ಪಂಜಾಬ್ನ ಬರ್ನಾಲಾ ಜಿಲ್ಲೆಯ ವಿಚಾರಣಾಧೀನ ಕೈದಿಯೊಬ್ಬ, ಜೈಲಿನ ಸೂಪರಿಂಟೆಂಡೆಂಟ್ ತನ್ನ ಬೆನ್ನಿನ ಮೇಲೆ ‘ಭಯೋತ್ಪಾದಕ’ ಎಂದು ಕೊರೆದು, ಇಲ್ಲದ ಆರೋಪ ಹೊರಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಸುಖ್ಜೀಂದರ್ ಸಿಂಗ್ ರಾಂಧವಾ ಅವರು ಕೂಲಂಕುಶ ತನಿಖೆಗೆ ಆದೇಶಿಸಿದ್ದಾರೆ.
28 ವರ್ಷದ ಕರಮ್ಜಿತ್ ಸಿಂಗ್ ಚಿತ್ರಹಿಂಸೆಗೊಳಗಾದ ಕೈದಿ. ಕರಮ್ಜಿತ್ ಸಿಂಗ್ ಮೇಲೆ ಡ್ರಗ್ಸ್ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದ್ದು, ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಅಡಿಯಲ್ಲಿ ದಾಖಲಿಸಲಾದ ಪ್ರಕರಣದ ವಿಚಾರಣೆ ಮಾನ್ಸಾ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ.
‘ಇಲ್ಲಿನ ಕೈದಿಗಳ ಸ್ಥಿತಿ ಶೋಚನೀಯವಾಗಿದೆ. ಏಡ್ಸ್ ಮತ್ತು ಹೆಪಟೈಟಿಸ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿಲ್ಲ. ಈ ಬಗ್ಗೆ ಜೈಲು ಅಧೀಕ್ಷಕರ ಹತ್ತಿರ ವಿಷಯ ಪ್ರಸ್ತಾಪಿಸಲು ಪ್ರಯತ್ನಿಸಿದಾಗ, ಅಧೀಕ್ಷಕರನ್ನು ನನ್ನನ್ನು ಹೊಡೆಯುತ್ತಿದ್ದರು’ ಎಂದು ಆರೋಪಿಸಿದ್ದಾರೆ.
ಜೈಲು ಅಧೀಕ್ಷಕ ಬಲ್ಬೀರ್ ಸಿಂಗ್ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕರಮ್ಜಿತ್ ಸಿಂಗ್ ’ಕಲ್ಪಿತ ಕತೆಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ಹೊಂದಿರುವ ಅಪರಾಧಿ’ ಎಂದಿದ್ದಾರೆ. ಅಲ್ಲದೆ ಕರಮ್ಜಿತ್ ಸಿಂಗ್ ಒಮ್ಮೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಎಂದು ಸೂಪರಿಂಟೆಂಡೆಂಟ್ ಹೇಳಿದ್ದಾರೆ.
ಉಪಮುಖ್ಯಮಂತ್ರಿ ರಾಂಧವಾ ಅವರು ಎಡಿಜಿಪಿ (ಜೈಲು) ಪಿಕೆ ಸಿನ್ಹಾ ಅವರಿಗೆ ಆಳವಾದ ವಿಚಾರಣೆ ನಡೆಸಲು ಮತ್ತು ಖೈದಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ ಆದೇಶಿಸಿದ್ದಾರೆ. ಹಿರಿಯ ಅಧಿಕಾರಿ – ತಜೀಂದರ್ ಸಿಂಗ್ ಮೌರ್, ಡಿಐಜಿ (ಫಿರೋಜ್ಪುರ) – ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ ಮತ್ತು ಇಂದು ವಿಚಾರಣೆಯನ್ನು ಪ್ರಾರಂಭಿಸಲಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಕಾಲಿದಳದ ವಕ್ತಾರ ಮಂಜಿಂದರ್ ಸಿರ್ಸಾ ಅವರು ‘ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ’ ಕುರಿತು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Malicious intent of @INCPunjab gov to paint Sikhs as Terrorists!@PunjabPoliceInd beats undertrial Sikh prisoner & engraved word ‘Atwadi’ on his back
We demand immed suspension of Jail Superintendent & strict action for Human Rights violation@CHARANJITCHANNI @Sukhjinder_INC @ANI pic.twitter.com/kIi4aqHR9z— Manjinder Singh Sirsa (@mssirsa) November 3, 2021
’ಸಿಖ್ಖರನ್ನು ಭಯೋತ್ಪಾದಕರೆಂದು ಬಣ್ಣಿಸುವುದು ಕಾಂಗ್ರೆಸ್ ಸರ್ಕಾರದ ದುರುದ್ದೇಶ! ಪಂಜಾಬ್ ಪೊಲೀಸರು ವಿಚಾರಣಾಧೀನ ಸಿಖ್ ಖೈದಿಯನ್ನು ಥಳಿಸಿ ಆತನ ಬೆನ್ನ ಮೇಲೆ ‘ಭಯೋತ್ಪಾದಕ’ ಎಂಬ ಪದವನ್ನು ಬರೆದಿದ್ದಾರೆ. ಜೈಲು ಅಧೀಕ್ಷಕರನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ” ಎಂದು ಮಂಜಿಂದರ್ ಸಿರ್ಸಾ ಸಿರ್ಸಾ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಅಂಗೀಕರಿಸಿದ ಸೋನಿಯಾ ಗಾಂಧಿ