ಬಂದೂಕು ಮತ್ತು ಖಾಕಿ ಭದ್ರತೆಯ, ಸಂರಕ್ಷಣೆಯ, ಸುರಕ್ಷತೆಯ ಸಂಕೇತಗಳು. ಖಾಕಿ ಜನಸಾಮಾನ್ಯನಿಗೆ ಸುರಕ್ಷತೆಯನ್ನು ನೀಡಿದರೆ ಬಂದೂಕು ಖಾಕಿಗೆ ಭದ್ರತೆ ನೀಡುತ್ತದೆ. ಮತ್ತು ಭದ್ರತೆಗಾಗಿಯಷ್ಟೇ ಬಂದೂಕು ಬಳಕೆಯಾಗಬೇಕಿದೆ. ಆದರೆ ಬಂದೂಕು ಸಾಮಾನ್ಯನ ಕೈಗೂ, ಸಾಮಾನ್ಯನ ಮನೋಭಾವ, ವಾಂಛೆಗಳು ಖಾಕಿಯೊಳಗೂ ನುಗ್ಗಿದರೆ ಪರಿಣಾಮ ಏನಾಗುತ್ತಿದೆಯೆಂಬುದನ್ನು ಸದ್ಯಕ್ಕೆ ನಡೆಯುತ್ತಿರುವ ವಿದ್ಯಾಮಾನಗಳೇ ಸಾರಿ ಹೇಳುತ್ತಿದೆ.
ಕೇಂದ್ರ ಸರಕಾರ ಜಾರಿಗೆ ತಂದ ಕರಾಳ ಕಾಯ್ದೆಯ ವಿರುದ್ದ ದೇಶವಿಡೀ ಸಿಡಿದೆದ್ದು ಎರಡು ತಿಂಗಳುಗಳೆ ಕಳೆದವು. ಕಾಯ್ದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಾಗಲೆ ದೇಶದಾದ್ಯಂತ ಬೀದಿಗಿಳಿದ ಜನಸ್ತೋಮವನ್ನು ಕಂಡು ಕೇಂದ್ರ ಸರಕಾರ ಬಸವಳಿದು ಹೋಗಿತ್ತು. ಆದರೆ ಜನರ ಆಕ್ರೋಶ, ತಿರಸ್ಕಾರಗಳನ್ನು ಅರ್ಥೈಸಲಾಗದ ಕೇಂದ್ರ ಸರಕಾರ ತನ್ನ ದಾರ್ಷ್ಟ್ಯತೆಯನ್ನು ಪ್ರದರ್ಶಿತೊಡಗಿತು. ಪ್ರತಿಭಟಿಸುವ ಜನರ ಸಾಂವಿಧಾನಿಕ ಹಕ್ಕನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಯತ್ನಿಸಿತು. ಪ್ರತಿಭಟಿಸಿದರೆ ಲಾಠಿ, ಗುಂಡೇಟಿನ ಬೆದರಿಕೆಯನ್ನು ಹಾಕತೊಡಗಿತು. ಒಂದಷ್ಟು ಬಿಜೆಪಿ ನಾಯಕರು ಗುಂಡೇಟಿನ ಬಗ್ಗೆ ಮಾತನಾಡಿದ್ದು ಪೋಲೀಸರ ಬಂದೂಕಿಗೆ ತಣ್ಣನೆಯ ಧೈರ್ಯ ಕೊಟ್ಟವು.
ತಮ್ಮ ಹಕ್ಕು ಮತ್ತು ಅಸ್ತಿತ್ವಕ್ಕಾಗಿ ಪ್ರಜೆಗಳು ನಡೆಸುವ ಕಾನೂನಾತ್ಮಕ ಹೋರಾಟಕ್ಕೆ ಭದ್ರತೆ ಒದಗಿಸಬೇಕಾದವರು ಪೋಲೀಸರು. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪೂರಕವಾಗಿರುವ ಪೋಲೀಸರ ಕರ್ತವ್ಯವು ಹೌದು. ಆದರೆ ಆಳುವವರ ‘ಆಳು’ಗಳಾದ ಖಾಕಿ ಪಡೆಗಳು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಲಾರಂಭಿಸಿದರು. ಮೊದಲ ಗುಂಡೇಟು ನಡೆದದ್ದು ಅಸ್ಸಾಂನಲ್ಲಿ. ಹದಿನೇಳು ವಯಸ್ಸಿನ ಬಾಲಕನ ಸಮೇತ ಐದಾರು ಮಂದಿ ಅಸ್ಸಾಂನಲ್ಲಿ ಗುಂಡೇಟಿಗೆ ಬಲಿಯಾದರು. ಆ ಬಳಿಕ ಮಂಗಳೂರಿನಲ್ಲೂ ಪ್ರತಿಭಟನಾಕಾರರ ನೇರವಾಗಿ ಗುಂಡು ಹಾರಿದವು. ಉದ್ದೇಶಪೂರ್ವಕವಾಗಿಯೇ ಎರಡು ಜೀವಗಳನ್ನು ಆಪೋಶನ ಪಡೆದ ಪೋಲೀಸರ ನಡೆಯು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದವು. ಜನ ಸಾಮಾನ್ಯನಿಗೆ ಭದ್ರತೆಯನ್ನು ನೀಡಬೇಕಾದ ಖಾಕಿ ದಾರಿಗಳು ಮಂಗಳೂರಿನ ಪ್ರತಿಭಟನೆಯ ವೇಳೆ ಅಕ್ಷರಶಃ ಹೆಣ ಉದುರಿಸುವ ಕಾಯಕಕ್ಕೆ ನಿಂತಿದ್ದರು.
ಪರಿಣಾಮ ಮಂಗಳೂರು ಉದ್ವಿಗ್ನಗೊಂಡವು. ಮೊದಲೇ ಕೋಮುಸೂಕ್ಷ್ಮ ಪ್ರದೇಶವಾಗಿದ್ದ ಮಂಗಳೂರು ಮತ್ತು ಆಸುಪಾಸು ನಿರ್ವಾತ ಸ್ಥಿತಿಗೆ ತಲುಪಿದವು. ಪ್ರತಿಭಟನಾ ಕಾರರಿಗೆ ಲಾಠಿಜಾರ್ಜ್ ಮಾಡಬಾರೆಂದು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರೂ ಮಂಗಳೂರು ಪೋಲೀಸರು ಇನ್ಯಾರದೋ ಒತ್ತಡಕ್ಕೆ ಮಣಿದಿದ್ದರು. ಗುಂಡೇಟಿನ ಬಗ್ಗೆ ಮಾತನಾಡಿದ್ದ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಮಾತುಗಳು ಅವರಿಗೆ ಉತ್ತೇಜನ ನೀಡಿದ್ದವೋ ಗೊತ್ತಿಲ್ಲ. ”ಪ್ರತಿಭಟಿಸುವುದಾದರೆ ಉತ್ತರ ಭಾರತಕ್ಕೆ ಹೋಗಿ” ಎಂದು ಪೋಲೀಸ್ ಆಯುಕ್ತ ಭಾಸ್ಕರ್ ಪ್ರಸಾದ್ ನೀಡಿದ್ದ ಹೇಳಿಕೆ ಪ್ರಭುತ್ವದಂತೆ ಪೋಲೀಸರಿಗೂ ಪ್ರತಿಭಟನೆಗಳು ಅಪಥ್ಯವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಮಂಗಳೂರು ಗೋಲೀಬಾರ್ ಪೋಲೀಸರ ಪೂರ್ವನಿಯೋಜಿತ ಕೃತ್ಯವೇ ಎಂಬುದು ಸ್ಪಷ್ಟವಾಗುತ್ತದೆ.
ಆ ಬಳಿಕ ಗೋಲೀಬಾರ್ ನಡೆದದ್ದು ಯೋಗಿ ಆಡಳಿತದ ಉತ್ತರ ಪ್ರದೇಶದಲ್ಲಿ. ಮೂರು ದಿನಗಳ ಕಾಲ ಮುಂದುವರೆದಿದ್ದ ಪ್ರತಿಭಟನೆಯಲ್ಲಿ ಜೀವ ಕಳೆದುಕೊಂಡದ್ದು ಬರೋಬ್ಬರಿ ಮೂವತ್ತು ಮಂದಿ. ಅಲ್ಲೂ ಕೂಡಾ ಪೋಲೀಸರು ವಿಕೃತಿ ಮೆರೆದರು. ಪ್ರತಿಭಟನಾಕಾರರನ್ನು ಅಟ್ಟಾಡಿಸಿ ಗುಂಡಿಟ್ಟು ಕೊಂದರು. ಅಲ್ಲಿ ಸುರಕ್ಷತೆಯ ಸಂಕೇತವಾದ ಖಾಕಿ ಆಳುವವನ ‘ಮತಾಂಧ ಕಾವಿ’ಗೆ ಶರಣಾಗಿ ಹೋಗಿದ್ದರ ಪರಿಣಾಮ ಈ ಎಲ್ಲಾ ರಾದ್ದಾಂತ ನಡೆದು ಹೋದವು.
ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ಶಾಹೀನ್ ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದಾರೆಂದು ಅರೋಪಿಸಿದ ಯೋಗಿ ಆದಿತ್ಯನಾಥ್, “ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾವು ಎಲ್ಲ ಉಗ್ರಗಾಮಿಗಳನ್ನು ಗುರುತಿಸಿ, ಬಿರಿಯಾನಿ ಕೊಡುವ ಬದಲಿಗೆ ಗುಂಡು ಹೊಡೆಯುತ್ತಿದ್ದೇವೆ” ಎಂದು ಉಗ್ರ ಭಾಷಣ ಮಾಡಿದ್ದರು. ಪ್ರತಿಭಟನಾಕಾರರನ್ನು ಉಗ್ರರಾಗಿ ಚಿತ್ರೀಕರಿಸಿ ಗುಂಡಿಕ್ಕುವ ಮೂಲಕ ಅಪರಾಧವನ್ನು ಕಾನೂನುಬದ್ದಗೊಳಿಸುವ ಬಿಜೆಪಿ ಸರಕಾರದ ದುಷ್ಟತೆಯನ್ನು ಯೋಗಿ ಮಾತು ಸೂಚಿಸುತ್ತದೆ.
ದೆಹಲಿಯ ಜಾಮಿಯಾ ವಿವಿ ಬಳಿ ರಾಮ್ ಗೋಪಾಲ್ ಎಂಬಾತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ. ತಾನು ರಾಮ ಭಕ್ತನೆಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ಆತ ಫೈರಿಂಗ್ಗೂ ಮುನ್ನ ‘ಶಾಹೀನ್ ಬಾಗ್ ಖೇಲ್ ಖತಂ ಹೋಗಯಾ’ ಎಂದು ಪೋಸ್ಟ್ ಹಾಕಿದ್ದ. ಆಘಾತಕಾರಿ ವಿಚಾರವೆಂದರೆ ಆತ ಅರ್ಧ ನಿಮಿಷಗಳ ಕಾಲ ಪಿಸ್ತೂಲ್ ಹಿಡಿದು ಕೂಗಾಡುತ್ತಿದ್ದರೂ ಪೋಲೀಸರು ಕೈ ಕಟ್ಟಿ ನಿಂತಿದ್ದರು. ಹಾಗಾದರೆ ಅವನ ಕೈಗೆ ಪಿಸ್ತೂಲ್ ನೀಡಿದ್ದಾದರೂ ಯಾರು..? ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆತನಿಗೆ ಪ್ರಚೋದನೆಯಾದರೂ ಎಲ್ಲಿಂದ ಬಂತು..? ಸಾಮಾನ್ಯನ ಕೈಗೂ ಪ್ರಾಣ ತಿನ್ನುವ ಪಿಸ್ತೂಲ್, ಬಂದೂಕುಗಳು ಬಂದರೆ ದೇಶದ ಭದ್ರತೆಗೆ ಗಂಡಾಂತರ ಎರಗಿದೆ ಎಂದರ್ಥವಲ್ಲವೇ..?
ಆ ಬಳಿಕ ಶಾಹೀನ್ ಬಾಗ್ನಲ್ಲೂ ಪಿಸ್ತೂಲ್ ಸದ್ದು ಮಾಡಿತು. ಕಪಿಲ್ ಗುಜ್ಜಾರ್ ಎಂಬಾತ ಜೈ ಶ್ರೀರಾಮ್ ಎಂದು ಕೂಗುವ ಮೂಲಕ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ. ತೀರಾ ಮೊನ್ನೆ, ದಿಲ್ಲಿ ಹಿಂಸಾಚಾರದ ಮೊದಲು ಶಾರೂಖ್ ಎಂಬಾತ ಪ್ರತಿಭಟನಾಕಾರರ ನೇರವೂ, ಪೋಲೀಸರ ನೇರವೂ ಪಿಸ್ತೂಲ್ ಹಿಡಿದು ಅಡ್ಡಾದಿಡ್ಡಿ ರಸ್ತೆಯಲ್ಲಿ ರೌರವ ಮೆರೆದಿದ್ದ. ಇದುವೆ ದಿಲ್ಲಿ ಹಿಂಸಾಚಾರಕ್ಕೆ ನಾಂದಿ ಹಾಡಿತೆಂದು ಹೇಳಲಾಗುತ್ತದೆ. ವ್ಯಂಗ್ಯವೆಂದರೆ ಆತನ ಬಂಧನವಾಗುವಾಗ ಇಡೀ ದಿಲ್ಲಿ ಹೊತ್ತಿಉರಿದು ವಾರಗಳೆ ಕಳೆದುಹೋಗಿತ್ತು. ಪೋಲೀಸರ ನೆತ್ತಿಯ ನೇರಕ್ಕೆ ಪಿಸ್ತೂಲ್ ತೋರಿಸಿ ಬೆದರಿಸುವವರನ್ನು ಬಂಧಿಸಲಾಗದಷ್ಟು ದಿಲ್ಲಿ ಪೋಲೀಸ್ ವ್ಯವಸ್ಥೆ ಮತ್ತು ಸರಕಾರ ವಿಫಲವಾಯಿತೆ..? ಒಬ್ಬ ವ್ಯಕ್ತಿಯನ್ನು ಜೈಲಿಗಟ್ಟಲು ಇಷ್ಟು ವಿಳಂಬವಾದದ್ದರೂ ಯಾಕೆ..? ಅಥವಾ ಮುಸ್ಲಿಂ ಎಂಬ ನಾಮ ಮಾತ್ರಕ್ಕೆ ಆತನನ್ನು ಇಡೀ ದಿಲ್ಲಿ ಹಿಂಸಾಚಾರದ ಕೇಂದ್ರ ಬಿಂದುವನ್ನಾಗಿಸುವ ಹುನ್ನಾರ ನಡೆದಿರಬಹುದೇ..? ಆತನನ್ನೇ ಹೈಲೆಟ್ ಮಾಡಿ, ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳ ನಡೆ ಅಂಥದ್ದೊಂದು ಗುಮಾನಿಗಳಿಗೆ ದಾರಿ ಮಾಡುತ್ತಿದೆ.
ಈಗೀಗ ಬಿಜೆಪಿ ನಾಯಕರ ಬಾಯಿಯೆ ಬಂದೂಕುಗಳಾಗುತ್ತಿದೆ. ಗುಂಡಿಕ್ಕುವ, ಲಾಠಿ ಬೀಸುವ, ಕೊಂದು ಹಾಕುವ, ಹೊಡೆದುರಳಿಸುವ ಬೆಂಕಿ ಮಾತುಗಳನ್ನೇ ಉದುರಿಸುತ್ತಿದ್ದಾರೆ. “ಸಿಎಎ ಪ್ರತಿಭಟನಾಕಾರರನ್ನು ನಮ್ಮ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ, ಅಸ್ಸಾಂ, ಯುಪಿಯಲ್ಲಿ ನಾಯಿಗಳಂತೆ ಕೊಂದು ಹಾಕಿದ್ದಾರೆಂದು” ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಇತ್ತೀಚೆಗೆ ಹೇಳಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ತನ್ನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ “ದೇಶ್ ಕೆ ಗದ್ದಾರೋಂ ಕೋ ಗೋಲಿಮಾರೋ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ)” ಎಂದು ಬಹಿರಂಗವಾಗಿ ಘೋಷಣೆ ಕೂಗಿದ್ದಲ್ಲದೆ ಸಭಿಕರೊಂದಿಗೆ ಹೇಳಿಸಿದ್ದರು ಕೂಡ. ಆದ್ದರಿಂದ ದಿಲ್ಲಿ ಹಿಂಸಾಚಾರದಲ್ಲಿ ಕಪಿಲ್ ಮಿಶ್ರಾನಂತೆ ಅನುರಾಗ್ ಠಾಕೂರ್ ಕೂಡಾ ಪ್ರಧಾನ ಪಾತ್ರವಹಿಸಿದ್ದರು. ಆ ಬಳಿಕ ಇದು ಸಾರ್ವಜನಿಕ ಸ್ಥಳಗಳಲ್ಲೂ ಕೇಳಿಬರತೊಡಗಿದವು. ತೀರಾ ಇತ್ತೀಚೆಗೆ ಮೊನ್ನೆ ಕೊಲ್ಕತ್ತಾದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಆಯೋಜಿಸಿದ್ದ ರ್ಯಾಲಿಯಲ್ಲೂ ಈ ಘೋಷಣೆಗಳು ಕೇಳಿ ಬಂದವು. ಇಂತಹ ಹಿಂಸಾತ್ಮಾಕ ಘೋಷಣೆಗಳು ದೇಶದ ಭವಿಷ್ಯವನ್ನು ಕರಾಳತೆಯತ್ತ ಕೊಂಡೊಯ್ಯಲಿದೆ ಎಂಬುದರಲ್ಲಿ ಸಂಶಯವಿಲ್ಲ. ಇದು ಬಿಜೆಪಿಯ ಹಿಂಸಾ ವೃತ್ತಾಂತವನ್ನು ಅನಾವರಣ ಮಾಡುತ್ತದೆ. ಹಾಗೆ ನೋಡಿದರೆ ಬಂದೂಕಿಗೂ ಸಂಘಪರಿವಾರಕ್ಕೂ ಹುಟ್ಟಿನಿಂದಲೇ ನಂಟಿದೆ. ಗಾಂಧೀಜಿಯ ಎದೆ ಸೀಳುವ ಮೂಲಕ ಅದು ದೇಶದಲ್ಲಿ ಮೊದಲ ಹಿಂಸೆಯ ಮೊಹರನ್ನು ಒತ್ತಿತು. ಪನ್ಸಾರೆ, ದಾಬೋಲ್ಕರ್, ಕಲ್ಬುರ್ಗಿ, ಗೌರಿ ಮುಂತಾದ ಸಮಾಜದ ಸದಾ ‘ಎಚ್ಚರಿಕೆ’ಗಳನ್ನು ಹೊಸಕಿ ಹಾಕಿದ್ದೂ ಇದೇ ಸೈದ್ದಾಂತಿಕ ‘ಭಿನ್ನತೆಯ ಬಂದೂಕು’ಗಳು.
ಸಾರ್ವಜನಿಕ ವಲಯದಲ್ಲಿ ಪೋಲೀಸರ ಎದುರಲ್ಲೆ ನಿರ್ಭೀತಿಯಿಂದ ಪಿಸ್ತೂಲ್ ಹಿಡಿದು ತಿರುಗುತ್ತಿದ್ದಾರೆ. ಆತ್ಮ ರಕ್ಷಣೆಗಾಗಿ ಮತ್ತು ವಿಕೋಪಕ್ಕೆ ತಿರುಗುವ ಸನ್ನಿವೇಶವನ್ನು ಹತೋಟಿಗೆ ತರಲೋಸ್ಕರ ಮಾತ್ರ ಬಳಸಬೇಕಾದ ಬಂದೂಕನ್ನು ಸಾಮಾನ್ಯನ ಎದೆ ನೇರಕ್ಕೆ ಇಡುತ್ತಿದ್ದಾರೆಂದರೆ ದೇಶದಲ್ಲಿ ಪ್ರಾಣಕ್ಕಿರುವ ಬೆಲೆಯಾದರೂ ಏನು..? ಗೂಂಡಾಗಳ ಕೈಯ್ಯಲ್ಲಿ ಈ ಬಂದೂಕು, ಪಿಸ್ತೂಲ್ಗಳಿದ್ದರೆ ಅದು ಮಾರಕಾಸ್ತ್ರಗಳಾಗುತ್ತದೆ. ಆದರೆ ಪ್ರಭುತ್ವದ ಪರವಾಗಿರುವವರ ಮತ್ತು ಅವರದೆ ವ್ಯವಸ್ಥೆಗೆ ಪೂರಕವಾಗಿರುವ ಪೋಲೀಸರ ಕೈಯ್ಯಲ್ಲಿರುವ ಈ ಅಸ್ತ್ರಗಳು ಸಾಮಾನ್ಯನಿಗೆ ಬೆದರಿಕೆಯಾದರೆ ಮಾರಕಾಸ್ತ್ರವೆನಿಸುವುದಿಲ್ಲವೇಕೆ..?. ಮೊನ್ನೆ ದಿಲ್ಲಿಯಲ್ಲಿ ಮೃತಪಟ್ಟವರ ಪೈಕಿ ಶೇಕಡಾ ಐವತ್ತರಷ್ಟು ಮಂದಿಯೂ ಗುಂಡೇಟಿಗೆ ಬಲಿಯಾದವರೆಂದು ಮಾಧ್ಯಮಗಳು ಪ್ರಸಾರ ಮಾಡಿದವು. ಇದು ಸಾಮಾನ್ಯನ ಬದುಕು ಬಂದೂಕಿನ ಭಯಾನಕ ಬಾಯಿಗೆ ಬಂದು ಬಿಟ್ಟಿದೆಯೆಂದರ್ಥವಲ್ಲವೇ..?
ಬಂದೂಕುಗಳು ಸಮಾಜದಲ್ಲಿ ಅಭದ್ರತೆಗೆ, ಆತಂಕಕ್ಕೆ ಯಾವಾಗ ಕಾರಣವಾಗುತ್ತದೋ ಆಗ ಪ್ರಭುತ್ವ ತನ್ನ ನಿರಂಕುಶತ್ವದ ಪಾರಮ್ಯ ತಲುಪಿದೆಯೆಂದರ್ಥ. ಅದಕ್ಕೆ ಇಂದಿನ ವಿದ್ಯಾಮಾನಗಳೇ ಸಾಕ್ಷಿ.
(ಲೇಖಕರು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)