ತಮಿಳುನಾಡಿನಲ್ಲಿ ಭಾರೀ ಸುದ್ದು ಮಾಡಿದ್ದ ಅಂಬಾಸಮುದ್ರಂ ಕಸ್ಟಡಿ ಹಿಂಸೆ ಪ್ರಕರಣದ ಆರೋಪಿತ ಐಪಿಎಸ್ ಅಧಿಕಾರಿ ಬಲ್ವೀರ್ ಸಿಂಗ್ ಅವರ ಅಮಾನತು ಆದೇಶವನ್ನು ತಮಿಳುನಾಡು ಸರ್ಕಾರ ಹಿಂಪಡೆದಿದೆ.
2023ರಲ್ಲಿಈ ಕ್ರೂರ ಚಿತ್ರಹಿಂಸೆ ಬೆಳಕಿಗೆ ಬಂದಿತ್ತು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ವಿಚಾರವಾಗಿ ಆರು ಮಂದಿಯನ್ನು ಅಂಬಾಸಮುದ್ರಂ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದ ವೇಳೆ ಎಎಸ್ಪಿ ಬಲ್ವೀರ್ ಸಿಂಗ್ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಮೂವರು ಆರೋಪಿಗಳು ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಚೆಲ್ಲಪ್ಪ ಎಂಬಾತ, ತನ್ನ ಸಹೋದರನ ಮೇಲೆ ಪೊಲೀಸ್ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಎದೆಗೆ ಒದ್ದಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸ್ ಅಧಿಕಾರಿಗಳು ತಮ್ಮ ಬಟ್ಟೆ ಬಿಚ್ಚಿಸಿ ಲಾಠಿಯಿಂದ ಹಲ್ಲೆ ಮಾಡಿದ್ದಾರೆ, ಇದಲ್ಲದೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿತ್ರಹಿಂಸೆಯ ಬಗ್ಗೆ ಬಾಯ್ಬಿಡದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.
ಎಸ್ಪಿ ಬಲ್ವೀರ್ ಆರೋಪಿಗಳನ್ನು ಕೋಣೆಗೆ ಕರೆದೊಯ್ದು ಕಟ್ಟಿಂಗ್ ಪಿಲ್ಲರ್ನಿಂದ ಅವರ ಹಲ್ಲುಗಳನ್ನು ಕಿತ್ತುಹಾಕಿದ್ದು, ಈ ವೇಳೆ ಇತರ ಪೊಲೀಸರು ಅವರ ಕಾಲು ಮತ್ತು ತೋಳುಗಳನ್ನು ಹಿಡಿದಿದ್ದರು ಇದಲ್ಲದೆ ಬಂಧನಕ್ಕೊಳಗಾಗಿದ್ದ ಇಬ್ಬರ ವೃಷಣಗಳನ್ನು ಕೂಡ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ಶೋಷಿತ ಸಮುದಾಯಕ್ಕೆ ಸೇರಿದ್ದ ಮೂವರು ಆರೋಪಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಕೋಲಾಹಲಕ್ಕೆ ಕಾರಣವಾಗಿತ್ತು. ಬಲ್ವೀರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿತ್ತು ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕಲ್ಲಿಡೈಕುರಿಚಿ, ವಿಕ್ರಮಸಿಂಗಪುರಂ ಮತ್ತು ಅಂಬಾಸಮುದ್ರಂ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 15 ಮಂದಿಗೆ ಬಲ್ವೀರ್ ಸಿಂಗ್ ಚಿತ್ರಹಿಂಸೆ ನೀಡಿದ್ದರು ಎಂದು ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಶಂಕರ್ ಜಿವಾಲ್ ಅವರಿಗೆ ಮಾ.1, 2024ರಂದು ಹಾಜರಾಗುವಂತೆ ಸಮನ್ಸ್ ನೀಡಿದ ಕೆಲವು ದಿನಗಳ ನಂತರ ಬಲ್ವೀರ್ ಅವರ ಅಮಾನತು ಹಿಂಪಡೆಯಲಾಗಿದೆ. ಡಿಜಿಪಿಗೆ ಕಳುಹಿಸಿದ ಮೇಲ್ನಲ್ಲಿ, ಎನ್ಎಚ್ಆರ್ಸಿ ಬಲ್ವೀರ್ ಸಿಂಗ್ ಕಸ್ಟಡಿಯಲ್ಲಿ ಅಪ್ರಾಪ್ತರನ್ನು ಹಿಂಸಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗುವಂತೆ ಕೋರಿತ್ತು.
ಕಳೆದ ವರ್ಷ ಏಪ್ರಿಲ್ನಲ್ಲಿ ಬಲ್ವೀರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 (ಆಯುಧಗಳಿಂದ ಗಾಯಗೊಳಿಸುವುದು), 326 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಂಭೀರ ಗಾಯ) ಮತ್ತು 506/1 ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಹಿಂತೆಗೆದುಕೊಳ್ಳಲಾಗಿತ್ತು. ಎಫ್ಐಆರ್ ದಾಖಲಾದ ಮೂರು ದಿನಗಳ ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಇದನ್ನು ಓದಿ: 2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ: ವರದಿ