ದಿನೇ ದಿನೇ ವ್ಯಾಪಿಸುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಮುಖ್ಯ ಕೆಲಸವಾಗಿದ್ದು ಈ ಕಾರಣಕ್ಕೆ ಕನಿಷ್ಠ ಮಾರ್ಚ್ 31ರವರೆಗೆ ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಬೇಕಾಗಿದೆ ಎಂದು ಸಿಎಂ ಯಡಿಯೂರಪ್ಪನವರಿಗೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸದ್ಯಕ್ಕೆ ವಿದೇಶಗಳಿಂದ ಬಂದವರಿಂದ ಕೊರೊನಾ ವೈರಸ್ ಹರಡುತ್ತಿದ್ದು, ಮುಂದೆ ಅದು ಇಲ್ಲಿರುವವರಿಂದಲೂ ತೀವ್ರಗತಿಯಲ್ಲಿ ಹರಡುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ರೋಗಿಗಳನ್ನು ನೋಡಿಕೊಳ್ಳಲು ವೈದ್ಯ ಸಿಬ್ಬಂದಿಯಾಗಲಿ, ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲವಾದ್ದರಿಂದ ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ನಿನ್ನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಡೀ ರಾಜ್ಯ ಲಾಕ್ ಡೌನ್ ಮಾಡಿದರೆ ಮಾತ್ರ ದೊಡ್ಡ ಅಪಾಯ ತಡೆಗಟ್ಟಬಹುದು ಎಂಬ ಸಲಹೆ ಎಲ್ಲರಿಂದಲೂ ಕೇಳಿಬಂದಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆರ್ಥಿಕ ಹೊಡೆತ ಬೀಳುತ್ತದೆ. ಆದರೂ ಅದನ್ನು ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಡೀ ರಾಜ್ಯ ಲಾಕ್ ಡೌನ್ ಮಾಡುವುದು ಬೇಡ ಎಂದು ಹೇಳಿರುವ ಸಿಎಂ ಯಡಿಯೂರಪ್ಪನವರು, ತಕ್ಷಣಕ್ಕೆ 9 ಜಿಲ್ಲೆಗಳು ಲಾಕ್ ಡೌನ್ ಮಾಡೋಣ. ಮುಂದೆ ಪರಿಸ್ಥಿತಿ ನೋಡಿಕೊಂಡು ತಿರ್ಮಾನ ಮಾಡೋಣ ಎಂದು ಹೇಳಿದ್ದಾರೆ.