂತು. ಇದು ಸುರೇಶ್ ಗೌಡರ ಗೆಲುವಿಗೆ ಕಾರಣವಾಯಿತು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಸುರೇಶ್‌ಗೌಡ ಗೆದ್ದರು. ತುಮಕೂರು ನಗರದಿಂದ ಸೊಗಡು ಶಿವಣ್ಣ ಅಯ್ಕೆಯಾದರು. ತಿಪಟೂರಿನ ಬಿ.ಸಿ.ನಾಗೇಶ್ ಸೋತರು.. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್‌ಗೌಡ ಅವರದ್ದೇ ಸದ್ದು. 2013ರ ಚುನಾವಣೆಯಲ್ಲೂ ಸುರೇಶ್ ಗೌಡ ಗೆದ್ದು ಬಂದರು. ರಸ್ತೆಗಳ ಅಭಿವೃದ್ಧಿ ಮಾಡಿದರು. ಜಿದ್ದಿನ ರಾಜಕಾರಣಕ್ಕೂ ನಾಂದಿ ಹಾಡಿದರು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೌರಿಶಂಕರ್ ವಿರುದ್ದ ಸುರೇಶ್‌ಗೌಡ ಸೋಲು ಅನುಭವಿಸಿದರು. 2008ರಿಂದಲೇ ಆರಂಭವಾದ ಜಿದ್ದಾಜಿದ್ದಿನ ರಾಜಕಾರಣದಲ್ಲಿ ಸುರೇಶ್ ಗೌಡ ಮತ್ತು ಬಿ.ಸಿ.ಗೌರಿಶಂಕರ್ ನಡುವೆ ತೀವ್ರ ಪೈಪೋಟಿ ಶುರವಾಗಿದ್ದು ಇಂದಿಗೂ ನಿಂತಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಲೇ ಇದೆ. ಆರೋಪ-ಪ್ರತ್ಯಾರೋಪಗಳು ಮಾತ್ರ ನಿಂತಿಲ್ಲ.

ಇಂಥ ಹೊತ್ತಿನಲ್ಲಿ ಜಿಲ್ಲಾ ಬಿಜೆಪಿಗೆ ಸುರೇಶ್ ಗೌಡರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ದುಸ್ಸಾಹಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರು ತೀರ್ಮಾನ ಮಾಡಿದಂತಿದೆ. ಒಂದು ಕಡೆ ಕಾಂಗ್ರೆಸ್ ನಿಂದ ವಲಸೆ ಬಂದಿರುವ ಸಂಸದ ಜಿ.ಎಸ್. ಬಸವರಾಜು ಅವರ ಬಲ ಕುಸಿಯುವಂತೆ ಮಾಡುವುದು ಮತ್ತು ಜೆಡಿಎಸ್ ಶಾಸಕ ಗೌರಿಶಂಕರ್ ಬೆಳವಣಿಗೆಯನ್ನು ನಿಯಂತ್ರಿಸುವುದು ಸುರೇಶ್‌ಗೌಡ ನೇಮಕದ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಜಿ ಸಚಿವ ಸೊಗಡು ಶಿವಣ್ಣ ಜೊತೆಗೆ ಗುರುತಿಸಿಕೊಂಡಿದ್ದ ಬಿ.ಸುರೇಶ್‌ಗೌಡ ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿರುವುದು ಸಂಸದ ಬಸವರಾಜು ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ. ಇದು ಒಂದು ರೀತಿಯಲ್ಲಿ ಸೊಗಡು ಶಿವಣ್ಣಗೆ ಗೆಲುವು ತಂದುಕೊಟ್ಟಂತಾಗಿದೆ. ರಾಜ್ಯ ಬಿಜೆಪಿ ಉರುಳಿಸಿರುವ ಈ ದಾಳ ಯಾರನ್ನು ಕಟ್ಟಿಹಾಕಲಿದೆಯೋ ನೋಡಬೇಕು.


ಇದನ್ನೂ ಓದಿ: ಸಹಪಂಕ್ತಿ ಭೋಜನ ಮಾಡಿ – ಬಿಜೆಪಿ ಮುಖಂಡ ಸೊಗಡು ಶಿವಣ್ಣಗೆ ಕುರುಬ ಸಮುದಾಯದ ಸವಾಲು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...