ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರ ಗುಂಪು ಬಂಡಾಯವೆದ್ದ ನಂತರ ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ನಿರ್ಧರಿಸುವಲ್ಲಿ ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ತಪ್ಪು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಆದರೆ ಉದ್ಧವ್ ಠಾಕ್ರೆ ಅವರು ಬಹುಮತ ಸಾಬೀತು ಮಾಡದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿರುವುದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಜೂನ್ 29 ರಂದು, ಉದ್ದವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವಿಶ್ವಾಸ ಮತವನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವು ಗಂಟೆಗಳ ನಂತರ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ್ ಅಘಾಡಿ ಸರ್ಕಾರ ಪಥನವಾಯಿತು.
ಶಿವಸೇನೆಯ 55 ಶಾಸಕರ ಪೈಕಿ 39 ಶಾಸಕರು ಮತ್ತು 10 ಸ್ವತಂತ್ರ ಶಾಸಕರ ಬೆಂಬಲ ತಮಗಿದೆ ಎಂದು ಏಕನಾಥ್ ಶಿಂಧೆಯವರು ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದರು. ನಂತರ ರಾಜ್ಯಪಾಲ ಕೊಶ್ಯಾರಿಯವರು ಹೊಸ ಸರ್ಕಾರ ರಚಿಸಲು ಆಹ್ವಾನಿಸಿದ್ದರು.
ಯಾವುದೇ ವಸ್ತುನಿಷ್ಠ ಸಂಗತಿ ಇಲ್ಲವಾದರೂ ಬಹುಮತ ಸಾಬೀತು ಮಾಡುವಂತೆ ಕೊಶ್ಯಾರಿಯವರು ತೆಗೆದುಕೊಂಡ ನಿರ್ಧಾರವು ತಪ್ಪಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ.
“‘ಶಿಂಧೆ ನೇತೃತ್ವದ ಶಾಸಕರು ಸರ್ಕಾರದಿಂದ ಹೊರಬರಲು ಬಯಸಿದ್ದರು ಎಂದು ಭಾವಿಸಲಾಗಿದ್ದರೂ, ಅವರು ಕೇವಲ ಒಂದು ಬಣವನ್ನು ರಚಿಸಿದ್ದರು” ಎಂದು ಚಂದ್ರಚೂಡ್ ತಿಳಿಸಿದ್ದಾರೆ. “ಪಕ್ಷದ ಆಂತರಿಕ ವಿವಾದದ ವಿಚಾರದಲ್ಲಿ ಬಹುಮತ ಸಾಬೀತು ಮಾಡಬೇಕೆಂದು ಹೇಳಲಾಗದು” ಎಂದಿದ್ದಾರೆ.
ಠಾಕ್ರೆ ಮತ್ತು ಶಿಂಧೆ ಬಣಗಳೆರಡೂ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಶಿವಸೇನೆಯಿಂದ ಬೇರ್ಪಟ್ಟು ಬಿಜೆಪಿ ಜೊತೆಯಲ್ಲಿ ಹೋದ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ಕೋರಿದ್ದರು.
ಅಂದು ಉಪಸಭಾಪತಿಯಾಗಿದ್ದ ನರಹರಿ ಝಿರ್ವಾಲ್ ಅವರು ಶಿಂಧೆ ಗುಂಪಿನ ಶಾಸಕರಿಗೆ ನೀಡಿದ್ದ ಅನರ್ಹತೆ ನೋಟಿಸ್ ವಿರುದ್ಧ ಶಿಂಧೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವಿಷಯಕ್ಕೆ ಸಂಬಂಧಿಸಿದ ತೀರ್ಪು- 2016ರಿಂದಲೂ ಸುಪ್ರೀಂ ಕೋರ್ಟ್ನ ನಬಮ್ ರೆಬಿಯಾ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಅರುಣಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಆಗಿದ್ದ ರೆಬಿಯಾ ಅವರಿಗೆ ಸಂಬಂಧಿಸಿದ ತೀರ್ಪು ಇದಾಗಿದೆ. “ಅನರ್ಹತೆ ಅರ್ಜಿಗಳ ಕುರಿತು ನಿರ್ಣಯವನ್ನು ಕೋರುವವರೆಗೆ ಅನರ್ಹತೆಯನ್ನು ಸ್ಪೀಕರ್ ನಿರ್ಧರಿಸಲಾಗದು” ಎಂಬ ವಿಷಯವನ್ನು ಈ ತೀರ್ಪು ಒಳಗೊಂಡಿದೆ.
ನಬಮ್ ರೆಬಿಯಾ ತೀರ್ಪಿನ ಸಿಂಧುತ್ವವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರ್ಧರಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
This is not justice