ಮೋದಿ ಸರ್ಕಾರದ ತಪ್ಪಾದ ಜಿಎಸ್ಟಿಯು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್ಎಂಇ) ನಾಶಪಡಿಸಿತು. ಈಗ ಹೊಸ ಕೃಷಿ ಕಾನೂನುಗಳು ನಮ್ಮ ರೈತರನ್ನು ಗುಲಾಮರನ್ನಾಗಿ ಮಾಡುತ್ತವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ನೂತನ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟ – ಭಾರತ್ ಬಂದ್ ಬೆಂಬಲಿಸುವುದಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ.
A flawed GST destroyed MSMEs.
The new agriculture laws will enslave our Farmers.#ISupportBharatBandh
— Rahul Gandhi (@RahulGandhi) September 25, 2020
“ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಯತ್ನಿಸುತ್ತಿದೆ. ದೋಷ ಪೂರಿತ ಜಿಎಸ್ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಮುಗಿಸಿದ ಹಾಗೆ ಕೃಷಿ ಕಾಯ್ದೆ ಮೂಲಕ ರೈತರನ್ನು ಮುಗಿಸಲು ಸಂಚು ನಡೆಸುತ್ತಿದೆ” ಎಂದು ರಾಹುಲ್ ಕಿಡಿಕಾರಿದ್ದಾರೆ.
ಕೃಷಿ ಮಸೂದೆಗಳನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ “ಬಿಜೆಪಿಯ ಕೃಷಿ ಮಸೂದೆ ಈಸ್ಟ್ ಇಂಡಿಯಾ ಕಂಪನಿ ರಾಜ್ ಅವರನ್ನು ನೆನಪಿಸುತ್ತದೆ. ಈ ಅನ್ಯಾಯ ನಡೆಯಲು ನಾವು ಬಿಡುವುದಿಲ್ಲ” ಎಂದಿದ್ದಾರೆ.
“ಈ ಕಾಯ್ದೆಗಳು ರೈತರ ಕನಿಷ್ಠ ಬೆಂಬಲ ಬೆಲೆಯ ಹಕ್ಕನ್ನು ಕಿತ್ತಕೊಳ್ಳುತ್ತವೆ. ಗುತ್ತಿಗೆ ಕೃಷಿಯ ಮೂಲಕ ರೈತರನ್ನು ಗುಲಾಮರನ್ನಾಗಿಸುತ್ತವೆ. ರೈತರಿಗೆ ಬೆಲೆಯೂ ಇಲ್ಲ, ಗೌರವವೂ ಇಲ್ಲದೇ ರೈತ ತನ್ನ ಜಮೀನಿನಲ್ಲಿ ಕಾರ್ಮಿಕರನಾಗುವ ಪರಿಸ್ಥಿತಿ ಬರಲಿದೆ” ಎಂದು ಪ್ರಿಯಾಂಕಾ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಭಾರತ ಬಂದ್ ಹಿನ್ನೆಲೆ ರೈತ ಸಂಘಟನೆಗಳು, ರೈತಪರ ಹೋರಾಟಗಾರರು, ವಿರೋಧ ಪಕ್ಷಗಳು ಬೀದಿಗಿಳಿದಿವೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳ ರೈತ ಸಂಘಗಳು “ಭಾರತ್ ಬಂದ್” ನಲ್ಲಿ ಭಾಗವಹಿಸಿವೆ.
ಪ್ರಮುಖ ರೈತ ಸಂಘಟನೆಗಳಾದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್ಸಿಸಿ), ಅಖಿಲ ಭಾರತ ಕಿಸಾನ್ ಮಹಾಸಂಘ್(ಎಐಕೆಎಂ) ಮತ್ತು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಕರೆ ನೀಡಿದ್ದ ಪ್ರತಿಭಟನೆಗೆ ಕಾಂಗ್ರೆಸ್, ಡಿಎಂಕೆ, ಎಎಪಿ, ಆರ್ಜೆಡಿ, ತೃಣಮೂಲ ಕಾಂಗ್ರೆಸ್ ಮತ್ತು ಕನಿಷ್ಠ 10 ಕೇಂದ್ರ ಕಾರ್ಮಿಕ ಸಂಘಗಳು ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಮಸೂದೆಗಳನ್ನು ರದ್ದುಗೊಳಿಸದ ಹೊರತು ತಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಒಪ್ಪುವುದಿಲ್ಲ, ಕಾರ್ಪೊರೇಟ್ ಕಂಪನಿಗಳ ಪರ ನಿಂತಿರುವ ಕೇಂದ್ರ ರಾಜ್ಯ ಸರ್ಕಾರಗಳಿಗೆ ಧಿಕ್ಕಾರ ಎಂಬ ಘೋಷಣೆಗಳು ಕೇಳಿಬಂದವು. ಪೊಲೀಸರು ಹೋರಾಟಗಾರರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ: ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆ