Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಪ್ರಬಲ ವಿರೋಧಿಗಳಿಲ್ಲದ ಡಿ.ಕೆ ಸಹೋದರರ ಸಾಮ್ರಾಜ್ಯ ಕನಕಪುರ

ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಪ್ರಬಲ ವಿರೋಧಿಗಳಿಲ್ಲದ ಡಿ.ಕೆ ಸಹೋದರರ ಸಾಮ್ರಾಜ್ಯ ಕನಕಪುರ

- Advertisement -
- Advertisement -

ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕನಕಪುರವೂ ಒಂದು. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಇಲ್ಲಿಂದ ಪಾದಯಾತ್ರೆ ಆರಂಭಿಸಿದ್ದು ಸಹ ಅದಕ್ಕೆ ಕಾರಣವಾಗಿದೆ. ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರದಿಂದಲೇ ಕಾವೇರಿ ನದಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಈ ಹಿಂದೆ ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದ್ದ ಕನಕಪುರ 2008ರಲ್ಲಿ ಮರು ವಿಂಗಡಣೆಯಿಂದಾಗಿ ಲೋಕಸಭಾ ಸ್ಥಾನ ಕಳೆದುಕೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಟ್ಟಿತು. ಅದೇ ಸಮಯದಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರವು ಸಹ ತನ್ನ ಅಸ್ತಿತ್ವ ಕಳೆದುಕೊಂಡು ಕನಕಪುರ ಮತ್ತು ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರಗಳೊಂದಿಗೆ ಸೇರಲ್ಪಟ್ಟಿತ್ತು. ಹಾಗಾಗಿ ನಾವೀಗ ಕನಕಪುರ ಕ್ಷೇತ್ರದ ಕುರಿತು ಬರೆಯಲು ಹೊರಟರೆ ಅಲ್ಲಿ ಸಾತನೂರು ಕ್ಷೇತ್ರದ ಉಲ್ಲೇಖವು ಮಹತ್ವ ಪಡೆದುಕೊಳ್ಳುತ್ತದೆ. ಅದೇ ರೀತಿ ಕನಕಪುರ ಲೋಕಸಭಾ ಕ್ಷೇತ್ರದ್ದೂ ಸಹ.

ಸಾಮಾಜಿಕ ಸ್ಥಾನಮಾನ

ಡಿ.ಎಂ ನಂಜುಡಪ್ಪನವರು ವರದಿ ನೀಡಿದಾಗ ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಕನಕಪುರ ಕೊನೆಯ ಸ್ಥಾನದಲ್ಲಿದ್ದು, ಅತಿ ಹಿಂದುಳಿದ ತಾಲೂಕಾಗಿತ್ತು. ಗುಡ್ಡಗಾಡು ಮತ್ತು ಬಯಲು ಸೀಮೆಯ ಇಲ್ಲಿ ಒಣ ಬೇಸಾಯವೇ ಪ್ರಮುಖ ಕಸುಬಾಗಿತ್ತು. ನಂತರ ಸುವರ್ಣಮುಖಿ ಮತ್ತು ವೃಷಭಾವತಿ ನದಿಗೆ ಹಾರೋಬೆಲೆ ಅಣೆಕಟ್ಟು ನಿರ್ಮಾಣವಾದುದ್ದು ಹಾಗೂ ಕೆಲವು ಯೋಜನೆಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿದ ನಂತರವಷ್ಟೆ ಇಲ್ಲಿ ಒಂದಷ್ಟು ರೈತರು ರೇಷ್ಮೆ ಸೇರಿ ಇತರ ಬೆಳೆ ಬೆಳೆದು ಮುಂದೆ ಬರಲು ಸಾಧ್ಯವಾಯಿತು. ದೊಡ್ಡದೊಡ್ಡ ಬೆಟ್ಟಗಳನ್ನು ಕಡಿದು, ಕಲ್ಲು ಗಣಿಗಾರಿಕೆ ಮಾಡಿ, ಗ್ರಾನೈಟ್ ಮಾಡಿ ಹಣ ಮಾಡಿದವರು ಬಹುತೇಕರಿದ್ದಾರೆ. ಹಾಗಾಗಿ ಇದು ಈಗ ಹಿಂದುಳಿದ ತಾಲ್ಲೂಕಿನ ಹಣೆಪಟ್ಟೆ ಕಳೆದುಕೊಂಡಿದೆ. ಆದರೆ ಇಂದಿಗೂ ನೆತ್ತಿಯ ಮೇಲೆ ನೆಟ್ಟಗಿನ ಸೂರಿಲ್ಲದ, ರಸ್ತೆಗಳಿಲ್ಲದ ಸಾವಿರಾರು ಕುಟುಂಬಗಳು ಕೂಲಿ ನಾಲಿ ಮಾಡಿ ದಿನದೂಡುತ್ತಿದ್ದಾರೆ. ಗಣನೀಯ ಸಂಖ್ಯೆಯಲ್ಲಿರುವ ಇರುಳಿಗ ಆದಿವಾಸಿ ಸಮುದಾಯಗಳು ಅರಣ್ಯದಿಂದ ಹೊರದಬ್ಬಿಸಿಕೊಂಡು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ ಅಳಿವಿನಂಚಿನಲ್ಲಿರುವ ಆದಿವಾಸಿ ಇರುಳಿಗ ಜನರ ಗೋಳು ಕೇಳುವವರಿಲ್ಲ॒

ಪಿ.ಜಿ.ಆರ್ ಸಿಂಧ್ಯಾ

ಒಕ್ಕಲಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕನಕಪುರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ನಂತರದ ಸ್ಥಾನದಲ್ಲಿದೆ. ಲಿಂಗಾಯತರು, ಮುಸ್ಲಿಮರು, ಇತರೆ ಹಿಂದುಳಿದ ಸಮುದಾಯಗಳು ಚಿಕ್ಕಚಿಕ್ಕ ಪಾಕೆಟ್‌ನಲ್ಲಿವೆ. ಒಕ್ಕಲಿಗ ಮತಗಳೇ ಕ್ಷೇತ್ರದ ನಿರ್ಣಾಯಕ ಮತಗಳಾಗಿವೆ.

ರಾಜಕೀಯ ಇತಿಹಾಸ

1957ರ ಆರಂಭದ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಇಲ್ಲಿ ಎಂ ಲಿಂಗೇಗೌಡರು ಜಯಗಳಿಸಿದ್ದರು. ನಂತರದ ವರ್ಷ ಎಸ್ ಕರಿಯಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆನಂತರದ ವರ್ಷಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರವಾಗಿದ್ದ ಕನಕಪುರ 1983ರಲ್ಲಿ ಪಿ.ಜಿ.ಆರ್ ಸಿಂಧ್ಯಾರವರು ಮುನ್ನಲೆಗೆ ಬಂದ ನಂತರ ಅವರ ಭದ್ರ ನೆಲೆಯಾಯಿತು. ಅವರು ಅಲ್ಲಿಂದ ಸತತವಾಗಿ ಆರು ಬಾರಿ ಆಯ್ಕೆಯಾಗಿದ್ದಾರೆ. ಜನತಾ ಪಕ್ಷ, ಜೆಡಿಯು ಮತ್ತು ಜೆಡಿಎಸ್ ಪಕ್ಷದಿಂದ ತಲಾ ಎರೆಡೆರಡು ಬಾರಿ ಸ್ಪರ್ಧಿಸಿ ಜಯ ಗಳಿಸಿದ ದಾಖಲೆ ಅವರದು.

ಹಣಬಲ, ಜಾತಿಬಲ ಮೀರಿದ ನಾಯಕ ಸಿಂಧ್ಯಾ

ಮರಾಠ ಸಮುದಾಯದ ಸಿಂಧ್ಯಾರವರು ಒಕ್ಕಲಿಗ ಬಾಹುಳ್ಯದ ಕನಕಪುರ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಗೆಲ್ಲುವುದು ಸಾಮಾನ್ಯದ ವಿಚಾರವಲ್ಲ. ಅದಕ್ಕೆ ಮುಖ್ಯ ಕಾರಣ ಅವರು ಜನರೊಟ್ಟಿಗೆ ಇಟ್ಟುಕೊಂಡಿದ್ದ ನಿಕಟ ಸಂಪರ್ಕವಾಗಿತ್ತು. ರಸ್ತೆ, ನೀರಾವರಿಯಂತಹ ಕಣ್ಣಿಗೆ ಕಾಣುವ ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಅವರು ಹಿಂದೆ ಬಿದ್ದರೂ ಸಹ, ಜನರ ವಯಕ್ತಿಕ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿದ್ದರು. ಯಾವುದೇ ಕೆಲಸಗಳಿಗಾಗಿ ತಮ್ಮ ಮನೆಗೆ ಬರುವ ಪ್ರತಿಯೊಬ್ಬರ ಹೆಸರು ನೆನಪಿಟ್ಟುಕೊಂಡು ಅವರು ಕೆಲಸ ಆಗುವವರೆಗೂ ಶ್ರಮಿಸುತ್ತಿದ್ದರು ಎಂದು ಅವರ ಬಗ್ಗೆ ಜನರು ಹೇಳುತ್ತಾರೆ.

ದೇವೇಗೌಡರು ಸಿಎಂ ಆಗಿದ್ದಾಗ ಸಿಂಧ್ಯಾರವರು ಗೃಹಮಂತ್ರಿಯಾಗಿದ್ದರು. ಆಗ ಅವರು ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಜನರ ಬೃಹತ್ ಸಭೆ ಏರ್ಪಡಿಸಿದ್ದರು. ಜನರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ತದನಂತರ ಆ ಕೆಲಸಗಳು ಆಗಿದ್ದಾವೆಯೇ ಎಂದು ಫಾಲೋಅಪ್ ಮಾಡುತ್ತಿದ್ದರು. ಅವರ ಮನೆಗೆ ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಊಟ, ತಿಂಡಿ ಬಸ್‌ಚಾರ್ಜ್‌ಗೆಂದು ದುಡ್ಡುಕೊಟ್ಟು ಕಳಿಸುತ್ತಿದ್ದರು. ಹಾಗಾಗಿಯೇ ಜನ ಅವರನ್ನು 6 ಬಾರಿ ಗೆಲ್ಲಿಸಿದರು ಎನ್ನುತ್ತಾರೆ ಕ್ಷೇತ್ರದ ಜನ.

2008ರಲ್ಲಿ ಕನಕಪುರದಲ್ಲಿ ಸಿಂಧ್ಯಾರವರು ಕಣಕ್ಕಿಳಿಯಲಿಲ್ಲ. ಆದರೆ 2013ರಲ್ಲಿ ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸಿದರೂ ಮತದಾರರು ಅವರ ಕೈ ಹಿಡಿಯಲಿಲ್ಲ. ತದ ನಂತರ ಬಿಎಸ್‌ಪಿ ಸೇರಿದ ಅವರು ಅಲ್ಲಿಯೂ ನೆಲೆ ನಿಲ್ಲಲಿಲ್ಲ. ಸುತ್ತಿ ಬಳಸಿ ಕೊನೆಗೆ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಡಿ.ಕೆ.ಶಿ ಎಂಟ್ರಿ

ಸಾತನೂರು ಕ್ಷೇತ್ರದಲ್ಲಿದ್ದ ಡಿ.ಕೆ ಶಿವಕುಮಾರ್ ಮರುವಿಂಗಡಣೆಯ ನಂತರ 2008ರಿಂದ ಕನಕಪುರಕ್ಕೆ ಬಂದು ಹ್ಯಾಟ್ರಿಕ್ ಜಯಗಳಿಸುವುದಲ್ಲದೆ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. 2008ರಲ್ಲಿ ಅವರು ಜೆಡಿಎಸ್‌ನ ಡಿ.ಎಂ ವಿಶ್ವನಾಥ್ ಎದುರು 7,179 ಮತಗಳ ಅಂತರದ ಪ್ರಯಾಸದ ಜಯಗಳಿಸಿದರು. ಆದರೆ 10 ವರ್ಷಗಳ ನಂತರ 2018ರಲ್ಲಿ ಅದೇ ಜೆಡಿಎಸ್‌ನ ನಾರಾಯಣಗೌಡರ ಎದುರು 79,909 ಮತಗಳ ಬೃಹತ್ ಅಂತರದ ಜಯ ದಾಖಲಿಸಿದರು. ವಿರೋಧಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು, ಅವರು ಬರದಿದ್ದರೆ ನಿರ್ನಾಮ ಮಾಡುವುದು ಡಿ.ಕೆ ಸಹೋದರರ ರಾಜಕೀಯ ಎಂಬ ಆರೋಪವೂ ಅವರ ಮೇಲಿದೆ.

ವಿರೋಧಿಗಳಿಲ್ಲದ ಡಿ.ಕೆ ಸಹೋದರರ ಸಾಮ್ರಾಜ್ಯ

ಡಿ.ಕೆ.ಶಿಗೆ ಪೈಪೋಟಿ ನೀಡುತ್ತಿದ್ದ ಪಿ.ಜಿ.ಆರ್ ಸಿಂಧ್ಯಾರವರು ಕೊನೆಗೆ ಕಾಂಗ್ರೆಸ್ ಸೇರಬೇಕಾಯಿತು. ಎಚ್.ಕೆ ಶ್ರೀಕಂಠು ಎಂಬವವರು MSCನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ರಗತಿಪರ ರೈತರಾಗಿದ್ದರು. ಡಿ.ಕೆ ಸಹೋದರರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳಿದ್ದ ಸಮಯದಲ್ಲಿಯೇ ಅವರು ಕಾಂಗ್ರೆಸ್ ಸೇರಿದರು. ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಕೀರಣಗೆರೆ ಜಗದೀಶ್ ಎಂಬುವವರು ಕೀರಣಗೆರೆಯಲ್ಲಿ ದೊಡ್ಡ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿರುವ ಅವರು ಆರಂಭದಲ್ಲಿ ಡಿ.ಕೆ ಸಹೋದರರ ವಿರುದ್ಧವಿದ್ದವರು ನಂತರ ಅವರು ಕೂಡ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿಯವರೆಗೆ ಜೆಡಿಎಸ್‌ನಲ್ಲಿದ್ದ ಬಾಲನರಸಿಂಹೇಗೌಡರು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಡಿ.ಕೆ ಸಹೋದರರಿಗೆ ಪ್ರಬಲ ವಿರೋಧವೇ ಇಲ್ಲದ ಕ್ಷೇತ್ರವಾಗಿದೆ ಕನಕಪುರ.

ಡಿ.ಕೆ ಶಿವಕುಮಾರ್ ಕೆ.ಪಿ.ಸಿ.ಸಿ ಅಧ್ಯಕ್ಷರಾದ ನಂತರ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಆಗುವ ಬಯಕೆಯಲ್ಲಿ ಇಡೀ ರಾಜ್ಯ ಸುತ್ತುತ್ತಿದ್ದಾರೆ. ಹಾಗಾಗಿ ಇಡೀ ಕನಕಪುರದ ರಾಜಕೀಯ ಉಸ್ತುವಾರಿ ನೋಡಿಕೊಳ್ಳುವುದು ಸಂಸದರಾದ ಡಿ.ಕೆ ಸುರೇಶ್. ಸಾಕಷ್ಟು ಬೆಂಬಲಿಗ ಪಡೆಯನ್ನು ಹೊಂದಿರುವ ಡಿ.ಕೆ ಸುರೇಶ್ ಅವರಿಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಾರೆ ಎನ್ನಲಾಗುತ್ತಿದೆ. ಕ್ಷೇತ್ರದ ಕಲ್ಲು ಗಣಿಗಾರಿಕೆಯ ಮೇಲೆ ಹಿಡಿತ ಹೊಂದಿದ್ದರಿಂದಲೇ ಭಾರೀ ಶ್ರೀಮಂತರಾಗಲು ಕಾರಣವಾಗಿದೆ. ಹಣ, ಅಧಿಕಾರ ಹೊಂದಿರುವ ಇವರನ್ನು ಪ್ರಶ್ನಿಸುವವರೆ ಇಲ್ಲವಾಗಿದೆ ಎನ್ನುವುದು ಸಾಮಾನ್ಯ ಆರೋಪ.

ಕಳೆದ 40 ವರ್ಷದ ಕನಕಪುರ ವಿಧಾನಸಭಾ ಕ್ಷೇತ್ರದ ಚಿತ್ರಣ

ಕ್ಷೇತ್ರದ ಕೆಲಸಗಳ ಬಗ್ಗೆ ಹಿಡಿತ ಹೊಂದಿರುವ ಡಿ.ಕೆ ಸುರೇಶ್ ಯಾವುದೇ ಅಭಿವೃದ್ಧಿ ಕುರಿತ ಸಭೆಯಲ್ಲಿ ಭಾಗವಹಿಸುವ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಹೋಗುತ್ತಾರೆ. ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮುಂದಿನ ಸಭೆಯಲ್ಲಿಯೂ ಅದನ್ನು ನೆನಪಿಟ್ಟುಕೊಂಡು ಫಾಲೋಅಪ್ ಮಾಡುತ್ತಾರೆ ಎಂಬ ಮೆಚ್ಚುಗೆಯ ಮಾತುಗಳ ಸಹ ಕೇಳಿಬರುತ್ತವೆ. ಆದರೆ ಜನರಿಗೆ ಗೌರವ ಕೊಡುವುದಿಲ್ಲ, ಭಯದಲ್ಲಿಟ್ಟಿರುತ್ತಾರೆ ಎಂಬ ಆರೋಪವೂ ಜೊತೆಗಿರುತ್ತವೆ.

ವಿಡಿಯೋ ನೋಡಿ

ಕ್ಷೇತ್ರಕ್ಕೆ ಕಾಲಿಡದ ಎಚ್.ಡಿ.ಕೆ, ಜೆಡಿಎಸ್ ಪರಿಸ್ಥಿತಿ ಶೋಚನೀಯ

ರಾಮನಗರ ಜಿಲ್ಲೆಯ ಮನೆ ಮಗ ಎಂದು ಹೇಳಿಕೊಳ್ಳುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ, ರಾಮನಗರ, ಮಾಗಡಿಯಲ್ಲಿ ಹಿಡಿತ ಹೊಂದಿದ್ದರೂ ಕನಕಪುರದ ಕಡೆ ಮಾತ್ರ ತಲೆ ಹಾಕುವುದಿಲ್ಲ. ಅಷ್ಟು ಮಾತ್ರವಲ್ಲದೆ ಚುನಾವಣೆ ಸಮಯದಲ್ಲಿ ಡಿ.ಕೆ ಶಿವಕುಮಾರ್‌ರವರಿಗೆ ಸಹಾಯ ಮಾಡಲು ಅವರ ಎದುರು ’ಡಮ್ಮಿ’ ಕ್ಯಾಂಡಿಡೇಟ್ ಹಾಕುತ್ತಾರೆ ಎಂಬ ಆರೋಪವೂ ಅವರ ಮೇಲಿದೆ. ಸದ್ಯಕ್ಕೆ ಡಿ.ಎಂ ವಿಶ್ವನಾಥ್ ಮತ್ತು ನಾರಾಯಣಗೌಡರು ಮಾತ್ರ ಜೆಡಿಎಸ್‌ನಲ್ಲಿ ಉಳಿದಿದ್ದಾರೆ. ಹೆಚ್ಚಿನ ಕಾರ್ಯಕರ್ತರು ಕಾಂಗ್ರೆಸ್ ಕಡೆ ಹಾರಿದ್ದಾರೆ. ಒಂದಷ್ಟು ಗ್ರಾ.ಪಂ ಮತ್ತು ಜಿ.ಪಂನಲ್ಲಿ ಜೆಡಿಎಸ್ ಗೆಲ್ಲುತ್ತದೆ. ಆದರೆ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲುವುದಿರಲಿ ಪೈಪೋಟಿ ಸಹ ನೀಡಲು ಆಗುವುದಿಲ್ಲ. ಹಾಗಾಗಿ ಜೆಡಿಎಸ್ ಪರಿಸ್ಥಿತಿ ಶೋಚನೀಯವಾಗಿದೆ.

ಏಸು ಪ್ರತಿಮೆ ವಿವಾದ ಮತ್ತು ಬಿಜೆಪಿ

ಕನಕಪುರ ನಗರಸಭೆಯಲ್ಲಿ ಒಂದು ಸ್ಥಾನ ಗೆದ್ದಿರುವುದು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ. 31 ಕ್ಷೇತ್ರಗಳ ನಗರಸಭೆಯಲ್ಲಿ 26 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ಎರಡು ವರ್ಷಗಳ ಹಿಂದೆ ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ಅಲ್ಲಿನ ಕ್ರಿಶ್ಚಿಯನ್ನರು ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮುಂದಾದಾಗ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ ಅನೇಕ ಬಿಜೆಪಿಗರು ಕಪಾಲಬೆಟ್ಟವು ಇದಕ್ಕೂ ಮುಂಚೆ ಮುನೇಶ್ವರ ಬೆಟ್ಟವಾಗಿತ್ತೆಂದು ಗುಲ್ಲೆಬ್ಬಿಸಿ ಅದನ್ನು ವಿವಾದಗ್ರಸ್ತವಾಗಿಸಲು ಯತ್ನಿಸಿದರು. ಒಂದಷ್ಟು ಪ್ರತಿಭಟನೆ ನಡೆಸಿ ಗಲಾಟೆ ಮಾಡಲು ಯತ್ನಿಸಿದರು. ಆದರೆ ಅಲ್ಲಿನ ಜನ ಅದಕ್ಕೆ ಸೊಪ್ಪು ಹಾಕಲಿಲ್ಲ.

ಮೇಕೆದಾಟು ಬೇಕೆ, ಬೇಡವೇ?

ಕುಡಿಯುವ ನೀರಿನ ಹೆಸರಿನಲ್ಲಿನ ಮೇಕೆದಾಟು ಯೋಜನೆ ಜಾರಿಯಾಗಬೇಕೆಂದು ಇಲ್ಲಿನ ಬಹುತೇಕ ಜನ ಹೇಳುತ್ತಾರೆ. ಕೃಷಿಗೂ ನೀರು ಸಿಗುತ್ತದೆ ಎಂದು ಇಲ್ಲಿನ ರೈತರಿಗೆ ಹೇಳಲಾಗುತ್ತಿದೆ. ತಮ್ಮದೇ ಸರ್ಕಾರ ಇದ್ದಾಗ ಇಷ್ಟು ದಿನ ಏಕೆ ಕಾಂಗ್ರೆಸ್ ಸುಮ್ಮನಿತ್ತು ಎಂದು ಜೆಡಿಎಸ್‌ನವರು ಟೀಕಿಸುತ್ತಾರೆ. ಆದರೆ ಕಾಡಂಚಿನಲ್ಲಿನ ಮುಳುಗಡೆಯಾಗುವ, ಎತ್ತಂಗಡಿಯಾಗುವ ಭೀತಿಯಲ್ಲಿರುವ ಜನರು ಮಾತ್ರ ಯೋಜನೆ ವಿರೋಧಿಸುತ್ತಿದ್ದಾರೆ. ಆದರೆ ಅವರ ದನಿ ಕ್ಷೀಣವಾಗಿದೆ. ಇನ್ನು ಪರಿಸರವಾದಿಗಳು ತೀವ್ರವಾಗಿ ಈ ಯೋಜನೆಯನ್ನು ವಿರೋಧಿಸಿದ್ದಾರೆ.

ಮೇಕೆದಾಟು ಅಣೆಕಟ್ಟೆ ಕಟ್ಟಿದರೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಅಲ್ಲಿನ ಜೀವವೈವಿಧ್ಯತೆ, ಕಾಡುಪ್ರಾಣಿಗಳು ನಾಶವಾಗುತ್ತವೆ. ಕಾಡಿನ ಮಧ್ಯೆ ಗೋಡೆ ಕಟ್ಟಿದಂತಾಗಿ ಪ್ರಾಣಿಗಳ ಚಲನೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಕಾಡು ಪ್ರಾಣಿಗಳು ರೈತರ ಹೊಲಗದ್ದೆಗಳಿಗೆ, ಊರುಗಳಿಗೆ ಬರುವ ಪರಿಸ್ಥಿತಿ ಎದುರಾಗಿ ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿ ಡ್ಯಾಮ್ ಕಟ್ಟಿದರೆ ಬೆಂಗಳೂರು, ರಾಮನಗರ, ಮಂಡ್ಯ ಮೈಸೂರಿನಿಂದ ಕೊಳಚೆ ನೀರು ಸಂಗ್ರಹವಾಗುತ್ತದೆ. ಸಾವಿರಾರು ಕೋಟಿ ರೂ ದುಡ್ಡು ಸುರಿಯುವ ಬದಲು ಅದನ್ನು ಬೇರೆ ಜನಪರ ಯೋಜನೆಗಳಿಗೆ ಬಳಸಲಿ ಎಂಬುದು ಅವರ ಆಗ್ರಹ.

ಇನ್ನುಳಿದಂತೆ ನರೇಗಾ ಹಣ ದುರುಪಯೋಗವಾಗುತ್ತಿದೆ, ಜನರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ, ಹಾಗಾಗಿ ಕೋರ್ಟ್ ಪ್ರಕರಣಗಳು ಹೆಚ್ಚಾಗುತ್ತಿವೆ, ಅರಣ್ಯ ನಾಶ, ಕೆರೆ ಒತ್ತುವರಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇರುಳಿಗರತ್ತ ಗಮನ ಹರಿಸಲಿ

ಇರುಳಿಗ ಆದಿವಾಸಿ ಸಮುದಾಯ ಅತಿ ಹೆಚ್ಚಿರುವ ಜಿಲ್ಲೆ ರಾಮನಗರ. ಇಲ್ಲಿನ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಾಡಂಚಿನಲ್ಲಿ ನೂರಾರು ಕುಟುಂಬಗಳು ಗುಡಿಸಲು ಹಾಕಿಕೊಂಡು ಕೂಲಿ ಮಾಡಿ ಬದುಕುತ್ತಿವೆ. ಅವರ ಮೇಲೆ ಅರಣ್ಯ ಅಧಿಕಾರಿಗಳ ದೌರ್ಜನ್ಯ ಮುಂದುವರೆದಿದೆ. ಅದನ್ನು ತಪ್ಪಿಸಲು ಒಂದು ಸಾಂತ್ವನ ಕೇಂದ್ರ ಸ್ಥಾಪಿಸಬೇಕು, ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಒದಗಿಸಬೇಕೆಂಬುದು ದಶಕಗಳ ಕೂಗು. ಆದರೆ ಯಾವ ಜನಪ್ರತಿನಿಧಿಗಳು ಅದನ್ನು ಆಲಿಸಲು ಸಿದ್ಧರಿಲ್ಲ. ಸ್ವಂತ ಮನೆಯಿಲ್ಲದ, ಕೂಲಿ ಮಾಡಿ ಬದುಕುವ ಈ ಜನರು ಕೂಲಿ ಸಿಗದಿದ್ದಾಗ ಇಟ್ಟಿಗೆ ಫ್ಯಾಕ್ಟರಿ, ರೇಷ್ಮೆ ಗೂಡುಗಳಲ್ಲಿ ಇಂದಿಗೂ ಜೀತ ಮಾಡುತ್ತಿದ್ದಾರೆ. ಅವರನ್ನು ಪ್ರತ್ಯೇಕವಾಗಿ ಗುರುತಿಸಿ, ಹಕ್ಕುಪತ್ರ ನೀಡಿ ಕನಿಷ್ಠ ಗೌರವಯುತ ಜೀವನ ನಡೆಸುವಂತಾಗಲು ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು ಮುಂದಾಗಬೇಕಿದೆ.

2010ರಲ್ಲಿ ಮಹಾದೇವಮ್ಮ ಎಂಬ ಇರುಳಿಗ ಸಮುದಾಯದ ಮಹಿಳೆ ಮೀಸಲಾತಿ ಕಾರಣಕ್ಕಾಗಿ
ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಉಪಾಧ್ಯಕ್ಷರಾಗಿದ್ದರು. ಆದರೆ ನಂತರ ದಿನಗಳಲ್ಲಿ ಅವರು ಗಾರ್ಮೆಂಟ್ಸ್‌ಗೆ ಹೋಗಿ ಇಂದಿಗೂ ಅಲ್ಲಿ ದುಡಿದು ಬದುಕುತ್ತಿದ್ದಾರೆ. ಇನ್ನು ಉಳಿದ ಇರುಳಿಗರ ಪರಿಸ್ಥಿತಿ ಎಷ್ಟು ಕೆಟ್ಟದಾಗಿರಬೇಕು ಯೋಚಿಸಿ.

ಸಾತನೂರು ವಿಧಾನಸಭಾ ಕ್ಷೇತ್ರ

ಆರಂಭದಲ್ಲಿ ಇಲ್ಲಿ ಎಚ್ ಪುಟ್ಟದಾಸ ಎಂಬುವವರು ಸ್ವಂತತ್ರ ಅಭ್ಯರ್ಥಿಯಾಗಿ ಜಯಗಳಿಸಿ ನಂತರ ಕಾಂಗ್ರೆಸ್ ಸೇರಿ ಮತ್ತೊಮ್ಮೆ ಆಯ್ಕೆಯಾಗಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಹೀಗಿರುವಾಗ 1985ರಲ್ಲಿ ಈ ಕ್ಷೇತ್ರಕ್ಕೆ ಎಚ್.ಡಿ ದೇವೇಗೌಡರ ರಂಗಪ್ರವೇಶವಾಯಿತು. ಜನತಾ ಪಕ್ಷದಿಂದ ದೇವೇಗೌಡರು ಆ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ ಅವರು ವಿರುದ್ಧ 23 ವರ್ಷದ ಯುವಕ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲನಪ್ಪಿದರು. ತದನಂತರ 1989ರಿಂದ 2004ರ ಚುನಾವಣೆಯವರೆಗೂ ಸತತ ನಾಲ್ಕು ಬಾರಿ ಡಿ.ಕೆಶಿ ಜಯಗಳಿಸಿದ್ದಾರೆ.

ಡಿಕೆಶಿ ವಿರುದ್ದ ದೇವೇಗೌಡರ ಕುಟುಂಬ

1999 ರ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಎಚ್.ಡಿ ಕುಮಾರಸ್ವಾಮಿಯವರಿಗೆ ಡಿ.ಕೆ.ಶಿ ಸೋಲಿನ ರುಚಿ ತೋರಿಸಿದ್ದರು. ಆದರೆ 2002 ರಲ್ಲಿ ನಡೆದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಅದೇ ಡಿ.ಕೆ.ಶಿ ದೇವೇಗೌಡರ ವಿರುದ್ದ ಸೋಲನಪ್ಪಿದರು. ಅದನ್ನು ಸವಾಲಾಗಿ ಸ್ವೀಕರಿಸಿ 2004ರ ಲೋಕಸಭಾ ಚುನಾವಣೆಯಲ್ಲಿ ಕನಕಪುರದಿಂದ ಎಚ್.ಡಿ ದೇವೇಗೌಡರ ಎದುರು ತೇಜಸ್ವಿನಿ ಗೌಡ ಎಂಬುವವರನ್ನು ಕಣಕ್ಕಿಳಿಸಿ ಜಯಗಳಿಸುವಂತೆ ಮಾಡಿದ್ದರು.  ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭಾ ಫಲಿತಾಂಶ ಬಂದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಏರ್ಪಟ್ಟಿತು. ಆದರೆ ಡಿ.ಕೆ ಶಿವಕುಮಾರ್‌ರವರಿಗೆ ಯಾವುದೇ ಸಚಿವ ಸ್ಥಾನ ನೀಡಿರಲಿಲ್ಲ! ಹಾಗಾಗಿಯೇ ಡಿ.ಕೆ ಶಿವಕುಮಾರ್ ಅಭದ್ರತೆಯ ಕಾರಣಕ್ಕೂ ಸಹ ಸದ್ಯ ಕನಕಪುರದಲ್ಲಿ ವಿರೋಧಿಗಳಿಲ್ಲದ ಹಾಗೆ ನೋಡಿಕೊಂಡಿದ್ದಾರೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಎಂಟ್ರಿಗೆ ವೇದಿಕೆ ಸಜ್ಜು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...