ಗುಟ್ಕಾ ಪರ ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟರಾದ ಶಾರೂಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ಜಾರಿಗೊಳಿಸಿದೆ ಎಂದು ಅಲಹಬಾಬಾದ್ ಹೈಕೋರ್ಟ್ನ ಲಕ್ನೋ ಪೀಠಕ್ಕೆ ಕೇಂದ್ರ ಸರಕಾರ ಮಾಹಿತಿ ನೀಡಿದೆ.
ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರೂ ಕೂಡ ಹಾನಿಕಾರಕ ತಂಬಾಕು ಉತ್ಪನ್ನಗಳನ್ನು ಪ್ರಚಾರ ಮಾಡುವ ನಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೊರೆ ಹೋದ ನಂತರ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠವು ಸೆ. 2022ರಲ್ಲಿ ಕೇಂದ್ರಕ್ಕೆ ಕ್ರಮ ಕೈಗೊಳ್ಳುವಂತೆ ಕೇಳಿತ್ತು.
ಸೆಪ್ಟೆಂಬರ್ 2022ರ ಹೈಕೋರ್ಟ್ ಆದೇಶವನ್ನು ಅನುಸರಿಸಲಾಗಿಲ್ಲ ಎಂದು ನ್ಯಾಯಾಂಗ ನಿಂದನೆ ಆರೋಪಿಸಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ನೋಟಿಸ್ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅ.20ರಂದು ನೋಟಿಸ್ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಸ್ವರೂಪದಲ್ಲಿ ಹಾನಿಯೆಸಗುವ ನಿರ್ದಿಷ್ಟ ಉತ್ಪನ್ನಗಳ ಪರ ಪ್ರಚಾರ ನಡೆಸುವುದು ಅಥವಾ ಜಾಹೀರಾತಿನಲ್ಲಿ ಪಾಲ್ಗೊಳ್ಳುವುದು, ವಿಶೇಷವಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ನಟರು ಭಾಗಿಯಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ವಕೀಲ ಮೋತಿಲಾಲ್ ಯಾದವ್ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಈ ವಿಷಯವನ್ನು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ತ್ವರಿತ ಅರ್ಜಿಯ ವಿಚಾರಣೆ ವಜಾಗೊಳಿಸಬೇಕು ಎಂದು ಕೇಂದ್ರದ ಪರ ವಕೀಲರು ಇದೇ ವೇಳೆ ಹೈಕೋರ್ಟ್ಗೆ ಮನವಿ ಮಾಡಿದ್ದು, ಪೀಠವು ವಿಚಾರಣೆಯನ್ನು 2024ರ ಮೇ.9ಕ್ಕೆ ಮುಂದೂಡಿದೆ.
ಇದನ್ನು ಓದಿ: ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್