Homeಮುಖಪುಟಗಾಝಾಗೆ ಮಾನವೀಯ ನೆರವು ಮಾತ್ರ, ಕದನ ವಿರಾಮವಿಲ್ಲ: ಯುಎಸ್‌ಗೆ ಬೆದರಿತಾ ವಿಶ್ವಸಂಸ್ಥೆ?

ಗಾಝಾಗೆ ಮಾನವೀಯ ನೆರವು ಮಾತ್ರ, ಕದನ ವಿರಾಮವಿಲ್ಲ: ಯುಎಸ್‌ಗೆ ಬೆದರಿತಾ ವಿಶ್ವಸಂಸ್ಥೆ?

- Advertisement -
- Advertisement -

ಯುದ್ಧ ಪೀಡಿತ ಗಾಝಾಗೆ ದೊಡ್ಡ ಪ್ರಮಾಣದಲ್ಲಿ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಹಲವು ರಾಷ್ಟ್ರಗಳು ಸಹಿ ಹಾಕಿವೆ. ಆದರೆ, ಈ ನಿರ್ಣಯ ಗಾಝಾದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿಲ್ಲ.

ಯುಎಸ್ , ರಷ್ಯಾ ನಿರ್ಣಯದ ಪರ ಮತ ಹಾಕಿಲ್ಲ. ಈ ಎರಡು ಒಕ್ಕೂಟಗಳು ಮತದಾನದಿಂದ ದೂರ ಉಳಿದಿತ್ತು. ಮಾನವೀಯ ನೆರವು ಒದಗಿಸುವ ನಿರ್ಣಯಕ್ಕೆ ಯುಎಸ್ ವಿರೋಧ ವ್ಯಕ್ತಪಡಿಸಿದೆ. ಮಾನವೀಯ ವಿತರಣೆಗಳ ವಿಶೇಷ ನಿಯಂತ್ರಣವನ್ನು ವಿಶ್ವ ಸಂಸ್ಥೆಗೆ ನೀಡುವ ಷರತ್ತನ್ನು ತೆಗೆದುಹಾಕಲು ಅದು ಒತ್ತಾಯಿಸಿದೆ.

ತಕ್ಷಣ ಗಾಝಾಗೆ ಮಾನವೀಯ ನೆರವು ಹೆಚ್ಚಿಸಬೇಕು. ಇದಕ್ಕಾಗಿ ವಿಶ್ವಸಂಸ್ಥೆಯಿಂದ ಸಂಯೋಜಕರನ್ನು ನೇಮಿಸಬೇಕು. ಇಸ್ರೇಲ್ ಕುರಿತು ಇದುವರೆಗೆ ಮಾತನಾಡದ ರಾಷ್ಟ್ರಗಳು ಕೂಡ ಇದರಲ್ಲಿ ಕೈ ಜೋಡಿಸಬೇಕು ಎಂದು ನಿರ್ಣಯ ಒತ್ತಾಯಿಸಿದೆ.

ನಿರ್ಣಯದ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಕದನ ವಿರಾಮವಿಲ್ಲದೆ ಕೇವಲ ಮಾನವೀಯ ವಿತರಣೆ ಹೆಚ್ಚಿಸುವ ನಿರ್ಣಯದ ಸಫಲತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

“ಗಾಝಾದ ಜನತೆಗೆ ಮಾನವೀಯ ನೆರವು ಹೆಚ್ಚಿಸುವ ಭದ್ರತಾ ಮಂಡಳಿಯ ನಿರ್ಣಯ ಜನರಿಗೆ ಸಹಕಾರಿಯಾಗಲಿದೆ ಎಂದು ನಾನು ಒಪ್ಪುತ್ತೇನೆ. ಆದರೆ, ಇದು ಸಫಲತೆ ಕಾಣಬೇಕಾದರೆ, ಗಾಝಾದ ಜನತೆಯ ದುಃಸ್ವಪ್ನ ಕೊನೆಗೊಳಿಸಲು ಮಾನವೀಯ ಕದನ ವಿರಾಮವು ಏಕೈಕ ಮಾರ್ಗವಾಗಿದೆ” ಎಂದು ಗುಟೆರೆಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

“ಈಜಿಪ್ಟ್ ರೆಡ್ ಕ್ರೆಸೆಂಟ್, ವಿಶ್ವಸಂಸ್ಥೆ ಮತ್ತು ನಮ್ಮ ಸಹವರ್ತಿಗಳು ಕಳಿಸಿದ ಮಾನವೀಯ ನೆರವಿನ ಟ್ರಕ್‌ಗಳ ಸಂಖ್ಯೆ ನೋಡಿ ಕೆಲವರು ಗಾಝಾದಲ್ಲಿ ಮಾನವೀಯ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಅಳೆಯುತ್ತಿದ್ದಾರೆ. ಇದು ತಪ್ಪು, ನಿಜವಾದ ಸಮಸ್ಯೆ ಏನೆಂದರೆ ಇಸ್ರೇಲ್ ಆಕ್ರಮಣ ನಡೆಸುತ್ತಿರುವ ವಿಧಾನ ಗಾಝಾದೊಳಗೆ ಮಾನವೀಯ ನೆರವು ವಿತರಣೆಗೆ ಭಾರೀ ಅಡೆತಡೆಗಳನ್ನು ಉಂಟು ಮಾಡುತ್ತಿದೆ ಎಂದು ಗುಟೆರಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭದ್ರತಾ ಮಂಡಳಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶುಕ್ರವಾರ ನಿರ್ಣಯ ಮಂಡಿಸಿದೆ. ಇದರ ಪರ ಭದ್ರತಾ ಮಂಡಳಿಯ ಎಲ್ಲಾ ಸದಸ್ಯರು ಮತ ಹಾಕಿದ್ದಾರೆ. ಯುಎಸ್ ಮತ್ತು ರಷ್ಯಾ ಒಕ್ಕೂಟಗಳು ಮತದಾನದಿಂದ ದೂರ ಉಳಿದಿತ್ತು.

“ಯುಎಸ್ ನಿರ್ಣಯವನ್ನು ಬೆಂಬಲಿಸಿತ್ತು. ಆದರೆ, ನಿರ್ಣಯದಲ್ಲಿ ಯುದ್ಧವನ್ನು ಪ್ರಚೋದಿಸಿದ ಹಮಾಸ್ ದಾಳಿಯ ಬಗ್ಗೆ ಯಾವುದೇ ಖಂಡನೆ ಇಲ್ಲದ ಕಾರಣ ಮತದಾನದಿಂದ ದೂರ ಉಳಿದಿದೆ” ಎಂದು ವಿಶ್ವಸಂಸ್ಥೆಗೆ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಹೇಳಿದ್ದಾರೆ.

“ಅಕ್ಟೋಬರ್ 7ರಂದು ಹಮಾಸ್ ಗುಂಪು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ನಿರ್ಣಯ ಉಲ್ಲೇಖಿಸಿಲ್ಲ ಎಂಬುವುದು ನಮಗೆ ತೀವ್ರ ನಿರಾಶೆ ಉಂಟು ಮಾಡಿದೆ” ಎಂದು ಲಿಂಡಾ ಥಾಮಸ್ ಹೇಳಿದ್ದಾರೆ. ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ 20 ಸಾವಿರಕ್ಕೂ ಅಧಿಕ ಅಮಾಯಕ ನಾಗರಿಕರು ಬಲಿಯಾಗಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿಲ್ಲ.

ಈ ನಡುವೆ “ಯುಎಸ್ ನಿರ್ಣಯದ ಹಲ್ಲು ಕಿತ್ತು ಹಾಕಿದೆ” ಎಂದು ರಷ್ಯಾದ ರಾಯಭಾರಿ ವಾಸಿಲಿ ನೆಬೆನ್ಜ್ಯಾ ದೂರಿದ್ದಾರೆ. “ಈ ನಿರ್ಣಯವು ಇಸ್ರೇಲಿ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಹಾಗಾಗಿ, ರಷ್ಯಾ ಮತದಾನದಿಂದ ದೂರ ಉಳಿದಿದೆ” ಎಂದು ಅವರು ತಿಳಿಸಿದ್ದಾರೆ.

ಯುಎಸ್ ಗೆ ಬೆದರಿತಾ ವಿಶ್ವಸಂಸ್ಥೆ?

ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದಲ್ಲಿ ಗಾಝಾದಲ್ಲಿ ಕದನ ವಿರಾಮದ ಬಗ್ಗೆ ಉಲ್ಲೇಖಿಸಿಲ್ಲ. ಇದರ ಹಿಂದೆ ಯುಎಸ್ ಬೆದರಿಕೆ ಇದೆಯಾ? ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಈ ಹಿಂದೆ ಗಾಝಾದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿದ್ದ ನಿರ್ಣಯದ ಪರ ಯುಎಸ್ ಮತ ಹಾಕಿರಲಿಲ್ಲ. ಅಲ್ಲದೆ, ಯುಎಸ್ ನಿರ್ಣಯದ ಹಲ್ಲು ಕಿತ್ತಿದೆ ಎಂಬ ರಷ್ಯಾ ರಾಯಬಾರಿಯ ಹೇಳಿಕೆ ಈ ಸಂದೇಹವನ್ನು ಪುಷ್ಠೀಕರಿಸುತ್ತದೆ.

ಅಕ್ಟೋಬರ್ 7ರಂದು ಗಾಝಾದ ಹಮಾಸ್ ಗುಂಪು ಇಸ್ರೇಲ್‌ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 1,200 ಮಂದಿ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಹಮಾಸ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಿರಂತರ ದಾಳಿ ನಡೆಸುತ್ತಾ ಬಂದಿದ್ದು, ಇದರಿಂದ 20 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಇಸ್ರೇಲ್ ರಕ್ತದಾಹಕ್ಕೆ ಗಾಝಾ ನರಕವಾಗಿ ಮಾರ್ಪಟ್ಟಿದೆ. ಅಲ್ಲಿನ ಶೇ.90ರಷ್ಟು ಜನರು ತಮ್ಮ ಮನೆ, ಆಸ್ತಿ-ಪಾಸ್ತಿ ಬಿಟ್ಟು ಪಲಾಯನ ಮಾಡಿದ್ದಾರೆ. ಉಳಿದವರಲ್ಲಿ ಅನೇಕರು ಬಲಿಯಾಗಿದ್ದಾರೆ. ಸುಮಾರು 50 ಸಾವಿರ ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಕನಿಷ್ಠ ವ್ಯವಸ್ಥೆಗಳಲಿಲ್ಲದೆ ಜನರು ನರಳುತ್ತಿದ್ದಾರೆ. ಗಾಯಾಳುಗಲ್ಲದ ಜನರು ಆಹಾರ, ಪಾನಿಯಕ್ಕಾಗಿ ಅಲೆದಾಡುತ್ತಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ದಾಳಿಯಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆತನ್ನಿ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

0
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ...