ಬಹುಜನ ಸಮಾಜ ಪಕ್ಷದಿಂದ (ಬಿಎಸ್ಪಿ) ಅಮಾನತುಗೊಂಡಿರುವ ಲೋಕಸಭಾ ಸಂಸದ ಡ್ಯಾನಿಶ್ ಅಲಿ ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದ್ದು, ಏಕತೆ ಮತ್ತು ನ್ಯಾಯಕ್ಕಾಗಿರುವ ಅತಿದೊಡ್ಡ ಯಾತ್ರೆಯಲ್ಲಿ ಭಾಗವಹಿಸದಿದ್ದರೆ ರಾಜಕಾರಣಿಯಾಗಿ ತಮ್ಮ ಕರ್ತವ್ಯದಲ್ಲಿ ವಿಫಲನಾಗುತ್ತೇನೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ‘ಪಕ್ಷ ವಿರೋಧಿ’ ಚಟುವಟಿಕೆ ಹಿನ್ನೆಲೆ ಬಿಎಸ್ಪಿ ಪಕ್ಷದಿಂದ ಡ್ಯಾನಿಶ್ ಅಲಿ ಅವರನ್ನು ಅಮಾನತುಗೊಳಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್ಪಿಯು, ಆಡಳಿತಾರೂಢ ಮೈತ್ರಿಕೂಟ ಎನ್ಡಿಎ ಮತ್ತು ವಿರೋಧ ಪಕ್ಷವಾದ INDIA ಮೈತ್ರಿಕೂಟದಿಂದ ಅಂತರವನ್ನು ಕಾಯ್ದುಕೊಂಡಿತ್ತು. ಆದರೆ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಡ್ಯಾನಿಶ್ ಅಲಿ ವಿರೋಧ ಪಕ್ಷಗಳ ಜೊತೆ ಸಕ್ರಿಯರಾಗಿದ್ದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಡ್ಯಾನಿಶ್ ಅಲಿ, ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರಲು ನಿರ್ಧರಿಸಿದ್ದೇನೆ. ಇದು ನನಗೆ ಬಹಳ ಮುಖ್ಯವಾದ ಕ್ಷಣವಾಗಿದೆ. ನಾನು ಸಾಕಷ್ಟು ಆತ್ಮಾವಲೋಕನದ ನಂತರ ಇಲ್ಲಿಗೆ ಬಂದಿದ್ದೇನೆ. ನನ್ನ ಮುಂದೆ ಎರಡು ಆಯ್ಕೆಯಿತ್ತು. ಒಂದು ಯಥಾಸ್ಥಿತಿಯನ್ನು ಒಪ್ಪಿಕೊಳ್ಳುವುದು ಅಥವಾ ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಮತ್ತು ಬಡ ವರ್ಗಗಳ ಶೋಷಣೆಯನ್ನು ನಿರ್ಲಕ್ಷಿಸುವುದು. ಎರಡನೆಯದಾಗಿ ದೇಶದಲ್ಲಿರವ ಈ ಭಯ, ದ್ವೇಷ, ಶೋಷಣೆ ಮತ್ತು ಆಳವಾಗುತ್ತಿರುವ ವಿಭಜನೆಯ ವಾತಾವರಣದ ವಿರುದ್ಧ ಸರ್ವಾಂಗೀಣ ಅಭಿಯಾನವನ್ನು ಪ್ರಾರಂಭಿಸುವುದಾಗಿದೆ. ನನ್ನ ಆತ್ಮಸಾಕ್ಷಿಯು ಎರಡನೇ ಆಯ್ಕೆಯನ್ನು ಆಯ್ದುಕೊಳ್ಳಲು ನನ್ನನ್ನು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಆಡಳಿತ ಪಕ್ಷದ ಸದಸ್ಯರು ನನ್ನ ಮತ್ತು ನನ್ನ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದರು. 2023ರ ಸೆಪ್ಟೆಂಬರ್ನಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಸಂಸತ್ತಿನಲ್ಲಿ ಅತ್ಯಂತ ಅವಹೇಳನಕಾರಿ ಮತ್ತು ಇಸ್ಲಾಮೋಫೋಬಿಕ್ ಭಾಷೆಯನ್ನು ಬಳಸಿದಾಗ ಅಲಿ ರಾಷ್ಟ್ರದ ಗಮನ ಸೆಳೆದಿದ್ದರು. ಈ ವಿಷಯವನ್ನು ಸಂಸದೀಯ ಸಮಿತಿ ಮುಂದಿಡಲಾಗಿತ್ತು ಮತ್ತು ಬಿಜೆಪಿ ಸಂಸದರು ಕ್ಷಮೆಯಾಚಿಸಿದ್ದರು. ಈ ಬಗ್ಗೆ ಆರೋಪಿತ ಸಂಸದರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಡ್ಯಾನಿಶ್ ಅಲಿ ಹೇಳಿದ್ದರು.
ನನ್ನನ್ನು ಅವಹೇಳನ ಮಾಡಿದವನಿಗೆ ಶಿಕ್ಷಿಸುವ ಬದಲು ಆಡಳಿತ ಮಂಡಳಿಯು ಅವನಿಗೆ ಬಹುಮಾನ ನೀಡಿದೆ. ನನ್ನ ಮೇಲಿನ ದಾಳಿಯು ದೇಶದಲ್ಲಿ ಭಯ ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುವ ದೊಡ್ಡ ಯೋಜನೆಯ ಭಾಗವಾಗಿದೆ ಎಂದು ನಾನು ಅರಿತುಕೊಂಡೆ ಎಂದು ಅಲಿ ಆರೋಪಿಸಿದ್ದರು. ಆ ಸಂಕಟದ ಸಮಯದಲ್ಲಿ ನನ್ನೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ ಮತ್ತು ನನ್ನ ಮತ್ತು ನನ್ನ ಕುಟುಂಬದ ಪರವಾಗಿ ನಿಂತ ಮೊದಲ ನಾಯಕ ರಾಹುಲ್ ಗಾಂಧಿ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರ ಯಾತ್ರೆಯ ಉದ್ದೇಶವು ಅಂಚಿನಲ್ಲಿರುವವರಿಗೆ ಮತ್ತು ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸುವುದಾಗಿದೆ. ಈ ಯಾತ್ರೆಯು ನಮ್ಮ ದೇಶದ ಜನರನ್ನು ಭಯ, ದ್ವೇಷ, ಶೋಷಣೆ ಮತ್ತು ವಿಭಜನೆಯ ವಿರುದ್ಧ ಒಗ್ಗೂಡಿಸುವ ಒಂದು ಕಾರ್ಯದ ಭಾಗವಾಗಿದೆ. ನಾನು ಈ ಯಾತ್ರೆಯಲ್ಲಿ ಸೇರಲು ನಿರ್ಧರಿಸಿದೆ ಏಕೆಂದರೆ ನಾನು ಏಕತೆ ಮತ್ತು ನ್ಯಾಯಕ್ಕಾಗಿರುವ ಈ ಯಾತ್ರೆಯಲ್ಲಿ ಭಾಗವಹಿಸದಿದ್ದರೆ ರಾಜಕಾರಣಿ ಮತ್ತು ಸಮಾಜ ಸೇವಕನಾಗಿ ನನ್ನ ಕರ್ತವ್ಯ ಪೂರ್ಣಗೊಳಿಸಲು ವಿಫಲನಾಗುತ್ತೇನೆ ಎಂದು ಹೇಳಿದ್ದಾರೆ.
Today, I have decided to join Shri Rahul Gandhi’s Bharat Jodo Nyay Yatra. This is a very important moment for me. I have arrived here after much soul searching. In the atmosphere prevailing in the country, I had two options. 1/7 pic.twitter.com/TKvJv46YSI
— Kunwar Danish Ali (@KDanishAli) January 14, 2024
ಇದನ್ನು ಓದಿ: ‘ಒಬಿಸಿ’ ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್ದೇವ್