ಉತ್ತರ ಪ್ರದೇಶದ ಬಿಜೆಪಿ ಶಾಸಕ ಭೂಪೇಶ್ ಚೌಬೆ ಅವರು, ರಾಜ್ಯದ ಸೋನಭದ್ರಾದಲ್ಲಿ ಇತ್ತಿಚೆಗೆ ನಡೆದ ಸಾರ್ವಜನಿಕ ಸಭೆಯ ವೇದಿಕೆಯೆ ಮೇಲೆ ತಾನು ಕುಳಿತ ಕುರ್ಚಿಯಲ್ಲಿ ನಿಂತು ಕಿವಿ ಹಿಡಿದು ಬಸ್ಕಿ ಹೊಡೆದು, “ಕಳೆದ ಐದು ವರ್ಷಗಳಲ್ಲಿ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಕ್ಷಮಿಸಿ” ಎಂದು ಜನರನ್ನು ಕೇಳಿಕೊಂಡಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇ 7 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿರುವ ಸೋನ್ಭದ್ರದ ರಾಬರ್ಟ್ಸ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಭೂಪೇಶ್ ಚೌಬೆ ಕಣದಲ್ಲಿದ್ದಾರೆ. ವೇದಿಕೆಯಲ್ಲಿದ್ದ ಇತರ ಜನರು ಅವರು ಬಸ್ಕಿ ಹೊಡೆಯದಂತೆ ತಡೆಯುತ್ತಿದ್ದರೂ ಅವರು ಅದನ್ನು ಮುಂದುವರೆಸಿದ್ದರು.
‘ನನ್ನನ್ನು ಕ್ಷಮಿಸಿ’: ವೇದಿಕೆ ಮೇಲೆಯೆ ಕಿವಿ ಹಿಡಿದು ‘ಬಸ್ಕಿ’ ಹೊಡೆದ ಯುಪಿ ಬಿಜೆಪಿ ಶಾಸಕ ಭೂಪೇಶ್ ಚೌಬೆ
ಸುದ್ದಿ ಓದಿ➤➤ https://t.co/6vXHLBPFGT#NaanuGauri #UPElection2022 #UttarPradeshElections2022 pic.twitter.com/P3gHBQk3nq
— Naanu Gauri (@naanugauri) February 25, 2022
2017ರ ಚುನಾವಣೆಯಲ್ಲಿ ನೀವೆಲ್ಲರೂ ಆಶೀರ್ವಾದ ನೀಡಿದ್ದೀರಿ. ಅದೇ ರೀತಿ ಈ ಬಾರಿಯೂ ರಾಬರ್ಟ್ಸ್ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲು ನಿಮ್ಮ ಆಶೀರ್ವಾದ ನೀಡಿ ಎಂದು ಚೌಬೆ ಜನರನ್ನು ಕೋರಿದ್ದಾರೆ.
“ಬಿಜೆಪಿಯ ಕೆಲವು ತಳಮಟ್ಟದ ಕಾರ್ಯಕರ್ತರು ಇತ್ತೀಚೆಗೆ ಪ್ರಚಾರದ ಸಮಯದಲ್ಲಿ ಚೌಬೆ ವಿರುದ್ಧ ಅಸಮಾಧಾನಗೊಂಡಿದ್ದರು. ಚೌಬೆ ಅವರು ನಮ್ಮ ಕೈಗೆ ಸಿಗುತ್ತಿಲ್ಲ, 2017 ರ ಚುನಾವಣೆ ಗೆದ್ದ ನಂತರ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಪಕ್ಷದ ನಾಯಕರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
“ಅವರನ್ನು ಸಮಾಧಾನಪಡಿಸಲು ಚೌಬೆ ವೇದಿಕೆ ಮೇಲೆ ಬಸ್ಕಿ ಹೊಡೆದಿದ್ದಾರೆ” ಎಂದು ಸಭೆಯಲ್ಲಿದ್ದ ಸ್ಥಳೀಯರೊಬ್ಬರು ಹೇಳಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸ್ಥಳೀಯ ಬಿಜೆಪಿ ಮುಖಂಡ ಭಾನು ಪ್ರತಾಪ್ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮತ ಯಾಚಿಸುವಾಗ ಮಾತನಾಡಿದ ಭಾನು ಪ್ರತಾಪ್, “ಯುಪಿ ವಿಧಾನಸಭಾ ಚುನಾವಣೆಯ ಮೂರು ಹಂತಗಳಲ್ಲಿ, ಎಸ್ಪಿ ಮತ್ತು ಬಿಎಸ್ಪಿ ಅರ್ಧದಷ್ಟು ನಾಶವಾಗಿದೆ. ಏಳನೇ ಹಂತದಲ್ಲಿ ಇವು ಸಂಪೂರ್ಣವಾಗಿ ನಾಶವಾಗುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: 2004ರ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು