ಬಿಹಾರದಿಂದ ತಮಿಳುನಾಡಿಗೆ ವಲಸೆ ಬಂದಿರುವ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿ ಜೊತೆಗೆ ಹಲ್ಲೆಯ ಕೆಲವು ನಕಲಿ ವೀಡಿಯೊಗಳನ್ನು ಹಂಚಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಬಿಹಾರ ಪೊಲೀಸರಿಗೆ ಬೇಕಾಗಿದ್ದ ಯೂಟ್ಯೂಬರ್ Manish Kashyap, ಶನಿವಾರ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ತಮಿಳುನಾಡಿನಲ್ಲಿ ವಲಸಿಗರನ್ನು ಕೊಲ್ಲುವ ಮತ್ತು ಥಳಿಸುವ ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ತೊಡಗಿದೆ” ಎಂಬ ಆರೋಪದ ಮೇಲೆ ಬಿಹಾರ ಪೊಲೀಸ್ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಕಶ್ಯಪ್ ಮತ್ತು ಇತರರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದೆ.
ಮಜೌಲಿಯಾದಲ್ಲಿ ಡಿಐಜಿ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಯೂಟ್ಯೂಬರ್ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಗೆ ಮುಂದಾದಗ ಯೂಟ್ಯೂಬರ್ ಕಶ್ಯಪ್ ಜಗದೀಶ್ಪುರ ಪೊಲೀಸ್ ಠಾಣೆಯಲ್ಲಿ ಶರಣಾದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
तमिलनाडु में कामकाजी बिहार के निवासियों के लिए असत्य, भ्रामक एवं उन्माद फ़ैलाने वाले वीडियो को प्रसारित करने एवं आर्थिक अपराध थाना कांड सं0 3/23 तथा 4/23 के अभियुक्त मनीष कश्यप ने बिहार पुलिस एवं EOU के दबिश के कारण बेतिया के जगदीशपुर थाने में किया आत्मसमर्पण।#BiharPolice
— Bihar Police (@bihar_police) March 18, 2023
ಕಶ್ಯಪ್ನನ್ನು ಬಿಹಾರ ಮತ್ತು ತಮಿಳುನಾಡು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. “ಬಿಹಾರ ಪೊಲೀಸರು ಅವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರೆ, ತಮಿಳುನಾಡು ಪೊಲೀಸರು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ” ಎಂದು ಆರ್ಥಿಕ ಅಪರಾಧ ಘಟಕದ (ಇಒಯು) ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಎನ್ಎಚ್ ಖಾನ್ ಮಾಹಿತಿ ನೀಡಿದ್ದಾರೆ.
ಕಶ್ಯಪ್ ಮತ್ತು ಮತ್ತೊಬ್ಬ ಆರೋಪಿ ಯುವರಾಜ್ ಸಿಂಗ್ ರಜಪೂತ್ ವಿರುದ್ಧ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ್ದರು. ಶರಣಾಗತಿಗಾಗಿ ಅವರ ಮೇಲೆ ಒತ್ತಡ ಹೇರಲು ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರು.
”ಆರ್ಥಿಕ ಅಪರಾಧ ಘಟಕ ರಚಿಸಿರುವ ಆರು ತಂಡಗಳು ಪಾಟ್ನಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ನಿನ್ನೆಯಿಂದ (ಶುಕ್ರವಾರ) ವಿವಿಧ ಸ್ಥಳಗಳು ಮತ್ತು ಅಡಗುತಾಣಗಳಲ್ಲಿನ ಅವರ ಸ್ಥಳಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಬಂಧನ ಮತ್ತು ಇತರ ಕಾನೂನು ಕ್ರಮಗಳ ಭಯದಿಂದ ಅವರು ಶನಿವಾರ ಬೆಟ್ಟಿಯ ಜಗದೀಶ್ಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ” ಎಂದು ಎಡಿಜಿ ತಿಳಿಸಿದ್ದಾರೆ.
ಇದನ್ನೂ ಓದಿ: ವಲಸಿಗರ ವಿಚಾರದಲ್ಲಿ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಸಿಎಂ ಸ್ಟಾಲಿನ್ ವಾಗ್ದಾಳಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧ ಘಟಕ ಮಾರ್ಚ್ 6ರಂದು ಕಶ್ಯಪ್ ಸೇರಿದಂತೆ ಅಮನ್ ಕುಮಾರ್, ರಾಕೇಶ್ ತಿವಾರಿ ಮತ್ತು ಯುವರಾಜ್ ಸಿಂಗ್ ರಜಪೂತ್ ಎನ್ನುವ ನಾಲ್ವರ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಿದೆ. ಮೊದಲ ಎಫ್ಐಆರ್ನ ತನಿಖೆಗೆ ಸಂಬಂಧಿಸಿದಂತೆ ಆರ್ಥಿಕ ಅಪರಾಧ ಘಟಕವು ಈಗಾಗಲೇ ಜಮುಯಿಯಿಂದ ಅಮನ್ ಕುಮಾರ್ನನ್ನು ಬಂಧಿಸಿದೆ.
ತಮಿಳುನಾಡಿನಲ್ಲಿ ವಲಸಿಗರನ್ನು ಹೊಡೆದು ಕೊಲ್ಲುವ 30 ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಕಾರ್ಮಿಕರಲ್ಲಿ ಭೀತಿಯನ್ನು ಹರಡಿದೆ ಎಂದು ಆರ್ಥಿಕ ಅಪರಾಧ ಘಟಕದ ತನಿಖೆಯು ಕಂಡುಹಿಡಿದಿದೆ ಎಂದು ಬಿಹಾರ ಪೊಲೀಸ್ (ಪ್ರಧಾನ ಕಚೇರಿ) ಹೆಚ್ಚುವರಿ ಮಹಾನಿರ್ದೇಶಕ ಜೆಎಸ್ ಗಂಗ್ವಾರ್ ಕಳೆದ ವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಈ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಪೊಲೀಸರು 13 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದಕ್ಕೂ ಮೊದಲು, ಬಿಹಾರ ಸರ್ಕಾರವು ತಮಿಳುನಾಡಿಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಉನ್ನತ ಅಧಿಕಾರಿಗಳ ತಂಡವನ್ನು ಕಳುಹಿಸಿತ್ತು.