ನಾಸ್ತಿಕ ಸಂಘಟನೆ ”ಭಾರತ ನಾಸ್ತಿಕ ಸಮಾಜ”ದ ಬೈರಿ ನರೇಶ್, ಅವರ ಮೇಲೆ ಹಿಂದು ಸಂಘಟನೆಯ ಗುಂಪೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಜಾತಿ ವಿರೋಧಿ ಹೋರಾಟಗಾರ ಮತ್ತು ನಾಸ್ತಿಕ ಸಂಘಟನೆಯ ತೆಲಂಗಾಣ ಘಟಕದ ಮುಖ್ಯಸ್ಥ ನರೇಶ್ ಅವರು ಹಿಂದೂ ದೇವರಾದ ಅಯಪ್ಪನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಸದ್ಯ ನರೇಶ್ ಜಾಮೀನಿನ ಮೇಲೆ ಹೊರಗಿದ್ದಾರೆ.
ಅವರು ಹನಮಕೊಂಡ ಜಿಲ್ಲೆಯ ಗೋಪಾಲಪುರಂನಲ್ಲಿರುವ ಕಾನೂನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಬಹುದು ಎನ್ನುವ ಬಗ್ಗೆ ನನಗೆ ಮಾಹಿತಿ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
”ನನ್ನ ಹಿತೈಷಿಯೊಬ್ಬರು ನನ್ನನ್ನು ಸಂಪರ್ಕಿಸಿದರು ಮತ್ತು ಹೊರಗೆ ಕೆಲವು ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಇದ್ದಾರೆ ಎಂದು ಹೇಳಿದರು” ಎಂದು ನರೇಶ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
”ನನ್ನ ಮೇಲೆ ದಾಳಿ ನಡೆಯುತ್ತದೆ ಎಂಬುದು ಗೊತ್ತಾದಾಗ, ನಾನು ಭಯದಿಂದ ಪೊಲೀಸರನ್ನು ಸಂಪರ್ಕಿಸಿದೆ. ಪೊಲೀಸರು ನನಗೆ ರಕ್ಷಣೆ ನೀಡಿದರು ಮತ್ತು ಸುರಕ್ಷಿತವಾಗಿ ಅವರು ನನ್ನನ್ನು ಅಲ್ಲಿಂದ ಕರೆದೊಯ್ಯಲು ವಾಹನದ ವ್ಯವಸ್ಥೆ ಕೂಡ ಮಾಡಿದರು. ಆದರೆ ಮಾರ್ಗಮಧ್ಯೆ, ದಾಳಿಕೋರರು ಪೊಲೀಸ್ ವಾಹನವನ್ನು ನಿಲ್ಲಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಛತ್ತೀಸ್ಗಢ: ಮದುವೆಗೆ ಒಪ್ಪದ ಅಪ್ರಾಪ್ತೆಯ ಕೂದಲಿಡಿದು ಎಳೆದಾಡಿ, ನಡುರಸ್ತೆಯಲ್ಲಿ ಹಲ್ಲೆ
ದಾಳಿ ನಡೆಸಿರುವ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂದ್ದು, ಪೊಲೀಸರು ಅವರನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರೂ ಸಹ ಆ ಗುಂಪು ಪೊಲೀಸ್ ವ್ಯಾನ್ನ ಒಳಗೆ ನುಗ್ಗಿ ನರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ಎಲ್ಲಾ ದಾಳಿಕೋರರನ್ನು ಬಂಧಿಸಲಾಗಿದೆ ಎಂದು ವಾರಂಗಲ್ ಪೊಲೀಸ್ ಕಮಿಷನರ್ ಎವಿ ರಂಗನಾಥ್ ಎನ್ಡಿಟಿವಿಗೆ ತಿಳಿಸಿದ್ದಾರೆ.
Condemn the Hindutva goons' attack on the atheist activist Bairi Naresh today in Hanmakonda town Telangana. Police can be seen dispersing outside goons but one guy appears to be repeatedly hitting Naresh in the vehicle. Police should have stopped the guy inside the vehicle. pic.twitter.com/RbRsKrcDGj
— Dr.B.Karthik Navayan (@Navayan) February 27, 2023
ಒಬಿಸಿ ಸಮುದಾಯಕ್ಕೆ ಸೇರಿದ ನರೇಶ್ ಅವರು, ಡಿಸೆಂಬರ್ನಲ್ಲಿ ವಿಕಾರಾಬಾದ್ ಜಿಲ್ಲೆಯ ಸಾರ್ವಜನಿಕ ಸಭೆಯೊಂದರಲ್ಲಿ ಮಾಡಿದ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ನಂತರ ಆ ಭಾಷಣದಿಂದ ಹಿಂದುತ್ವವಾದಿಗಳು ಉದ್ವಿಗ್ನಗೊಳ್ಳುವಂತೆ ಮಾಡಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ನರೇಶ್ ತಮ್ಮ ಭಾಷಣದಲ್ಲಿ ಅಯ್ಯಪ್ಪನ ಜನ್ಮವನ್ನು ಲೈಂಗಿಕವಾಗಿ ಅಸ್ಪಷ್ಟ ರೀತಿಯಲ್ಲಿ ವಿವರಿಸಿದ್ದರು. ಆಗ ನರೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಜ್ಯದ ಹಲವು ಕಡೆ ಹಿಂದೂ ಭಕ್ತರು ಪ್ರತಿಭಟನೆ ನಡೆಸಿದರು. ಡಿಸೆಂಬರ್ 31 ರಂದು, ಪೊಲೀಸರು ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ನಂಬಿಕೆಗಳನ್ನು ಅತಿರೇಕಗೊಳಿಸುವುದು ಮತ್ತು ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿರು. ನಂತರ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರು ಜಾಮೀನಿನದ ಮೇಲೆ ಹೊರಬಂದಿದ್ದಾರೆ.