ಛತ್ತೀಸ್ಗಡದ ಬಿಜೆಪಿ ಸಂಸದರೊಬ್ಬರು ಹತ್ರಾಸ್ ಅತ್ಯಾಚಾರದ ಘಟನೆಯನ್ನು “ಸುಳ್ಳು” ಎಂದು ಕರೆದಿದ್ದು, ಇದನ್ನು ಕಾಂಗ್ರೆಸ್ನವರ ಪಿತೂರಿ ಎಂಬ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಧನೋರಾದಲ್ಲಿ ಬುಡಕಟ್ಟು ಮಹಿಳೆಯ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಆತ್ಮಹತ್ಯೆಯನ್ನು ಖಂಡಿಸಿ ಕಳೆದ ವಾರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಖಾಂಕೆರ್ ಕ್ಷೇತ್ರವನ್ನು ಪ್ರತಿನಿಧಿಸುವ ಮೋಹನ್ ಮಾಂಡವಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ನಿಮ್ಮ ಸ್ವಂತ ಮಗಳ ಅಂತ್ಯಕ್ರಿಯೆ ಹೀಗೆ ಮಾಡುತ್ತೀರಾ..? ಹತ್ರಾಸ್ ಡಿಸಿಗೆ ಲಕ್ನೋ ಪೀಠ ಪ್ರಶ್ನೆ
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ (ಧನೋರಾ) ಸಿಬಿಐ ತನಿಖೆ ನಡೆದರೆ, ಪ್ರತಿ ಹಳ್ಳಿಯಲ್ಲಿಯೂ (ಛತ್ತೀಸ್ಗಡದ ಬಸ್ತಾರ್) ಇಂತಹ 4-5 ಪ್ರಕರಣಗಳು ಪತ್ತೆಯಾಗುತ್ತವೆ. ಹತ್ರಾಸ್ನಲ್ಲಿ ಕಟ್ಟುಕಥೆಯನ್ನು ರೂಪಿಸಲಾಗಿದೆ. ಅಲ್ಲಿ ಯಾವುದೇ ದೌರ್ಜನ್ಯ ನಡೆದಿಲ್ಲ. ಆದರೂ ಕಾಂಗ್ರೆಸ್ನ ನಾಯಕರು ಅಲ್ಲಿಗೆ ಭೇಟಿ ನಿಡುತ್ತಿದ್ದಾರೆ” ಎಂದು ಮೋಹನ್ ಮಾಂಡೋವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
“ಕಾಂಗ್ರೆಸ್ ನಾಯಕರು ಇಲ್ಲಿಗೆ ಏಕೆ ಬರುವುದಿಲ್ಲ. ಬುಡಕಟ್ಟು ಜನಾಂಗದ ಹಿತೈಷಿಗಳು ಎಂದು ಕರೆಯಲ್ಪಡುವವರು ಈಗ ಎಲ್ಲಿಗೆ ಹೋಗಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲವಾದ್ದರಿಂದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಈ ಕೂಡಲೇ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಹಿಸಲು ಹತ್ರಾಸ್ ಸಂತ್ರಸ್ತ ಕುಟುಂಬದ ಒತ್ತಾಯ
ನಂತರ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದರು, “ಹತ್ರಾಸ್ ಘಟನೆಯನ್ನು ಸುಳ್ಳು ಎಂದು ಪತ್ರಿಕೆಗಳೇ ವರದಿ ಮಾಡಿವೆ. ಆದರೆ ನಿಜವಾದ ಘಟನೆ ಧನೋರಾದಲ್ಲಿ ನಡೆದಿದೆ. ಹಾಗಾಗಿಯೇ ನಾವು ಇಲ್ಲಿ ಪ್ರತಿಭಟಿಸುತ್ತಿದ್ದೇವೆ. ಆದರೆ, ರೂಪಿತವಾದ ಪ್ರಕರಣವೊಂದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಹತ್ರಾಸ್ ಇಲ್ಲಿಂದ ಕೆಲವು ಮೈಲಿಗಳ ದೂರವಿದೆ ಅಷ್ಟೆ. ಅಲ್ಲಿ ಯಾರೂ ನಮಗೆ ಮತ ನೀಡಿಲ್ಲ ಆದರೂ ಕಾಂಗ್ರೆಸ್ ಅಲ್ಲಿ ಧರಣಿ ನಡೆಸುತ್ತಿದೆ” ಎಂದು ಹೇಳಿದರು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ಸಂಸದರ ಹೇಳಿಕೆಗಳು ಹತ್ರಾಸ್ ಘಟನೆಯ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿಯ ಹಿರಿಯ ಮುಖಂಡರು ತಾವು ಮತ ಪಡೆದ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಹೇಳಿದೆ.
ಇದನ್ನೂ ಓದಿ: ಹತ್ರಾಸ್ ದಲಿತ ಹೆಣ್ಣು ಮಗಳ ನ್ಯಾಯಕ್ಕಾಗಿ ಹೋರಾಡೋಣ- ಡಿ.ಕೆ ಶಿವಕುಮಾರ್