Homeಮುಖಪುಟಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

ಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

- Advertisement -
| ಮುತ್ತುರಾಜ್ |
ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಮ್ಮಗಳೆರಡು ತಿನ್ನಲು ಆಹಾರವಿಲ್ಲದೇ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ. ಈ ಮಕ್ಕಳ ಪೋಷಕರಿಬ್ಬರೂ ಸಹ ಕುಡುಕರಾಗಿದ್ದ ಕಾರಣಕ್ಕಾಗಿ ಗಮನಹರಿಸದೇ ಹೋದದ್ದರಿಂದ ಈ ದುರ್ಘಟನೆ ನಡೆದು ಹೋಗಿದೆ ಹೇಳಲಾಗುತ್ತಿದೆ. ಇದರ ಕುರಿತು ಬಹಳಷ್ಟು ಜನರು ಕಂಬನಿ ಮಿಡಿದಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಸಹಜವಾಗಿಯೇ ಬಹುತೇಕ ಮಂದಿ ಮರುಗುತ್ತಾರೆ. ಆದರೆ ದುರಂತದ ಸಂಗತಿಯೆಂದರೆ ಈ ರೀತಿಯ ದುರ್ಘಟನೆಗಳು ಪ್ರತಿನಿತ್ಯವೂ ನಡೆಯುತ್ತಲೇ ಇವೆ.
ಕಳೆದ ವರ್ಷ ಜುಲೈನಲ್ಲಿ ದೆಹಲಿಯಲ್ಲಿ ಇದೇ ರೀತಿ ಹಸಿವಿನಿಂದ ಬಳಲಿ ಮೂವರು ಮಕ್ಕಳು ಅಸುನೀಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕಳೆದ ಹಲವು ದಿನಗಳಿಂದ ಮಕ್ಕಳು ಏನನ್ನು ತಿಂದಿಲ್ಲದ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ವಿಚಾರಣೆಗಾಗಿ ಆ ಮಕ್ಕಳ ತಾಯಿಯನ್ನು ಪೋಲಿಸರು ಪ್ರಶ್ನಿಸಿದರೆ ಆಕೆ ಹೇಳಿದ್ದು ‘ಮೊದಲು ನನಗೆ ಊಟ ಕೊಡಿ’ ಎಂದು.. ಆ ಮಕ್ಕಳ ತಂದೆ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದು ಯಾವುದೇ ಉದ್ಯೋಗ ಸಿಗದೇ ಕೊನೆಗೆ ರಿಕ್ಷಾಗಾಡಿ ತಳ್ಳಲು ಸೇರಿದ್ದರು. ಅಲ್ಲಿಯೂ ಸ್ಥಳೀಯ ರೌಡಿಗಳು ಆತನ ಗಾಡಿಯನ್ನು ವಶಪಡಿಸಿಕೊಂಡು ಕಿರುಕುಳ ಕೊಟ್ಟ ಕಾರಣದಿಂದ ಆತ ದಿಕ್ಕುತೋಚದೆ ಅಲೆಯುತ್ತಿದ್ದನು.. ಈ ಘಟನೆಗೆ ಯಾರು ಹೊಣೆ?
ಈಗ ಚಿಕ್ಕಬಳ್ಳಾಪುರದ ಕಂದಮ್ಮಗಳ ವಿಚಾರಕ್ಕೆ ಬರುವುದಾದರೆ ಇವರ ಪೋಷಕರು ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ವಲಸೆ ಹೋಗಿದ್ದರು. ತಮ್ಮ 5 ಮಕ್ಕಳ ಜೊತೆಗೆ ತನ್ನ ತಂಗಿಯ ಮಗಳನ್ನು ಸಾಕಿಕೊಂಡಿದ್ದ ನಾಗಮಣಿ ಮತ್ತು ಗಿರೀಶ್ ಇಬ್ಬರು ತೀವ್ರ ಮದ್ಯಪಾನ ವ್ಯಸನಿಗಳಾಗಿದ್ದರು. ಇವರು ದಿನ ಕುಡಿದು ಕೆಲಸ ಅರಸಿ ಹೋಗುತ್ತಿದ್ದರಿಂದ ಮಕ್ಕಳ ಊಟದ ಬಗ್ಗೆ ಯೋಚಿಸಿಲ್ಲ. ಇದರಿಂದ ಕಂಗೆಟ್ಟ ಮಕ್ಕಳು ವಿಧಿಯಿಲ್ಲದೇ ಎರಡು ಮೂರು ದಿನ ಮಣ್ಣು ತಿಂದ ಕಾರಣ ಸಾವನಪ್ಪಿವೆ. ಆರು ತಿಂಗಳ ಹಿಂದೆಯು ಸಹ ಇವರ ಸಂತೋಷ್ ಎಂಬ ಮಗುವು ಸಹ ಹಸಿವಿನಿಂದಲೇ ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ. ಆ ಕುಟುಂಬದ ಇನ್ನುಳಿದ ಮೂರು ಮಕ್ಕಳನ್ನು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಅಂಗನವಾಡಿಗೆ ಸೇರಿಸಲಾಗಿದೆಯಂತೆ.
ಈ ಘಟನೆಯನ್ನು ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ಈಗ ಈ ಘಟನೆಗೆ ಯಾರನ್ನು ಹೊಣೆ ಮಾಡೋಣ? ಈ ರೀತಿಯ ಘಟನೆಗಳು ನಮ್ಮನ್ನು ಅಲ್ಲಾಡಿಸುತ್ತವೆ. ಆದರೆ ಭಾರತದಲ್ಲಿ ದಿನವೊಂದಕ್ಕೆ 3000 ಮಕ್ಕಳು ಅಪೌಷ್ಟಿಕತೆಯಿಂದ ಸಾವನಪ್ಪುತ್ತಿದ್ದಾರೆ. ಹಸಿವಿನಿಂದ ಸಾಯುವುದಕ್ಕೂ, ಅಪೌಷ್ಟಿಕತೆಯಿಂದ ಸಾಯುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ? ನಮ್ಮ ಕುತಂತ್ರಿ ಸರ್ಕಾರಗಳು ಅಪೌಷ್ಟಿಕತೆಯಿಂದ ಸಾವು ಎಂದು ಹೇಳುತ್ತವೆಯೇ ಹೊರತು ಹಸಿವಿನಿಂದ ಸಾವು ಎನ್ನುವುದಿಲ್ಲ.
ಈ ದೇಶದಲ್ಲಿ 1000ಕ್ಕೆ 34 ಮಕ್ಕಳು ತಾಯಿಯ ಅಪೌಷ್ಠಿಕತೆಯ ಕಾರಣದಿಂದ ಗರ್ಭದಲ್ಲೇ ಅಸುನೀಗುತ್ತಿವೆ. ಈ ಅಪೌಷ್ಠಿಕತೆಯಿಂದ 9ಲಕ್ಷಕ್ಕೂ ಹೆಚ್ಚು ಮಕ್ಕಳು 5 ವರ್ಷ ತುಂಬುವ ಮೊದಲೇ ಮರಣಹೊಂದಿವೆ. ಈಗಲೂ ಭಾರತದಲ್ಲಿ ಸುಮಾರು 19 ಕೋಟಿ ಜನರು ಹಸಿವಿನಿಂದ ಜೀವನ ದೂಡುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಇದರ ಬಗ್ಗೆ ಯಾರು ಯೋಚಿಸಬೇಕು? ಇವರ ಕುರಿತು ಆಳುವ ಸರ್ಕಾರಗಳ ಕ್ರಮವೇನು? ಅದೆಷ್ಟೋ ಸಾವಿರ ಟನ್‍ಗಳಷ್ಟು ಆಹಾರ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ, ಈ ವಿರೋಧಾಭಾಸಕ್ಕೆ ಏನು ಮಾಡೋಣ?
ಈಗ ನಮ್ಮ ಪಾತ್ರಕ್ಕೆ ಬರೋಣ. ಆಹಾರ ಎಂಬ ಮೂಲಭೂತ ಅಗತ್ಯದ ಹಕ್ಕಿನ ಕುರಿತು ನಾವೆಷ್ಟು ಚರ್ಚಿಸಿದ್ದೇವೆ? ಇದಕ್ಕೆ ಹೊಂದಿಕೊಂಡಿರುವ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ವಿಚಾರಕ್ಕಾಗಿ ಎಷ್ಟು ಹೋರಾಡಿದ್ದೇವೆ? ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಜಾತಿ, ಧರ್ಮ, ಸೈನ್ಯ ಇತ್ಯಾದಿ ಭಾವನಾತ್ಮಕ ವಿಚಾರಗಳಿಗೆ ಎಳೆಯುವ ಕಪಟ ಸರ್ಕಾರಗಳ ಜಾಲದಲ್ಲಿಯೇ ನಾವಿದ್ದೇವೆಯೇ? ಈ ದೇಶದ 73% ಸಂಪತ್ತನ್ನು ಕೇವಲ 1% ಬಂಡವಾಳಶಾಹಿ ಶ್ರೀಮಂತರು ಲೂಟಿ ಹೊಡೆಯುತ್ತಿರುವಾಗ ನಾವು ದನಿ ಎತ್ತಿದ್ದೇವೆಯೇ? ಓಟು ಹಾಕುವ ಮುನ್ನ ಬಡಜನರ ಪರ ಈ ನೀತಿ ತನ್ನಿ ಎಂದು ರಾಜಕಾರಣಿಗಳಿಗೆ ಒತ್ತಡ ತಂದಿದ್ದೇವೆಯೇ?
ಅದೆಲ್ಲಾ ಹೋಗಲಿ ಕೇರಳದಲ್ಲಿ ಮಧು ಎಂಬಾತ ಹಸಿವು ತಾಳಲಾರದೇ 2 ಕೆ.ಜಿ ಅಕ್ಕಿ ಕದ್ದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಸಾಯಿಸಿಯೇಬಿಟ್ಟರು. ಊಟ ಡೆಲಿವರಿ ಮಾಡುವ ಹುಡುಗನೊಬ್ಬ ಸ್ವಲ್ಪ ಆಹಾರ ತಿಂದಿದ್ದಕ್ಕೆ ಪ್ರಪಂಚವೇ ಮುಳುಗಿ ಹೋಯಿತು ಎಂಬು ಬೊಬ್ಬಿರದಲ್ಲ? ಆತನನ್ನ ಹೇಗೆ ನಡೆಸಿಕೊಂಡಿತು ನಮ್ಮ ಸಮಾಜ? ಇದೆಲ್ಲವನ್ನು ಎಷ್ಟು ಜನ ಪ್ರಶ್ನಿಸಿದ್ದೇವೆ?
ಇಲ್ಲದಿದ್ದಲ್ಲಿ ಈ ಮಕ್ಕಳ ಸಾವಿಗೆ ಮರುಗಲು ನಮಗೆ ಅರ್ಹತೆ ಇದೆಯೇ? ಎಲ್ಲಿಯವರೆಗೂ ಆಳುವ ವರ್ಗಗಳ ಜನಪರವಾಗಿ ಕೆಲಸ ಮಾಡುವಂತೆ ನಾವು ಒತ್ತಾಯಿಸುವುದಿಲ್ಲವೋ ಅಲ್ಲಿಯವರೆಗೆ ಚಿಕ್ಕಬಳ್ಳಾಪುರದಿಂದ ದೆಹಲಿಯವರೆಗೂ ಈ ಸಾವುಗಳು ನಡೆಯುತ್ತಲೇ ಇರುತ್ತವೆ. ನಾವು ಒಂದಷ್ಟು ಕಂಬನಿ ಸುರಿಸಿ ನಂತರ ನಾರ್ಮಲ್ ಆಗಿ ಇದ್ದುಬಿಡುತ್ತೇವೆ. ಇನ್ನು ಮುಂದೆ ತುಂಬಾ ನಾರ್ಮಲ್ ಆಗಿರುವುದು ಬೇಡ; ಏಕೆಂದರೆ ಈ ದೇಶ ನಾರ್ಮಲ್ ಆಗಿಲ್ಲ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಮ್ಮದು ಪ್ರಜಾಪ್ರಭುತ್ವ; ಪ್ರಧಾನನಮಂತ್ರಿ ಏಕಚಕ್ರಾಧಿಪತಿ ಅಲ್ಲ..’; ದೇವೇಗೌಡರಿಗೆ ‘ಫೆಡರಲಿಸಂ’ ಪಾಠ ಮಾಡಿದ ಸಿಎಂ

0
'ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನನಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು' ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಒಕ್ಕೂಟ...