ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೋನ ವೈರಸ್ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗವು ಸರ್ಕಾರಕ್ಕೆ ನಿರ್ದೇಶಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ರಾಜ್ಯದಲ್ಲಿ “ಪ್ರಧಾನ ಮಂತ್ರಿ ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿತ್ತು.
ಈ ವಿಷಯದಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಅಧಿಕಾರಿಯಿಂದ ಮೊದಲು ಚುನಾವಣಾ ಆಯೋಗ ವರದಿಯನ್ನು ಪಡೆಯಿತು. ನಂತರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಫೋಟೋಗಳನ್ನು ತೆಗೆಯುವಂತೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಮತದಾನದ ವ್ಯಾಪ್ತಿಯ ರಾಜ್ಯಗಳಲ್ಲಿ ಲಸಿಕೆ ಪ್ರಮಾಣಪತ್ರಗಳಲ್ಲಿ ಪಿಎಂ ಮೋದಿಯವರ ಫೋಟೋ ಕಾಣಿಸದಂತೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರಕ್ಕೆ ತಿಳಿಸಲಾಗಿದೆ.
ಮತದಾನ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಬಂಗಾಳದ ಆಡಳಿತ ಪಕ್ಷವು ಕೇಂದ್ರ ಆರೋಗ್ಯ ಸಚಿವಾಲಯ ವಿತರಿಸಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಉಲ್ಲೇಖಿಸಿದೆ. ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರ ಶ್ರಮ-ಸಾಧನೆಯನ್ನು ಪ್ರಧಾನಿ ತಮ್ಮ ಹೆಸರಿಗೆ ವರ್ಗಾಯಿಸಿ ಕೊಳ್ಳುತ್ತಿದ್ದಾರೆ. ಅವರಿಗೆ ಸಿಗಬೇಕಾದ ಗೌರವವನ್ನು ಪ್ರಧಾನಿ ಕದಿಯುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
“ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ಪಿಎಂ ಛಾಯಾಚಿತ್ರ, ಹೆಸರು ಮತ್ತು ಸಂದೇಶವನ್ನು ಇರಿಸುವ ಮೂಲಕ, ಅವರು ತಮ್ಮ ಹುದ್ದೆ ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಲ್ಲದೇ, ಕೋವಿಡ್ ಲಸಿಕೆಗಳ ಉತ್ಪಾದಕರ ಶ್ಲಾಘನೀಯ ಕಾರ್ಯಕ್ಕೆ ಸಿಗಬೇಕಾದ ಮನ್ನಣೆಯನ್ನು ಪ್ರಧಾನಿ ಪಡೆದುಕೊಳ್ಳುತ್ತಿದ್ದಾರೆ. ನಿಸ್ವಾರ್ಥ ವೈದ್ಯರು, ದಾದಿಯರು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ವಿಶಾಲ ಸೈನ್ಯದ ಗೌರವ-ಸಾಧನೆಯನ್ನು ಪ್ರಧಾನಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯೆನ್ ಚುನಾವಣಾ ಸಂಸ್ಥೆಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಚುನಾವಣಾ ಆಯೋಗವು ಪ್ರಧಾನ ಮಂತ್ರಿಯನ್ನು ತಡೆಯಬೇಕು. ಚುನಾವಣೆಯ ಸಮಯದಲ್ಲಿ “ತೆರಿಗೆದಾರರ ವೆಚ್ಚದಲ್ಲಿ ಅನ್ಯಾಯದ ಲಾಭ ಮತ್ತು ಅನಗತ್ಯ ಪ್ರಚಾರವನ್ನು ತೆಗೆದುಕೊಳ್ಳದಂತೆ ಪ್ರಧಾನಿಯನ್ನು ತಡೆಯಬೇಕು” ಎಂದು ಟಿಎಂಸಿ ಸಂಸದ ಒತ್ತಾಯಿಸಿದ್ದರು.
ಆದರೂ ಪ್ರಮಾಣಪತ್ರಗಳು ಇತರ ರಾಜ್ಯಗಳಲ್ಲಿ ಪ್ರಧಾನ ಮಂತ್ರಿಯ ಫೋಟೋಗಳನ್ನು ಹೊಂದಿರಬಹುದು.. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಹಂತದ ವ್ಯಾಕ್ಸಿನೇಷನ್ ಸೋಮವಾರ ಪ್ರಾರಂಭವಾಯಿತು; ಗಂಭೀರ ಕಾಯಿಲೆಗಳಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಜನರು ಕೋವಿಡ್ ಶಾಟ್ಗಳನ್ನು ತೆಗೆದುಕೊಳ್ಳಲು ನೋಂದಾಯಿಸಿಕೊಳ್ಳಬಹುದು.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಮುಂದಿನ ಕೆಲವು ವಾರಗಳಲ್ಲಿ ಚುನಾವಣೆ ಎದುರಿಸಲಿವೆ. ಈ ರಾಜ್ಯಗಳ ಚುನಾವಣೆ ಮಾರ್ಚ್ 27 ರಿಂದ ಪ್ರಾರಂಭವಾಗಲಿದೆ. ಬಂಗಾಳ ಎಂಟು ಹಂತಗಳಲ್ಲಿ ಮತ ಚಲಾಯಿಸಲಿದೆ. ಏಪ್ರಿಲ್ 6 ರಂದು ತಮಿಳುನಾಡು ಮತ್ತು ಕೇರಳ ಒಂದೇ ಸುತ್ತಿನಲ್ಲಿ ಮತ ಚಲಾಯಿಸಲಿವೆ. ಪುದುಚೇರಿಯೂ ಒಂದೇ ದಿನ ಮತ ಚಲಾಯಿಸಲಿದೆ. ಅಸ್ಸಾಂ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮತ ಚಲಾಯಿಸಲಿದೆ.
ಇದನ್ನೂ ಓದಿ: ರೈತ ಹೋರಾಟ: ಬಿಜೆಪಿಗೆ ಮತ ನೀಡದಂತೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಲಿರುವ ಟಿಕಾಯತ್