Homeಮುಖಪುಟಬಂಡಾಯ ಕವಿ, ಕಾದಂಬರಿಕಾರ ಭಾಸ್ಕರಾಚಾರ್ ಇನ್ನಿಲ್ಲ

ಬಂಡಾಯ ಕವಿ, ಕಾದಂಬರಿಕಾರ ಭಾಸ್ಕರಾಚಾರ್ ಇನ್ನಿಲ್ಲ

- Advertisement -
- Advertisement -

ರಾಜ್ಯದಲ್ಲಿ ಬಂಡಾಯ ಸಾಹಿತ್ಯ ಚಳವಳಿ ಉಚ್ರಾಯ ಸ್ಥಿತಿಯಲ್ಲಿದ್ದಾಗ ತುಮಕೂರು ಜಿಲ್ಲೆಯ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಮುನ್ನಡೆಸಿದ್ದ ಡಾ.ಸೋ.ಮು.ಭಾಸ್ಕರಾಚಾರ್ ನಿಧನರಾಗಿದ್ದಾರೆ. ಎಲ್.ಎನ್. ಮುಕುಂದರಾಜ್ ಅವರಂಥ ಹಲವು ಮಂದಿ ಸಾಹಿತಿಗಳಿಗೆ ಗುರುಗಳಾಗಿದ್ದ ಭಾಸ್ಕರಾಚಾರ್ ಉತ್ತಮ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು.

ತೊಂಬತ್ತರ ದಶಕದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ನಡೆಸಿದ ವಿಜ್ಞಾನ ಚಳವಳಿಯಲ್ಲಿ ಭಾಗವಹಿಸಿ ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವವನ್ನು ಮೂಡಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. ಸದಾ ಹೆಗಲಲ್ಲಿ ಒಂದು ಚೀಲ ಇರುತ್ತಿತ್ತು. ಅದರಲ್ಲಿ ಕೆಲವು ಪುಸ್ತಕಗಳು ಇರುತ್ತಿದ್ದವು. ವಿದ್ಯಾರ್ಥಿಗಳು ಮತ್ತು ಸ್ನೇಹಿತರನ್ನು ಬಹುವಾಗಿ ಪ್ರೀತಿಸುತ್ತಿದ್ದ ಭಾಸ್ಕರಾಚಾರ್ ತುಮಕೂರು ಜಿಲ್ಲೆಯ ಪ್ರಮುಖ ಕವಿಯಾಗಿ ಗುರುತಿಸಿಕೊಂಡಿದ್ದರು.

ತುಮಕೂರು ಜಿಲ್ಲೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಯನ್ನು ಮುನ್ನಡಿಸಿದ ಪ್ರಮುಖರಲ್ಲಿ ಭಾಸ್ಕರಾಚಾರ್ ಕೂಡ ಒಬ್ಬರು. ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ ಹಲವು ಸಭೆ, ಸಮಾರಂಭಗಳನ್ನು ಸಂಘಟಿಸಿದ್ದರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಜನಮುಖಿ ಹೋರಾಟಗಳಲ್ಲಿ ಜೀವಿತದ ಕೊನೆಯವರೆಗೂ ತಮ್ಮನ್ನು ತೊಡಿಸಿಕೊಂಡಿದ್ದರು. ವಿಚಾರಸಂಕಿರಣ, ಕಾರ್ಯಾಗಾರಗಳನ್ನು ಸಂಘಟಿಸಿ ಬಂಡಾಯ ಸಾಹಿತ್ಯಕ್ಕೆ ತಮ್ಮ ದನಿಯನ್ನೂ ಕೂಡಿಸಿದವರು.

ಒಳತೋಟಿ (ಕಥಾ ಸಂಕಲನ), ಸುತ್ತಾಟದ ಸುಳಿಯಲ್ಲಿ, ಅಂಟುಮಣ್ಣಿನ ನಂಟು (ಕಾದಂಬರಿ), ಆಲ್ಬರ್ಟ್ ಐನ್ ಸ್ಟೀನ್ (ವ್ಯಕ್ತಿಚಿತ್ರಣ), ಸರ್ದಾರ್ ಭಗತ್ ಸಿಂಗ್ (ಜೀವನ ಚಿತ್ರಣ), ಗಾಂಧೀ ತಾ…ತಾ..(ಕವನ ಸಂಕಲನ), ದವನದಂಡ (ಹೋರಾಟಗಾರ ಕೆ.ಆರ್.ನಾಯಕ್, ಪ್ರಬಂಧಕಾರ ಎಚ್.ಜಿ.ಸಣ್ಣಗುಡ್ಡಯ್ಯ, ಹಿರಿಯ ಜೀವ ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಚಿಂತಕ ಕೆ.ದೊರೈರಾಜ್ ಹೀಗೆ ಹಲವರ ಕುರಿತ ಬರಹಗಳು ) ವ್ಯಕ್ತಿಚಿತ್ರಗಳು, ಬಾಳಪುಟದ ಕೊನೆಗಾಲದಲ್ಲಿ ಕನ್ನಡ ಸಾಹಿತ್ಯದಲ್ಲಿ ತಾಯಿ ಕುರಿತು ಮಹಾಪ್ರಬಂಧವನ್ನು ಬಿ.ಎಂ.ಪುಟ್ಟಯ್ಯ ಮಾರ್ಗದರ್ಶನದಲ್ಲಿ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. ಹತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದರೂ ವಿಮರ್ಶಾ ಕ್ಷೇತ್ರ ಭಾಸ್ಕರಾಚಾರ್ ಅವರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಹಾಗೂ ಲೇಖಕಿ ಬಾ.ಹ.ರಮಾಕುಮಾರಿ ಹೇಳುವಂತೆ, ಭಾಸ್ಕರಾಚಾರ್ ಬಿ.ಎ.ಓದುತ್ತಿದ್ದಾಗ ನನ್ನ ಕ್ಲಾಸ್ ಮೇಟ್ ಆಗಿದ್ದರು. ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಮೊದಲು ಅವರಿಗೆ ಕೆಜಿಐಡಿ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸ ಸಿಕ್ಕಿತು. ಅದನ್ನು ತೊರೆದು ಬಂದರು. ವಿದ್ಯಾವಾಹಿನಿ ಕಾಲೇಜಿ ನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ವಿಜ್ಞಾನ ಕೇಂದ್ರದ ಕಾರ್ಯದರ್ಶಿಯಾಗಿ, ಕಸಾಪ ಕಾರ್ಯದರ್ಶಿಯಾಗಿ, ಕನ್ನಡ ಉಪನ್ಯಾಸಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಟರು, ಕಥಾಕೀರ್ತನಕಾರರೂ ಕೂಡ ಆಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಕವಿ ಭಾಸ್ಕರಾಚಾರ್ ಹಿಂದುಳಿದ ವರ್ಗಕ್ಕೆ ಸೇರಿದವರು. ಆದ್ದರಿಂದಲೇ ಏನೋ ಅವರ ಸಾಹಿತ್ಯವನ್ನು ವಿಮರ್ಶಕರು ಗುರುತಿಸುವ ಗೋಜಿಗೆ ಹೋಗಲಿಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಆಡಳಿತದಲ್ಲಿ ಕನ್ನಡ ಭಾಷೆ ವಿಷಯ ಕುರಿತ ಕಾರ್ಯಾಗಾರದಲ್ಲಿ ತುಮಕೂರು ಜಿಲ್ಲೆಯಿಂದ ಸಾಹಿತಿಗಳಾದ ಡಾ.ಸೋ.ಮು.ಭಾಸ್ಕರಾಚಾರ್ ಮತ್ತು ಎನ್.ನಾಗಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...