Homeಚಳವಳಿಸ್ವಾರ್ಥಪರ ಯೋಗಿ - ಭೋಗಿಗಳಿಂದ ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಸಬೇಕು

ಸ್ವಾರ್ಥಪರ ಯೋಗಿ – ಭೋಗಿಗಳಿಂದ ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಸಬೇಕು

ಬಡಹೆಣ್ಣುಮಕ್ಕಳ ಶಾಲೆಯನ್ನು ನಾಶಗೊಳಿಸಿ ಸ್ಮಾರಕ ನಿರ್ಮಿಸುವ ಯೋಜನೆಗೆ ಸ್ವಾಮಿ ವಿವೇಕಾನಂದರ ಆತ್ಮ ಖಂಡಿತ ಸಮ್ಮತಿ ನೀಡುವುದಿಲ್ಲ.

- Advertisement -
- Advertisement -

ಮೈಸೂರಿನ ಮಹಾರಾಜ 10ನೇ ಚಾಮರಾಜ ಒಡೆಯರ ಆಳ್ವಿಕೆ ಸಮಯದಲ್ಲಿ 1890ನೇ ಇಸವಿಯಲ್ಲಿ ವೀರ ಸಂತ ವಿವೇಕಾನಂದರು ಮೈಸೂರಿಗೆ ನೀಡಿದ್ದ ಭೇಟಿ ಐತಿಹಾಸಿಕವಾದುದು. ವಾಸ್ತವವಾಗಿ ಅವರು ಚಿಕಾಗೋ ಧಾರ್ಮಿಕ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ತೆರಳುವ ಸಲುವಾಗಿ ಮಹಾರಾಜರಿಂದ ಆರ್ಥಿಕ ನೆರವು ಯಾಚಿಸಿದರು. ಅಂದು ಶ್ರೇಷ್ಟ ಸಂತರು ಮತ್ತು ಸಾಧಕರಿಗೆ ರಾಜಾಶ್ರಯ ಭಾರತದ ಎಲ್ಲೆಡೆ ಲಭಿಸಿತ್ತು. ಮೈಸೂರಿನ ರಾಜಮನೆತನ ಅನೇಕ ಜ್ಞಾನಿಗಳು ಮತ್ತು ಅನುಭಾವಿಗಳಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸಿದ ಉದಾಹರಣೆಗಳು ಬಹಳಷ್ಟಿವೆ. ವಿವೇಕಾನಂದರು ಮೈಸೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆಗಿನ ದಿವಾನ್ ಶೇಷಾದ್ರಿ ಅಯ್ಯರ್ ಭವನದಲ್ಲಿ ತಂಗಿದ್ದು ಎನ್‌ಟಿಎಂ ಶಾಲೆಯ ಪಕ್ಕದಲ್ಲಿರುವ ನಿರಂಜನ ಮಠ ಮತ್ತು ಸದ್ವಿದ್ಯಾ ಶಾಲೆಗಳಲ್ಲಿ ಉಪನ್ಯಾಸಗಳನ್ನು ಮಾಡಿರುವುದಕ್ಕೆ ಐತಿಹಾಸಿಕ ದಾಖಲೆಗಳಿವೆ.

ಮೈಸೂರು ನಗರ ಹಲವಾರು ಪಾರಂಪರಿಕ ಕಟ್ಟಡಗಳನ್ನು ಹೊಂದಿದ್ದು ಪ್ರತಿ ವರ್ಷ ಲಕ್ಷಾಂತರ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಐತಿಹಾಸಿಕ ಮೈಸೂರು ದಸರಾ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಮೈಸೂರಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಸುಮಾರು 140 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ತೆರೆಯಬೇಕೆಂದು ಚಾಮರಾಜ ಒಡೆಯರಿಗೆ ಅತ್ಯಂತ ಕಳಕಳಿಯಿಂದ ಮನವಿ ಮಾಡಿದ್ದರು. ಇವರ ಮಾನವೀಯ ಕಳಕಳಿಯಿಂದ ಪ್ರಭಾವಿತರಾದ ಮಹಾರಾಣಿ ವಾಣಿವಿಲಾಸ ಅಮ್ಮಣ್ಣಿಯವರು ತಮ್ಮ ಮುಂದಾಲೋಚನೆಯಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರು ನಗರದಲ್ಲಿ ಮರಿಮಲ್ಲಪ್ಪ ಕಾಲೇಜಿಗೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಎನ್‌ಟಿಎಂ ಶಾಲೆಯನ್ನು ಆರಂಭಿಸಿದರು. ಇದು ಭಾರತ ದೇಶದಲ್ಲಿ ಹೆಣ್ಣುಮಕ್ಕಳ ಪ್ರಪ್ರಥಮ ಶಾಲೆಯೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಂತಹ ಐತಿಹಾಸಿಕ ಶಾಲೆಯನ್ನು ಉಳಿಸಿಕೊಳ್ಳುವುದು ಮೈಸೂರು ನಗರದ ಪ್ರಜ್ಞಾವಂತರ ಬಹುದೊಡ್ಡ ಸಾಮಾಜಿಕ ಜವಾಬ್ದಾರಿಯಾಗಿದೆ.

ಏಕೆಂದರೆ ಇತ್ತೀಚೆಗೆ ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಐತಿಹಾಸಿಕ ಎನ್‌ಟಿಎಂ ಶಾಲೆಯ ಆವರಣದಲ್ಲೇ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಬೇಕೆಂದು ಪಟ್ಟು ಹಿಡಿದಿರುವುದು ಇತಿಹಾಸ ಮತ್ತು ಲಿಂಗ ಸಮಾನತೆಗಳಿಗೆ ಬಗೆದಿರುವ ಅಪಚಾರವೇ ಆಗಿದೆ. ಈಗಾದಾಗ ಆ ಶಾಲೆಯನ್ನು ಮುಚ್ಚಬೇಕಾಗುತ್ತದೆ. ಎನ್‌ಟಿಎಂ ಶಾಲೆಯನ್ನು ಆರಂಭಿಸಲು ವಿವೇಕಾನಂದರು ಪ್ರೇರಣೆ ನೀಡಿದರೇ ಹೊರತು ಶಾಲೆಯ ಆವರಣದಲ್ಲಿ ಎಂದಿಗೂ ತಂಗಿರಲಿಲ್ಲ. ಅವರು ಉಳಿದುಕೊಂಡಿದ್ದ ದಿವಾನ್ ಶೇಷಾದ್ರಿ ಅಯ್ಯರ್ ಭವನ ಹಾಗೂ ನಿರಂಜನ ಮಠಗಳೊಂದಿಗೆ ಎನ್‌ಟಿಎಂ ಶಾಲೆ ಯಾವುದೇ ವಿಧದ ಸಂಬಂಧ ಹೊಂದಿಲ್ಲ. ಆದಾಗ್ಯೂ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಶಾಲೆಯ ಆವರಣದಲ್ಲೇ ವಿವೇಕಾನಂದರ ಸ್ಮಾರಕ ನಿರ್ಮಿಸಿ ಶಾಲೆಯನ್ನು ಬೇರೊಂದು ಸಮೀಪದ ಸರ್ಕಾರಿ ಶಾಲೆಯೊಂದಿಗೆ ವಿಲೀನಗೊಳಿಸಬೇಕೆಂದು ಪಟ್ಟು ಹಿಡಿದಿರುವುದು ಅರ್ಥಹೀನವಾಗಿದೆ.

ಇದನ್ನೂ ಓದಿ: ಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

1970ರ ದಶಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮೈಸೂರು ನಗರದ ಕೇಂದ್ರ ಭಾಗದಲ್ಲಿರುವ ಯಾದವಗಿರಿಯಲ್ಲಿ ಸುಮಾರು 60 ಎಕರೆಯಷ್ಟು ಕೋಟ್ಯಾಂತರ ಬೆಲೆ ಬಾಳುವ ಅಮೂಲ್ಯ ಭೂಮಿಯನ್ನು ರಾಮಕೃಷ್ಣ ಆಶ್ರಮದ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮಂಜೂರು ಮಾಡಿತ್ತು. ಸುಮಾರು 2-3 ಎಕರೆ ಪ್ರದೇಶದಲ್ಲಿ ಧ್ಯಾನಕೇಂದ್ರ, ಗ್ರಂಥಾಲಯ, ಸಭಾಂಗಣ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು 57 ಎಕರೆಯಷ್ಟು ಅಮೂಲ್ಯ ಭೂಮಿ ಖಾಲಿ ಬಿದ್ದಿದ್ದು ಸರ್ಕಾರದ ನೆರವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲದಿರುವ ಹಿನ್ನೆಲೆಯಲ್ಲಿ ವಿವೇಕಾನಂದ ಸ್ಮಾರಕವನ್ನು ಅಲ್ಲಿಯೇ ನಿರ್ಮಿಸುವುದು ಸೂಕ್ತವಾಗಿದೆ.

ಕಳೆದ ವರ್ಷ ಮೈಸೂರಿನ 106 ಮಂದಿ ಪ್ರಗತಿಪರ ಚಿಂತಕರು ಮತ್ತು ಎನ್‌ಟಿಎಂ ಶಾಲೆ ಹಿತೈಷಿಗಳು ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯದಿಂದಾಗಿ ಎನ್‌ಟಿಎಂ ಶಾಲೆಯನ್ನು ಮುಚ್ಚಬಾರದೆಂದು ಸತ್ಯಾಗ್ರಹ ನಡೆಸಿ ಕರ್ನಾಟಕ ರಾಜ್ಯ ಸರ್ಕಾರದ ಗಮನ ಸೆಳೆದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಎನ್‌ಟಿಎಂ ಶಾಲೆ ತಳ ಸಮುದಾಯಗಳ ಜ್ಞಾನ ದಾಸೋಹ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಮುಂದುವರೆಯಲಿ, ಸ್ವಾಮಿ ವಿವೇಕಾನಂದರ ಸ್ಮಾರಕ ಶಾಲೆಯ ಹೊರಗೆ ನಿರ್ಮಾಣವಾಗಲೆಂಬ ತೀರ್ಮಾನಕ್ಕೆ ಬಂದರು. ಆದಾಗ್ಯೂ ಮೇಲ್ಕಂಡ ಐತಿಹಾಸಿಕ – ಸಾಂಸ್ಕೃತಿಕ ವಿಚಾರಗಳಿಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ಎನ್‌ಟಿಎಂ ಶಾಲೆಯ ಆವರಣದಲ್ಲೇ ವಿವೇಕಾನಂದ ಸ್ಮಾರಕ ನಿರ್ಮಿಸಲು ರಾಮಕೃಷ್ಣ ಆಶ್ರಮದವರು ಒತ್ತಾಯಿಸುತ್ತಿರುವುದು ಅರ್ಥಹೀನ ಸಂಗತಿಯಾಗಿದೆ.

2019ರಲ್ಲಿ ಶಾಲೆ ಉಳಿಸಲು ಹೋರಾಟ

ಈ ಪ್ರಕರಣ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿದ್ದು ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣವಾಗಬೇಕೆಂಬ ನಿಲುವನ್ನು ಹೊಂದಿರುವುದು ನೈಜ ಇತಿಹಾಸ ಮತ್ತು ಸಾಂವಿಧಾನಿಕ ಲಿಂಗ ಸಮಾನತೆ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಅಪ್ರಸ್ತುತ ತೀರ್ಮಾನವನ್ನು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ನಮಗಿದೆ. ಇತ್ತೀಚೆಗೆ ಮೈಸೂರಿನ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಎನ್‌ಟಿಎಂ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಸ್ಮಾರಕ ಒಟ್ಟಿಗೆ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಗೌರವಾನ್ವಿತ ಮುಖ್ಯಮಂತ್ರಿಗಳು ಈ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಶಾಲೆಯನ್ನು ಉಳಿಸುವುದು ಅತ್ಯಂತ ಸೂಕ್ತ ಕ್ರಮವಾಗಿದೆ.

ರಾಮಕೃಷ್ಣ ಆಶ್ರಮದವರಿಗೆ ವಿವೇಕಾನಂದರ ಸ್ಮಾರಕ, ಶಾಪಿಂಗ್‌ಮಾಲ್, ವಾಣಿಜ್ಯ ಸಂಕೀರ್ಣ ಮೊದಲಾದವುಗಳನ್ನು ನಿರ್ಮಿಸಿ ಆರ್ಥಿಕವಾಗಿ ಲಾಭ ಗಳಿಸಬೇಕೆಂಬ ಧೋರಣೆ ಇರುವುದು ಖಂಡನೀಯ. ಐತಿಹಾಸಿಕ ಬಾಲಕಿಯರ ಶಾಲೆಯನ್ನು ಮುಚ್ಚಿಸಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕೆಂದು ಇವರ ಜೊತೆಗೂಡಿ ಮೈಸೂರು ನಗರದ ಕೆಲವು ಸ್ಥಾಪಿತ ಹಿತಾಸಕ್ತಿಗಳು ವಾದಿಸುತ್ತಿರುವುದು ಅರ್ಥಹೀನ. ಆಶ್ರಮದ ಉಸ್ತುವಾರಿ ವಹಿಸಿರುವ ಧಾರ್ಮಿಕ ಮುಖಂಡರಿಗೆ ‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬ ಸತ್ಯದರ್ಶನ ಆಗಿಲ್ಲದಿರುವುದು ಬಹುದೊಡ್ಡ ವಿಪರ್ಯಾಸವಾಗಿದೆ. ಅಂದು ಆಶ್ರಮದ ಸ್ವಾಮೀಜಿಗಳೇ ಬರೆದಿರುವ ಪುಸ್ತಕದಲ್ಲಿ ‘ಬಡವರಿಗಾಗಿ ಶಾಲೆಯನ್ನು ತೆರೆಯಬೇಕೆಂದು ವಿವೇಕಾನಂದರು ಪತ್ರ ಬರೆದಿರುವುದು’ ನೆನಪಾಗುತ್ತಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.

ಶಾಲೆ ಉಳಿವಿಗಾಗಿ ರೈತ ಸಂಘದಿಂದ ಹೋರಾಟ

ಶ್ರೀ ರಾಮಕೃಷ್ಣ ಆಶ್ರಮದವರು ಶಾಲೆಯನ್ನು ಉಳಿಸಿ ಸ್ಮಾರಕ ನಿರ್ಮಿಸಲು ಮುಂದಾಗಲಿ ಎಂಬುದು ಪ್ರಜ್ಞಾವಂತರ ನ್ಯಾಯೋಚಿತ ಆಶಯವಾಗಿದೆ. ಬಡಹೆಣ್ಣುಮಕ್ಕಳ ಶಾಲೆಯನ್ನು ನಾಶಗೊಳಿಸಿ ಸ್ಮಾರಕ ನಿರ್ಮಿಸುವ ಯೋಜನೆಗೆ ಸ್ವಾಮಿ ವಿವೇಕಾನಂದರ ಆತ್ಮ ಖಂಡಿತ ಸಮ್ಮತಿ ನೀಡುವುದಿಲ್ಲ. ಎನ್‌ಟಿಎಂ ಶಾಲೆ ಉಳಿಯಲಿ ಎಂಬ ನ್ಯಾಯೋಚಿತ ಬೇಡಿಕೆಗೆ ಸರ್ಕಾರ ಮತ್ತು ಆಶ್ರಮದವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಆವರಣದಲ್ಲಿ ಸದ್ಬಳಕೆಯಾಗದೇ ಉಳಿದಿರುವ ಸುಮಾರು 57 ಎಕರೆ ಭೂಮಿಯನ್ನು ಸರ್ಕಾರ ಹಿಂಪಡೆಯಲಿ ಎಂದು ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವುದು ಅನಿವಾರ್ಯವಾಗುತ್ತದೆ. ದೀನ ದುರ್ಬಲ ವರ್ಗಗಳಿಗೆ ಸೇರಿದ ಬಾಲಕಿಯರ ಶಾಲೆಯ ಗೋರಿಯ ಮೇಲೆ ವಿವೇಕಾನಂದರ ಭವ್ಯ ಸ್ಮಾರಕ ನಿರ್ಮಿಸಿ ವಾಣಿಜ್ಯ ಉದ್ದೇಶಗಳನ್ನು ಆಧ್ಯಾತ್ಮದ ಹೆಸರಿನಲ್ಲಿ ಈಡೇರಿಸುವ ಪ್ರಯತ್ನಗಳನ್ನು ಕಾನೂನುಬದ್ಧವಾಗಿ ನಿಷ್ಕ್ರಿಯಗೊಳಿಸಲು ಮೈಸೂರು ನಗರದ ಪ್ರಜ್ಞಾವಂತರು ಬದ್ಧರಾಗಿದ್ದಾರೆ.

  • ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

ಇದನ್ನೂ ಓದಿ: ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣ ಯಾರ ಉದ್ಧಾರಕ್ಕಾಗಿ? : ಡಾ.ಬಿ.ಪಿ ಮಹೇಶ ಚಂದ್ರ ಗುರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹೆಣ್ಣು ಮಕ್ಕಳ ಶಾಲೆಯನ್ನು ನಾಶಪಡಿಸಿ, ಅಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸುವುದು ಕಂಡನಾರ್ಹ. ಪ್ರಜ್ಞಾವಂತರೆಲ್ಲರೂ ಇದನ್ನು ವಿರೋಧಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...