ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ನ್ಯಾಯಾಲಯದಲ್ಲಿ ಇದ್ದು, ಎಲ್ಲರೂ ಕೋಮು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಧರ್ಮಗುರುಗಳು ಕರೆ ನೀಡಿದರು.
ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಧರ್ಮಗುರುಗಳು, ಎಲ್ಲರೂ ಸಾಮರಸ್ಯದಿಂದ ಬಾಳಬೇಕು. ಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಪಾಲಿಸಬೇಕು ಎಂದು ಆಶಿಸಿದರು.
ಮುರುಘ ರಾಜೇಂದ್ರ ಮಠದ ಡಾ.ಶಿವಮೂರ್ತಿ ಮುರುಘ ಶರಣರು ಮಾತನಾಡಿ, ‘‘ಸಮಾಜ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಎಲ್ಲ ಧರ್ಮದಲ್ಲೂ ಧಾರ್ಮಿಕ ಮುಖಂಡರಿದ್ದಾರೆ. ನಾವು ಸಮಾಜಕ್ಕೆ ಶಾಂತಿ ರವಾನೆ ಸಾರಬೇಕಾಗಿದೆ. ಇವತ್ತು ಸಾಮಾಜಿಕ ಸಾಮರಸ್ಯ ಎಲ್ಲರಿಗೂ ಬೇಕಾಗಿದೆ. ಸಾಮಾಜಿಕ ಶಾಂತಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ. ಸಮವಸ್ತ್ರ, ವಸ್ತ್ರ ಸಂಹಿತೆ ಎಲ್ಲರ ನೆಮ್ಮದಿ ಕೆಡಿಸಿದೆ. ನಾವೆಲ್ಲ ಶಾಂತಿ, ಸಾಮರಸ್ಯದ ಪರವಾಗಿದ್ದೇವೆ” ಎಂದರು.
“ಈಗ ಎದ್ದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸದ್ಯ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್ ಹೇಳಿದಂತೆ ನಾವೆಲ್ಲ ಕೇಳಬೇಕಾಗಿದೆ. ಅದಕ್ಕೂ ಮುನ್ನ ಶಾಂತಿ ನೆಮ್ಮದಿ ಬೇಕಾದರೆ ಸದ್ಯಕ್ಕೆ ಸಾಮರಸ್ಯ ಕಾಯಬೇಕಾಗಿದೆ’’ ಎಂದು ತಿಳಿಸಿದರು.
“ವಿದ್ಯೆ ಇಲ್ಲವಾದರೆ ಜೀವನ ನಾಶವಾಗುತ್ತದೆ. ವಿದ್ಯೆಗೆ ಅಡಚಣೆಯಾಗದಂತಹ ವಾತಾವರಣ ನಿರ್ಮಿಸಬೇಕು. ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬರುವವರೆಗೂ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದರು.
ಕೊರೋನಾ ನಿರ್ಗದತ್ತ ಸಮಸ್ಯೆಯಾದರೆ, ಹಿಜಾಬ್-ಕೇಸರಿ ಶಾಲು ವಿವಾದ ಮಾನವ ನಿರ್ಮಿತ ಸಮಸ್ಯೆಯಾಗಿದೆ. ಇವರೆರಡರ ನಡುವೆಯಲ್ಲಿ ನಾವು ವೀಕ್ಷಕರಾಗಿದ್ದೇವೆ. ಈ ಪರಿಸ್ಥಿತಿಯಲ್ಲಿ ಸಾಮರಸ್ಯ ಮೂಡಿಸುವುದು ಮುಖ್ಯವಾಗಿದೆ. ಹಾಗಾಗಿ ಸಭೆಯನ್ನು ಆಯೋಜಿಸಿ ಚರ್ಚೆ ಮಾಡುತ್ತಿದ್ದೇವೆ. ಹಾಗೆಯೇ ರಾಜಕೀಯ ಪಕ್ಷಗಳು ಸಾಮಾನ್ಯ ಸಭೆಯೊಂದನ್ನು ಆಯೋಜಿಸಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಮೌಲಾನಾ ಸುಲೇಮಾನ್ ಖಾನ್ ಮಾತನಾಡಿ, ‘‘ಶಾಂತಿಗಿಂತ ಯಾವುದು ದೊಡ್ಡದಲ್ಲ. ವಿವಿಧತೆಯಲ್ಲಿ ಏಕತೆ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲ ಧರ್ಮದವರು ಸೌರ್ಹಾದತೆಯಿಂದ ನಡೆದುಕೊಳ್ಳುತ್ತೇವೆ. ದರ್ಗಾಕ್ಕೆ ಹಿಂದೂಗಳು ಹೋಗಿ ಪ್ರದಕ್ಷಿಣೆ ಹಾಕುತ್ತಾರೆ. ಹಾಗೆಯೇ ಬೆಂಗಳೂರು ಕರಗದಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಾರೆ” ಎಂದು ಸ್ಮರಿಸಿದರು.
ಹಿಜಾಬ್ ದೊಡ್ಡ ಸಮಸ್ಯೆಯಾಗಿ ಬೆಳೆಯದಂತೆ ರಾಜಕೀಯ ವ್ಯಕ್ತಿಗಳು ನೋಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ. ಹಿಜಾಬ್ ಸಂಬಂಧ ಅಂತಿಮವಾದ ತೀರ್ಪು ಬಂದಿಲ್ಲ. ಮಧ್ಯಂತರ ತೀರ್ಪು ಮಾತ್ರ ಬಂದಿದೆ. ಕೋರ್ಟ್ ಮಧ್ಯಂತರ ತೀರ್ಪು ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ಪೋಷಕರು, ಶಿಕ್ಷಕರು, ಮಕ್ಕಳು, ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ತೀರ್ಪನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸುನ್ನಿ ಜಮಾಯಾತ್ ಕರ್ನಾಟಕದ ಅಧ್ಯಕ್ಯ ಮೌಲಾನ ಶಬ್ಬೀರ್ ಹಾಶ್ಮಿಪೀಠ ಮಾತನಾಡಿ, “ಹಿಜಾಬ್ ಇತ್ತೀಚಿನಿಂದ ಧರಿಸುತ್ತಿರುವ ವಸ್ತ್ರವಲ್ಲ. ಇದನ್ನು ತಿಳಿಯದೆ ಕೋಮು ಸಾಮರಸ್ಯ ಕದಡಲಾಗುತ್ತಿದೆ. ಶಿಕ್ಷಣವು ಮುಖ್ಯವಾಗಿದ್ದು, ಧರ್ಮದ ಹೆಸರಿನಲ್ಲಿ ಅದನ್ನು ಹಾಳು ಮಾಡುವುದು ಸರಿಯಲ್ಲ. ಸರ್ವಧರ್ಮ ಸಾಮರಸ್ಯವನ್ನು ಸ್ಥಾಪಿಸುವುದು ಸರಕಾರದ ಮೊದಲ ಕರ್ತವ್ಯ” ಎಂದು ಹೇಳಿದರು.
ಬೆಂಗಳೂರು ಸಿಟಿ ಮಾರ್ಕೆಟ್ ಜಾಮಿಯಾ ಮಸೀದಿಯ ಮೌಲಾನ ಮಕ್ಸೂದ್ ಇಮ್ರಾನ್ ಸಾಹೇಬ್ ಮಾತನಾಡಿ, “ಕೋವಿಡ್ನಿಂದ ಕೆಂಗೆಟ್ಟಿದ್ದ ಶೈಕ್ಷಣಿಕ ವ್ಯವಸ್ಥೆ ಮತ್ತೊಮ್ಮೆ ಹಿಜಾಬ್-ಕೇಸರಿ ಶಾಲು ವಿವಾದದಿಂದ ಹಾಳಾಗಿದೆ. ಇಸ್ಲಾಂನಲ್ಲಿ ಯಾವುದಕ್ಕೂ ಬಲವಂತ ಎಂಬುದು ಇಲ್ಲ, ಬದಲಾಗಿ ಮಕ್ಕಳಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತೇವೆ. ಇದನ್ನು ದಿಕ್ಕರಿಸಿದರೆ, ಅವರ ಇಷ್ಟಕ್ಕೂ ಅವಕಾಶ ನೀಡುತ್ತೇವೆ” ಎಂದರು.
“ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುವುದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಒತ್ತಡವಾಗಲೀ, ಹಿರಿಯರ ಬಲವಂತವಾಗಲೀ ಇಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಇಷ್ಟು ದಿನ ಇಲ್ಲದ ವಿವಾದ ಈಗ ಸೃಷ್ಟಿಯಾಗಿದೆ. ಇವೆಲ್ಲದರ ಕುರಿತು, ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಹೈಕೋರ್ಟ್ ಮಧ್ಯಂತರ ಆದೇಶದ ಕುರಿತು ಉಂಟಾಗಿರುವ ಗೊಂದಲದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಲ್ಲಿ ಎಲ್ಲ ವಿಚಾರಗಳಿಗೂ ಸೂಕ್ತ ಪರಿಹಾರಗಳಿವೆ. ಸರ್ವಧರ್ಮಗಳ ದೇಶದಲ್ಲಿ ಜಾತಿ ಕಲಹ ಉಂಟಾಗಬಾರದು. ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದು” ಎಂದು ಎಚ್ಚರಿಸಿದರು.
ನಾಸೆ ಫೌಂಡೇಷನ್ ಅಧ್ಯಕ್ಷ ಮೌಲಾನ ಶಬ್ಬೀರ್ ನಖ್ವೀ ಮಾತನಾಡಿ, “ರಾಜ್ಯದಲ್ಲಿ ಶಾಂತಿಯನ್ನು ಕದಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸಲಾಗಿದೆ. ಸಂವಿಧಾನದ ಅಡಿಯಲ್ಲೇ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಅನಗತ್ಯವಾಗಿ ವಿವಾದವನ್ನು ಸೃಷ್ಟಿ ಮಾಡಲಾಗುತ್ತಿದೆ” ಎಂದು ವಿಷಾದಿಸಿದರು.
ಮಾದರ ಚೆನ್ನಯ್ಯ ಸ್ವಾಮೀಜಿ, ಫಾದರ್ ವಿವಿಯನ್ ಮೂನಿಸ್, ರಾಜ್ಯಸಭಾ ಸದಸ್ಯರಾದ ಸೈಯದ್ ನಾಸಿರ್ ಹುಸೇನ್ ಹಾಜರಿದ್ದರು.
ಇದನ್ನೂ ಓದಿರಿ: ‘ಅಂಬೇಡ್ಕರ್ರಿಗೆ ಅವಮಾನವಾದರೆ ಶೋಷಿತ ಸಮುದಾಯ ಸುಮ್ಮನಿರುವುದಿಲ್ಲ’