Homeಅಂಕಣಗಳುತ್ರಿವಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ವ್ಯಥೆ

ತ್ರಿವಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ವ್ಯಥೆ

- Advertisement -
- Advertisement -

ಡಾ. ಸಾರಾ ಅಬೂಬಕ್ಕರ್ |

ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮರುಮದುವೆಯಾಗುವ ಮುಸ್ಲಿಂ ಮಹಿಳೆಯರ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದು ಕೆಲವು ಪುರುಷರು ಮುಸ್ಲಿಂ ಮಹಿಳೆಯರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇಂತಹ ವಿಷಯಗಳ ಕುರಿತು ಪುರುಷರು ಭಾಷಣ ಮಾಡುವಾಗ ಇಡೀ ಸಮಾಜದ ಮುಸ್ಲಿಂ ಮಹಿಳೆಯರ ಕುರಿತು ಆಳವಾಗಿ ಚಿಂತಿಸಬೇಕಾಗುತ್ತದೆ.
ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಬದುಕಿನಲ್ಲಿ ಯಾವ ಹಕ್ಕುಗಳಿವೆ? ತನ್ನ ಮದುವೆಯಲ್ಲಿಯೇ ಆಕೆಗೆ ಯಾವ ಹಕ್ಕುಗಳೂ ಇಲ್ಲ. ವಿವಾಹ(ನಿಖಾಹ್)ದ ಮುಖ್ಯ ನಿಯಮ ನೆರವೇರುವುದೇ ಈರ್ವರು ಪುರುಷರ ನಡುವೆ ತಾನೇ? ವಧುವಿನ ತಂದೆ ವರನ ಕೈ ಹಿಡಿದು “ನನ್ನ ಮಗಳನ್ನು ಇಂತಿಷ್ಟು ಹಣ ಮೆಹರ್‍ಗಾಗಿ ನಿನಗೆ ನಿಖಾಹ್ ಮಾಡಿ ಕೊಡುತ್ತೇನೆ ಎನ್ನುತ್ತಾನೆ. ಆಗ ವರನಾದವನು “ಅಷ್ಟು ಹಣ ಮೆಹರ್‍ಗೆ ಬದಲಾಗಿ ನಿಮ್ಮ ಮಗಳನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ. ಮದುವೆಯಾಗುತ್ತಿರುವ ವಧುವಿಗೆ ಈ ಯಾವ ವಿಷಯವೂ ಗೊತ್ತೇ ಇರುವುದಿಲ್ಲ. ಹಾಗೆ ಕಟ್ಟಿಕೊಂಡವನು ನಾಲ್ಕು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ “ಈ ಹುಡುಗಿ ನನಗೆ ಬೇಡ” ಎಂದು ತ್ರಿವಳಿ ತಲಾಖ್ ನೀಡಿ ಅವಳನ್ನು ತವರಿಗಟ್ಟಿದ ಉದಾಹರಣೆಗಳು ಬೇಕಾದಷ್ಟಿವೆ. ನಿಖಾಹ್ ಸಂದರ್ಭದಲ್ಲಿ ನೂರಾರು ಜನರ ನಡುವಿನಲ್ಲೇ ನಿಖಾಹ್ ಆಗುತ್ತದೆ. ಆದರೆ ತಲಾಖ್ ನೀಡುವಾಗ ಒಂದಿಬ್ಬರು ಸಾಕ್ಷಿಗಳು ಮಾತ್ರ ಇರುತ್ತಾರೆ.
ನನ್ನ ಸಮೀಪದ ಕುಟುಂಬದಲ್ಲಿ ಹುಡುಗಿಯೊಬ್ಬಳಿಗೆ ಮದುವೆಯಾಯಿತು. ಆ ಹುಡುಗನು ಮೊದಲೊಬ್ಬಳನ್ನು ಮದುವೆಯಾಗಿ ಓರ್ವ ಮಗನೂ ಆದಮೇಲೆ ಆಕೆಗೆ ತಲಾಖ್ ನೀಡಿದ್ದನು. ಆ ಮಗನಿಗೆ ಏಳೆಂಟು ವರ್ಷಗಳಾಗಿವೆ. ಆತನು ಇಂಜಿನಿಯರಾಗಿ ಕೊಲ್ಲಿ ರಾಷ್ಟ್ರದಲ್ಲಿ ಉತ್ತಮ ಉದ್ಯೋಗದಲ್ಲಿದ್ದನು. ನಮ್ಮ ಹುಡುಗಿಗೆ ಪ್ರಾಯ ಮೀರುತ್ತಾ ಬಂದಿರುವುದರಿಂದ ಮೊದಲೊಮ್ಮೆ ಮದುವೆಯಾದರೂ ಪರವಾಗಿಲ್ಲ ಆಕೆಗೆ ತಲಾಖ್ ನೀಡಿಯಾಗಿದೆಯಲ್ಲ ಎಂದು ಹಿರಿಯರೆಲ್ಲರೂ ಮದುವೆ ತೀರ್ಮಾನಿಸಿ ನಿಖಾಹ್ ಮಾಡಿದರು. ಮದುವೆಯಾದ ಮೂರನೇ ದಿನ ಹೆಂಡತಿಯೊಂದಿಗೆ ಅವಳ ತವರಿಗೆ ಬಂದವನು, ಮರುದಿನ ಬೆಳಗ್ಗೆ ತನ್ನ ಮನೆಗೆ ಹೊರಟವನು ಮಧ್ಯಾಹ್ನದ ಹೊತ್ತಿಗೆ ತ್ರಿವಳಿ ತಲಾಖ್ ಕಳುಹಿಸಿದನು! ಇದು ಕೆಲವು ವರ್ಷಗಳ ಹಿಂದಿನ ಘಟನೆ, ಆಕೆಗೆ ಈ ವರೆಗೆ ಬೇರೆ ಮದುವೆಯಾಗಿಲ್ಲ.

ಮಕ್ಕಳಿಲ್ಲದ ಸಂದರ್ಭದಲ್ಲಿ ಇನ್ನೋರ್ವ ಹುಡುಗನನ್ನು ಹುಡುಕಬಹುದಷ್ಟೆ. ಅದು ಅಷ್ಟು ಸುಲಭವಲ್ಲ ಒಂದು ಮದುವೆ ನೆರವೇರಿಸುವಾಗಲೇ ಹೆತ್ತವರು ಅರೆಜೀವವಾಗಿರುತ್ತಾರೆ. ಅವರಿಗೆ ಇನ್ನೂ ಒಂದೆರಡು ಹೆಣ್ಣು ಮಕ್ಕಳೂ ಇದ್ದರೆ ಹೆತ್ತವರ ಪರಿಸ್ಥಿತಿ ಏನಾಗಬಹುದು?
ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ ಕೂಡಾ ವಿಚ್ಛೇದನಗೊಂಡ ಮಗಳಿಗೆ ಇನ್ನೋರ್ವ ವರನನ್ನು ಹುಡುಕುವುದು ಸುಲಭದ ಮಾತೇನೂ ಅಲ್ಲ. ತ್ರಿವಳಿ ತಲಾಖ್‍ನ ನಿಷೇಧದ ಕುರಿತು ಪತ್ರಿಕೆಗಳಲ್ಲೂ ಇತರೆಡೆಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಒಂದು ಘಟನೆ ನಡೆದಿದೆ. ತಂದೆಯೋರ್ವನು ತಮ್ಮ ಮಗಳಿಗೆ ಸಾಕಷ್ಟು ಚಿನ್ನಾಭರಣ, ವರದಕ್ಷಿಣೆ ಮಾತ್ರವಲ್ಲದೆ ಅವಳ ಹೆಸರಿಗೆ ಒಂದು ಸೈಟನ್ನು ನೀಡಿದರು. ಕೆಲವೇ ದಿನಗಳಲ್ಲಿ ಆ ಗಂಡನು ಅವಳು ತಂದ ಎಲ್ಲ ವಸ್ತುಗಳನ್ನೂ ಎತ್ತಿಕೊಂಡು ಹೆಂಡತಿಯನ್ನು ತವರಿಗೆ ಕಳುಹಿಸಿ ತ್ರಿವಳಿ ತಲಾಖ್ ನೀಡಿದನು. ಆಕೆಯಿಂದ ಪಡೆದ ಯಾವ ವಸ್ತುಗಳನ್ನೂ ಹಿಂತಿರುಗಿಸಲಿಲ್ಲ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಇನ್ನು ತನಗೆ ತವರಿನಿಂದ ದೊರೆತ ವಸ್ತುಗಳಿಗಾಗಿ ಆಕೆ ನ್ಯಾಯಾಲಯದಲ್ಲಿ ಹೋರಾಡಬೇಕಾಗಿದೆ.
ಈಗ ಹೇಳಿ, ಮುಸ್ಲಿಂ ಮಹಿಳೆಯರ ಪುನರ್‍ವಿವಾಹದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆಯೇ? ಈಗ ಈ ಪುರುಷರು ಅವಳಿಗೆ ತಂದೆ ನೀಡಿದ ವಸ್ತುಗಳಿಗಾಗಿ ಅವಳು ನ್ಯಾಯಾಲಯದಲ್ಲಿ ಹೋರಾಡಬಹುದಲ್ಲಾ? ಆ ಹಕ್ಕು ಆಕೆಗಿದೆಯಲ್ಲಾ? ಎಂದು ಹೇಳಬಹುದು!
ಒಂದೆರಡು ಮಕ್ಕಳಿದ್ದಾಗಲೂ ತಲಾಖ್ ನೀಡಿ ಹೆಂಡತಿಯನ್ನು ತವರಿಗಟ್ಟುವವರಿದ್ದಾರೆ. ಆದರೆ ಆ ಮಕ್ಕಳ ಹಕ್ಕು ಗಂಡನದಾಗಿರುತ್ತದೆ. ಹೆಂಡತಿಯ ಮೇಲೆ ಗಂಡ ಅತ್ಯಾಚಾರ ಮಾಡಿದರೂ ಮಕ್ಕಳು ಹುಟ್ಟುತ್ತಾರೆ. ಆ ಮಗುವಿಗಾಗಿ ಮತ್ತು ತನ್ನ ಆರೋಗ್ಯಕ್ಕಾಗಿ ಆ ಮಹಿಳೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಕೆಲವೊಮ್ಮೆ ಆ ಗಂಡನು ತಿರುಗಿಯೂ ನೋಡಿರುವುದಿಲ್ಲ. ಆದರೆ ವಿಚ್ಛೇದನದ ಸಂದರ್ಭದಲ್ಲಿ ಮಕ್ಕಳ ಹಕ್ಕಿನ ಅವಕಾಶ ಗಂಡನದೇ ಆಗಿರುತ್ತದೆ. ಎಲ್ಲ ಧಾರ್ಮಿಕ ನಿಯಮಗಳೂ ಎಲ್ಲ ಸಮಾಜಗಳೂ ಮಕ್ಕಳ ಹಕ್ಕುಗಳನ್ನು ಗಂಡಸರಿಗೇ ಒಪ್ಪಿಸಿದೆ. ನಿಯಮಗಳನ್ನು ರೂಪಿಸುವವರು ಪುರುಷರು ತಾನೇ?
ತ್ರಿವಳಿ ತಲಾಖ್ ರದ್ದುಪಡಿಸಿದರೆ ಮಹಿಳೆಯರ ಪುನರ್ವಿವಾಹದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದು ಮುಸ್ಲಿಂ ಪುರುಷರು ಮಹಿಳೆಯರಿಂದಲೂ ಹೇಳಿಸುತ್ತಾರೆ. ಪುರುಷರು ಹೇಳುವುದೆಲ್ಲವನ್ನೂ ಮಹಿಳೆಯರು ಎದುರಾಡದೆ ಒಪ್ಪಿಕೊಳ್ಳುತ್ತಾರೆ. ಕಾಗದದಲ್ಲಿ ಬರೆದು ಮಹಿಳೆಯರ ಮುಂದಿಟ್ಟರೆ ಅವರು ಹೇಳಿದ ಜಾಗದಲ್ಲಿ ಹೆಬ್ಬೆಟ್ಟು ಒತ್ತಲು ಈ ಮಹಿಳೆಯರು ಸಿದ್ಧರಿರುತ್ತಾರೆ!
ಈಗಲೂ ಖುಲಾದ ವಿಷಯದ ಕುರಿತು ಮಹಿಳೆಯರಿಗೆ ತಿಳಿವಳಿಕೆಯೇನೂ ಇಲ್ಲ. ಹೆಂಡತಿಗೂ ಗಂಡನನ್ನು ಖುಲಾ ಮಾಡಿ ವಿಚ್ಛೇದಿಸುವ ಹಕ್ಕು ಇದೆ ಎಂದು ತಮ್ಮ ಮಹಿಳೆಯರನ್ನು ಪುರುಷರು ನಂಬಿಸಿದ್ದಾರೆ. ತಲಾಖ್ ಎಂಬ ಶಬ್ದ ಗಂಡನ ಬಾಯಿಯಿಂದಲೇ ಬರಬೇಕು ಎಂಬುದನ್ನು ನಾನು ಈ ಹಿಂದೆಯೇ ಬರೆದಿದ್ದೇನೆ. ಹಿರಿಯರು ಸೇರಿ ಚರ್ಚೆ ಮಾಡಿ ಆತನಿಂದ ತಲಾಖ್ ಕೊಡಿಸಲು ಪ್ರಯತ್ನಿಸಬಹುದು ಪುರುಷನೊಬ್ಬನು ತಾನು ತಲಾಖ್ ನೀಡಲಾರೆ; ತನಗೆ ಆ ಹೆಂಡತಿ ಬೇಕೇಬೇಕು ಎಂದರೆ ಆತನಿಂದ ತಲಾಖ್ ಪಡೆಯಲು ಸಾಧ್ಯವೇ ಇಲ್ಲ. ಅಬ್ದುಲ್ ರೆಹಮಾನ್ ಪಾಷಾ ಈ ಕುರಿತು ಕಳೆದ ವರ್ಷ ಪತ್ರಿಕೆಯಲ್ಲಿ ಉತ್ತಮ ಲೇಖನ ಬರೆದು ಪ್ರಕಟಿಸಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಬದುಕಿನಲ್ಲಿ ಯಾವ ಹಕ್ಕುಗಳೂ ಇಲ್ಲ. ತಮ್ಮ ನಿಖಾಹ್‍ನಲ್ಲಿಯೇ ಆಕೆ ಪರಕೀಯಳಂತೆ ಇರಬೇಕಾಗುತ್ತದೆ. ತಲಾಖ್ ಆದ ಬಳಿಕ ಆಕೆ ಅದೇ ಗಂಡನನ್ನು ಪುನರ್ವಿವಾಹವಾಗಬೇಕಾದರೆ ಆಕೆ ಬೇರೊಬ್ಬ ಪುರುಷನನ್ನು ನಿಖಾಹ್ ಆಗಿ ಆತನೊಡನೆ ಒಂದು ರಾತ್ರಿಯನ್ನು ಕಳೆಯುವುದು ನಿರ್ಬಂಧವಾಗಿದೆ. ಆದರಿಂದಾಗಿ ಮೊದಲ ಗಂಡನೊಡನೆ ಬಾಳುವ ಹಕ್ಕು ಇಲ್ಲ. ಇತ್ತೀಚೆಗೆ ಈ ಪದ್ಧತಿಯನ್ನು ವಿರೋಧಿಸಿ ಕೆಲವು ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟಿನಲ್ಲಿ ದೂರು ನೀಡಿದ್ದಾರೆ. ಚಿಕ್ಕ ಹೆಣ್ಣುಮಕ್ಕಳಿಗೆ ಆರೇಳು(ಇನ್ನೂ ಚಿಕ್ಕವರಾಗಿರುವಾಗ) ವರ್ಷದ ಪ್ರಾಯದಲ್ಲಿ ಒಂದು ಅತೀ ಕ್ರೂರವಾದ ಶಸ್ತ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಆಕೆಗೆ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ರೀತಿಯ ಸುಖ ಪಡೆಯಲಾಗದಂತೆ ಆಕೆಯ ಮರ್ಮಸ್ಥಾನದಿಂದ ಆಕೆಯ ಒಂದು ಅಂಗವನ್ನೇ ತೀರಾ ಅನಾಗರಿಕ ರೀತಿಯಲ್ಲಿ ಬ್ಲೇಡಿನಿಂದಲೋ ಗಾಜಿನ ಚೂರಿನಿಂದಲೋ ಕತ್ತರಿಸಿ ತೆಗೆಯಲಾಗುತ್ತದೆ. ಈ ಹೆಣ್ಣು ಮಕ್ಕಳು ನೋವಿನಿಂದ ಜೋರಾಗಿ ಕಿರುಚುತ್ತಾರೆ. ಗಂಭೀರವಾಗಿ ರಕ್ತಸ್ರಾವವಾಗಿ ಕೆಲವೊಮ್ಮೆ ಮಕ್ಕಳು ಸಾವನ್ನಪ್ಪುವುದೂ ಇದೆ. ‘ಫಿಮೇಲ್ ಜೆನಿಟಲ್ ಮ್ಯೂಟಿಲೇಷನ್’ ಎಂಬುದು ಈ ಶಸ್ತ್ರಕ್ರಿಯೆಯ ಹೆಸರಾಗಿದೆ. ಹೆಣ್ಣನ್ನು ಗಂಡಿನ ಸುಖಕ್ಕಾಗಿಯಷ್ಟೇ ದೇವರು ಸೃಷ್ಟಿಸಿದ್ದಾನೆ ಎಂಬುದು ಈ ಪುರುಷರ ಮನೋಭಾವವಾಗಿದೆ. ಈ ಶಸ್ತ್ರಕ್ರಿಯೆಯಿಂದಾಗಿ ಈ ಹೆಣ್ಣುಮಕ್ಕಳು ಹೆರಿಗೆಯಲ್ಲಿ ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆಫ್ರಿಕಾ ಖಂಡದ ಉತ್ತರ ಭಾಗದ ಹಲವು ದೇಶಗಳಲ್ಲಿ ಈ ಶಸ್ತ್ರಕ್ರಿಯೆ ತೀರಾ ಸಾಮಾನ್ಯ ಎಂಬಂತಾಗಿದೆ. ಕೊಲ್ಲಿ ರಾಷ್ಟ್ರಗಳ ಹಲವೆಡೆಗಳಲ್ಲೂ ಈ ಪದ್ದತಿ ಇದೆ. ಈ ಪದ್ದತಿ ಈ ಭಾಗದ ಮುಸ್ಲಿಮರಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆಯೆಂದರೆ ಅಮೇರಿಕಾದಲ್ಲಿ ವಾಸಿಸುತ್ತಿರುವ ಕೆಲವರು ಈ ಶಸ್ತ್ರಕ್ರಿಯೆಯನ್ನು ವೈದ್ಯರ ನೆರವಿನಿಂದ ತಮ್ಮ ಮಕ್ಕಳ ಮೇಲೆ ಕೈಗೊಳ್ಳುತ್ತಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ವಿದೇಶದ ಮಹಿಳೆಯರು ಈ ಪದ್ದತಿಯನ್ನು ರದ್ದುಪಡಿಸಬೇಕೆಂದು ಹೋರಾಡುತ್ತಿದ್ದಾರೆ. ನಮ್ಮ ದೇಶದ ಶಿಯಾ ಮುಸ್ಲಿಂ ಸಮುದಾಯದಲ್ಲಿ ಕೂಡಾ ಈ ಶಸ್ತ್ರಕ್ರಿಯೆ ನೆರವೇರಿಸಲಾಗುತ್ತಿದೆಯೆಂದು ಕೇಳಿದ್ದೇನೆ. ಎಫ್.ಎಂ.ಜಿ (ಫಿಮೇಲ್ ಜೆನಿಟಲ್ ಮ್ಯೂಟಿಲೇಶನ್) ಎಂದು ಈ ಶಸ್ತ್ರಕ್ರಿಯೆಯನ್ನು ಕರೆಯಲಾಗುತ್ತದೆ.
ಮಹಿಳೆಯರನ್ನು ದೈಹಿಕವಾಗಿ, ಮಾನಸಿಕವಾಗಿ ಕೂಡಾ ಎಷ್ಟೊಂದು ನೋವಿಗೊಳಪಡಿಸಲು ಪುರುಷರು ಸಿದ್ಧರಾಗುತ್ತಾರೆ ಎಂಬ ವಿವರಣೆ ನೀಡಬೇಕಾಗಿಲ್ಲ. ಇಂತಹ ಎಲ್ಲ ನೋವುಗಳನ್ನೂ ಮಹಿಳೆಯರಿಗೆ ಧರ್ಮದ ಹೆಸರಿನಲ್ಲಿ ನೀಡಲಾಗುತ್ತದೆ. ಅಂತಹ ಹೊಸ ಹೊಸ ಪ್ರಯೋಗಗಳನ್ನೂ ಕಂಡುಹಿಡಿಯಲಾಗುತ್ತದೆ.
ಎಲ್ಲಾ ವಿವಾಹಗಳೂ ನೊಂದಣಿಯಾಗಬೇಕು; ವಿಚ್ಛೇದನವು ನ್ಯಾಯಾಲಯದಲ್ಲೇ ಆಗಬೇಕು. ನ್ಯಾಯಾಲಯವು ವಿವಾಹ ವಿಚ್ಛೇದನ ತೀರ್ಪನ್ನು ಒಂದು ವರ್ಷದಲ್ಲಿ ನೀಡುವಂತಾಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...