ಸಾರ್ವಜನಿಕ ಸ್ಥಳದಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸುತ್ತಿರುವ ಶಿವಸೇನೆಯ ಉದ್ದವ್ ಠಾಕ್ರೆ ಬಣದ (ಯುಬಿಟಿ) ಶಾಸಕ ರವೀಂದ್ರ ವೇಕರ್ ಅವರು ಭಾನುವಾರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣ ಸೇರಿದ್ದಾರೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಆಪ್ತರಾಗಿದ್ದ ರವೀಂದ್ರ, ಮುಂಬೈನ ಜೋಗೇಶ್ವರಿ ಪೂರ್ವ ಕ್ಷೇತ್ರದ ಶಾಸಕ. ಮುಂಬೈ ವಾಯುವ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ವಿಚಾರವಾಗಿ ಒಂದು ದಿನದ ಹಿಂದಷ್ಟೇ ನಡೆದ ಸಭೆಯಲ್ಲಿ ಠಾಕ್ರೆ ಅವರೊಂದಿಗೆ ಪಾಲ್ಗೊಂಡಿದ್ದರು.
ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ‘ವರ್ಷ’ದಲ್ಲಿ ಶಿಂದೆ ನೇತೃತ್ವದ ಬಣಕ್ಕೆ ವೇಕರ್ ಸೇರ್ಪಡೆಯಾಗಿದ್ದಾರೆ.
ದಿಢೀರ್ ಪಕ್ಷಾಂತರದ ಬಗ್ಗೆ ಮಾತನಾಡಿರುವ ರವೀಂದ್ರ ವೇಕರ್, “ಶಿವಸೇನೆಯೊಂದಿಗೆ 50 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶಿಂದೆ ಬಣ ಸೇರಿದ್ದೇನೆ. ಏಕನಾಥ್ ಶಿಂದೆ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ನನ್ನ ಜನರನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ರವೀಂದ್ರ ವೇಕರ್ ಅವರನ್ನು ತಮ್ಮ ಬಣಕ್ಕೆ ಸ್ವಾಗತಿಸಿರುವ ಏಕನಾಥ್ ಶಿಂಧೆ, “ವೇಕರ್ ಅವರು ದಿವಂಗತ ಬಾಳ ಸಾಹೇಬ್ ಠಾಕ್ರೆಯವರ ಆದರ್ಶಗಳಿಂದ ಪ್ರೇರಿತರಾದ ಶಿವಸೇನೆಗೆ ಸೇರಿದ್ದಾರೆ” ಎಂದು ಹೇಳಿದ್ದಾರೆ.
ನಾಲ್ಕು ಬಾರಿ ಕಾರ್ಪೊರೇಟರ್ ಆಗಿರುವ ವೇಕರ್, ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಮುಂಬೈನ ಜೋಗೇಶ್ವರಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗದ್ದಾರೆ.
ಗಮನಾರ್ಹವಾಗಿ, ಜೋಗೇಶ್ವರಿ-ವಿಕ್ರೋಲಿ ಲಿಂಕ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು ಜನವರಿ ಮತ್ತು ಜುಲೈ 2021ರ ನಡುವೆ ಬಿಎಂಸಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ವೇಕರ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.
ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿಡಲಾಗಿದ್ದ ಜಾಗದವನ್ನು ದುರುಪಯೋಗಪಡಿಸಿಕೊಂಡು ಹೋಟೆಲ್ ನಿರ್ಮಿಸುವ ಮೂಲಕ ಕೋಟ್ಯಾಂತರ ರೂಪಾಯಿ ಲಾಭ ಗಳಿಸಿದ ಆರೋಪ ವೇಕರ್ ಮೇಲಿದೆ. ಜನವರಿಯಲ್ಲಿ ಇಡಿ ವೇಕರ್ ಅವರ ಪಾಲುದಾರರು ಮತ್ತು ಇತರ ಸಂಬಂಧಿತ ವ್ಯಕ್ತಿಗಳ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ : ಹೊಸ ಚುನಾವಣಾ ಆಯುಕ್ತರ ನೇಮಕ: ಅನುಮಾನಗಳಿಗೆ ಕಾರಣವಾದ ಮೋದಿ ಸರ್ಕಾರದ ನಡೆ