ಶ್ರೀಲಂಕಾ ವಿರುದ್ಧದ T20 ಮತ್ತು ಟೆಸ್ಟ್ ಸರಣಿಗೆ ಭಾರತ ತಂಡವನ್ನು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಶನಿವಾರ ಸಂಜೆ ಪ್ರಕಟಿಸಿದೆ. ರೋಹಿತ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದ್ದು, ಭಾರೀ ಕುತೂಹಲವನ್ನು ಹುಟ್ಟಹಾಕಿದೆ.
ಆಯ್ಕೆ ಸಮಿತಿಯು ಜಸ್ಪ್ರೀತ್ ಬುಮ್ರಾ ಅವರನ್ನು ಟಿ20 ಮತ್ತು ಟೆಸ್ಟ್ ಉಪನಾಯಕರನ್ನಾಗಿ ನೇಮಿಸಿದೆ. ಆದರೆ, ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಗೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಡಲಾಗಿದೆ.
“ಇಬ್ಬರನ್ನೂ ಕೈಬಿಡುವ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ನಾವು ದೀರ್ಘವಾಗಿ ಯೋಚಿಸಿದ್ದೇವೆ. ಅಲ್ಲದೆ, ಇದಕ್ಕೂ ಮೊದಲೇ ಅವರೊಂದಿಗೆ ಮಾತನಾಡಿದ್ದೇವೆ. ಅವರು ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ಗಳ ಭಾಗವಾಗುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇವೆ. ಈ ನಿರ್ಧಾರವು ಕೇವಲ ಈ ಟೆಸ್ಟ್ಗಳಿಗೆ ಮಾತ್ರ. ಮುಂದಿನ ಸರಣಿಗಳಲ್ಲಿ ಅವರು ತಂಡದ ಭಾಗವಾಗಿರುತ್ತಾರೆ”ಎಂದು ಚೇತನ್ ಶರ್ಮಾ ಹೇಳಿದ್ದಾರೆ.
“ಇಬ್ಬರು ಆಟಗಾರರೂ ಭಾರತ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರು ಯಾವಾಗಬೇಕಾದರೂ ತಂಡಕ್ಕೆ ಮರಳಬಹುದು. ಇದು ಗ್ರಾಫ್ನಂತೆ, ರಹಾನೆ ನಿನ್ನೆ (ರಣಜಿ ಟ್ರೋಫಿ) ಶತಕ ಬಾರಿಸಿದ್ದರು. ಅವರನ್ನು ಕೈಬಿಟ್ಟಿರುವುದು ನಿರ್ವಹಣೆಯ ಪ್ರಕ್ರಿಯೆಯಾಗಿದೆ” ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿರಿ: ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾಧ್ಯಮಗಳ ವಿರುದ್ಧ ರೋಹಿತ್ ಶರ್ಮಾ ಕಿಡಿ
“ಸದ್ಯಕ್ಕೆ, ಎರಡು ಟೆಸ್ಟ್ಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ನಾವು ಅವರಿಗೆ ತಿಳಿಸಿದ್ದೇವೆ. ನಡುವೆ, ಬದಲಾವಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ನಾವು ಗಮನಿಸುತ್ತೇವೆ. ನಾವು ಯಾರಿಗೂ ಸಂಪೂರ್ಣವಾಗಿ ಬಾಗಿಲು ಮುಚ್ಚುವವರಲ್ಲ. ಇದು ಕ್ರಿಕೆಟ್, ಇಲ್ಲಿ ಕಾರ್ಯಕ್ಷಮತೆ ಮುಖ್ಯ. ಈಗ ಅವರು ರಣಜಿ ಟ್ರೋಫಿ ಆಡುವುದನ್ನು ಆಯ್ಕೆ ಸಮಿತಿ ವೀಕ್ಷಿಸುತ್ತಿದೆ” ಎಂದು ಶರ್ಮಾ ಹೇಳಿದ್ದಾರೆ.
“ಯಾವ ಆಧಾರದ ಮೇಲೆ ಅವರನ್ನು ಕೈಬಿಡಲಾಗಿದೆ ಎಂದು ನಾನು ನಿಮಗೆ ಹೇಳಲಾರೆ. ಅದು ಆಯ್ಕೆಗಾರರಿಗೆ ಬಿಟ್ಟ ವಿಷಯವಾಗಿದೆ. ನಾನು ನಿಮಗೆ ಹೇಳುವುದು ಇಷ್ಟೇ, ಅವರಿಗೆ ಮೊದಲೇ ಹೇಳಲಾಗಿತ್ತು ಮತ್ತು ಭಾರತ ತಂಡಕ್ಕೆ ಮೆಟ್ಟಿಲಾಗಿರುವ ರಣಜಿ ಟ್ರೋಫಿಯನ್ನು ಆಡುವಂತೆ ಕೇಳಲಾಯಿತು. ನಾವು ನಮ್ಮ ನಡುವೆ ಏನು ಚರ್ಚಿಸಿದ್ದೇವೆ ಎಂಬುದನ್ನು ನಾವು ನಿಮಗೆ ಹೇಳಲು ಸಾಧ್ಯವಿಲ್ಲ” ಎಂದು ಸುದ್ದಿಗಾರರಿಗೆ ಶರ್ಮಾ ಹೇಳಿದ್ದಾರೆ.
“ರಹಾನೆ ಈ ಮೊದಲು ರಣಜಿ ಆಡಿಲ್ಲ. ರಣಜಿ ಆಡುವುದು ಮುಖ್ಯ. ಇಲ್ಲದಿದ್ದರೆ, ನೀವು ಪಂದ್ಯಕ್ಕೆ ಸಿದ್ಧರಾಗಿದ್ದೀರಿ ಎಂದು ನಮಗೆ ಹೇಗೆ ತಿಳಿಯುತ್ತದೆ? ನಾವು ವಯಸ್ಸನ್ನು ನೋಡುತ್ತಿಲ್ಲ. ಯುವಕರು ಹೊರಗೆ ಕುಳಿತ್ತಿದ್ದಾರೆ. ಆ ಯುವಕರಿಗೆ ಅವಕಾಶ ಕೊಡೋಣ ಎಂದುಕೊಂಡೆವು”ಎಂದು ಶರ್ಮಾ ತಿಳಿಸಿದ್ದಾರೆ.
ಟೆಸ್ಟ್ ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಬ್ಮನ್ ಗಿಲ್, ಆರ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್, ಆರ್ ಜಡೇಜಾ, ಜಯಂತ್ ಯಾದವ್, ಕುಲ್ದೀಪ್ ಯಾದವ್, ಜೆ ಬುಮ್ರಾ (ವಿಸಿ), ಎಂಡಿ ಶಮಿ, ಎಂಡಿ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್.
ಇದನ್ನೂ ಓದಿರಿ: ‘ನನ್ನ ತಂಡಕ್ಕೆ ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ!’: ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ
T20I ತಂಡ: ರೋಹಿತ್ ಶರ್ಮಾ (c) ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (wk), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಬುಮ್ರಾ (vc), ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಎಂಡಿ ಸಿರಾಜ್, ಸಂಜು ಸ್ಯಾಮ್ಸನ್ (wk), ರವೀಂದ್ರ ಜಡೇಜಾ, ವೈ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್.
ಸರಣಿ ವೇಳಾಪಟ್ಟಿ
ಟಿ20 ಸರಣಿ: 1 ನೇ T20I: ಫೆಬ್ರವರಿ 24 – ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
2ನೇ T20I: ಫೆಬ್ರವರಿ 26 – ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರ್ಮಶಾಲಾ
3 ನೇ T20I: ಫೆಬ್ರವರಿ 27 – ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರ್ಮಶಾಲಾ
ಟೆಸ್ಟ್ ಸರಣಿ: 1 ನೇ ಟೆಸ್ಟ್: ಮಾರ್ಚ್ 4 ರಿಂದ ಮಾರ್ಚ್ 8 – ಮೊಹಾಲಿ
2 ನೇ ಟೆಸ್ಟ್: ಮಾರ್ಚ್ 12 ರಿಂದ ಮಾರ್ಚ್ 16 – ಬೆಂಗಳೂರು
ಇದನ್ನೂ ಓದಿರಿ: ಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ