ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಗುಜರಾತ್ಗೆ ಅನಧಿಕೃತವಾಗಿ ಸಾಗಣೆ ಆಗುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದಿದ್ದು, 340 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಹಾಗೂ ಸಾಗಣೆಗೆ ಬಳಸಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಕುಷ್ಟಗಿ ತಾಲ್ಲೂಕಿನ ವಣಗೇರಿ ಬಳಿಯ ಟೋಲ್ ಪ್ಲಾಜಾ ಸಮೀಪ ಆಹಾರ ಇಲಾಖೆ ನಿರೀಕ್ಷಕ ನಿತೀನ್ ಅಗ್ನಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಲಾರಿ ಚಾಲಕ ಮದನಲಾಲ್ ಹಾಗೂ ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವತಿಯ ಅಭಿಜಿತ್ ಟ್ರೇಡರ್ಸ ನಿಂದ ಗುಜರಾತ್ ಜಟಿಲಪುರ ವಿನಲ್ ರೈಸ್ ಮಿಲ್ ಗೆ RJ-GA-118 ಲಾರಿಯಲ್ಲಿ 50 ಕೆ.ಜಿಯ 680 ಬ್ಯಾಗ್ಗಳಲ್ಲಿ 340 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಪ್ರತಿ ಕ್ವಿಂಟಲ್ ಗೆ 2,383 ರೂ.ನಂತೆ 8,10,220 ರೂ.ಅಂದಾಜು ಮೊತ್ತದ ಅಕ್ಕಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಗಂಗಾವತಿಯಿಂದ ಗುಜರಾತ್ಗೆ ಅಕ್ಕಿ ಸಾಗಣೆ ಜಾಲ ದೊಡ್ಡದಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಟೋಲ್ಗಳಲ್ಲಿ ಲಾರಿಗಳನ್ನು ಪರೀಕ್ಷೆ ಮಾಡುವುದಿಲ್ಲವೆ ಎಂಬ ಪ್ರಶ್ನೆ ಎದ್ದಿದ್ದು, ಪ್ರಭಾವಿಗಳು ಪಡಿತರ ಅಕ್ಕಿ ಜಾಲದಲ್ಲಿ ಇರುವ ಸಾಧ್ಯತೆಗಳಿವೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿರಿ: ಪಡಿತರ ಅಕ್ಕಿ ಕಡಿತ: ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಆಕ್ರೋಶ