ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಶನಿವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಡಾಟಾ ಕಾರ್ಡ್ನೊಂದಿಗೆ ಉಚಿತ ಕಂಪ್ಯೂಟರ್ ಟ್ಯಾಬ್ಲೆಟ್ಗಳು ಮತ್ತು ರಾಜ್ಯದಲ್ಲಿ 75% ದಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಒದಗಿಸುವ ಕಾನೂನು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಪ್ರಮುಖ ಹಿಂದೂ ದೇವಾಲಯಗಳಿಗೆ ತೀರ್ಥಯಾತ್ರೆಗೆ ಹೋಗುವ ಒಂದು ಲಕ್ಷ ಜನರಿಗೆ 25 ಸಾವಿರ ರೂ.ಗಳ ಆರ್ಥಿಕ ನೆರವು, ಹೆರಿಗೆ ರಜೆ ಅವಧಿ ಮತ್ತು ನೆರವು ಹೆಚ್ಚಳ, ಇಂಧನ ಬೆಲೆಯಲ್ಲಿ ಕಡಿತ ಮತ್ತು ನೀಟ್ ಅನ್ನು ನಿಷೇಧಿಸುವ ಭರವಸೆಯನ್ನು ಡಿಎಂಕೆ ನೀಡಿದೆ.
ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪಕ್ಷದ ನಾಯಕ ಸ್ಟಾಲಿನ್, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಮೊದಲ ತಲೆಮಾರಿನ ಪದವೀಧರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು, ಖಾಸಗಿ ವಲಯದಲ್ಲಿ ಮೀಸಲಾತಿ ನೀಡಲಾಗುವುದು ಮತ್ತು ಸಣ್ಣ ರೈತರಿಗೆ ಸಬ್ಸಿಡಿ ನೀಡುವ ಭರವಸೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 75% ಖಾಸಗಿ ವಲಯದ ಉದ್ಯೋಗ ಸ್ಥಳೀಯರಿಗೆ: ಜಾರ್ಖಂಡ್ ಸಚಿವ ಸಂಪುಟ ನಿರ್ಧಾರ
ಪಕ್ಷದ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಉಚಿತ ಡಾಟಾ ಕಾರ್ಡ್ ಹೊಂದಿರುವ ಟ್ಯಾಬ್ಲೇಟ್ಗಳನ್ನು ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುವುದು” ಎಂದು ಹೇಳಿದ್ದಾರೆ.
ತಮ್ಮ ಪಕ್ಷವನ್ನು ಗೆಲ್ಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ಲೀಟರ್ಗೆ 5 ಮತ್ತು 4 ರೂ.ಗಳಷ್ಟು ಕಡಿಮೆ ಮಾಡುತ್ತೇವೆ ಎಂದು ತೆರಿಗೆ ಕಡಿತದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ ಎಲ್ಪಿಜಿ ಸಿಲಿಂಡರ್ಗೆ 100 ರೂ.ಗಳ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದ್ದಾರೆ.
2016 ರಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆಗಾಗಿ ರಚಿಸಲಾದ ಸಮಿತಿ (ಅರ್ಮುಗಸಾಮಿ ಸಮಿತಿ) ವರದಿಯನ್ನು ತ್ವರಿತವಾಗಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಡಾ. ಹಫೀಜ್ ಕರ್ನಾಟಕಿ: ಸೌಹಾರ್ದತೆಯ ಸಂತನಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಇದಲ್ಲದೆ, ಡಿಎಂಕೆ ಅಧಿಕಾರಕ್ಕೆ ಬಂದರೆ ಕೈಗಾರಿಕೆಗಳಲ್ಲಿನ 75% ದಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ಜಾರಿಗೆ ಬರಲಿದೆ ಎಂದರು.
ಹಿಂದೂ ದೇವಾಲಯಗಳ ನವೀಕರಣ ಮತ್ತು ಪವಿತ್ರೀಕರಣಕ್ಕೆ 1000 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಭರವಸೆ ನೀಡಿದ ಸ್ಟಾಲಿನ್, ಚರ್ಚುಗಳು ಮತ್ತು ಮಸೀದಿಗಳಿಗೆ 200 ಕೋಟಿ ರೂ. ನೀಡುತ್ತೇವೆ ಎಂದು ಹೇಳಿದ್ದಾರೆ.
ಉತ್ತಮ ನೀರು ನಿರ್ವಹಣೆ, ಶುದ್ಧ ಕುಡಿಯುವ ನೀರು ಸರಬರಾಜು, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರ ಮೀಸಲಾತಿ ಹೆಚ್ಚಳ, ವೃದ್ಧಾಪ್ಯ ಪಿಂಚಣಿ ಹೆಚ್ಚಳ ಮತ್ತು ಹಸಿವಿನ ನಿರ್ಮೂಲನೆಯ ಭಾಗವಾಗಿ ‘ಕಲೈನಾರ್ ಉನವಾಗಂ’ ಸ್ಥಾಪಿಸುವುದಾಗಿ ಡಿಎಂಕೆ ನೀಡಿದ ಇತರ ಭರವಸೆಗಳಾಗಿದೆ.
ಇದನ್ನೂ ಓದಿ: 75% ಖಾಸಗಿ ವಲಯದ ಉದ್ಯೋಗ ಸ್ಥಳೀಯರಿಗೆ: ಜಾರ್ಖಂಡ್ ಸಚಿವ ಸಂಪುಟ ನಿರ್ಧಾರ