ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಅಸ್ಸಾಂನಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಅಸ್ಸಾಂನ ಆಡಳಿತರೂಢ ಬಿಜೆಪಿ ಸರ್ಕಾರ ಯಾತ್ರೆಗೆ ತಡೆಯೊಡ್ಡಿರುವ ಆರೋಪ ಕೇಳಿ ಬಂದಿದೆ.
ಗುವಾಹಟಿಯಲ್ಲಿ ಇಂದು ಯಾತ್ರೆಗಾಗಿ ಸಿದ್ದಪಡಿಸಲಾದ ವಿಶೇಷ ಬಸ್ ಮೇಲೆ ನಿಂತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಮತ್ತು ಅಸ್ಸಾಂ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.
“ನಾನು ನಿಮ್ಮ ವಿಶ್ವವಿದ್ಯಾನಿಲಯಕ್ಕೆ ಬಂದು ನಿಮ್ಮೊಂದಿಗೆ ಮಾತನಾಡಲು ಬಯಸಿದ್ದೇನೆ. ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಾಧ್ಯವಾದ ರೀತಿಯಲ್ಲಿ ನಿಮಗೆ ಸಹಾಯ ಮಾಡಲು ಉದ್ದೆಶಿಸಿದ್ದೇನೆ. ಆದರೆ, ಕೇಂದ್ರ ಗೃಹ ಸಚಿವಾಲಯ ಅಸ್ಸಾಂ ಸಿಎಂ ಮತ್ತು ಅವರ ಕಚೇರಿಗೆ ಕರೆ ಮಾಡಿ ನಾನು ನಿಮ್ಮೊಂದಿಗೆ ಮಾತನಾಡಲು ಅವಕಾಶ ನೀಡದಂತೆ ಸೂಚಿಸಿದೆ. ಇಲ್ಲಿ ರಾಹುಲ್ ಗಾಂಧಿ ಬಂದರೂ, ಬಾರದಿದ್ದರೂ ಅದು ಮುಖ್ಯ ವಿಷಯವಲ್ಲ. ಆದರೆ, ನಿಮಗೆ ಯಾರ ಮಾತನ್ನು ಬೇಕಾದರೂ ಕೇಳುವ ಸ್ವಾತಂತ್ರ್ಯ ಇದೆ. ಅದನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳುತ್ತಿದೆ. ಇದು ಅಸ್ಸಾಂನಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ವಿಶ್ವವಿದ್ಯಾಲಯ, ಕಾಲೇಜು ಮತ್ತು ಶಾಲೆಗಳಲ್ಲಿ ನಡೆಯುತ್ತಿದೆ” ಎಂದು ಹೇಳಿದ್ದಾರೆ.
#WATCH | Guwahati, Assam: During Bharat Jodo Nyay Yatra, Congress MP Rahul Gandhi says "I wanted to come to your university and talk to you, understand what you are facing and try and see in my own little way if I could have helped you. The Home Ministry of India called up the CM… pic.twitter.com/Jc4uAlOXjx
— ANI (@ANI) January 23, 2024
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಗುವಾಹಟಿಯ ಒಳ ರಸ್ತೆಗಳ ಮೂಲಕ ತೆರಳಲು ಅನುಮತಿ ನಿರಾಕರಿಸಿಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಯಾತ್ರೆಯು ಇಂದು ಮೇಘಾಲಯದ ನಂತರ ಅಸ್ಸಾಂಗೆ ಮರುಪ್ರವೇಶಿಸಿದೆ.
ಗುವಾಹಟಿಯ ಪ್ರಮುಖ ರಸ್ತೆಗಳ ಮೂಲಕ ಯಾತ್ರೆ ಚಲಿಸಲು ಅವಕಾಶ ನೀಡುವುದರಿಂದ ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ವಾದಿಸಿ, ರಾಜ್ಯ ಆಡಳಿತವು ಯಾತ್ರೆಯು ಕೆಳ ಅಸ್ಸಾಂ ಕಡೆಗೆ ಚಲಿಸುವ ಮೂಲಕ, ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದೆ. ನಗರದ ಸುತ್ತ ವರ್ತುಲ ರಸ್ತೆಯಂತೆ ಕಾರ್ಯನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಯಾತ್ರೆ ಕೈಗೊಳ್ಳುವಂತೆ ಕೋರಲಾಗಿದೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿ ಅವರು ನಿನ್ನೆ ಗುವಾಹಟಿ ಬಳಿಯ ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಆದರೆ, ಅದಕ್ಕೆ ದೇವಾಲಯದ ಆಡಳಿತ ಮಂಡಳಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನೆಪ ಹೇಳಿ ಅವಕಾಶ ನಿರಾಕರಿಸಿತ್ತು.
ಇದನ್ನೂ ಓದಿ : ಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಅಸ್ಸಾಂ ಸರ್ಕಾರ