ಕಳೆದ ಕೆಲ ದಿನಗಳಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಂದುವರೆದಿದ್ದು, ಗುರುವಾರ ಕೇಂದ್ರ ವಿದೇಶಾಂಗ ಮತ್ತು ಶಿಕ್ಷಣ ರಾಜ್ಯ ಸಚಿವ ಆರ್ಕೆ ರಂಜನ್ ಸಿಂಗ್ ಅವರ ಮನೆಯ ಮೇಲೆ ಗುಂಪೊಂದು ದಾಳಿ ಮಾಡಿದೆ ಎಂದು ಇಂಫಾಲ್ ಫ್ರೀ ಪ್ರೆಸ್ ವರದಿ ಮಾಡಿದೆ.
ಬುಧವಾರ ಮತ್ತೊಂದು ಹಿಂಸಾಚಾರದ ಘಟನೆ ನಡೆಯಿತು ಅದರಲ್ಲಿ ಓರ್ವ ಸಾವಿಗೀಡಾಗಿದ್ದು ಇಬ್ಬರಿಗೆ ಗಾಯಗಳಾಗಿದ್ದವು. ಈ ಘಟನೆ ಬೆನ್ನಲ್ಲೇ ಇಂಫಾಲ್ ಪೂರ್ವ ಜಿಲ್ಲೆಯ ಬಿಜೆಪಿ ಸಂಸದರ ಮನೆಗೆ ಗುರುವಾರ ರಾತ್ರಿ 8.30 ರ ಸುಮಾರಿಗೆ ಗುಂಪೊಂದು ನುಗ್ಗಿದೆ.
ಬುಧವಾರ ಬೆಳಿಗ್ಗೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ವ್ಯಕ್ತಿ ಬಲಿಯಾಗಿದ್ದಾನೆ. ಹತ್ಯೆಗೀಡಾದ ವ್ಯಕ್ತಿಯನ್ನು ಚುರಾಚಂದ್ಪುರದ ಥೆಂಗ್ರಾ ಲೈರಾಕ್ನ ತೋಯಿಜಮ್ ಚಂದ್ರಮಣಿ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಮೊಯಿರಾಂಗ್ನ ನಿರಾಶ್ರಿತ ಶಿಬಿರದಲ್ಲಿ ತಂಗಿದ್ದರು ಎಂದು ವರದಿಯಾಗಿದೆ.
ಬಿಷ್ಣುಪುರ್ ಜಿಲ್ಲೆಯಲ್ಲೂ ಉದ್ವಿಗ್ನತೆ ಭುಗಿಲೆದ್ದಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದಾಸ್ ಕೊಂತೌಜಮ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಬುಧವಾರ ಸಂಜೆ ನಿಂಗ್ತೌಖೋಂಗ್ ಪಟ್ಟಣದಲ್ಲಿರುವ ಸಚಿವರ ನಿವಾಸಕ್ಕೆ ಗುಂಪೊಂದು ನುಗ್ಗಿತು. ಘಟನೆ ನಡೆದಾಗ ಸ್ವತಃ ಸಚಿವರಾಗಲೀ ಅವರ ಕುಟುಂಬದವರಾಗಲೀ ಮನೆಯಲ್ಲಿ ಇರಲಿಲ್ಲ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ.
ಬಿಷ್ಣುಪುರ್ ಜಿಲ್ಲೆಯಲ್ಲಿ ಮತ್ತೆ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಕರ್ಫ್ಯೂವನ್ನೂ ನಾಲ್ಕು ಗಂಟೆಗಳ ಕಾಲ ಮುಂದುವರಿಸಲಾಗಿದೆ.
ಗುರುವಾರ, ಬಹುಮಟ್ಟಿಗೆ ಮೈತಿ ಸಮುದಾಯದ ನೇತೃತ್ವದ ಗುಂಪು ಬುಧವಾರದ ಅಶಾಂತಿಯ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಲು ಸಿಂಗ್ ಅವರ ಮನೆಯ ಮೇಲೆ ದಾಳಿ ಮಾಡಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಕೇಂದ್ರ ಸಚಿವರು ಕೂಡ ಮೈತಿ ಸಮುದಾಯಕ್ಕೆ ಸೇರಿದವರು.
ಇದನ್ನೂ ಓದಿ: ಮಣಿಪುರ; ಮತ್ತೆ ಉದ್ವಿಗ್ನತೆ, ಗುಂಡಿನ ದಾಳಿಗೆ ವ್ಯಕ್ತಿ ಬಲಿ
ದಾಳಿಯ ವೇಳೆ ಸಿಂಗ್ ತಮ್ಮ ನಿವಾಸದಲ್ಲಿದ್ದರು. ಗುಂಪು ಅವರ ಮನೆಗೆ ಕಲ್ಲು ಎಸೆದ ನಂತರ, ಭದ್ರತಾ ಪಡೆಗಳು ಅವರನ್ನು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಬಳಸಿದರು.
ಒಂದು ದಿನದ ಹಿಂದೆ, ರಾಜ್ಯ ಸಚಿವ ಗೋವಿಂದಸ್ ಕೊಂತೌಜಮ್ ಅವರ ಸ್ವಂತ ಕ್ಷೇತ್ರವಾದ ಬಿಷ್ಣುಪುರದ ನಿಂಗ್ತೌಖೋಂಗ್ ಬಜಾರ್ ಪ್ರದೇಶದಲ್ಲಿ ಗುಂಪೊಂದು ಅವರ ಮನೆಗೆ ಧ್ವಂಸಗೊಳಿಸಿತ್ತು.
ಮೇ 3 ರಿಂದ ಈಶಾನ್ಯ ರಾಜ್ಯದಿಂದ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿವೆ, ಮೇ 3 ರಿಂದ ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾಕಾರರಲ್ಲಿ ಮಣಿಪುರದ ದೊಡ್ಡ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕುಕಿಗಳು ಸೇರಿದ್ದಾರೆ. ಅವರು ರಾಜ್ಯ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ 74 ಜನರು ಸಾವನ್ನಪ್ಪಿದ್ದಾರೆ ಮತ್ತು 35,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ನಾಗರಿಕರನ್ನು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಮತ್ತು ರಾಜ್ಯದ ಎಲ್ಲಾ ಸಮುದಾಯಗಳಿಗೂ ನ್ಯಾಯ ನೀಡಲಾಗುವುದು ಎಂದು ಹೇಳಿದರು. ಸದ್ಯದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದಾಗಿಯೂ ತಿಳಿಸಿದ್ದಾರೆ.