ಭಾರತೀಯ ರೈಲ್ವೆ ನಾಳೆ (ಮೇ-12)ಯಿಂದ ದೇಶಾದ್ಯಂತ ರೈಲುಗಳನ್ನು ಓಡಿಸಲು ಯೋಜಿಸಿದೆ. ಮೊದಲ ಬಾರಿಗೆ 15 ರೈಲುಗಳು ಓಡಾಡಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಕಾಯ್ದಿರಿಸಿದ ಟಿಕೆಟ್ ಉಳ್ಳವರಿಗೆ ಮಾತ್ರ ಪ್ರಯಾಣ ಅವಕಾಶವಿದ್ದು, ಇಂದು ಸಂಜೆ 04 ಗಂಟೆಯಿಂದ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ಲಾಕ್ ಡೌನ್ ಘೋಷಣೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಪ್ಯಾಸೆಂಜರ್ ರೈಲುಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ರೈಲುಗಳು ನವದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಲಿವೆ.
ನವದೆಹಲಿಯಿಂದ ದಿಬುಘಡ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ, ರಾಂಚಿ, ಭುವನೇಶ್ವರ್, ಸಿಕಿಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್, ಜಮ್ಮು ತಾರಿ ರೈಲ್ವೆ ನಿಲ್ದಾಣಗಳಿಗೆ ರೈಲುಗಳು ಸಂಚರಿಸಲಿವೆ.
ಭಾರತೀಯ ರೈಲ್ವೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲು 300 ಶ್ರಮಿಕ್ ರೈಲುಗಳನ್ನು ಮೀಸಲಿಡಲಾಗಿದ್ದು ನಿತ್ಯವೂ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿವೆ. ಇದಕ್ಕಾಗಿ 20000 ಕೋಚ್ ಗಳನ್ನು ಮೀಸಲಿಡಲಾಗಿದೆ.
ಹೊಸ ಮಾರ್ಗಗಳಲ್ಲಿ ರೈಲು ಓಡಿಸಲು ಸಿದ್ದತೆ ನಡೆದಿದ್ದು ಹೆಚ್ಚುವರಿ ಭೋಗಿಗಳು ಲಭ್ಯವಾದರೆ ಶೀಘ್ರವೇ ಹೊಸ ಮಾರ್ಗದಲ್ಲೂ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಒಂದು ರೈಲಿನ ಬೋಗಿಯಲ್ಲಿ 72 ಆಸನ ಇರುತ್ತದೆ. ಆದರೆ, ಶ್ರಮಿಕ್ ರೈಲಿನಲ್ಲಿ ಕೇವಲ 54 ಪ್ರಯಾಣಿಕರನ್ನು ಮಾತ್ರ ಅನುಮತಿಸಲಾಗಿತ್ತು. ಈ ವಿಶೇಷ ರೈಲು ಶ್ರಮಿಕ್ ರೈಲಿನಂತಲ್ಲದೆ 72 ಜನ ಪ್ರಯಾಣಿಕರೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಶುಲ್ಕದಲ್ಲೂ ಯಾವುದೇ ರಿಯಾಯಿತಿ ಇರುವುದಿಲ್ಲ.
ರೈಲು ನಿರ್ಗಮನಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಪ್ರಯಾಣಿಕರು ನಿಲ್ದಾಣಕ್ಕೆ ಬರಬೇಕಾಗುತ್ತದೆ. ಆರಂಭದಲ್ಲಿ, ಎಲ್ಲಾ ಹವಾನಿಯಂತ್ರಿತ ಸೇವೆಗಳು 15 ರಾಜಧಾನಿ ಮಾರ್ಗಗಳಲ್ಲಿ ಪ್ರಾರಂಭವಾಗಲಿದ್ದು, ಶುಲ್ಕವು ಸೂಪರ್-ಫಾಸ್ಟ್ ರೈಲಿಗೆ ಸಮನಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಪ್ರಯಾಣಿಕರಿಗೆ ನೀಡುವ ಟಿಕೆಟ್ನಲ್ಲಿ ಏನು ಮಾಡಬೇಕು? ಮತ್ತು ಏನು ಮಾಡಬಾರದು? ಎಂಬ ಸಂಪೂರ್ಣ ವಿವರವನ್ನು ಮುದ್ರಿಸಲಾಗಿರುತ್ತದೆ.- ಉದಾಹರಣೆಗೆ:- ಸ್ಕ್ರೀನಿಂಗ್ ಮತ್ತು ಇತರ ಕರೋನವೈರಸ್ ಪ್ರೋಟೋಕಾಲ್ಗಳಿಗಾಗಿ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಆಗಮಿಸುವುದು, ಮಾಸ್ಕ್ಗಳ ಕಡ್ಡಾಯ ಬಳಕೆ ಮತ್ತು ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುಬೇಕು ಎಂದು ಸೂಚಿಸಲಾಗುತ್ತದೆ.
ಪ್ರಯಾಣಿಕರು ಮಾಸ್ಕ್ ಧರಿಸಬೇಕು ಮತ್ತು ನಿರ್ಗಮನದ ಸಮಯದಲ್ಲಿ ಸ್ಕ್ರೀನಿಂಗ್ಗೆ ಒಳಗಾಗುವುದು ಕಡ್ಡಾಯವಾಗಿರುತ್ತದೆ. ರೋಗ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ಪ್ರಯಾಣದ ಸಮಯದಲ್ಲಿ ಕೆಲವು ನಿಲುಗಡೆಗಳಲ್ಲಿ ಮಾತ್ರ ರೈಲನ್ನು ನಿಲ್ಲಿಸಲಾಗುವುದು.
ದೃಢಪಡಿಸಿದ ರೈಲ್ವೆ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗಳನ್ನು ಕ್ರಮೇಣ ವಿಸ್ತರಿಸಲಾಗುವುದು ಮತ್ತು ಹೊಸ ಮಾರ್ಗಗಳಲ್ಲಿ ಹೆಚ್ಚಿನ ವಿಶೇಷ ಸೇವೆಗಳನ್ನು ಘೋಷಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉಚಿತ ಟ್ರೈನ್ ಎಂಬುದು ದೊಡ್ಡ ಸುಳ್ಳು: ಕಾರ್ಮಿಕರಿಂದ ಹಣ ವಸೂಲಿಗಿಳಿದ ಕೇಂದ್ರ ಸರ್ಕಾರ