Homeಮುಖಪುಟರಾಹುಲ್‌ ಗಾಂಧಿ ಗಟ್ಸ್‌ ಪರೀಕ್ಷಿಸಿಲು ಹೋಗಿ ಅಪಹಾಸ್ಯಕ್ಕೊಳಗಾದ TV9 ರಂಗನಾಥ್ ಭಾರದ್ವಾಜ್!

ರಾಹುಲ್‌ ಗಾಂಧಿ ಗಟ್ಸ್‌ ಪರೀಕ್ಷಿಸಿಲು ಹೋಗಿ ಅಪಹಾಸ್ಯಕ್ಕೊಳಗಾದ TV9 ರಂಗನಾಥ್ ಭಾರದ್ವಾಜ್!

ಓರ್ವ ಪತ್ರಕರ್ತ ತನಗೆ ಸಿಕ್ಕ ಇಂತಹ ಅವಕಾಶದಲ್ಲಿ ಎಂತಹಾ ಅದ್ಭುತ ಪ್ರಶ್ನೆ ಕೇಳಬಹುದಿತ್ತು. ಆದರೆ, ರಂಗನಾಥ್ ಭಾರದ್ವಾಜ್ ಕೇಳಿದ ಪ್ರಶ್ನೆ ಹೇಗಿತ್ತು ಗೊತ್ತೆ? ಇಲ್ಲಿದೆ ನೋಡಿ ಪೂರ್ಣ ಸಂವಾದ.

- Advertisement -
- Advertisement -

ಕನ್ನಡದ ನಂಬರ್-1 ಸುದ್ದಿ ವಾಹಿನಿಯೆಂದು ಹೇಳಿಕೊಳ್ಳುವ ಚಾನೆಲ್‌ನ ಪ್ರಧಾನ ನಿರ್ಮಾಪಕ ರಂಗನಾಥ್ ಭಾರದ್ವಾಜ್ ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಡೆಸಿದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಗಟ್ಸ್‌ ಪರೀಕ್ಷಿಸಿಲು ಹೋಗಿ, ತಾವೇ ಅಪಹಾಸ್ಯಕ್ಕೊಳಗಾದ ಘಟನೆ ಜರುಗಿದೆ.

ಇಂದು ಬೆಳಗ್ಗೆಯಿಂದ ಟಿವಿ9 ಸುದ್ದಿ ವಾಹಿನಿ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಬೆಳಗ್ಗೆಯಿಂದ ಪ್ರೋಮೋ ಒಂದನ್ನು ಪ್ರಸಾರ ಮಾಡಲಾಗುತ್ತಿದೆ. ಈ ಪ್ರೋಮೋದ ಶೀರ್ಷಿಕೆ “ಟಿವಿ9 ಪ್ರಧಾನ ನಿರ್ಮಾಪಕ ರಂಗನಾಥ್ ಭಾರದ್ವಾಜ್ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್ ಗಾಂಧಿ” ಎಂಬುದಾಗಿತ್ತು. ಅಲ್ಲದೇ ರಾಹುಲ್‌ಜೀ ಗಟ್ಸ್‌ ತೋರಿಸಿ ಎಂಬ ಪೋಸ್ಟರ್‌ ಸಾಕಷ್ಟು ಸಂಖ್ಯೆಯಲ್ಲಿ ವೈರಲ್‌ ಮಾಡಲಾಗಿತ್ತು.

ಅಸಲಿಗೆ ಈ ಪ್ರೋಮೋವನ್ನು ಒಮ್ಮೆ ನೋಡಿದವರು ಅಬ್ಬಬ್ಬಾ..! ಭಾರದ್ವಾಜರು ರಾಹುಲ್ ಗಾಂಧಿ ಬೆವರಿಳಿಸಿಬಿಟ್ಟಿದ್ದಾರೆ ಎಂದೇ ಅಂದುಕೊಂಡಿದ್ದರೂ ಅಚ್ಚರಿ ಇಲ್ಲ. ಆದರೆ, ಆ ಸಂದರ್ಶನದ ಇಡೀ ವಿಡಿಯೋ ಫೂಟೇಜ್ ನೋಡಿದರೆ ಮಾತ್ರ ಸುದ್ದಿ ಅಥವಾ ಘಟನೆಯೊಂದನ್ನು ತಿರುಚುವುದರಲ್ಲಿ ನಮ್ಮ ಸುದ್ದಿ ಮಿತ್ರರು ಎಷ್ಟು ನಿಷ್ಣಾತರು ಎಂಬುದು ಅರಿವಿಗೆ ಬರುತ್ತದೆ. ಅಷ್ಟೇ ಅಲ್ಲ ರಂಗನಾಥ್ ಭಾರದ್ವಾಜ್ ಮತ್ತು TV9 ಬಣ್ಣವೂ ಬಯಲಾಗುತ್ತದೆ.

ನಡೆದುದ್ದಾದರೂ ಏನು?

ಇಂದಿನ ರಾಹುಲ್‌ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಚಾನೆಲ್‌ಗಳ ಪೈಕಿ ಟಿವಿ9 ಸಹ ಒಂದು. ಪ್ರಶ್ನೆ ಕೇಳುವ ಸರದಿ ಪತ್ರಕರ್ತ ರಂಗನಾಥ್ ಭಾರದ್ವಾಜ್ ಅವರದಿತ್ತು. ಓರ್ವ ಪತ್ರಕರ್ತ ತನಗೆ ಸಿಕ್ಕ ಇಂತಹ ಅವಕಾಶದಲ್ಲಿ ಎಂತಹಾ ಅದ್ಭುತ ಪ್ರಶ್ನೆ ಕೇಳಬಹುದಿತ್ತು. ಆದರೆ, ರಂಗನಾಥ್ ಭಾರದ್ವಾಜ್ ಕೇಳಿದ ಪ್ರಶ್ನೆ ಹೇಗಿತ್ತು ಗೊತ್ತೆ? ಇಲ್ಲಿದೆ ನೋಡಿ ಪೂರ್ಣ ಸಂವಾದ.

ಭಾರದ್ವಾಜ್‌: ರಾಹುಲ್‌ ಜಿ ನಮಸ್ಕಾರ್‌, ಬ್ಲೂ ಬ್ಯಾಕ್‌ಗ್ರೌಂಡ್‌, ಬ್ಲಾಕ್‌ ಶರ್ಟ್‌ (ನೀಲಿ ಬ್ಯಾಕ್‌ಗ್ರೌಂಡ್‌ನಲ್ಲಿದ್ದು, ಕಪ್ಪು ಅಂಗಿ ಧರಿಸಿದ್ದೇನೆ ಎಂದರು.)

ರಾಹುಲ್‌; ಗೊತ್ತಾಯಿತು, ಗೊತ್ತಾಯಿತು? (ಜೂಮ್‌ನಲ್ಲಿ ಮಾತನಾಡುವವರ ವಿಡಿಯೋ ಪೂರ್ಣ ಬರುತ್ತದೆ. ಅದು ಉಳಿದವರಿಗೆಲ್ಲಾ ಕಾಣುತ್ತದೆ. ಆದರೆ ಅಷ್ಟು ಸಾಮಾನ್ಯ ಜ್ಞಾನ ಕೂಡ ರಂಗನಾಥ್‌ ಭಾರದ್ವಾಜ್‌ರವರಿಗೆ ಇಲ್ಲದಿರುವುದು ದುರಂತ)

ನಾನು ಕರ್ನಾಟಕದಿಂದ ಮಾತನಾಡುತ್ತಿದ್ದೇನೆ. ನಿಮಗೆ ಕರ್ನಾಟಕ ಗೊತ್ತಿದೆ. ನಿಮ್ಮ ತಾಯಿ ಇಲ್ಲಿಂದ ಗೆದ್ದಿದ್ದರು. ಕರ್ನಾಟಕದ ಬಳ್ಳಾರಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಹಾಗೆಯೇ ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದಿದ್ದರು. ನಾನು ಕೊರೊನಾ, ಕೇಂದ್ರ ಸರ್ಕಾರ ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆ ಮಾತಾನಾಡುವುದಿಲ್ಲ. ನಾನು ರಾಹುಲ್‌, ರಾಜ್ಯ ಕಾಂಗ್ರೆಸ್‌ ಮತ್ತು ಒಟ್ಟಾರೆ ಕಾಂಗ್ರೆಸ್‌ನ ಸ್ಥಿತಿಗತಿ ಬಗ್ಗೆ ಮಾತನಾಡುತ್ತೇನೆ. ನನಗೆ ಯಾವುದೇ ತೊಂದರೆಯಿಲ್ಲದೆ ಮೂರು ನಿಮಿಷಗಳ ಸಂಪೂರ್ಣ ಸಮಯ ನೀಡಬೇಕು.

ರಾಹುಲ್‌: ಭಯ್ಯಾ ಇದು ಪತ್ರಿಕಾಗೋಷ್ಠಿ, ನಿಮಗೆ ಮಾತನಾಡಬೇಕಿನಿಸಿದರೆ ಆನಂತರ ನಾನು ನಿಮ್ಮೊಡನೆ ಮಾತನಾಡುತ್ತೇನೆ. ನಿಮ್ಮ ಪ್ರಶ್ನೆಗಳಿದ್ದರೆ ಕೇಳಿ.

ಭಾರದ್ವಾಜ್‌: ನಾನು ಇಂದಿರಾಗಾಂಧಿಯವರ ಒಂದು ಉದಾಹರಣೆಯೊಂದಿಗೆ ಮೂರು ನಿಮಿಷ ಮಾತನಾಡುತ್ತೇನೆ.

ರಾಹುಲ್‌ ಸಹಾಯಕ: ಸಾಧ್ಯವಿಲ್ಲ, ಇನ್ನೂ 20 ಜನ ಕಾಯುತ್ತಿದ್ದಾರೆ.

ರಾಹುಲ್‌: ತುಂಬಾ ಜನ ಕಾಯುತ್ತಿದ್ದಾರೆ. ನಿಮ್ಮ ಪ್ರಶ್ನೆ ಚಿಕ್ಕದಾಗಿ ಕೇಳಿ.

ಭಾರದ್ವಾಜ್‌; ಮೊದಲನೆಯೇದಾಗಿ ಇಂದಿರಾಗಾಂಧಿ ಬಿಹಾರದಿಂದ ಗೆದ್ದಿದ್ದರು. ಎರಡನೇದಾಗಿ 1999ರಲ್ಲಿ ಕರ್ನಾಟಕದಲ್ಲಿ ಜನತಾ ಪರಿವಾರವನ್ನು ದೂರಮಾಡಿ ಕಾಂಗ್ರೆಸ್‌ ಬಂದಿತ್ತು. ಮೂರನೇಯದಾಗಿ 2013ರಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು ಎಂತಹ ಫಲಿತಾಂಶ ನೀಡಿದೆ ನಿಮಗೆ ಗೊತ್ತು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಲೋಕದಲ್ಲಿ… (ನಮಗೆ ಅರ್ಥ ಆಗಿಲ್ಲ) ನೀವು ಹೀರೋ ಆಗುತ್ತೀರಿ.

ನಿಮ್ಮ ಬಳಿ ದೊಡ್ಡ ಪಕ್ಷ ಇದೆ. ಪಕ್ಷಕ್ಕೆ ಇತಿಹಾಸವಿದೆ. ಇಷ್ಟೆಲ್ಲಾ ದೊಡ್ಡ ಕಾರ್ಯಕರ್ತರಿರುವಾಗ ನೀವು ಹೆಚ್ಚು ಗಟ್ಸ್‌ ತೋರಿಸಬೇಕು. ಇದು ನನ್ನ ಸಿನ್ಸಿಯರ್‌ ರಿಕ್ವೆಸ್ಟ್‌. ನಾನು ಒಂದು ಉದಾಹರಣೆ ಕೊಡುತ್ತೇನೆ. ಡಿಕೆ ಶಿವಕುಮಾರ್‌ ರವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. …(ನಮಗೆ ಅರ್ಥ ಆಗಿಲ್ಲ) ನನ್ನ ಸಿನ್ಸಿಯರ್‌ ರಿಕ್ವೆಸ್ಟ್‌ ನಿಮ್ಮ ಬಳಿ ಎಲ್ಲವೂ ಇದೆ. ನೀವು ನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ. ಜನ ನಿಮ್ಮ ಜೊತೆಗಿರುತ್ತಾರೆ.

ರಾಹುಲ್‌ ಗಾಂಧಿ: ಧನ್ಯವಾದಗಳು

ರಾಹುಲ್‌ ಸಹಾಯಕ: ನಿಮ್ಮ ಸಲಹೆಗೆ ಧನ್ಯವಾದಗಳು.

ಇಷ್ಟು ಮಾತನಾಡಿರುವ ಅವರ ಮೂರುವರೆ ನಿಮಿಷಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಇದರಲ್ಲಿ ಪ್ರಶ್ನೆ ಎಲ್ಲಿದೆ ಎಂದು ಟ್ರೋಲ್‌ ಮಾಡಲಾಗಿದೆ. ಅವುಗಳಲ್ಲಿ ಕೆಲವೊಂದು ಇಲ್ಲಿವೆ ನೋಡಿ.

ಒಂದು ರಾಷ್ಟ್ರೀಯ ಪಕ್ಷದ ನಾಯಕ ರೀಜನಲ್ ಮೀಡಿಯಾ ಉದ್ದೇಶಿಸಿ ಪತ್ರಿಕಾಗೋಷ್ಠಿ ಮಾಡ್ತಾರೆ ಅಂದ್ರೆ ಪತ್ರಕರ್ತನ ಪ್ರಶ್ನೆ ಹೇಗಿರಬೇಕು? ಇಂಗ್ಲಿಷ್…

Posted by Dinesh Kumar Dinoo on Sunday, May 17, 2020

 

ಭಾರದ್ವಾಜ್‌ ಇಷ್ಟಕ್ಕೆ ಸುಮ್ಮನಾಗಿದ್ದರೆ ಚನಾಗಿರ್ತಿತ್ತೇನೋ? ಆದರೆ, ಆತ ಅದನ್ನೇ ಪ್ರೋಮೋ ಮಾಡಿ ರಂಗನಾಥ್ ಭಾರದ್ವಾಜ್ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್ ಗಾಂಧಿ ಎಂದು ಶೀರ್ಷಿಕೆ ನೀಡಿ ಪ್ರಸಾರ ಮಾಡಿಬಿಟ್ಟರು. ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಭಾರದ್ವಾಜರನ್ನು ಮತ್ತೊಮ್ಮೆ ಟ್ರೋಲ್ ಮಾಡಲಾಗುತ್ತಿದೆ. ನೈಜ ವಿಡಿಯೋ ಫೂಟೇಜ್ ನೋಡಿದ ಹಲವು ಪತ್ರಕರ್ತರು ಅಸಲಿಗೆ ಆ ಫೂಟೇಜ್‌ನಲ್ಲಿ ಪ್ರಶ್ನೆ ಎಲ್ಲಿದೆ? ಎಂದು ಭಾರದ್ವಾಜರ ಕಾಲೆಳೆಯಲು ಮುಂದಾಗಿದ್ದಾರೆ.

ರಾಹುಲ್ ಗಾಂಧಿ ಇವತ್ತು ಭಾಗವಹಿಸಿ‌ದ ಪತ್ರಿಕಾಗೋಷ್ಠಿಯಲ್ಲಿ 'TV9ಕನ್ನಡ'ದ ರಂಗನಾಥ್ ಭಾರದ್ವಾಜ್‌ರವರ ಪ್ರಶ್ನೆ. (ಪ್ರಶ್ನೆ ಎಲ್ಲಿದೆ ಅಂತ ಕೇಳ್ಬೇಡಿ)

Posted by Yashwin Kanchan on Saturday, May 16, 2020

ಅನೇಕ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರದ್ವಾಜರನ್ನು ತಗಲಾಕಿಕೊಂಡಿದ್ದಾರೆ. ಹೀಗೆ ಭಾರದ್ವಾಜರ ಕಾಲೆಳೆದ ಹಿರಿಯ ಪತ್ರಕರ್ತರ ಪೈಕಿ ಸಹ್ಯಾದ್ರಿ ನಾಗರಾಜ್ ಅವರ ಫೇಸ್ಬುಕ್ ವಾಲ್ನಲ್ಲಿ ಬರೆದ ಕುತೂಹಲಕಾರಿ ಬರಹ ಇಲ್ಲಿದೆ…! ಆಸಕ್ತಿಯೊಂದಿಗೆ ಓದಿಕೊಳ್ಳಿ.

ಕನ್ನಡ ಸುದ್ದಿವಾಹಿನಿ ಟಿವಿ9ನ ಪ್ರಧಾನ ನಿರ್ಮಾಪಕ (ನಾವೆಲ್ಲ ಸಂಪಾದಕ ಅಂದ್ಕೊಂಡಿದ್ವಿ ಮರ್ರೆ!) ರಂಗನಾಥ್ ಭಾರದ್ವಾಜ್, ರಾಜಕಾರಣಿ ರಾಹುಲ್ ಗಾಂಧಿ ಜೊತೆ ನಡೆಸಿದ ಕೊರೊನಾ ಪತ್ರಿಕಾಗೋಷ್ಠಿಯ ಮಾತುಕತೆ ವೈರಲ್ ಆಗಿದೆ. ಈ ಮಾತುಕತೆ ಒಳ್ಳೆಯ ಮನರಂಜನಾ ಸರಕಾಗಿಯೂ ಹೆಸರು ಪಡೆದುಕೊಳ್ಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ‘ಟಿವಿ9 ಕರ್ನಾಟಕ’ ವಾಹಿನಿಯ ಮಾನ ಯಶಸ್ವಿಯಾಗಿ ಹರಾಜಾಗುತ್ತಿದೆ. ಈ ಘಟನೆಯಿಂದ ಗ್ರಹಿಸಬಹುದಾದ ನಾಲ್ಕು ಸರಳ ಸಂಗತಿಗಳು ಇಲ್ಲಿವೆ.

#ಒಂದು: ‘ಪತ್ರಿಕಾಗೋಷ್ಠಿ’ ಎಂದರೇನು ಎಂಬುದೇ ಈ ವಾಹಿನಿಯ ‘ಪ್ರಧಾನ ನಿರ್ಮಾಪಕ’ನಿಗೆ ಗೊತ್ತಿಲ್ಲ.

#ಎರಡು: ರಾಷ್ಟ್ರೀಯ ಪಕ್ಷವೊಂದರ ರಾಜಕಾರಣಿಯೊಬ್ಬ ‘ಪತ್ರಿಕಾಗೋಷ್ಠಿ’ಯಲ್ಲಿ ಮಾತಿಗೆ ಎದುರಾದಾಗ ಎಷ್ಟು ನಿಷ್ಠುರವಾಗಿ, ಎಷ್ಟು ಹರಿತವಾಗಿ ಕೇಳ್ವಿಯ ಚಾಟಿ ಬೀಸಬೇಕು, ಎಂತಹ ಪ್ರಶ್ನೆಯಿಂದ ಕಟ್ಟಿಹಾಕಿ ಹೇಗೆ ರುಬ್ಬಬಹುದೆಂದು ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಇರಬಹುದಾದ ಬೇಸಿಕ್ ಕಾಮನ್‌ಸೆನ್ಸ್, ನಾಲೆಡ್ಜ್, ಟೆಕ್ನಿಕ್, ತಹತಹ ಮತ್ತು ಕನಿಷ್ಠ ವೃತ್ತಿ ಪ್ರಾಮಾಣಿಕತೆ ಕೂಡ ಈ ನಿರ್ಮಾಪಕನಿಗೆ ಖಂಡಿತ ಇಲ್ಲ.

#ಮೂರು: ತನ್ನ ಕಾರ್ಯಕ್ರಮಗಳಲ್ಲಿ ಹಾಗೂ ಸುದ್ದಿ ಆಯ್ಕೆ ಮತ್ತು ಪ್ರಸ್ತುತಿಯಲ್ಲಿ ಕದ್ದುಮುಚ್ಚಿ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಹಾಗೂ ರಾಷ್ಟ್ರೀಯವಾದವನ್ನೇ ಉಸಿರಾಡುತ್ತಿರುವ ಬಿಜೆಪಿ ಪರ, ಆ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಪರ ‘ಪ್ಯಾಕೇಜ್ ಕ್ಯಾಂಪೇನ್’ ನಡೆಸುವ ಸುದ್ದಿವಾಹಿನಿಯೊಂದರ ಪ್ರಧಾನ ನಿರ್ಮಾಪಕನಿಗೆ, ಅದೇ ರಾಷ್ಟ್ರೀಯವಾದಿಗಳು ಮತ್ತು ಭಾರತೀಯ ಜನತಾ ಪಾರ್ಟಿಯು ‘ರಾಷ್ಟ್ರಭಾಷೆ’ ಎಂದು ಪ್ರತಿಪಾದಿಸುವ ಹಿಂದಿಯನ್ನು ತಪ್ಪಿಲ್ಲದೆ ಎರಡು ನಿಮಿಷ ಮಾತಾಡಲು ಬರುವುದಿಲ್ಲ.

#ನಾಲ್ಕು: ವಾಹಿನಿಯ ಮುಖ್ಯಸ್ಥನೊಬ್ಬ ಇಷ್ಟೆಲ್ಲ ಕಳಪೆಯಾಗಿ, ಅಪ್ರಾಮಾಣಿಕವಾಗಿ, ಪೆದ್ದುಪೆದ್ದಾಗಿ, ತಪ್ಪುತಪ್ಪಾಗಿ ಮಾತಾಡಿದ ಫೂಟೇಜನ್ನು ಕೂಡ ಯಾವುದೇ ನಾಚಿಕೆ ಇಲ್ಲದೆ ಪ್ರಸಾರ ಮಾಡುವ ಟಿವಿ9 ಎಂಬ ಸುದ್ದಿವಾಹಿನಿಗೆ ರವಷ್ಟೂ ಮಾನ, ಮರ್ಯಾದೆ ಇಲ್ಲ ಎಂದು ಸಹ್ಯಾದ್ರಿ ನಾಗರಾಜ್‌ ಬರೆದಿದ್ದಾರೆ.

ವಾಸ್ತವದಲ್ಲಿ ಕೊರೋನಾ ಇಡೀ ಭಾರತವನ್ನು ಕಿತ್ತು ತಿನ್ನುತ್ತಿದೆ. ಸಮಾಜದಲ್ಲಿ ನಮ್ಮ ನಡುವೆ ಇರುವ ಕಾರ್ಮಿಕ ಮತ್ತು ಕೆಳ ವರ್ಗದ ಜನರ ಬದುಕು ಮತ್ತು ಜೀವ ಕಂತುಗಳಲ್ಲಿ ಕಳೆದುಹೋಗುತ್ತಿದೆ. ನೂರಾರು ಮೈಲಿಗಳನ್ನು ನಡೆದು ನಡೆದೇ ಜನ ಕೊನೆಯುಸಿರೆಳೆಯುತ್ತಿದ್ದಾರೆ. ಆದರೆ, ಸರಿಯಾಗಿ 8 ಗಂಟೆಗೆ ಟೀವಿಯಲ್ಲಿ ಕಾಣಿಸಿಕೊಂಡು ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಹೂ ಸುರಿಯಿರಿ ಎಂದು ಹೇಳುವ ಪ್ರಧಾನಿ ಕಾರ್ಮಿಕರ ಸಮಸ್ಯೆಗೆ ಈವರೆಗೆ ಒಂದು ಪರಿಹಾರ ನೀಡುವಂತೆ ಕಾಣುತ್ತಿಲ್ಲ. ಕನಿಷ್ಟ ಈ ಜನರ ಕುರಿತು ಒಂದು ಪದವನ್ನೂ ಬಳಸಲು ಅವರು ಸಿದ್ದರಿಲ್ಲ.

ಪ್ರಧಾನಿಯಾಗಿ 6 ವರ್ಷ ಕಳೆದಿದೆ ಈವರೆಗೆ ಒಂದು ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಿದವರಲ್ಲ ನಮ್ಮ ಪ್ರಧಾನಿ ನರೇಂದ್ರ ಮೋದಿ. ಆದರೆ ಈ ಸಮಸ್ಯೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಾದೇಶಿಕ ಸುದ್ದಿ ವಾಹಿನಿಗಳ ಸಂಪಾದಕರ ಜೊತೆಗೆ ಆನ್ಲೈನ್‌ನಲ್ಲೊಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು. ಒಂದು ಉತ್ತಮ ಸಂವಾದಕ್ಕೆ ನಾಂದಿ ಹಾಡಿದ್ದರು. ಆದರೆ ಕನ್ನಡ ಸುದ್ದಿವಾಹಿನಿಗಳು ಅದನ್ನೂ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಈ ಹಿಂದೆ ಟಿವಿ9 ಸುದ್ದಿವಾಹಿನಿಯಲ್ಲಿ ಭಗವಾನ್ ಜೊತೆಗೆ ಚರ್ಚೆ ಮತ್ತು ನಾಗೇಂದ್ರಾಚಾರ್ಯ ಎಂಬ ಅನಾಮಿಕ ಆಸಾಮಿಗೆ ಬಾಯಿಗೆ ಬಂದಂತೆ ಬೈದು ನಂತರ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರಿಂದ ಛೀಮಾರಿ ಹಾಕಿಸಿಕೊಂಡ ನಂತರ ಇದೀಗ ಮತ್ತೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಸರದಿಗೆ ಬಂದು ನಿಂತಿದ್ದಾರೆ.


ಇದನ್ನೂ ಓದಿ: ನಿಮ್ಮ ಚಾನೆಲ್‌ ಪ್ರಸಾರ ಏಕೆ ನಿಲ್ಲಿಸಬಾರದು: ಸುಳ್ಳು ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್‌ ಟಿವಿಗೆ ನೋಟಿಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಮಹಾನ್ ಪತ್ರಕರ್ತ ರಂಗನಾಥ ಭಾರದ್ವಾಜ್ ಗೆ ಪತ್ರಕರ್ತನ ವೃತ್ತಿಯ ಪ್ರಾಥಮಿಕ ಜ್ಞಾನವೂ ಇಲ್ಲ ಎಂಬುದು ಸಾಬೀತಾಗಿದೆ.

  2. ನಾಯಿಯ ಥರ ನೀ ಬೊಗಳ ಬೇಡ .. ನೀನು ನಾಯಿಗೂ ಸಮನಲ್ಲ ..
    ನಾನು ಸಿಂಹ ಎಂದು ತಿಳಿದು ಗರ್ಜಿಸಿ ಬೇಡ .. ನೀನು ಅದರ ಉಗುರಿಗೂ ಸಮನಲ್ಲ ..
    ಮೊದಲು ನೀ ಯಾರೆಂದು ತಿಳಿಯೋ ರಂಗನಾಥ…
    ಮೊದಲು ಬಿಟ್ಟು ಬಿಡು ನಿನ್ನ ಮಂಗನಾಟ.. ನೀವು ತುಂಬಾ ದೊಡ್ಡ ಮಾತುಗಾರರು ನಿಮ್ಮ ಮಂಗ ನಾಟವನ್ನು ಬಿಟ್ಟರೆ ನಿಮಗೆ ಒಳ್ಳೆಯ ಭವಿಷ್ಯ ಇದೆ …
    ಹೆಸರು ಮಾಡಲು ಹೋಗಿ ಕೆಸರಲ್ಲಿ ಬಿದ್ದಲೊ ರಂಗನಾಥ… Very bad luck…

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...