ಅಂತೂ ಬಿಜೆಪಿ ಅಲ್ಲಲ್ಲ…, ಕ್ಷಮಿಸಿ, ಅಮಿತ್ ಶಾ ಮತ್ತು ಬಿ.ಎಲ್ ಸಂತೋಷ್ ಕರ್ನಾಟಕದ ಸಚಿವ ಮಹಾಶಯರಿಗೆ ಖಾತೆಗಳನ್ನು ಅನುಗ್ರಹಿಸಿದ್ದಾರೆ. ಜೊತೆಗೆ ಕರ್ನಾಟಕದ ಮೇಲೆ ಮೂವರು ಉಪ ಮುಖ್ಯಮಂತ್ರಿಗಳನ್ನು ಹೇರಿದ್ದಾರೆ.
ಮೂವರು ಡಿಸಿಎಂ ಎಂಬುದರ ಅರ್ಥ ಸಿಎಂ ಡಮ್ಮಿ ಎಂದೇ! ಮೂವರು ಡಿಸಿಎಂಗಳ ಪೈಕಿ ಗೋವಿಂದ ಕಾರಜೋಳರನ್ನು ಬಿಟ್ಟರೆ ಲಕ್ಷ್ಮಣ ಸವದಿ ಮತ್ತು ಅಶ್ವಥ್ ನಾರಾಯಣರು ಯಡಿಯೂರಪ್ಪನವರ ಹಿಡಿತಕ್ಕೆ ಸಿಗುವವರಲ್ಲ. ಹೀಗಾಗಿ ಅಷ್ಟರಮಟ್ಟಿಗೆ ಯಡಿಯೂರಪ್ಪ ದೇಶದ ನಂಬರ್ 1 ಡಮ್ಮಿ ಸಿಎಂ!
ಇಲ್ಲಿ ವಿಚಿತ್ರವೆಂದರೆ, ಒಂದು ಬಾರಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್, ಇತರ ಹಿರಿತಲೆಗಳಾದ ಈಶ್ವರಪ್ಪರಂಥರಿಗೂ ಡಿಸಿಎಂ ಹುದ್ದೆ ಇಲ್ಲ, ಹಾಗೆಯೇ ಒಂದು ಸಲ ಡಿಸಿಎಂ ಆಗಿದ್ದ ಆರ್ ಅಶೋಕ್ ಮತ್ತು ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಟಿ. ರವಿಗೂ ಆ ಭಾಗ್ಯವಿಲ್ಲ.
‘ನೀಲಿ ಚಿತ್ರವೇ’ ಕೇಸರಿ ಪಕ್ಷಕ್ಕೆ ಮಾನದಂಡವಾಯಿತೆ?
ಡಿಸಿಎಂಗಳನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಿದ್ದಾರೆ ಎಂಬುದನ್ನು ನೋಡುತ್ತ ಹೋದರೆ ಗಾಬರಿ ಬೀಳುತ್ತೀರಿ. ಹಿರಿಯ ದಲಿತ ಸಚಿವ ಗೋವಿಂದ ಕಾರಜೋಳರ ಆಯ್ಕೆಯೇನೋ ಸರಿಯಾಗಿದೆ. ಆದರೆ ಅಶ್ವಥ್ ನಾರಾಯಣ್ ಮತ್ತು ಲಕ್ಷ್ಮಣ ಸವದಿ ಆಯ್ಕೆಗೆ ಬಳಸಿದ ಮಾನದಂಡವಾದರೂ ಏನು?
ಅದರಲ್ಲೂ ಲಕ್ಷಣ ಸವದಿಯವರಿಗಂತೂ ಈ ಸಲ ಬಂಪರ್ ಲಾಟರಿಯೇ ಹೊಡೆದಿದೆ. ಮೊದಲಿಗೆ ಎಂ.ಎಲ್.ಎ ಯು ಅಲ್ಲದ ಎಂಎಲ್ಸಿಯೂ ಅಲ್ಲದ ಸವದಿಗೆ ಸಚಿವ ಸ್ಥಾನ ನೀಡಲಾಗಿತು. ಅದರ ಹಿಂದೆಯೇ ಅವರಿಗೆ ‘ಲಾಭದಾಯಕ’ ಸಾರಿಗೆ ಖಾತೆ ನೀಡಲಾಯಿತು. ಈಗ ಉಪ ಮುಖ್ಯಮಂತ್ರಿ ಹುದ್ದೆಯ ಗಿಫ್ಟ್!
ಕರ್ನಾಟಕದ ಜನತೆಗೆ ಸವದಿ ಅಂದ ತಕ್ಷಣ ನೆನಪಾಗುವುದು ವಿಧಾನಸಭಾ ಅಧಿವೇಶನದಲ್ಲಿ ಬ್ಲೂ ಫಿಲಂ ವೀಕ್ಷಸಿದ್ದು! ಬ್ರಹ್ಮಚಾರಿ ಬಿ.ಎಲ್ ಸಂತೋಷರಿಗೆ ಸವದಿಯವರ ಈ ‘ಹವ್ಯಾಸ’ವೂ ಇಷ್ಟವಾಗಿರಬಹುದೇ?
ಅಂದಂತೆ, ಅವತ್ತು ಸವದಿಯವರ ಜೊತೆ ಬ್ಲೂ ಪಿಚ್ಚರ್ ನೋಡಿದ ಆರೋಪ ಹೊತ್ತಿದ್ದ ಸಿ.ಸಿ. ಪಾಟೀಲರಿಗೂ ಗಣಿ ಮತ್ತು ಭೂ ವಿಜ್ಞಾನದಂತಹ ಹುಲ್ಲುಗಾವಲನ್ನೇ ನೀಡಲಾಗಿದೆ.. ಇದೇ ಮಾನದಂಡದ ಪ್ರಕಾರ ಅರವಿಂದ ಲಿಂಬಾವಳಿಯವರಿಗೆ ದೊಡ್ಡ ಅನ್ಯಾಯವಾಗಿದೆ. ಸಚಿವ ಸ್ಥಾನವೂ ಇಲ್ಲ, ಡಿಸಿಎಂ ಕೂಡ ಇಲ್ಲ ಅಂದರೆ ಅವರು ತಮ್ಮ ಫೀಲ್ಡ್ ನಲ್ಲಿ ಇನ್ನು ಮಣ್ಣು ಹೊರಬೇಕಾಗಿದೆ ಅನ್ನಿಸುತ್ತೆ.
ಖಾತೆ ಹಂಚಿಕೆ ಮತ್ತು ಡಿಸಿಎಂ ನೇಮಕಾತಿ ಎರಡರಲ್ಲೂ ಯಡಿಯೂರಪ್ಪರಿಗೆ ದೊಡ್ಡ ಹಿನ್ನಡೆಯಾಗಿದೆ. ಇತ್ತ ಸವದಿಯ ಎದುರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಬಚ್ಚಾಗಳಾಗಿದ್ದಾರೆ. ಬಹುಶಃ ಭಿನ್ನಮತ ಸ್ಫೋಟಗೊಳ್ಳಲು ಇದಕ್ಕಿಂತ ಇನ್ನೇನು ಬೇಕು? ವಿಚಿತ್ರವೆಂದರೆ ಈಗ ಯಡಿಯೂರಪ್ಪನವರೇ ಪರಮ ಅತೃಪ್ತರು!
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾದ ಸಿ.ಟಿ ರವಿ: ಕಾರಣವೇನು ಗೊತ್ತೆ?