Homeಕರ್ನಾಟಕತುಮಕೂರು ಜಿಲ್ಲಾಸ್ಪತ್ರೆ ದುರಂತ: ಅಮಾನತಾದ ವೈದ್ಯೆಯಿಂದ ಪತ್ರ

ತುಮಕೂರು ಜಿಲ್ಲಾಸ್ಪತ್ರೆ ದುರಂತ: ಅಮಾನತಾದ ವೈದ್ಯೆಯಿಂದ ಪತ್ರ

ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಅಮಾನತು ಮಾಡಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದೇನೆ: ಡಾ.ಉಷಾ

- Advertisement -
- Advertisement -

ಗರ್ಭಿಣಿ ಮಹಿಳೆ ಹಾಗೂ ಇಬ್ಬರು ಅವಳಿ ಮಕ್ಕಳ ಸಾವಿನ ಬೆನ್ನಲ್ಲೇ ಅಮಾನತಿಗೆ ಒಳಗಾಗಿರುವ ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯೆಯೊಬ್ಬರು ಪತ್ರ ಬರೆದು, ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದಾರೆ.

ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಅಮಾನತಿಗೆ ಒಳಗಾಗಿರುವ ತುಮಕೂರು ಜಿಲ್ಲಾ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ.ಎ.ಆರ್‌.ಉಷಾ ಅವರು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದು, “ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಪತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಡಾ.ಉಷಾ ಅವರು, “ಕಳೆದ ಒಂದು ವರ್ಷದಿಂದ ಸ್ತ್ರೀ ರೋಗ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ 02/11/2022ರಂದು ನಾನು ಕರ್ತವ್ಯನಿರತ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದೆ. ಅಂದು ಬೆಳಿಗ್ಗೆ 9ರಿಂದ 5.30 ಗಂಟೆಯ ತನಕ ಒಪಿಡಿಯಲ್ಲಿ ಕರ್ತವ್ಯ ನಿರ್ವಹಿಸಿದೆ. ತದನಂತರ ಶಸ್ತ್ರಚಿಕಿತ್ಸಾ ಕೊಠಡಿಗೆ ಹೋದೆನು” ಎಂದು ವಿವರಿಸಿದ್ದಾರೆ.

ಮುಂದುವರಿದು, “ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಸಂಜೆ 5.30ರಿಂದ ರಾತ್ರಿ 9.30ರತನಕ ಇದ್ದೆ. ಎಂಟು ಶಸ್ತ್ರಚಿಕಿತ್ಸೆಗಳನ್ನು ಮುಗಿಸಿಕೊಂಡು, ಬೇರೆ ದಾಖಲಾದ ಗರ್ಭಿಣಿಯರನ್ನು ಪರೀಕ್ಷಿಸಲು ಹೆರಿಗೆ ಕೊಠಡಿಗೆ ಹೋಗುವಾಗ ಒಬ್ಬ ಗರ್ಭಿಣಿಯು ಇಬ್ಬರು ಮಹಿಳಾ ವೃದ್ಧರೊಡನೆ ಕಾರಿಡಾರ್‌ನಲ್ಲಿ ಹೋಗುವುದು ಕಂಡುಬಂತು. ಆಗ ಹೆರಿಗೆ ಕೊಠಡಿಯ ಬಳಿಗೆ ಹೋಗಿ ಕರ್ತವ್ಯನಿರತ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಕರ್ತವ್ಯ ನಿರತ ಶಿಶ್ರೂಷಕಿಯರನ್ನು ವಿಚಾರಣೆ ಮಾಡಿದೆ. ಆ ಗರ್ಭಿಣಿಯು ಪರೀಕ್ಷೆ ಮತ್ತು ದಾಖಲಾತಿ ನಿರಾಕರಿಸಿರುವುದು ಕಂಡು ಬಂತು” ಎಂದು ತಿಳಿಸಿದ್ದಾರೆ.

“ಆಗ ನಾನು ಆ ಗರ್ಭಿಣಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದೆ. ನಿರಾಕರಿಸಿ ಹೊರಟು ಹೋದರು. ಈ ಎಲ್ಲಾ ಘಟನೆಯ ದಾಖಲಾತಿಗಳನ್ನು ಕೆಜಿಎಂಒಎ (ಕರ್ನಾಟಕ ಸರ್ಕಾರಿ ಮೆಡಿಕಲ್ ಆಫೀಸರ್ಸ್ ಅಸೋಸಿಯೇಷನ್) ವೆಬ್‌ಸೈಟ್‌ನಲ್ಲಿ ಹಾಕಿದ್ದೇನೆ. ಇದೇ ಹೇಳಿಕೆಯನ್ನು ನಾನು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಲಿಖಿತ ರೂಪದಲ್ಲಿ ಸಲ್ಲಿಸಿರುತ್ತೇನೆ” ಎಂದಿದ್ದಾರೆ.

“ಆರೋಗ್ಯ ಸಚಿವರ ವಿಚಾರಣೆಯ ಸಮಯದಲ್ಲಿ ಮಹಿಳಾ ಎಎಸ್‌ಐ ತಮ್ಮ ಪ್ರಥಮ ವರದಿಯನ್ನು ತಿಳಿಸಿದ್ದಾರೆ. ಆ ಮಹಿಳೆಯು ಮೊದಲ ಹೆರಿಗೆಯನ್ನು ಮನೆಯಲ್ಲೇ ಮಾಡಿಸಿಕೊಂಡಿದ್ದರು. ಈ ಹೆರಿಗೆಯನ್ನೂ ಮನೆಯಲ್ಲೇ ಮಾಡಿಸಿಕೊಳ್ಳುತ್ತೇನೆ ಎಂದು ತನ್ನ ವೈಯಕ್ತಿಕ ಕಾರಣಗಳಿಂದ ಆಸ್ಪತ್ರೆಗೆ ಬರಲು ನಿರಾಕರಿಸಿದ್ದಳು. ಪಕ್ಕದ ಮನೆಯ ವೃದ್ಧೆಯರು ಬಲವಂತವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ಮಹಿಳಾ ಎಎಸ್‌ಐ ಹೇಳಿದ್ದಾರೆ. ಸಚಿವರು ನಮ್ಮ ಹೇಳಿಕೆಯನ್ನು, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ನಾನು ಯಾವುದೇ ಕರ್ತವ್ಯಲೋಪ ಎಸಗದಿದ್ದರೂ ಏಕಪಕ್ಷೀಯವಾಗಿ, ಯಾವುದೇ ಹೇಳಿಕೆ ಹಾಗೂ ದೃಶ್ಯಾವಳಿಗಳನ್ನು ಗಮನಿಸದೆ ಕರ್ತವ್ಯ ಲೋಪದ ಆರೋಪ ಹೊರಿಸಿ ಮಾನ್ಯ ಆಯುಕ್ತರು ನನ್ನನ್ನು ದಿನಾಂಕ 4/11/2022ರಂದು ಸೇವೆಯಿಂದ ಅಮಾನತು ಮಾಡಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಸಚಿವರು ಕೂಡ ನನ್ನನ್ನು ಏಕಪಕ್ಷೀಯವಾಗಿ ಅಮಾನತು ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಆಧಾರ್‌ ಕಾರ್ಡ್, ತಾಯಿ ಕಾರ್ಡ್ ಇಲ್ಲವೆಂಬ ನೆಪವೊಡ್ಡಿ ಇಬ್ಬರು ಅವಳಿ ಮಕ್ಕಳು ಹಾಗೂ ತಾಯಿ ಸಾವಿಗೆ ತುಮಕೂರು ಜಿಲ್ಲಾ ಆಸ್ಪತ್ರೆ ಕಾರಣವಾಗಿದೆ ಎಂಬ ಆರೋಪ ಬಂದಿದೆ.

ಇದನ್ನೂ ಓದಿರಿ: ತುಮಕೂರು ಜಿಲ್ಲಾ ಆಸ್ಪತ್ರೆ ನಿರ್ಲಕ್ಷ್ಯ; ಅವಳಿ ಮಕ್ಕಳು ಸೇರಿ ಗರ್ಭಿಣಿ ಸಾವು- ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹ

ತುಮಕೂರು ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಅಮಾನವೀಯ ಧೋರಣೆಯಿಂದಾಗಿ ಮೂರು ಜೀವಗಳು ಕೊನೆಯುಸಿರೆಳೆದಿವೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಯಿಯು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ತುರ್ತಾಗಿ ಚಿಕಿತ್ಸೆ ಸಿಗದೆ ಅವಳಿ ಮಕ್ಕಳೂ ಕೊನೆಯುಸಿರೆಳೆದಿವೆ ಎಂದು ದೂರಲಾಗಿದೆ.

ಭಾರತಿನಗರದಲ್ಲಿ ವಾಸವಿದ್ದ ಕಸ್ತೂರಿ (30) ಅವರಿಗೆ ಬುಧವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಒಬ್ಬಂಟಿಯಾಗಿದ್ದ ಅವರನ್ನು ನೆರೆಹೊರೆಯ ಮಹಿಳೆಯರು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಕಸ್ತೂರಿಯವರ ಬಳಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂಬ ನೆಪವೊಡ್ಡಿದ ಜಿಲ್ಲಾಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂಬ ಸಂಗತಿ ಹೊರಬಿದ್ದಿತ್ತು.

ಕರ್ತವ್ಯ ಲೋಪ ಆರೋಪದ ಮೇಲೆ ಡಾ.ಉಷಾ ಅವರನ್ನು ಅಮಾನತು ಮಾಡಲಾಯಿತು. ಅಂದು ಸಂಜೆ ಕರ್ತವ್ಯದ ಮೇಲಿದ್ದ ನರ್ಸ್‌ಗಳಾದ ಯಶೋದ, ಸವಿತಾ, ವಿದ್ಯಾಭಾರತಿ ಅವರನ್ನು ಸರ್ಕಾರ ಅಮಾನತು ಮಾಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವೈದ್ಯರಿಗೆ ಸಮರ್ಥನೆ ನೀಡಲು ಅವಕಾಶ ಖಂಡಿತ ಕೊಡಬೇಕು ಅದು ಅವರ ಹಕ್ಕು. ಬೇಕಾದರೆ ಮಂಪರು ಪರೀಕ್ಷೆ ಮಾಡಿ ನಿಜ ಹೊರತೆಗೆಯಿರಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...