ತಿರುನಲ್ವೇಲಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಸಂತ್ರಸ್ತರು ನೀಡಿದ ದೂರಿನ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳದೆ ಸಂತ್ರಸ್ತರ ಜೊತೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಸಮೂಗ ಸಮತುವ ಪದೈ ಸಂಸ್ಥಾಪಕ ಪಿ ಶಿವಕಾಮಿ ಅವರು ಆರೋಪಿಸಿದ್ದಾರೆ.
ತಿರುನಲ್ವೇಲಿ ಬಳಿಯ ನಂಗುನೇರಿಯಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ದಲಿತ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ನಂಗುನೇರಿ ಜಾತಿ ದೌರ್ಜನ್ಯದ ಸಂತ್ರಸ್ತರನ್ನು ಭೇಟಿ ಮಾಡಲು ಮತ್ತು ನ್ಯಾಯಮೂರ್ತಿ ಕೆ ಚಂದ್ರು ನೇತೃತ್ವದ ಆಯೋಗಕ್ಕೆ ತಮ್ಮ ಶಿಫಾರಸುಗಳನ್ನು ನೀಡಲು ಪಿ. ಶಿವಕಾಮಿ ಅವರು ಭೇಟಿ ನೀಡಿದ್ದರು.
ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ- ಪಂಗಡದ ದೂರುದಾರರಿಗೆ ತಮಗೆ ಬೇಕಾದಂತೆ ದೂರುಗಳನ್ನು ಬರೆಯುವಂತೆ ಜಿಲ್ಲಾ ಪೊಲೀಸರು ಒತ್ತಾಯಿಸುತ್ತಿದ್ದಾರೆ. ದೂರಿನಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ಗಳನ್ನು ಅಳವಡಿಸುವುದನ್ನು ತಪ್ಪಿಸಲು ಪೊಲೀಸರು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದೆ ಎಂದ ಪಿ. ಶಿವಕಾಮಿ, ತಾತ್ಕಾಲಿಕ ವಿದ್ಯುತ್ ಕೆಲಸಗಾರ ಎಸಕ್ಕಿಮುತ್ತು ಅವರು ಇತ್ತೀಚೆಗೆ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದಾಗ ಕೆಲವರು ಉದ್ದೇಶಪೂರ್ವಕವಾಗಿ ಹತ್ಯೆಗೈದಿದ್ದರು. ಆದರೆ ಪೊಲೀಸರು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು. ಬದಲಿಗೆ ಪ್ರಕರಣವನ್ನು ಅಪಘಾತವೆಂದು ದಾಖಲಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಇದನ್ನು ಓದಿ: ಮಣಿಪುರ: 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ