ರಾಜ್ಯದ ಮುಂಗಾರು ಅಧಿವೇಶನ ನಾಳೆ (ಸೆ.21)ಯಿಂದ ಆರಂಭವಾಗಲಿದೆ. ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ, ’ಜನವಿರೋಧಿ ನೀತಿಗಳನ್ನು ಜಾರಿಮಾಡಲು ನಡೆಯುತ್ತಿರುವ ಅಧಿವೇಶನವನ್ನು ವಿರೋಧಿಸಿ, ಜನಪರ ಚಿಂತನೆಯ ಚರ್ಚೆ ನಡೆಸಲು ಹಾಗೂ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ’ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಒಂದಾಗಿ, ’ಜನತಾ ಅಧಿವೇಶನ’ವನ್ನು ನಡೆಸಲು ಸಜ್ಜಾಗಿದೆ.
ಕೊರೊನಾ ಲಾಕ್ಡೌನ್ ಸಂದರ್ಭವನ್ನು ಬಳಸಿಕೊಂಡು ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಮತ್ತು ಭೂಸುಧಾರಣ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯರಂಗ ಪ್ರತಿಭಟನೆ ಈ ನಡೆಸಲಿದೆ.
ಇದನ್ನೂ ಓದಿ: ಜನರು ಸ್ವಾಭಿಮಾನದಿಂದ ಬದುಕಲು ಭೂಮಿ ಕೊಡಿ: ಹೋರಾಟಗಾರ ನಿರ್ವಾಣಪ್ಪ
ರೈತರನ್ನು ಖಾಸಗೀ ಮಾರುಕಟ್ಟೆದಾರರ ಮುಂದೆ ಮಂಡಿಯೂರುವಂತೆ ಮಾಡಲಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಬಡವರ, ರೈತರ ಭೂಮಿಯನ್ನು ಕಸಿದುಕೊಂಡು ಕಾರ್ಪೋರೇಟ್ ಕೂಳರಿಗೆ ಅನುಕೂಲ ಮಾಡಿಕೊಡುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು. ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯಲು ಮುಂದಾಗಿರುವ ಸರ್ಕಾರ, ಈ ವಿಚಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದು ಹೋರಾಟ ಸಮಿತಿ ಹೇಳಿದೆ.
ಇದರ ಅಂಗವಾಗಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಫ್ರೀಡಂ ಪಾರ್ಕ್ನಲ್ಲಿ ’ಚಳುವಳಿಗಳ ಪರ್ಯಾಯ ಜನತಾ ಅಧಿವೇಶನ’ ನಡೆಯಲಿದೆ.
ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟದಲ್ಲಿ ಸ್ವರಾಜ್ ಇಂಡಿಯಾ ಸಂಘಟನೆಯ ಯೋಗೇಂದ್ರ ಯಾದವ್, ಸಾಹಿತಿ ದೇವನೂರು ಮಹಾದೇವ, ಜಸ್ಟೀಸ್ ಎಸ್.ಎನ್ ನಾಗಮೋಹನ್ ದಾಸ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್ ಸೇರಿದಂತೆ ರೈತ, ಕಾರ್ಮಿಕ, ದಲಿತ ಮುಖಂಡರು ಭಾಗಿಯಾಗಲಿದ್ದಾರೆ.
ಇದನ್ನೂಓದಿ: ಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ – ಕುಮಾರ್ ಸಮತಳ ಸಂದರ್ಶನ