ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಕೊಲೆ ಬೆದರಿಕೆ ಹಾಕಿದ್ದು ಕೇವಲ ಖರ್ಗೆಯವರ ಕುಟುಂಬಕ್ಕೆ ಮಾತ್ರವಲ್ಲ. ಅದು ಇಡೀ ನಾಡಿಗೇ ಹಾಕಿದ ಬೆದರಿಕೆಯಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಕಳವಳ ವ್ಯಕ್ತಪಡಿಸಿದರು.
ಭಾನುವಾರ ತಲಕಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇತ್ತೀಚೆಗೆ ನನ್ನ ಗೆಳೆಯ ಶ್ರೀನಿವಾಸ್ ಪ್ರಸಾದ್ರ ಒಂದು ಹೇಳಿಕೆ ನನಗೆ ಅತೀವ ನೋವು ಉಂಟು ಮಾಡಿತು. ಶ್ರೀನಿವಾಸ್ ಪ್ರಸಾದ್ ‘ಮಲ್ಲಿಕಾರ್ಜುನ ಖರ್ಗೆಯವರು ಅವಕಾಶವಾದಿ’ ಎಂದು ಹೇಳಿದ ಮಾತಿಗೆ ನಾನು ನೊಂದುಕೊಂಡೆ” ಎಂದರು.
ನಾನು ಬಲ್ಲಂತೆ, ಮಲ್ಲಿಕಾರ್ಜುನ ಖರ್ಗೆಯವರದು ಹಿತಮಿತ ವ್ಯಕ್ತಿತ್ವ. ಖರ್ಗೆಯವರು ತಾವು ನಂಬಿದ ಸಿದ್ಧಾಂತ, ಪಕ್ಷಕ್ಕೆ ಪರಮ ನಿಷ್ಠರು. ಅಧಿಕಾರ ದಾಹ ಇಲ್ಲದವರು. ಅವರು ಈ ಹಿಂದೆ ಸಚಿವರಾಗಿದ್ದಾಗ ಒಳ್ಳೊಳ್ಳೆಯ ಜನಹಿತ ಕಾಯ್ದೆಗಳನ್ನು ತಂದಿದ್ದಾರೆ. ಅವರು ಮುತ್ಸದ್ದಿ ಕೂಡ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸರ್ವಸಮ್ಮತ ಪ್ರಧಾನಮಂತ್ರಿ ಅಭ್ಯರ್ಥಿ ಆಗುವ ಸಾಧ್ಯತೆಗಳೂ ಇವೆ. ಹೀಗಿರುವಾಗ, ಇಂತಹ ಘನ ವ್ಯಕ್ತಿತ್ವ ಖರ್ಗೆಯವರಿಗೆ ಇರುವಾಗ ಶ್ರೀನಿವಾಸ್ ಪ್ರಸಾದ್ರಿಗೆ ಖರ್ಗೆಯವರನ್ನು ಅವಕಾಶವಾದಿ ಅನ್ನಲು ಹೇಗೆ ಬಾಯಿ ಬಂತು? ನನಗೆ ಪ್ರಶ್ನೆಯಾಗಿದೆ. ಪ್ರಸಾದ್ರಿಗೆ ನನ್ನ ಸಂಕಟದ ಭಾವನೆಗಳು ಮುಟ್ಟಬಹುದು ಅಂದುಕೊಂಡಿದ್ದೇನೆ ಎಂದರು.
ಹಾಗೆಯೇ ಇನ್ನೊಂದು ಸಂಗತಿ ಎಂದರೆ ಪ್ರಿಯಾಂಕ ಖರ್ಗೆ ಸಂಘ ಪರಿವಾರದ ಬಿಜೆಪಿಗೆ ಸಿಂಹಸ್ವಪ್ನವಾಗಿದ್ದಾರೆ. ಅವರ ವ್ಯಕ್ತಿತ್ವವೂ ಒಂದು ಮರಿಸಿಂಹದಂತೆಯೇ ಇದೆ. ಜೊತೆಗೆ ಇವರು ಪ್ರಖರ ಬುದ್ಧಿವಂತ. ವಾಗ್ಮಿ ಕೂಡ. ಇವರ ಬಗ್ಗೆ ಬೆದರಿದ ಸಂಘ ಪರಿವಾರದ ಬಿಜೆಪಿಯವರು ಪ್ರಿಯಾಂಕ ಖರ್ಗೆ ವಿರುದ್ಧ ಮಣಿಕಂಠ ರಾಥೋಡ್ ಎಂಬ ರೌಡಿಶೀಟರ್ನ್ನು ನಿಲ್ಲಿಸಿದೆ. ‘ಯಥಾ ಪಕ್ಷ, ತಥಾ ಅಭ್ಯರ್ಥಿ!’ ಎಂದು ಲೇವಡಿ ಮಾಡಿದರು.
ಮಣಿಕಂಠ ರಾಥೋಡ್ ಮೇಲೆ ಅವರ ವಯಸ್ಸು ಎಷ್ಟಾಗಿದೆಯೋ ಹೆಚ್ಚುಕಮ್ಮಿ ಅದರ ಡಬಲ್ ಕೇಸುಗಳಿವೆ. ಗಡಿಪಾರೂ ಆಗಿದೆ. ಜೈಲೂ ಆಗಿದೆ. ಈತ ಪಿಸ್ತೂಲು ತಿರುಗಿಸುತ್ತಾ ಠೇಂಕಾರದ ಶೋ ಕೊಡುತ್ತಾನೆ. ನಾಳೆ ಪಿಸ್ತೂಲು ತಿರುಗಿಸುತ್ತಾ ರೋಡ್ ಶೋ ಮಾಡಲೂಬಹುದು. ಈಗ ಈತ ಖರ್ಗೆಯವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದು ಸುದ್ದಿಯಾಗಿದೆ. ಈತನ ಬೆದರಿಕೆ ಖರ್ಗೆಯವರ ಕುಟುಂಬಕ್ಕೆ ಮಾತ್ರವಲ್ಲ. ಇಡೀ ನಾಡಿಗೇ ಹಾಕಿದ ಬೆದರಿಕೆ. ನಾಗರೀಕ ಸಮಾಜ, ಪ್ರಗತಿಪರ ಸಂಘಟನೆಗಳು ತಕ್ಷಣವೇ ರಾಜ್ಯಾದ್ಯಂತ ಕೇವಲ ಒಂದು ಗಂಟೆ ಧರಣಿ ಮಾಡಿ, ‘ಮಣಿಕಂಠ ರಾಥೋಡ್ ನಡಾವಳಿ ಸಹಿಸುವುದಿಲ್ಲ’ ಎಂದು ಹೇಳಬೇಕಾಗಿದೆ. ನಿಮ್ಮೊಡನೆ ನಾನೂ ಇದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಸ್ಪರ್ಧೆ ನಡೆಯುತ್ತಿರುವುದು ಸಮಾನತೆಯ ಹಾಲಿ ಸಂವಿಧಾನ V/S ಅಸಮಾನತೆಯ ಮಾಜಿ ಮನುಧರ್ಮಶಾಸ್ತ್ರಗಳ ನಡುವೆ – ದೇವನೂರು