ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಉಮರ್ ಅಬ್ದುಲ್ಲಾ ಹಾಗೂ ಫಾರುಕ್ ಅಬ್ದುಲ್ಲಾ ಬಂಧನದಿಂದ ಬಿಡುಗಡೆಗೊಂಡದ್ದು ಮತ್ತು ಸಚಿನ್ ಪೈಲಟ್ ರಾಜಸ್ಥಾನದಲ್ಲಿ ಬಂಡಾಯವೆದ್ದ ಘಟನೆಗೂ ಸಂಬಂಧವಿದೆ ಎಂದು ಆರೋಪಿಸಿದ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಉಮರ್ ಅಬ್ದುಲ್ಲಾ ಬೆದರಿಕೆ ಹಾಕಿದ್ದಾರೆ.
ಸಚಿನ್ ಪೈಲಟ್ ನಡೆಗೂ, ನನ್ನ ಅಥವಾ ನನ್ನ ತಂದೆ ಬಂಧನದಿಂದ ಬಿಡುಗಡೆಯಾಗಿರುವುದು ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬ ದುರುದ್ದೇಶಪೂರಿತ ಸುಳ್ಳು ಆರೋಪದಿಂದ ನಾನು ಬೇಸರಗೊಂಡಿದ್ದೇನೆ. ಸಾಕು ಸಾಕು. ನನ್ನ ವಕೀಲರು ಭೂಪೇಶ್ ಬಾಗೆಲ್ ವಿರುದ್ದ ವಿಚಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
I am fed up of the downright malicious and false allegation that what Sachin Pilot is doing is somehow linked to my or my father’s release from detention earlier this year. Enough is enough. Mr @bhupeshbaghel will be hearing from my lawyers. Cc @RahulGandhi @INCIndia @rssurjewala https://t.co/Gojb7vN1V3
— Omar Abdullah (@OmarAbdullah) July 20, 2020
ಬಂಧನದ ಏಳು ತಿಂಗಳ ನಂತರ ಉಮರ್ ಅಬ್ದುಲ್ಲಾರ ತಂದೆ ಮಾಜಿ ಕೇಂದ್ರ ಸಚಿವರಾದ ಫಾರೂಕ್ ಅಬ್ದುಲ್ಲಾರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಇದಾಗಿ ಕೆಲ ದಿನಗಳ ನಂತರ ಮಾರ್ಚ್ 24 ರಂದು ಶ್ರೀನಗರದಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಕೂಡಾ ಬಿಡುಗಡೆ ಮಾಡಲಾಗಿತ್ತು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಬೃಹತ್ ಭದ್ರತಾ ನಿರ್ಬಂಧಗಳ ಭಾಗವಾಗಿ ಕಳೆದ ಆಗಸ್ಟ್ ನಲ್ಲಿ ಹಲವಾರು ಜನರನ್ನು ಬಂಧಿಸಲಾಗಿತ್ತು.
ಇಂದು ಪ್ರಕಟವಾದ ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಸಚಿನ್ ಪೈಲಟ್ ಅವರ ಬಂಡಾಯಕ್ಕೂ, ತಂದೆ ಮಗನ ಬಿಡುಗಡೆಗೂ ಸಂಬಂಧ ಕಲ್ಪಿಸಲು ಪ್ರಯತ್ನಿಸಿದ್ದರು.
“ಸಚಿನ್ ಪೈಲಟ್ಗೆ ಸಂಬಂಧಿಸಿದಂತೆ, ನಾನು ರಾಜಸ್ಥಾನದ ಘಟನೆಗಳನ್ನು ಅಷ್ಟು ನಿಕಟವಾಗಿ ಗಮನಿಸುತ್ತಿದ್ದೇನೆ, ಒಮರ್ ಅಬ್ದುಲ್ಲಾ ಅವರನ್ನು ಏಕೆ ಬಿಡುಗಡೆ ಮಾಡಲಾಯಿತು ಎಂಬ ಕುತೂಹಲ ಮೂಡಿಸುತ್ತದೆ. ಅವರು ಮತ್ತು ಮೆಹಬೂಬಾ ಮುಫ್ತಿಯನ್ನು ಒಂದೇ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು, ಆದರೆ ಮೆಹಬೂಬ ಇನ್ನೂ ಬಂಧನದಲ್ಲಿದ್ದಾರೆ, ಇವರು ಹೊರಗಿದ್ದಾರೆ. ಅಬ್ದುಲ್ಲಾ ಅವರು ಸಚಿನ್ ಪೈಲಟ್ ಅವರ ಹೆಂಡತಿಯ ಸಹೋಧರನಾಗಿದ್ದಾರೆ” ಎಂದು ಬಾಗೆಲ್ ಹೇಳಿದ್ದಾರೆ.
ಸಚಿನ್ ಪೈಲಟ್ ಅವರ ಪತ್ನಿ ಸಾರಾ ಪೈಲಟ್ ಒಮರ್ ಅಬ್ದುಲ್ಲಾರ ಸಹೋದರಿಯಾಗಿದ್ದಾರೆ.
ಅನುಕೂಲಕರ ರಾಜಕೀಯ ಪಟ್ಟುಗಳಿಗೆ ಬಳಸಲಾಗುವ ಇಂತಹ ದುರುದ್ದೇಶಪೂರಿತ ಸುಳ್ಳು ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ. ಈ ಹೇಳಿಕೆಯ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಭಾಗೆಲ್ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ ಪ್ರತಿಕ್ರಿಯಿಸಿದೆ.
ಬಾಗೆಲ್ ಅವರ ಅಭಿಪ್ರಾಯವು ಕೀಳುಮಟ್ಟದ ಸುಳ್ಳಾಗಿದ್ದು, ಒಮರ್ ಅಬ್ದುಲ್ಲಾ ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಹೇಳಿದೆ.
ತಮ್ಮ ಇಬ್ಬರು ನಾಯಕರ ಬಿಡುಗಡೆಯು ಕಾನೂನು ಸವಾಲನ್ನು ಎದುರಿಸಿ ಆಗಿರುವುದು ಎಂದು ಸಾಮಾನ್ಯರಿಗೂ ತಿಳಿದಿದೆ. ಸರ್ಕಾರವು ತನ್ನ ಅಕ್ರಮ ಬಂಧನ ಆದೇಶವನ್ನು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಯ ಸಮಯದಲ್ಲಿ ರದ್ದುಪಡಿಸಿತು ಎಂದು ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಓದಿ: ಮಂದಿರ ಕಟ್ಟಿದರೆ ಕೊರೊನಾ ನಿಯಂತ್ರಣ ಸಾಧ್ಯವೆಂದು ಕೆಲವರು ಭಾವಿಸಿದ್ದಾರೆ: ಶರದ್ ಪವಾರ್